
ಹರ್ಷಕುಮಾರ್ ಕುಗ್ವೆ
ಅದು 2006.
ಶಿವಮೊಗ್ಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭ.
ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ನಾಡಿನ ಜನಪರ, ಜೀವಪರ ಹೋರಾಟಗಾರರೂ ಚಿಂತಕರೂ ಆದ ಗೌರಿ ಲಂಕೇಶ್ ಹಾಗೂ ಕಲ್ಕುಳಿ ವಿಠ್ಠಲ ಹೆಗಡೆ ಅವರೂ ಸಹ ಆಹ್ವಾನಿತರಾಗಿದ್ದರು.
ಬಿಜೆಪಿ ಸರ್ಕಾರವಿದ್ದ ಆ ಸಮಯದಲ್ಲಿ ಸಂಘಪರಿವಾರ ಈ ಇಬ್ಬರ ಮೇಲೆ ನಕ್ಸಲ್ ಬೆಂಬಲಿಗರೆಂಬ ಅಪಪ್ರಚಾರ ನಡೆಸಿ ವೇದಿಕೆಯ ಮೇಲೇ ಇಬ್ಬರ ಮೇಲೆ ದೈಹಿಕ ಹಲ್ಲೆಯನ್ನು ಸಂಘಟಿಸಿತ್ತು.
ವೇದಿಕೆಯಲ್ಲಿ ಕಲ್ಕುಳಿ ವಿಠ್ಠಲ ಹೆಗಡೆ ಮೈಕು ಕೈಗೆತ್ತಿಕೊಳ್ಳುತ್ತಿದ್ದಂತೆ ನೂರಾರು ಸಂಘಪರಿವಾರದ ಕಾರ್ಯಕರ್ತರು ವೇದಿಕೆಗೆ ನುಗ್ಗಿ ಹಲ್ಲೆನಡೆಸಲು ಮುನ್ನುಗ್ಗಿದರು. ಆದರೆ ವೇದಿಕೆಯ ಬಳಿ ಇದ್ದ ಪೊಲೀಸರು ಮತ್ತು ನಮ್ಮಂತಹ ಪ್ರಗತಿಪರ ಸಂಘಟನೆಗಳ ಯುವ ಕಾರ್ಯಕರ್ತರು ಸಂಘಿಗಳ ಹಲ್ಲೆಯನ್ನು ವಿಫಲಗೊಳಿಸಿದೆವು.
ತದನಂತರ ಸುಮಾರು 25-30 ಜನರ ಮೇಲೆ ಸುಳ್ಳು ದೂರು ನೀಡಿದರು. ಈ ಕೇಸು ಮುಗಿದು ನಾವು ಖುಲಾಸೆ ಆಗುವವರೆಗೆ ಸತತ ಆರು ವರ್ಷ ಕೋರ್ಟಿಗೆ ಅಲೆದವರಲ್ಲಿ ನಾನೂ ಒಬ್ಬ.
ಅಕಸ್ಮಾತ್ ನಾವು ಅಂದು ಸೂಕ್ತ ಸಮಯದಲ್ಲಿ ಪರಿಸ್ಥಿತಿ ನಿಯಂತ್ರಿಸದೇ ಇದ್ದಿದ್ದರೆ ಸಾಹಿತ್ಯ ಸಮ್ಮೇಳನಗಳ ಇತಿಹಾಸದಲ್ಲಿ ದುರಂತವೊಂದು ಸಂಭವಿಸುತ್ತಿತ್ತಲ್ಲದೇ, ಶಿವಮೊಗ್ಗದ ಸಾಹಿತ್ಯ ಪರಿಷತ್ತಿನ ಮೇಲೆ ಕಪ್ಪು ಚುಕ್ಕೆ ಶಾಶ್ವತವಾಗಿ ಅಂಟಿಕೊಳ್ಳುತ್ತಿತ್ತು.
ಅಂದು ಸಾಹಿತ್ಯ ಪರಿಷತ್ತು ರೂಪಿಸಿದ್ದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಶಿವಮೊಗ್ಗದ ಪ್ರಗತಿಪರ ವಲಯ ಶ್ರಮವಹಿಸಿತ್ತು. ಆದರೆ ಅದಕ್ಕಾಗಿ ಕೇಸು ಹಾಕಿಸಿಕೊಂಡು ನಾವು ಹತ್ತು ಹದಿನೈದು ವಿದ್ಯಾರ್ಥಿಗಳು ಎಲ್ಲಾ ರೀತಿಯ ಹಿಂಸೆಗೊಳಗಾಗಿದ್ದು ಇವತ್ತು ಸಾಹಿತ್ಯ ಪರಿಷತ್ತಿನ ಲಾಭದಾಯಕ ಸ್ಥಾನದಲ್ಲಿ ಇರುವವರಿಗೆ ಅನುಭವವಿಲ್ಲದಿರಬಹುದು.
ನಾವಂತೂ ಮರೆಯಲು ಸಾಧ್ಯವಿಲ್ಲ.
ಇಂದಿನ ದುರಂತ ನೋಡಿ.

ಶಿವಮೊಗ್ಗದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರಿ ಲಂಕೇಶ್ ಹಾಗೂ ಕಲ್ಕುಳಿ ವಿಠ್ಠಲ್ ಹೆಗ್ಡೆ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಧರಣಿ
ಯಾವ ಸಂಘಪರಿವಾರ ಅಂದು ಸಾಹಿತ್ಯ ಪರಿಷತ್ತಿನ ಗೌರವವನ್ನು ಹರಾಜು ಹಾಕಿತ್ತೋ ಅದರ ವಕ್ತಾರಿಕೆ ನಡೆಸುವ ಎಸ್ ಎಲ್ ಭೈರಪ್ಪ ಎಂಬ ಜೀವ ವಿರೋಧಿ ಸಾಹಿತಿಯನ್ನು ಸಾಹಿತ್ಯ ಸಮ್ಮೇಳನದಲ್ಲಿ ಕರೆತಂದು ಉದ್ಘಾಟನೆ ನಡೆಸಲು ತೀರ್ಮಾನಿಸಲಾಗಿದೆ ಎಂಬ ಸುದ್ದಿ ಬಂದಿದೆ. ಶಿವಮೊಗ್ಗದ ಸಾಹಿತ್ಯ ಪರಿಷತ್ತಿನ ಮಟ್ಟ ಈ ಹಂತಕ್ಕೆ ಕುಸಿದ ಕಾರಣವಾದರೂ ಏನು?
ಇಂತಹ ಒಂದು ಕೆಟ್ಟ ಪರಂಪರೆಗೆ ಚಳವಳಿಗಳ ನೆಲೆಯಾದ ಶಿವಮೊಗ್ಗದಲ್ಲಿ ನಾಂದಿ ಹಾಡುವುದನ್ನು ನಾನಂತೂ ವಿರೋಧಿಸುತ್ತೇನೆ.





0 Comments