ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮರೆಯಲಾಗದ ಜಿಮ್ ಕಾರ್ಬೆಟ್!

ರೇಷ್ಮಾ ಗುಳೇದಗುಡ್ಡಾಕರ್

ಜಿಮ್ ಕಾರ್ಬೆಟ್ ಅವರ ಪುಸ್ತಕಗಳು ಎಷ್ಟು ಓದಿದರು ಮುಗಿಯದ ಕುತೂಹಲ ಭರಿತ ಪುಸ್ತಕಗಳು. ಈ ಪುಸ್ತಕ ಕಾರ್ಬೆಟ್ ಅವರ ಜೀವನದ ಮತ್ತಷ್ಟು ವಿಶೇಷ ಸಂಗತಿಗಳನ್ನು ಓದುಗರಿಗೆ ಪರಿಚಯಿಸುತ್ತವೆ .

ಇದು ಶಿಕಾರಿ ಕಾಡಿನ ಅನುಭವದ ಹೊತ್ತಿಗೆ ಅಲ್ಲ. ಪುಸ್ತಕ ಅವರ ವೈಯಕ್ತಿಕ ಬದುಕಿನ ಅಪರೂಪ ಮಾಹಿತಿ ನೀಡುತ್ತದೆ. ಇಲ್ಲಿ ಆತ್ಮೀಯತೆ, ಮಾನವೀಯತೆ, ದಕ್ಷತೆ, ಪ್ರಾಮಾಣಿಕತೆ ಬಹು ಪ್ರಧಾನವಾಗಿ ಕಾಣುವ ಅಂಶಗಳು .

ಪ್ರಾಮಾಣಿಕತೆ, ದಕ್ಷತೆ ಸರಳತೆ, ಮಾನವೀಯತೆ ಎಲ್ಲರಗೂ ಬೇಕು. ಆದರೆ ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು  ಯಾರೂ ಸಿದ್ದರಿಲ್ಲ..! ಬರಿಯ ಪುಸ್ತಕದ ಮಾತಾಗಿ ಇವು ಉಳಿಯುವಂತಾಗಿದೆ. ಹೀಗಿರುವಾಗ ಭಾರತವನ್ನು ಭಾರತೀಯರಿಗಿಂತ ಹೆಚ್ಚಿನದಾಗಿ ಪ್ರೀತಿಸಿ, ಅವರಿಗೆ ಗೆಳೆಯನಾಗಿ, ಕಾವಲುಗಾರನಾಗಿ, ಅವರೊಂದಿಗೆ ಕಾರ್ಮಿಕನಾಗಿ, ವೈದ್ಯನಾಗಿ, ಸಾರ್ಥಕ ಸಮರ್ಥ ಜೀವನ್ನು ಬಾಳಿ ಉಳಿಸಿಹೋದ ಜಿಮ್ ಕಾರ್ಬೆಟ್ ಅಸಮಾನ್ಯರಾಗಿ ಉಳಿಯುತ್ತಾರೆ ಸ್ಮೃತಿ ಪಟಲದಲ್ಲಿ.‌

ಸರಳತೆಯನ್ನು ಅನಾಯಾಸವಾಗಿ ಪಾಲಿಸಿ, ಮುಗ್ಧ ಜನರ ಬದುಕಿಗಾಗಿ ಸದಾ ಚಿಂತಿಸಿ, ಅವರಿಗಾಗಿ ಬಂಡಾಯದ ಬಾವುಟವನ್ನು ಹಾರಿಸಿದ ಜಿಮ್ ಕಾರ್ಬೆಟ್ ನೂರಾರು ಮರಗಳು ಒಂದೇ ದಿನದಲ್ಲಿ ರೈಲಿಗಾಗಿ ಧರೆಗುರುಳಿದಾಗ ಅತೀವ ನೋವು ಅನುಭವಿಸುತ್ತಾರೆ. ಪಕ್ಷಿಗಳ ನೋವು, ಬದುಕಿನ ಕುರಿತು ಬಾಲ್ಯದ ಆಸಕ್ತಿ ಮುಂದೆ ಅವರು ಪರಿಸರದ ಕಾಳಜಿಯನ್ನು ಮಾಡಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗುವಂತೆ ಮಾಡಿತ್ತದೆ..!

ದಮನಕಾರಿ ಬ್ರಿಟಿಷ್ ರ ಬಗ್ಗೆ ನಾವು ಇತಿಹಾಸದಲ್ಲಿ ‌ಓದಿರುತ್ತೇವೆ. ಆದರೆ ಇಲ್ಲಿ ಹಲವು ಮಾನವೀಯ ಬ್ರಿಟಿಷ್ ಅಧಿಕಾರಿಗಳು  ಭಾರತೀಯರಿಗಾಗಿ ಶ್ರಮಿಸುವುದನ್ನು ಕಾಣುತ್ತೇವೆ. ತನ್ನ ಮನೆಯನ್ನು ಮಿನಿ ಭಾರತವನ್ನಾಗಿಸಿ, ಸಾರ್ವಜನಿಕ ಆರೋಗ್ಯ ಕೇಂದ್ರವಾಗಿಸಿದ ಜಿಮ್ ಕಾರ್ಬೆಟ್ ಅವರ ಹೃದಯ ವೈಶಾಲ್ಯತೆಗೆ ಭಾರತ ಸೋತಿದೆ.

ಭಾರತೀಯರ ನಂಬಿಕೆಗಳನ್ನು ಅಲ್ಲಗಳೆಯದೆ, ಗೌರವಿಸಿ ಅವರನ್ನು ಪ್ರೀತಿಸಿದ ಬಿಳಿ ಸಾಹೇಬ ಅನನ್ಯ. ನಾವು ಭಾರತೀಯರು ಏನನ್ನು ಕಲಿಯುತ್ತೇವೆಯೊ ಗೊತ್ತಿಲ್ಲ ಆದರೆ ಯಥೇಚ್ಛವಾದ ಮೂಢನಂಬಿಕೆಗಳು ನಮಗರಿವಿಲ್ಲದಂತೆ ನಮ್ಮೊಳಗೆ ಆಳವಾಗಿ ಬೇರೊರಿರುತ್ತವೆ. ಆದರೆ ಕಾರ್ಬೆಟ್ ಅವರ ಪುಸ್ತಕಗಳು ಸಾರಾಸಗಟಾಗಿ ಈ ನಂಬಿಕೆಗಳನ್ನು ತಳ್ಳಿ ಹಾಕುತ್ತವೆ. ಓದುಗನನ್ನು‌ ತಾರ್ಕಿಕ ಆಲೋಚನೆಗೆ ಇಳಿಸುತ್ತವೆ.

ಕಾಲ, ಜಾಗ, ಸಮಯ ಇವುಗಳಲ್ಲಿ ಅವರು ಬಹಳ ಸರಳವಾಗಿ ನಡೆದು ಬರುತ್ತಾರೆ. ʼಏಕಾಂತʼವಾಗಿ ಭಾರತದ ಕಾಡುಗಳಲ್ಲಿ ಸಂಚರಿಸಿ ಬೆಳದಿಂಗಳ ʼಸೊಬಗುʼ ಕಾಶ್ಮಿರದ ಸೂರ್ಯೋದಯದ ʼಬೆಡಗʼನ್ನು ತಮ್ಮ ಹಲವು ಪುಸ್ತಕಗಳಲ್ಲಿ ಅವರು ವರ್ಣಿಸಿದ್ದಾರೆ.

ತನಗಾಗಿ ಏನನ್ನು ಪಡೆಯದೆ ಬಡ ಭಾರತೀಯರಿಗಾಗಿ ಬದುಕಿ ಇಳಿ ವಯಸ್ಸಿನಲ್ಲಿ ಅನಿವಾರ್ಯವಾಗಿ ಭಾರತವನ್ನು ತೊರೆದು ಕೀನ್ಯಾದಲ್ಲಿ ಇಹಲೋಕ ತ್ಯಜಿಸಿದರು. ಇಂದಿಗೂ ಇವರು ನಿರ್ಮಿಸಿದ ಶಾಲೆ, ಮನೆಗಳು ಬಹು ಪ್ರೀತಿಸಿದ ಕಾಡು, ಮನೆಯ ಮುಂದಿನ ಮಾವಿನ ಮರ ಎಲ್ಲವು ಅವರ ಇರುವಿಕೆಯನ್ನು ಸಾರುತ್ತವೆ ಎಂದು ಲೇಖಕರು ಹೇಳುತ್ತಾರೆ.

ಲೇಖಕರು ಅಲ್ಲಿನ ಪರಿಸರದಲ್ಲಿ ಸಂಚರಿಸಿ ಸಲೂನ್, ಟೀ ಅಂಗಡಿ ಎಲ್ಲದಕ್ಕೂ‌ ಕಾರ್ಬೆಟ್ ಅವರ ಹೆಸರು ಇರುವುದು ತಿಳಿಸಿದ್ದಾರೆ. ಇನ್ನೂ ಅಲ್ಲಿನ ಜನಮಾನಸ ಅವರಿಗಾಗಿ ಕಾಯುತ್ತಿದೆ . “ಭಾರತವೇ ನನ್ನ ಪತ್ನಿ ಭಾರತೀಯರೇ ನನ್ನ ಮಕ್ಕಳು” ಎಂದ ಬಿಳಿ ಸಾಹೇಬರನ್ನು ಹೇಗೆ ಮರೆಯಲು ಸಾಧ್ಯ ಭಾರತೀಯರಿಗೆ?

ಶಿಕಾರಿಗಾಗಿ ಕೋವಿ ಹಿಡಿದು ನರಭಕ್ಷಕರನ್ನು ಹೊಡೆದುರುಳಿಸಿ ತದನಂತರ ಕ್ಯಾಮೆರಾ ಹಿಡಿದು ವನ್ಯಸಂಕುಲವ ಜಗತ್ತಿಗೆ ಪರಿಚಯಿಸಿ, ಲೇಖಕನಾಗಿ ಪರಿವರ್ತನೆ ಹೊಂದಿ ಯಶಸ್ಸು ಕಂಡು ತನ್ನ ನಿಸರ್ಗ ಪ್ರೇಮವನ್ನು ಜಗತ್ತಿಗೆ ಅನಾವರಣ ಗೊಳಿಸಿದ ಸರಳ ಜೀವಿ ಕಾರ್ಬೆಟ್.  ಅವರ ಜೀವನದ ಹಲವು ಮಜಲುಗಳ ವಿವರಣೆ ಜೊತೆಗೆ ಅವರ ತಾಯಿಯ ಛಲ, ಸಹೋದರಿ ಮ್ಯಾಗಿಯ ಮಮತೆ ಎಲ್ಲವೂ ಈ ಹೊತ್ತಿಗೆಯಲ್ಲಿ‌ ಕಾಣಸಿಗುತ್ತವೆ.

ಕಾಲದೊಂಗಿ ಮತ್ತು ಚೋಟಿ ಹವಾಲ್ದನಿಯಲ್ಲಿ ಕಾಣುವ ಕಾರ್ಬೆಟ್ ನೆನಪುಗಳು ನೈನಿತಾಲ್ ನಿಂದ ಮರೆಯಾದದು ಏಕೆ ಎಂದು ಲೇಖಕರು ಬಹು ವಿಷಾದಿಸುತ್ತಾರೆ. ಇದು ಓದುಗರಿಗೂ ಕಾಡುವ ಪ್ರಶ್ನೆ.

‍ಲೇಖಕರು Avadhi

11 January, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading