ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಲಾ ಅಕ್ಕಿಶೆಟ್ಟಿ ಓದಿದ ‘ದೇವರ ಹೊಲ’

ಮಾಲಾ ಮ ಅಕ್ಕಿಶೆಟ್ಟಿ

“ದೇವರ ಹೊಲ” ಇದು ಮಂಜಯ್ಯ ದೇವರಮನಿ ಅವರ ಎರಡನೇ ಕಥಾ ಸಂಕಲನ. ಇವರ ಕೆಲವು ಕಥೆಗಳನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಈ ಮೊದಲು ಓದಿದ್ದೆ. ಅಪ್ಪಟ ಗ್ರಾಮೀಣ ಜೀವನವನ್ನು ಕಣ್ಣ ಮುಂದೆ ಚಿತ್ರಿಸುವ ಸಾಮರ್ಥ್ಯ ಇದರಲ್ಲಿದೆ.

ಈ ಕಥಾ ಸಂಕಲನದಲ್ಲಿ ಒಟ್ಟು ಹದಿನಾಲ್ಕು ಕಥೆಗಳಿವೆ. ಬಹಳಷ್ಟು ಕಥೆಗಳು ಪ್ರಜಾವಾಣಿಯಲ್ಲಿ ಪ್ರಕಟಗೊಂಡಿವೆ. ಈಗ ರಾಣೇಬೆನ್ನೂರಿನಲ್ಲಿ ನೆಲೆಸಿರುವ ಇವರು ಕಥೆಗಳಲ್ಲಿ ಬಳಸುವ ಗ್ರಾಮೀಣ ಭಾಷೆ, ಜೀವನ, ಸಂಪ್ರದಾಯ, ಹಬ್ಬಗಳು ಇತ್ಯಾದಿ ಎಷ್ಟು ಚೆನ್ನಾಗಿ ವರ್ಣಿಸುತ್ತಾರೆಂದರೆ ಬಹಳಷ್ಟು ವರ್ಷ ಗ್ರಾಮದಲ್ಲಿಯೇ ಕಳೆದಿರಬೇಕು ಇಲ್ಲಾದರೆ ಈ ಕಥಾಸಂಕಲನದುದ್ದಕ್ಕೂ ಬರುವ ಗ್ರಾಮ್ಯ ಜೀವನ ಚಿತ್ರಣ ಅಸಾಧ್ಯ.

ಕಥೆಗಳು ಸರಳ ಮತ್ತು ಓದಿನ ರುಚಿಯನ್ನು ಹೆಚ್ಚಿಸುತ್ತವೆ. ಮತ್ತೊಂದು ವಿಶೇಷ ಏನಂದ್ರೆ ಬಹಳಷ್ಟು ಕಥೆಗಳು ಸುಖಾಂತ್ಯ ಕಂಡು ಓದುಗರನ್ನು ಆತಂಕದಿಂದ ಆಗುವ ವಿಷಾದದಿಂದ ಮುಕ್ತಗೊಳಿಸುತ್ತವೆ. ಓದಿದ ನಂತರ ನಿರಂಬಳ ಭಾವ.

“ದೇವರ ಹೊಲ”, “ಲೆಕ್ಕ ಪುಸ್ತಕ” ಮತ್ತು “ಕೈವಲ್ಲಿ” ನನ್ನಿಷ್ಟದ ಕಥೆಗಳು. “ದೇವರ ಹೊಲ” ಕಥೆಯಲ್ಲಿ ಪಾತ್ರ ಅನುಭವಿಸುವ ಶಿಕ್ಷೆ, ಕಲ್ಪನೆಯೋ ಅಥವಾ ದೇವರಿಂದ ಮಾಡಲ್ಪಟ್ಟಿದ್ದೋ ಅಥವಾ ಕಥೆಯ ಪಾತ್ರವೇ ಶಿಕ್ಷೆ ನೀಡುತ್ತದೆಯಾ ಎನ್ನುವ ನಿರ್ಣಯವನ್ನು ಓದುವನಿಗೆ ಬಿಡಲಾಗಿದೆ.ಸತ್ಯಕ್ಕೆ ಗೆಲುವು ಎಂದೆಂದೂ ನಿಜ. “ಲೆಕ್ಕಪುಸ್ತಕ” ಮತ್ತು “ಕೈವಲ್ಲಿ” ಕಥೆಗಳು ಪರೋಪಕಾರ ಎಂಬ ಗುಣದಿಂದ ಓದುಗನನ್ನು ತುಂಬಾ ಆಕರ್ಷಿಸುತ್ತವೆ. ದಾನ ಎನ್ನುವುದು ತಮ್ಮಲ್ಲಿ ಬಹಳಷ್ಟು ಇದ್ದಾಗ ಅಷ್ಟೇ ಕೊಡುವುದಲ್ಲ. ತಮ್ಮಲ್ಲಿ ಕಡಿಮೆ ಇದ್ದು, ತಮಗೆನೇ ಇಲ್ಲದಾಗಿಸಿಕೊಂಡು ಕೊಡುವುದು ಮಹಾದಾನ ಎನ್ನುವುದನ್ನು ಎರಡು ಕಥೆಗಳು ಬಹಳ ಕಾರ್ಮಿಕವಾಗಿ ತಿಳಿಯಪಡಿಸುತ್ತವೆ. ಉದಾರತೆ ಬಡವರಲ್ಲಿಯೇ ಹೆಚ್ಚು.

“ಅಗಸಿ ಹೆಣ” ಯಾವುದು ಬೇಡ ಎನ್ನುತ್ತೇವೆಯೋ ಅದನ್ನೇ ಹಠಕ್ಕೆ ಬಿದ್ದು ಮಾಡಿದಾಗ ಸಿಗುವ ಫಲವಾದರೆ, “ಹುಳಿಮಾವು” ನಲ್ಲಿಯದು ನಸೀಬಕ್ಕೆ ಸಿಲುಕಿದ ಪಾತ್ರ. ಮಾಡಬೇಕಾದ ಕರ್ತವ್ಯ ಮಾಡಿದರೂ ಊರ ಜನರ ವಿಲಕ್ಷಣ ಮಾತಿಗೆ ಆಹಾರವಾಗುವುದು ದೌರ್ಭಾಗ್ಯ. ವ್ಯಕ್ತಿಯನ್ನು ಮಕ್ಕಳೇ ಸೇಡಿಗೆ ಬಿದ್ದು ಕೊಲೆ ಮಾಡಿರಬಹುದು ಎಂದು ಅಂದುಕೊಳ್ಳುವಾಗ ಕಥೆಗಾರ ಬೇರೆಯದೇ ಕಾರಣ ನೀಡಿ ಆಶ್ಚರ್ಯವನ್ನುಂಟು ಮಾಡುತ್ತಾರೆ.ಅರೆಬೆಂದ ಹೆಣವನ್ನು ಬೈಯುವುದು ಮತ್ತು ಮೂಳೆಗಳಿಂದ ಚಿನ್ನಿದಾಂಡು ಆಡುವುದು ಒಂದು ಕ್ಷಣ ಗಾಬರಿಗೊಳಿಸಿದವು…ಮೈ ಜುಮ್ ಎಂದಿತು.ಸಾವನ್ನು ವಿಲಕ್ಷಣವಾಗಿ ಮಕ್ಕಳು ಸಂಭ್ರಮಿಸುತ್ತಾರೆನ್ನುವದನ್ನು ಅರಗಿಸಿಕೊಳ್ಳಲಾಗಲಿಲ್ಲ.

“ದೇವರ ಕೂಗು” ಕಥೆಯಲ್ಲಿ ದುಡಿದು ತಿನ್ನುತ್ತೇವೆ ಎನ್ನುವವರಿಗೆ ಸಹಾಯ ಮಾಡಬೇಕೆನ್ನುವ ಸೂಕ್ಷ್ಮವನ್ನು ಸಾರುತ್ತದೆ.

ನಾಯಿ ಬುಡ್ಡನ ಪವಾಡ, ಕಲ್ಲೇಶಿ ಪ್ರೇಮ ಪುರಾಣ, ಕಾಡ್ಕೋಣ ಭೂತಲಿಂಗ, ಮುತ್ತಿನ ರಾಶಿ, ಕಪಲಿ ಬಾವಿ, ಮಾದೇವನ ಮದುವೆ, ಸುದ್ದಿಗಾರ ಕೆಂಪಣ್ಣ ಕಥೆಗಳು ತಮ್ಮದೇ ವಿಶಿಷ್ಟ ವಿಷಯದಿಂದ ಸೆಳೆಯುತ್ತವೆ.

“ದೇವರ ಹೊಲ”, “ಕೈವಲ್ಲಿ” ಮತ್ತು “ಲೆಕ್ಕ ಪುಸ್ತಕ” ಓದಲೇಬೇಕಾದ ಕಥೆಗಳು.

ಮಂಜಯ್ಯ ದೇವರಮನಿಯವರ ಈ ಕಥಾ ಸಂಕಲನವೂ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.

‍ಲೇಖಕರು avadhi

8 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading