



ಮಹಿಳಾ ಭಾರತ – ಅದ್ಭುತ ಪ್ರದರ್ಶನ

ಜಿ ಎನ್ ಅಶೋಕವರ್ಧನ
ಡಾ| ಶ್ರೀಪಾದಭಟ್ಟರ ನಿರ್ದೇಶನ, ಉಡುಪಿಯ ರಥಬೀದಿ ಗೆಳೆಯರ ನಿರ್ಮಾಣ/ಪ್ರದರ್ಶನ, ವಿವಿಧ ಶಾಲಾಕಾಲೇಜು ವಿದ್ಯಾರ್ಥಿಗಳ ಅಂದರೆ ಪೂರ್ಣ ಹವ್ಯಾಸಿಗಳ (ಎಷ್ಟೋ ಪ್ರಥಮ ರಂಗಪ್ರವೇಶವೂ ಇರಬಹುದು) ಅಭಿನಯ, ಮಲಯಾಳದ ಮಾಧವನ್ ಅವರ ಮೂಲ, ಕನ್ನಡದ ಪುನರ್ರಚನೆ ಅಭಿಲಾಷ…. ಹೀಗೆ ನಿನ್ನೆ ಪ್ರಥಮ ಪ್ರದರ್ಶನವಾಗಿ ಉಡುಪಿಯ ಎಂ.ಜಿ.ಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಮೂಡಿದ `ಮಹಿಳಾ ಭಾರತ’ ನಾಟಕದ ಕುರಿತು ಉದ್ದನ್ನ ಪಟ್ಟಿ ಬರೆದರೆ ನೀರಸ ವರದಿಯಾದೀತು.
ಯಾವ ಪೂರ್ವಪಕ್ಷವೂ ಇಲ್ಲದೆ, ಕೇವಲ ಮುರಳೀಧರ ಉಪಾಧ್ಯೆ ಇವರ ಸ್ನೇಹಾಚಾರದ ಚರವಾಣಿ-ಕಿರುಸಂದೇಶದ ಎಳೆ ಹಿಡಿದು ಮಂಗಳೂರಿನಿಂದ ಹೋಗಿ, ನೋಡಿ, ಬಂದು, ರಾತ್ರಿ ಕಳೆದರೂ ಒಂದಿಷ್ಟೂ ಮಾಸದೇ ಉಳಿದ ಪ್ರಭಾವಕ್ಕೆ ಅನ್ಯಾಯವಾದೀತು. ಕ್ಯಾಮರಾ, ಚರವಾಣಿ ಇರಲಿ, ಕಣ್ಣು ಬಿಟ್ಟು ನೋಡಿದ್ದೇ ಸಾಕು ಪ್ರತಿ ನಡೆ, ಸನ್ನಿವೇಶವೂ ವಿಶಿಷ್ಟ ಭಿತ್ತಿ ಚಿತ್ರದಂತೆ ಮನದಲ್ಲಿ ಕಚ್ಚಿನಿಲ್ಲುವಂಥ ದೃಶ್ಯಗಳು ಇದರದು.
ಗಾಢ ಪರಿಣಾಮಕ್ಕೆ ಪ್ರಭಾವಿಯಾಗಿಯೇ ಸೇರಿಕೊಂಡ ಹಿಮ್ಮೇಳ; ಧ್ವನಿಮುದ್ರಿತವೇ ಆದರೂ “ತಾಂತ್ರಿಕ ಕೊರತೆಯ ಕ್ಷಮೆ” ಕೇಳಬೇಕಿಲ್ಲದ ಸಾಧನೆ. ನೆರಳು ಬೆಳಕಿನ ಮಾಯಾಲೋಕ, ರಂಗಸಜ್ಜಿಕೆಯ ಭಾರೀ ಚಮತ್ಕೃತಿ, ವೇಷಭೂಷಣಗಳ ಮೋಹಕತೆ, ವಿಶೇಷ ಅಂಗಸಾಧನೆಯ ಪರಿಪಾಕಗಳೇನಿಲ್ಲದಿದ್ದರೂ ಭವನ ತುಂಬಿ ಹರಿದ ಪ್ರೇಕ್ಷಾವೃಂದವನ್ನು ಕ್ಷಣಕಾಲವೂ ಉಸಿರು ಸರಾಗವಾಡದಂತೆ ಹಿಡಿದಿಟ್ಟ ಖ್ಯಾತಿ ಈ ಪ್ರದರ್ಶನಕ್ಕೆ ಸಲ್ಲುತ್ತದೆ.
ವೈಚಾರಿಕ ಹದ ಮತ್ತು ತೂಗಿ ಇಟ್ಟ ಮಾತಿನ ಘನತೆಯನ್ನು ಪ್ರಾಮಾಣಿಕವಾಗಿ ಅನುಭವಿಸಿ ಒಪ್ಪಿಸಿದ ಪರಿ ಅದ್ಭುತವಾಗಿತ್ತು. ಬಹುಶಃ ಬರಿಯ ಬಾಯಿಪಾಠವಾಗಿದ್ದರೆ ನಡೆಯಲ್ಲಿ ಅಸಾಂಗತ್ಯ, ನುಡಿಯಲ್ಲಿ ತೊದಲು ಹಣಿಕಲೇ ಬೇಕಾದ ಗಂಭೀರ ಪ್ರಸಂಗವಿದು. ಇದ್ದ ನಾಟಕೀಯ ನಡೆಗಳಾದರೂ ಆರೋಪಿತ ಅಭಿನಯವಾಗದ ಎಚ್ಚರ ಎಲ್ಲರಲ್ಲಿತ್ತು.
ಮಗುವಿನ ನಿದ್ರೆ, ಹಿರಿಯಳ ಶಾಶ್ವತ ನಿದ್ರೆಗಳ ಸಮಾಗಮದೊಡನೆ ತೆರೆದುಕೊಳ್ಳುವ ಕಥನ ಪುರಾಣ, ಐತಿಹ್ಯ, ಇತಿಹಾಸ ಮತ್ತು ಸ್ವಾನುಭವಗಳನ್ನು ಕಾಲಬೇಧದ ಗೂಡುಗಳಲ್ಲಿಡದೆ, ಭಾಷಾಬೇಧಗಳ ಕಟ್ಟಿಗೊಳಪಡಿಸದೆ ವರ್ತಮಾನದ ಕಲಾಪಗಳ ಮೂಲಕ ವಿಮರ್ಶಿಸುವ ಕ್ರಮ ಗಂಭೀರದಿಂದ ಅತಿ ಗಂಭೀರದವರೆಗೆ, ಅಂದರೆ ನಾಟಕದ ಕೊನೆಯವರೆಗೂ ವಿಕಸಿಸುತ್ತಲೇ ಹೋಗುತ್ತದೆ.
ಪ್ರೇಕ್ಷಕ ಒಂದೊಂದೂ ಮಾತು, ಸನ್ನಿವೇಶವನ್ನು “ನಿಜ, ನಿಜ” ಎಂದು ಗ್ರಹಿಸುವುದರೊಡನೆ, “ಮುಂದೇನು, ಮುಂದೇನು” ಎಂಬ ಆತಂಕಭರಿತ ನಿರೀಕ್ಷೆಯನ್ನು ಬಹುಸಂಖ್ಯೆಯಲ್ಲಿ ಗುಡ್ಡೆ ಹಾಕಿಕೊಳ್ಳುವಂತಾಗಿತ್ತು. “ಮಹಾಭಾರತ ಅಂದರೆ ಒಂದು ಹೆಂಗಸು, ಮತ್ತೊಂದು ಚಕ್ರ” ಎಂಬರ್ಥದ ಮಾತು ನಾನು ಎಲ್ಲೋ ಕೇಳಿದ್ದು `ಮಹಿಳಾಭಾರತ’ದಲ್ಲಿ ಮತ್ತೆ ಸಾರ್ಥಕವಾಯ್ತು. ಶ್ರೀಪಾದ ಭಟ್ಟರ ಸಾಮರ್ಥ್ಯಕ್ಕೆ ನಮೋ, ತಂಡದ ಸಾಧನೆಗೆ ಇದ್ದೆಲ್ಲ ಸ್ವರಭಾರ ಹಾಕಿ ಹೇಳುತ್ತೇನೆ ಶಹಭಾಸ್!





0 Comments