ಒಂದು ಬೆಳಕಿನ ಕಿರಣ
-ಡಾ.ಸಿ.ರವೀಂದ್ರನಾಥ್

ನನ್ನನ್ನು ಪ್ರಭಾವಿಸಿದ ಗುರುವಿನ ಬಗ್ಗೆ ಬರೆಯಲು ಹೊರಟಾಗ ನನ್ನ ನೆನಪಿನ ಸುರುಳಿ ಬಿಚ್ಚಿ ಕಣ್ಣ ಮುಂದೆ ನಿಂತದ್ದು ದೇವರೆಡ್ಡಪ್ಪ ಮೇಷ್ಟ್ರ ಚಿತ್ರ. ಅವರು ನನ್ನ ಪ್ರಾಥಮಿಕ ಶಾಲಾ ಗುರುಗಳಾಗಿದ್ದರು. ನಾನಾಗ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ರೋಡಲಬಂಡಾ ಕ್ಯಾಂಪಿನಲ್ಲಿದ್ದೆ. ಅಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೆಯ ತರಗತಿ ಓದುತಿದ್ದೆ, ಒಂದು ದಿನ ನಮಗೆಲ್ಲ ಕನ್ನಡ ಹೇಳಿಕೊಡಲು ಹೊಸ ಮೇಷ್ಟ್ರು ಬರುತ್ತಾರೆ ಎಂಬ ವಿಷಯ ತಿಳಿಯಿತು. ನಮಗೆಲ್ಲ ಕುತೂಹಲ. ಮೇಷ್ಟ್ರು ವಯಸ್ಸಾದವರೋ, ಚಿಕ್ಕವರೋ, ಪ್ಯಾಂಟ್ ಹಾಕುತ್ತಾರೋ ಅಥವಾ ಪಂಚೆ ಉಡುತ್ತಾರೋ ಎಂಬೆಲ್ಲ ಪ್ರಶ್ನೆಗಳು ಮನದಲ್ಲಿ ಮೂಡಿದ್ದವು. ಅವರು ತರಗತಿಗೆ ಬಂದ ಮೊದಲ ದಿನ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ.
ಪೂರ್ಣ ತೋಳಿನ ಶರ್ಟ್, ಶುಭ್ರ ಬಿಳಿ ಧೋತರ ತೊಟ್ಟ ಸುಮಾರು ಇಪ್ಪತೈದು ವರ್ಷದ ಯುವಕನೊಬ್ಬ ತರಗತಿಯನ್ನು ಪ್ರವೇಶಿಸಿದಾಗ ಎಲ್ಲರಿಗೂ ಭಯ ಮಿಶ್ರಿತ ಕುತೂಹಲ. ಅವರು ಬಂದವರೇ ತಮ್ಮ ಪರಿಚಯ ಹೇಳಿಕೊಂಡು ಹಾಜರಿ ಪುಸ್ತಕ ಹಿಡಿದು ಮೊದಲ ವಿದ್ಯಾರ್ಥಿಯನ್ನು ಕರೆದು ಅವನ ಕೈಗೆ ಚಾಕ್ ಪೀಸ್ ಕೊಟ್ಟು ಬೋರ್ಡ್ ನ ಮೇಲೆ `ಬ’ ಅಕ್ಷರ ಬರಿ ಎಂದು ಹೇಳಿದಾಗ ಎಲ್ಲರಿಗೂ ಅಚ್ಚರಿ. ಅವನು ಬರೆದಾದ ಮೇಲೆ ಏನೂ ಹೇಳದೆ ಮುಂದಿನ ವಿದ್ಯಾರ್ಥಿಯನ್ನು ಕರೆದು ಅವನಿಗೂ `ಬ’ ಅಕ್ಷರ ಬರೆಯಲು ಹೇಳಿದರು. ಹೀಗೆ ತರಗತಿಯ ಎಲ್ಲ ವಿದ್ಯಾರ್ಥಿಗಳನ್ನು ಒಬ್ಬೊಬ್ಬರನ್ನಾಗಿ ಕರೆದು ಎಲ್ಲರಿಂದಲೂ `ಬ’ ಅಕ್ಷರ ಬರೆಸಿದರು. ಎಲ್ಲ ಬರೆದ ನಂತರ ಗಂಭೀರವಾಗಿ ಹೇಳಿದರು. `ಎಲ್ಲರೂ ತಪ್ಪು ಬರೆದಿದ್ದೀರಿ’. ನಾವೆಲ್ಲ ನಾಚಿಕೆಯಿಂದ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಾ ಏನೂ ಅರ್ಥವಾಗದೆ ಕುಳಿತೆವು.
ಅವರು ಹೇಳಿದರು `ಕನ್ನಡ ನಮ್ಮ ಮಾತೃಭಾಷೆ, ಕನ್ನಡ ವರ್ಣಮಾಲೆಯ ಒಂದೊಂದು ಅಕ್ಷರಕ್ಕೂ ಅದರದೇ ಆದ ಪ್ರಾಮುಖ್ಯತೆ ಹಾಗೂ ಸ್ಥಾನಮಾನಗಳಿವೆ. ಅದನ್ನು ಗೌರವಿಸಿ ಶ್ರದ್ಧೆಯಿಂದ ಕಲಿಯಬೇಕು. ನೀವು ಬರೆದಿರುವುದು `ಓ’. `ಬ’ ಹೀಗೆ ಬರೆಯಬೇಕು ನೀವೆಲ್ಲ ಅಕ್ಷರವನ್ನು ಅರ್ಧಕ್ಕೆ ತಂದು ನಿಲ್ಲಿಸಿದ್ದೀರ. ಪೂರ್ಣ ಮೇಲಿನವರೆಗೆ ಎಳೆದು ಬರೆದಿಲ್ಲ. ಅಂದಿನಿಂದ ಪ್ರತಿದಿನ ನಮಗೆ ಕನ್ನಡ ಕಾಪಿ ಬರೆಹ, ವ್ಯಾಕರಣ, ಶಬ್ದಗಳ ಅರ್ಥ ಇವುಗಳನ್ನು ಆಸಕ್ತಿಯಿಂದ ಹೇಳಿಕೊಡುತ್ತಿದ್ದರು. ಒಂದೂ ತಪ್ಪಿಲ್ಲದೆ ಬರೆಯುವವರಿಗೆ ಚಾಕೋಲೇಟ್ ಕೊಡುತ್ತಿದ್ದರು.
ಹೀಗೆ ನಮ್ಮ ಕನ್ನಡ ಉತ್ತಮಪಡಿಸಿದ ಅವರು ಕೆಲ ಹೊಸ ಆಟಗಳನ್ನು ಹೇಳಿಕೊಟ್ಟರು. ಅದೂ ಚಂದ್ರನ ಬೆಳಕಿನಲ್ಲಿ! ರಾತ್ರಿ 8 ಗಂಟೆಗೆ ನಮ್ಮನ್ನೆಲ್ಲ ಆಟದ ಮೈದಾನಕ್ಕೆ ಕರೆಸಿ ಚಂದ್ರನ ಬೆಳಕಿನಲ್ಲಿ ಕುಸ್ತಿ, ಕಬಡ್ಡಿ ಆಡಿಸುತ್ತಿದ್ದರು. ಅದೊಂದು ಅದ್ಭುತ ಅನುಭವ.
ನಾನು ಹತ್ತನೆಯ ತರಗತಿಗೆ ರಾಯಚೂರಿಗೆ ಬಂದಾಗ ಅವರ ಸಂಪರ್ಕ ಕಡಿದು ಹೋಯಿತು. ಆ ವರ್ಷ ನಾನು ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದಾಗ ನನಗೆ ಮೊದಲು ನೆನಪಾದದ್ದು ದೇವರೆಡ್ಡಪ್ಪ ಮೇಷ್ಟರು. ನಂತರ ಅವರನ್ನು ಭೇಟಿಯಾಗಲು ಸಾಧ್ಯವಾಗಲೇ ಇಲ್ಲ. ಅಬ್ಬಾ 33 ವರುಷಗಳೇ ಕಳೆದು ಹೋಗಿವೆ ಅವರನ್ನು ನೋಡಿ ! ಅವರು ಹೇಗಿದ್ದಾರೋ, ಎಲ್ಲಿದ್ದಾರೋ ಒಂದೂ ತಿಳಿಯದು. ಹೋಗಿ ಬರಬೇಕು, ಈ ಕಾಲದ ಹಾದಿಯಲ್ಲಿ ಮತ್ತೊಮ್ಮೆ ಅವರನ್ನು ಕಾಣಬೇಕು…



0 Comments