ಬೆತ್ತಲಾದ ಬಳ್ಳಾರಿ ಗುಡ್ಡ ಮತ್ತು ರೆಡ್ಡಿ ಮಗಳ ಅದ್ದೂರಿ ಮದುವೆ..
ಮೊನ್ನೆ ರಾಷ್ಟ್ರೀಯ ಸುದ್ದಿವಾಹಿನಿಯ ಗೆಳತಿಯೊಬ್ಬಳು ಜನಾರ್ಧನ ರೆಡ್ಡಿ ಕಡೆಯವರಿಂದ ಪದೇ ಪದೇ ಕಾಲ್ ಬರ್ತಿದೆ. ಮದುವೆ ಕವರೇಜ್ ಕುರಿತಂತೆ ಇರಬಹುದು, ಆಹ್ವಾನ ಪತ್ರಿಕೆ ಕೊಟ್ಟಿದ್ದಾರೆ ಎಂದಳು, ಆಗ ನೆನಪು ಕೆಲವು ವರ್ಷಗಳ ಹಿಂದೆ ಸರಿದು ಹೋಯಿತು.
ಅಕ್ರಮ ಗಣಿಗಾರಿಕೆ ಸದ್ದು ಭಾರೀ ಜೋರಾಗಿ ಕೇಳಿಬರುತ್ತಿದ್ದ ದಿನ. ನ್ಯಾಯಮೂರ್ತಿ ಅಂದಿನ ಲೋಕಾಯುಕ್ತ ಸಂತೋಷ ಹೆಗ್ಡೆ ಈ ಅಕ್ರಮದ ಸದ್ದಡಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಬಳ್ಳಾರಿಯ ಜಿಲ್ಲಾಡಳಿತ, ರಾಜಕಾರಣಿಗಳ ಬಗ್ಗೆ ಆಗಲೇ ಮಾತಾಡುತ್ತಿದ್ರು. ಲೋಕಾಯುಕ್ತಕ್ಕೆ ಹೋಗೋದು ಅಕ್ರಮ ಗಣಿಗಾರಿಕೆಯ ಕುರಿತಂತೆ ಹೆಗಡೆಯವರನ್ನು ಮಾತಾಡಿಸುವುದು ನನಗೆ ಸಾಮಾನ್ಯವಾಗಿತ್ತು.
ಹಾಗೆ ಬಳ್ಳಾರಿಗೆ ವರದಿಗಾಗಿ ತೆರಳಿ ಧೂಳು ಕುಡಿದು ಚಪ್ಪಲಿ ಬಟ್ಟೆ ಕೆಂಪಾಗಿ ವಾರಗಟ್ಟಳೆ ಓಡಾಡಿದ ದಿನಗಳು ಹಾಗೇ ಹಿಂಬಾಲಿಸಿದವು. ಅಕ್ರಮ ಗಣಿಗಾರಿಕೆಯ ವಿರುದ್ಧ ಸಿದ್ಧರಾಮಯ್ಯನವರ ಪಾದಯಾತ್ರೆ ನಂತರದ ಸಮಾವೇಶ ನಾಯಕರ ಭಾಷಣ ಕಿವಿಗೆ ಅಪ್ಪಳಿಸುತ್ತಿದೆ.
ಹಾಗೆ ಇದಕ್ಕೆ ಪರ್ಯಾಯವಾಗಿ ಸಂಡೂರಿನಲ್ಲಿ ಜನಾರ್ಧನ ರೆಡ್ಡಿ, ಶ್ರೀರಾಮುಲು ಸಮಾವೇಶ ಕವರೇಜ್ ಮಾಡಿದ್ದೆ. ಸಂಡೂರಿನ ಆ ಧೂಳಿನ ರಸ್ತೆಗಳು ಶ್ರೀಮಂತರು ಶ್ರೀಮಂತರಾದ, ಬಡವರು ಬಡವರಾಗಿಯೇ ಉಳಿದ ನೈಜ ಕಥೆಯನ್ನು ಮೌನವಾಗಿಯೇ ಕಿವಿಯಲ್ಲಿ ಉಸಿರಿದ ಹಾಗೆ ಭಾಸವಾಗುತ್ತಿತ್ತು.
ಸಂಡೂರಿನಲ್ಲಿ ಭಾಷಣ ಮಾಡಿದ ಜನಾರ್ಧನ ರೆಡ್ಡಿ ಸಂತೋಷ ಲಾಡ್ ಮತ್ತೆ ಕೆಲವು ಕಾಂಗ್ರೆಸ್ ಮುಖಂಡರನ್ನು ಕೈಗೆ ಕೋಳ ತೊಡಿಸಿ ಕೊಂಡೊಯ್ಯುವುದನ್ನು ನೋಡುತ್ತೇನೆ ಎಂದು ಹೇಳಿದ್ರೆ ಮತ್ತವರೇ ಜೈಲು ಸೇರಿದ್ರು . ಸಂತೋಷ್ ಲಾಡ್ ಕೂಡ ಸಚಿವ ಸ್ಥಾನವನ್ನು ಕಳೆದುಕೊಂಡಿದ್ರು.
ಆಂಧ್ರ ಮತ್ತು ಕರ್ನಾಟಕದ ಗಡಿ ಭಾಗದಲ್ಲಿ ಗಡಿಯನ್ನೇ ತಿರುಚಿದ ಜನಾರ್ಧನರೆಡ್ಡಿ ಧೈರ್ಯವನ್ನು ಮೆಚ್ಚಲೇಬೇಕು. ಹಣದಿಂದ ಹಣದ ಹೊಳೆ ಹರಿಸುವ ಮೂಲಕ ವ್ಯವಸ್ಥೆಯನ್ನೇ ಕೊಂಡುಕೊಳ್ಳಬಹುದೆಂದು ಭಾವಿಸಿದ್ದ ಜನಾರ್ಧನ ರೆಡ್ಡಿ ಕೊನೆಗು ನ್ಯಾಯದೆದುರು ತಲೆಬಾಗಲೇ ಬೇಕಾಯಿತು.
ಬಳ್ಳಾರಿಯ ಮುಗ್ಧ ಜನತೆ, ಬಡತನದ ಲಾಭ ಪಡೆದು ರೆಡ್ಡಿಗಳು ಕಟ್ಟಿರುವ ಭವ್ಯಬಂಗಲೆ ಕಂಡಾಗ ನಿಜವಾಗಿಯು ಇದೆಂಥಾ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಅನಿಸುತ್ತಿದೆ. ಅಕ್ರಮ ಗಣಿಗಾರಿಕೆಗೆ ಬ್ರೇಕ್ ಬಿದ್ದ ನಂತರ ಬಳ್ಳಾರಿ ಹೇಗಿದೆ ಎಂದು ತಿಳಿಯುವ ಕುತೂಹಲದಿಂದ ಬಳ್ಳಾರಿಗೆ ಮತ್ತೆ ಪಯಣ ಬೆಳೆಸಿತ್ತು ನಮ್ಮ ತಂಡ. ಈ ಸಂದರ್ಭದಲ್ಲಿ ಗಣಿಗಾರಿಕೆಯಿಂದ ಕೃಷಿಗಾಗಿರುವ ಪರಿಣಾಮದ ತೀವ್ರತೆ ಅರ್ಥವಾಗಿತ್ತು. ಮಾತು ಬರುವುದಿಲ್ಲವೆಂಬ ಕಾರಣಕ್ಕೆ ನಿಸರ್ಗವನ್ನು ಅದು ಹೇಗೆ ಈ ಮನುಷ್ಯ ಹಾಳುಗೆಡುವುತ್ತಾನೆ . ಈ ಪಾಪಕ್ಕೆ ಪ್ರಕೃತಿ ಕ್ಷಮೆ ನೀಡುವುದೇ? ನನ್ನ ಪ್ರಕಾರ ಖಂಡಿತ ಇಲ್ಲ. ಮತ್ತೆ ಸಂಡೂರಿನಲ್ಲಿತ್ತು ನಮ್ಮ ತಂಡ. ಕಣ್ಣೆದುರು ಬೆತ್ತಲಾದ ಬೆಟ್ಟ. ಹಸುರಿನ ಬದಲು ಕಣ್ಣೆದುರು ಕೆಂಧೂಳು. ನಿಸರ್ಗ ಸೌಂದರ್ಯಕ್ಕೆ ಹೆಸರುವಾಸಿಯಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ಸಂಡೂರು ಬದಲಾದ ಬಗೆ ನೋವುಂಟು ಮಾಡಿತು.
ಹಾಗೆ ತಿರುಗಿ ತಿರುಗಿ ರಾತ್ರಿಯಾಗುತ್ತಾ ರಾಮಘಡ ಮೀಸಲು ಅರಣ್ಯಪ್ರದೇಶ ತಲುಪಿದ್ದೆವು. ರಾತ್ರಿ ಲಾರಿ ಚಾಲಕ ದಾವು ನಾಯಕ್ ಮನೆಯಲ್ಲಿ ಉಳಿದೆವು. ತಡರಾತ್ರಿ ಮಾತಾಡುತ್ತಾ ಗಣಿಗಾರಿಕೆ ನಿಂತ ಪರಿಣಾಮ ನಾಲ್ಕು ಮಂದಿ ಲಾರೀ ಮಾಲೀಕರು ಆತ್ಮಹತ್ಯೆಗೆ ಶರಣಾಗಿರುವುದನ್ನು ದಾವು ನಾಯಕ್ ವಿವರಿಸುತ್ತಿದ್ದರು. ಹರಿದ ಬನಿಯನ್, ಮುರುಕು ಮನೆ,ಕಣ್ಣಿಗೆ ರಾಚುತ್ತಿತ್ತು. ಭವಿಷ್ಯ ಮಂಕಾದಂತೆ ಕಂಡ ಪುಟ್ಟ ಎರಡು ಮಕ್ಕಳು ಕಣ್ಣೆದುರು ನಿದ್ದೆಗೆ ಜಾರಿದವು.
ಇನ್ನೊಂದೆಡೆ ರಾಜನೆಂದು ಬೀಗುವ ಬಳ್ಳಾರಿಯ ಬಹುತೇಕ ರಾಜಕಾರಣಿಗಳು, ಭವ್ಯ ಬಂಗಲೆ ಸಮಾನತೆಯ ಆಶಯ ಕತ್ತಲಲ್ಲೇ ಕರಗಿಹೋದಂತೆ ಭಾಸವಾಯಿತು.
ಚಾಪೆಗೆ ಒರಗಿದಾಗ ಹೇಗೆ ನಿದ್ದೆ ಹತ್ತಿತೋ ಗೊತ್ತಿಲ್ಲ. ಮತ್ತೊಂದು ಮುಂಜಾನೆ ಎದುರಾಗಿತ್ತು. ಅಲ್ಲಿಂದ ಪಯಣ ಮತ್ತೆ ಮುಂದುವರೆದಿತ್ತು. ಕಾರ್ಯಕ್ರಮ ಮುಗಿದ ನಂತರ ಇಂದಿಗೂ
ಮರೆಯಾಗದ ಆ ಧ್ವನಿ ಮಾರ್ಗರೆಟ್ ಎಂಬಾಕೆಯದ್ದು. ನಮ್ಮನ್ನೇ ಊರು ಬಿಟ್ಟು ಹೋಗಬೇಕೆಂದುಕೊಂಡಿದ್ದಾರೆ. ಗಣಿಗಾರಿಕೆ ಮಾಡಿ ಊರನ್ನೇ ಸಾಯಿಸಲು. ನಾವು ಬಿಡೋದಿಲ್ಲ, ಈ ಹಸುರಿನ ಮೇಲೆ ಅವರಿಗೆ ಯಾವ ಹಕ್ಕೂ ಇಲ್ಲ. ನಾವು ನಾಲ್ಕು ಗ್ರಾಮದವರು ಒಂದಾಗಿದ್ರೆ ಯಾರು ಏನು ಮಾಡೋಕೆ ಆಗೋದಿಲ್ಲ. ಏರುಧ್ವನಿಯಲ್ಲಿ ಮಾರ್ಗರೆಟ್ ಮಾತಾಡುತ್ತಿದ್ರೆ ಇನ್ನೊಂದಿಷ್ಟು ಭರವಸೆ ಉಳಿದಿದೆ ಅನ್ನಿಸಿತು. ಇಂಥ ಧ್ವನಿಗಳಿಂದಲೇ ಸ್ವಲ್ಪವಾದರು ನಿಸರ್ಗಕ್ಕೆ ಸಲ್ಲಬೇಕಾದ ನ್ಯಾಯ ಸಲ್ಲುತ್ತಿದೆ. ಹಸುರು ಉಳಿದಿದೆ.
ಜನಾರ್ಧನ ರೆಡ್ಡಿ ಶ್ರೀರಾಮುಲು ನಿವಾಸಕ್ಕೆ ಬಂದು ಹರಸಿ ಹೋದ ಸುಷ್ಮಾ ಸ್ವರಾಜ್ ಮುಖ ಮತ್ತು ಆ ದಿನಗಳು ನೆನಪಾದವು. ಜನಾರ್ಧನ ರೆಡ್ಡಿಯನ್ನು ಸಮರ್ಥನೆ ಮಾಡುತ್ತಲೇ ಇದ್ದ ಸುಷ್ಮಾ ಸ್ವರಾಜ್ ಅಕ್ರಮದ ಪ್ರತಿಕೂಲ ಪರಿಣಾಮದ ಅರಿವಾದಾಗ ತಮಗು ಗಣಿಧಣಿಗಳಿಗು ಸಂಬಂಧವೇ ಇಲ್ಲದಂತೆ ಹಿಂದೆ ಸರಿದರು.
ಒಂದು ಹಂತದಲ್ಲಿ ಗಣಿಧಣಿಗಳ ವಿರುದ್ಧ ಯಡಿಯೂರಪ್ಪ ತಿರುಗಿಬಿದ್ದಾಗ ಮತ್ತು ಬಳ್ಳಾರಿಯ ಅಧಿಕಾರಿಗಳ ಎತ್ತಂಗಡಿ ಬಗ್ಗೆ ನಿರ್ಧಾರ ತೆಗೆದುಕೊಂಡಾಗ ರೆಡ್ಡಿ ಪರ ಸುಷ್ಮಾ ಬ್ಯಾಟಿಂಗ್ ಮಾಡಿದ್ರು ಅನ್ನೋದು ಆಗ ಆಫ್ ದಿ ರೆಕಾರ್ಡು ಬಿಜೆಪಿ ಹಿರಿಯ ಮುಖಂಡರು ಹೇಳಿದ ಮಾತಾಗಿತ್ತು.
ಇರಲಿ ಈಗ ವರುಷಗಳು ಕಳೆದು ಹೋಗಿವೆ, ಎಲ್ಲದಕ್ಕು ಕೊನೆಯಿರುತ್ತದೆ ಅಂತಾರೆ , ಆದರೆ ಸದ್ಯ ಇಲ್ಲ ಅನಿಸುತ್ತದೆ ಮನಸ್ಸು. ಜೈಲಿನಿಂದ ಬಂದ ರೆಡ್ಡಿ ಮಗಳ ಮದುವೆಗೆ ಕೋಟಿ ಕೋಟಿ ವ್ಯಯವಾಗಿದೆ. ಎಲ್ಲಿಂದ ಬಂತು ಹಣ ಯಾರು ಕೇಳೋರಿಲ್ಲ, ಹಣ ಇದ್ದವರ ಜೊತೆ ಎಲ್ಲರು ನಿಲ್ತಾರೆ ಅನ್ನೋದು ಮಾತ್ರ ಸ್ಪಷ್ಟ.
ಎಲ್ಲವು ಸರಿಯಿದ್ರೆ ಸುಷ್ಮಾ ಸ್ವರಾಜ್ ಕೂಡ ಮದುವೆಯಲ್ಲಿ ಇರ್ತಿದ್ರು. ಇರಲಿ ಬಿಡಿ ಜೈಲು ಪಾಲಾಗಲಿ ಹೊರಗೆ ಬರಲಿ ಅದ್ಧೂರಿಜೀವನಕ್ಕೇನು ಅಡ್ಡಿಯಂತು ಆಗಿಲ್ಲ. ಇದೇ ನಮ್ಮ ವ್ಯವಸ್ಥೆ.
ಮತ್ತೊಂದು ಕವರೇಜ್ ಜೊತೆ ಮುಂದಿನ ವಾರ ಬರ್ತೀನಿ..
ಜ್ಯೋತಿ





ಇರಲಿ ಬಿಡಿ ಜೈಲು ಪಾಲಾಗಲಿ ಹೊರಗೆ ಬರಲಿ ಅದ್ಧೂರಿ ಜೀವನಕ್ಕೇನು ಅಡ್ಡಿಯಂತು ಆಗಿಲ್ಲ. ಇದೇ ನಮ್ಮ ವ್ಯವಸ್ಥೆ.
super mam… kettavarolagi olleya kettavaruntu… ollevaru?…
thank you ..
ಹಣ ಇದ್ದವರ ಜೊತೆ ಎಲ್ಲರು ನಿಲ್ತಾರೆ ಅನ್ನೋದು ಮಾತ್ರ ಸ್ಪಷ್ಟ.
ಹೌದು ಹಣ ಇದ್ದವರ ಜೊತೆ ಎಲ್ಲರು ನಿಲ್ತಾರೆ
ಮೆಡಂ ಇವತ್ತಿನ ನಿಮ್ಮ ಲೇಖನ ಓದಿದ ಮೇಲೆ, ಅದ್ಧೂರಿ ಮದುವೆಯನ್ನು ವಾಹಿನಿಯಲ್ಲಿ ಬಿತ್ತರವಾಗುತ್ತಿರುವು ನೆನಪಿಸಿಕೊಂಡು ಕರುಳು ಕಿವುಚಿದಷ್ಟು ಸಂಕಟವಾಗುತ್ತಿದೆ. ತುತ್ತು ಅನ್ನಕ್ಕಾಗಿ ದುಡಿಯುವ ಕಾಮಿ೯ಕರ ಶ್ರಮದ ಫಲ ಇವತ್ತಿನ ವೈಭೋಗ. ಆದರೆ ಅದೇ ಕಾಮಿ೯ಕ ಬಂದರೆ ಒಳಗೆ ಬಿಡ್ತಾರಾ? ಇಲ್ಲ ಕತ್ತು ಹಿಡಿದು ಆಚೆ ತಳ್ತಾರೆ. ಇದೇ ಹಣವನ್ನು ಅಲ್ಲಿಯ ಶ್ರಮ ಜೀವಿಗಳಿಗೆ ದಾನ ಮಾಡಿದ್ದರೆ ಪಾಪವಾದರೂ ತೊಳೆಯುತ್ತಿತ್ತೇನೊ.!