ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಯಾರಿದ ಬುದ್ಧ 

ಗೀತ್ ಚತುರ್ವೆದಿ ( ಹಿಂದಿ)
ಕನ್ನಡಕ್ಕೆ : ಮೆಹಬೂಬ ಮುಲ್ತಾನಿ
ಬುದ್ಧ ತನ್ನ ಅಂತಿಮ ದಿನಗಳಲ್ಲಿ ಹೊಟ್ಟೆ ನೋವಿನಿಂದ ತೊಂದರೆಗೆ ಒಳಗಾಗಿದ್ದನು. ಮಲ್ಲ ವನದ ಸಾಲ್ ಮರಗಳ ಮಧ್ಯೆ ಮಲಗಿಕೊಂಡಿದ್ದನು. ಎಲ್ಲ ಬಿಕ್ಕುಗಳು ಅವನನ್ನು ಸುತ್ತುವರೆದು ನಿಂತಿದ್ದರು. ಬುದ್ಧ ತನ್ನ ಶಿಷ್ಯನಾದ ಆನಂದನಿಗೆ ನೀರು ತರಲು ಹೇಳಿದನು. ಆನಂದ ನೀರು ತರಲು ಹೋದ ಆದರೆ ಬರಿ ಗೈಯಿಂದ ವಾಪಸ್ಸು ಬಂದನು. ಬುದ್ಧದೇವ ಮತ್ತೆ ನೀರು ಬೇಡಿದನು.
ಸ್ವಲ್ಪ ಹೊತ್ತು ಬಿಟ್ಟು ಮೂರನೇ ಬಾರಿ ನೀರು ಕೇಳಿದನು. ಅದು ಅವನ ಕೊನೆಯ ತೃಷೆಯಾಗಿತ್ತು. ಮನುಷ್ಯನ ಸಾವು ಈ ಜಗತ್ತಿನ ಕೊನೆಯ ಹಂತ. ಸಾಮಾನ್ಯವಾಗಿ ಮನುಷ್ಯ ಸಾವಿನ ಕದ ತಟ್ಟುತ್ತಿರುವಾಗ ನೀರಿನ ನಾಲ್ಕು ಹನಿ ಬೇಕೆಂದು ಹಂಬಲಿಸುತ್ತಾನೆ. ಅದೇ ರೀತಿ ಬುದ್ಧ ನೀರಿಗಾಗಿ ತನ್ನ ಪರಮ ಪ್ರಿಯ ಶಿಷ್ಯನಾದ ಆನಂದನಿಗೆ ನೀರನ್ನು ತರಲು ಹೇಳಿದನು. ಯಾವಾಗಲೂ ನೆರಳಿನಂತೆ ಇರುವ ಆನಂದ, ಅವನು ಹೇಳಿದ ಶಬ್ಧಗಳನ್ನು ಚಾಚು ತಪ್ಪದೇ ಪಾಲಿಸುವ ಆನಂದ, ಅವನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧನಿರುವ ಆನಂದ ಕೊನೆಯ ಸಮಯದಲ್ಲಿ ಅವನಿಗಾಗಿ ನೀರು ತರಲಿಲ್ಲ. ಬುದ್ಧ ಈ ಭೂಮಿಯಿಂದ ಬಾಯಾರಿ ತೃಷೆಯಿಂದ ನಿರ್ಗಮಿಸಿದನು.
ಬುದ್ಧ ನಿರ್ಗಮಿಸಿದ ನಂತರ ಅವನ ಶವದ ಮೇಲೂ ಬಹಳಷ್ಟು ಜಗಳಗಳಾದವು. ಅವನÀ ಸಾವಿನ ಅನೇಕ ಕ್ರಿಯಾಕರ್ಮಗಳ ಜವಾಬ್ದಾರಿ ಆನಂದನ ಮೇಲೆಯೆ ಇತ್ತು. ಅಂತಿಮ ದರ್ಶನಕ್ಕಾಗಿ ಜನ ಮುಗಿ ಬಿಳಲು ಪ್ರಾರಂಭಿಸಿದರು. ಆನಂದನು ಅವನ ಅಂತಿಮ ದರ್ಶನದ ತಯಾರಿಯಲ್ಲಿ ತೊಡಗಿದ್ದ. ಅಸಂಖ್ಯಾತ ಜನ ಬುದ್ಧನ ಅಂತಿಮ ದರ್ಶನಕ್ಕೆ ಕಾಯತೊಡಗಿದ್ದಾಗ ಆನಂದ ಅಂತಿಮ ದರ್ಶನದ ಮೊದಲ ಅವಕಾಶವನ್ನು ವರಿಷ್ಠ ಬಿಕ್ಕುಗಳನ್ನೆಲ್ಲಾ ಹಿಂದೆ ಸರಿಸಿ ಸ್ತ್ರೀಯರಿಗೆ ನೀಡಿದ.
ಇದರಿಂದ ವರಿಷ್ಠ ಬಿಕ್ಕುಗಳಿಗೆ ಅವಮಾನ ಎನ್ನಿಸಿತು. ನಾವು ವರಿಷ್ಠ ಬಿಕ್ಕುಗಳು ನಮಗೆ ಮೊದಲು ಅವಕಾಶ ಕೊಡದೇ ಸ್ತ್ರೀಯರಿಗೆ ಅವಕಾಶ ನಿಡಿದ್ದು ತಪ್ಪು ಎಂದು ತಮ್ಮೊಳಗೆ ಆನಂದನ ಬಗ್ಗೆ ಅಸಮಾಧಾನ ಹೊಂದಿ ನಿಂದಿಸತೊಡಗಿದರು. ಅವರಿಗೆ ಆನಂದನ ಈ ನಡೆ ಸ್ವಲ್ಪವೂ ಹಿಡಿಸಲಿಲ್ಲ. ಆವಾಗ ಆನಂದ ಇನ್ನೂ ಸಾಮಾನ್ಯ ಮನುಷ್ಯನಾಗಿದ್ದ, ಬಿಕ್ಕುವಿನ ಸ್ಥಾನವನ್ನೂ ಪಡೆದಿರಲಿಲ್ಲ. ಹೀಗಾಗಿ ಇನ್ನಷ್ಟು ಅವಮಾನವೆನಿಸತೊಡಗಿತು.
ಬುದ್ಧನ ಶವದ ಮೇಲೆ ಹಾಕುವ ಬಟ್ಟೆಯನ್ನು ಕೂಡಾ ಆನಂದನೇ ಹೊಲೆಯಲು ಮುಂದಾದ. ತುಂಬಾ ದೊಡ್ಡದಾದ ಆ ವಸ್ಟ್ರವನ್ನು ಹೊಲೆಯುತ್ತಿದ್ದಾಗ ಆ ವಸ್ತ್ರದ ಎರಡು ಬದಿಗಳನ್ನು ಹೊಲೆಯುವ ಸಲುವಾಗಿ ಆ ವಸ್ತ್ರವನ್ನು ಭೂಮಿಯ ಮೇಲೆ ಹಾಸಿದ. ಅದರ ಮೇಲೆ ಕಾಲಿಡುತ್ತಾ ವಸ್ತ್ರದ ಎರಡೂ ಬದಿಗಳನ್ನು ಹೊಲೆಯತೊಡಗಿದ.
ವಸ್ತ್ರದ ಮೇಲೆ ಕಾಲಿಟ್ಟು ಹೊಲೆಯುವುದನ್ನು ನೋಡಿದ ವರಿಷ್ಠ ಬಿಕ್ಕುಗಳ ಸಿಟ್ಟು ಸಪ್ತ ಆಗಸವನ್ನು ಮುಟ್ಟಿತು. ಕೆಂಡಾಮಂಡಲವಾದ ಬಿಕ್ಕುಗಳು ಆನಂದನನ್ನು ನೋಡಿ “ ನೀನು ತಪ್ಪು ಮಾಡಿದೆ”… “ಬುದ್ಧ ಈ ಭೂಮಿಯ ಅತೀ ಶ್ರೇಷ್ಠ ದಾರ್ಶನಿಕ. ಕೊನೆಯ ಕ್ಷಣದಲ್ಲಿ ಅವರ ಶವದ ಮೇಲೆ ಹಾಕುಬ ಬಟ್ಟಿ ಹೊಲೆಯುತ್ತಾ ಅದರ ಮೇಲೆ ಕಾಲಿಟ್ಟು ಹೊಲೆದದ್ದು ಪಾಪದ ಕೆಲಸ-ಈ ಪಾಪಕ್ಕಾಗಿ ನಿನ್ನನ್ನು ನಮ್ಮ ಗಣದಿಂದ ಬಹಿಷ್ಕಾರ ಹಾಕುತ್ತಿದ್ದೇವೆ ಹೊರಟು ಹೋಗು” ಎಂದು ಸಿಟ್ಟಿನಿಂದ ಅವನನ್ನು ಅಲ್ಲಿಂದ ಹೊರಹಾಕಲಾಯಿತು.
ಸುಮಾರು ದಿನಗಳ ನಂತರ ಹಿರಿಯ ಬಿಕ್ಕುಗಳೆಲ್ಲಾ ಸೇರಿ ಮೊದಲ ಬೌದ್ಧ ಸಮ್ಮೇಳನ ಎರ್ಪಡಿಸಿದಾಗ ಆನಂದನನ್ನು ಕರೆಯಲಿಲ್ಲ. ಅನಾನುಕೂಲತೆಗಳಿಂದಾಗಿ ಸಮ್ಮೇಳನದ ಕೆಲಸಗಳು ಅರ್ಧಕ್ಕೆ ನಿಂತವು. ಇದನ್ನು ನೋಡಿ ಕೆಲ ಬಿಕ್ಕುಗಳು ಆನಂದನನ್ನು ಕರೆಯಿಸಿಕೊಳ್ಳಲು ಆಗ್ರಹ ಮಾಡತೊಡಗಿದರು. ಬೇರೆ ದಾರಿ ಇಲ್ಲದೇ ಆನಂದನಿಗೆ ಸಂದೇಶ ಕಳುಹಿಸಲಾಯಿತು. ಸಂದೇಶದಲ್ಲಿ ಆನಂದನ ಮೇಲೆ ಒಂಭತ್ತು ಆರೋಪಗಳನ್ನು ಹೊರೆಯಿಸಲಾಗಿದ್ದು ಅವುಗಳಿಗೆ ಸ್ಪಷ್ಠಿಕರಣ ನೀಡಿದರೆ ಮಾತ್ರ ಅವರನ್ನು ಸಂಘದಲ್ಲಿ ಸೇರಿಸಿಕೊಳ್ಳುವ ನಿರ್ಧಾರವನ್ನು ತಿಳಿಸಲಾಯಿತು.
ಆನಂದ ಅವುಗಳಿಗೆ ಉತ್ತರಿಸಲು ತಯಾರಾಗಿ ಬಿಕ್ಕುಗಳ ಹತ್ತಿರ ಬಂದನು. ಮೊದಲ ಆರೋಪ ಈ ರೀತಿಯಾಗಿತ್ತು
“ ನೀನು ಬುದ್ಧನ ಅಂತಿಮ ದರ್ಶನಕ್ಕೆ ಸ್ತ್ರೀಯರನ್ನೇ ಏಕೆ ಮುಂದೆ ಮಾಡಿದೆ?”
ಆನಂದ ಸಮಾಧಾನದಿಂದ ಉತ್ತರಿಸಿದ, “ ಏಕೆಂದರೆ ನಾನು ಅವರನ್ನು ತಡೆಯಲು ಬಯಸುತ್ತಿರಲಿಲ್ಲ ಮತ್ತು ಬುದ್ಧದೇವ ಸ್ತ್ರೀಯರಿಗೆ ಯಾವಾಗಲೂ ಬಹಳ ಮಹತ್ತವ ನೀಡುತ್ತಿದ್ದರು. ಅವರ ಆಶಯಕ್ಕೆ ಧಕ್ಕೆ ಬರದಿರಲೆಂದು ನಾನು ಅವರಿಗೆ ಮೊದಲು ಅವಕಾಶ ಒದಗಿಸಿದೆ”
ಎರಡನೆ ಆರೋಪ ಹೀಗಿತ್ತು, “ ನೀನೆಕೆ ಬುದ್ಧನ ಕೊನೆಯ ವಸ್ತ್ರಗಳ ಮೇಲೆ ಕಾಲಿಟ್ಟೆ?”
ಆನಂದ ಉತ್ತರಿಸಿದ, “ ನಾನು ವಸ್ತ್ರಗಳನ್ನು ಹೊಲೆಯುತ್ತಿರುವಾಗ ನೀವು ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಅಷ್ಟು ದೊಡ್ಡ ವಸ್ತ್ರಗಳನ್ನು ಭೂಮಿಯ ಮೇಲೆ ಹಾಸದೇ ಹೊಲೆಯಲು ಸಾಧ್ಯವಿಲ್ಲ. ಭೂಮಿಯ ಮೇಲೆ ಹಾಸಿದ ನಂತರ ಒಬ್ಬನೇ ಅದರ ಮೇಲೆ ಕಾಲಿಡದೇ ಹೊಲೆಯಲು ಅಸಂಭವವಾಗಿತ್ತು ಹಾಗಾಗಿಯೇ ನಾನು ಅದರ ಮೇಲೆ ಕಾಲಿಟ್ಟೆ”
ಮೂರನೆಯ ಮತ್ತು ತುಂಬಾ ಗಂಭೀರ ಆರೋಪ ನಿನ್ನ ಮೇಲಿದೆ ಅದೇನೆಂದರೆ, “ ನೀನು ಬುದ್ಧ ಅಷ್ಟು ಬಾರಿ ನೀರು ಬೇಡಿದರು ನೀರನ್ನು ಏಕೆ ಕೊಡಲಿಲ್ಲ?”
ಆನಂದ ತುಂಬಾ ದು:ಖಿತನಾಗಿ ಹೇಳಿದ, “ ನದಿಯ ನೀರು ತುಂಬಾ ಹೊಲಸಿತ್ತು. ನಾನು ತಥಾಗತನಿಗೆ ಆ ನೀರು ಕುಡಿಸಲು ಬಯಸುತ್ತಿರಲಿಲ್ಲ”
ಹೀಗೆ ಇನ್ನುಳಿದ ಆರು ಆರೋಪಗಳಿಗೂ ಆನಂದ ಸ್ಪಷ್ಠ ಮತ್ತು ಸಕಾರಣ ಉತ್ತರ ನೀಡಿದ. ಬಿಕ್ಕುಗಳ ಸಂಘ ಅವನ ಉತ್ತರಗಳಿಂದ ಸಂತುಷ್ಟವಾಗಿ ಅವನನ್ನು ಮತ್ತೆ ಸಂಘದಲ್ಲಿ ಸೇರಿಸಿಕೊಳ್ಳಲಾಯಿತು.
ಆದರೂ ಸುಮಾರು ದಿನಗಳವರೆಗೂ ಆನಂದನೇಕೆ ಬುದ್ಧನಿಗೆ ಕೊನೆಯ ಕಾಲದಲ್ಲಿ ನೀರು ಕೊಡಲಿಲ್ಲ? ಎನ್ನುವ ಚರ್ಚೆ ಚಾಲನೆಯಲ್ಲಿಯೇ ಇತ್ತು. ಆನಂದ ತನ್ನ ದೇಹ ತ್ಯಾಗ ಮಾಡುವ ನಿರ್ಧಾರ ತೆಗೆದುಕೊಂಡ. ಅವನು ನಾವೆಯ ಮುಖಾಂತರ ಸಾಗಿ ನೀರಿನ ಮಧ್ಯೆ ದೇಹ ತ್ಯಾಗ ಮಾಡಿದ. ಆನಂದನ ಈ ನಡೆ ಮತ್ತು ಬುದ್ಧನ ಕೊನೆಯ ಸ್ಥಿತಿಯ ಮಧೈ ಏನಾದ್ರೂ ವಿಶೇಷವಿತ್ತೆ? ಎಂದು ಯೋಚಿಸಿದಾಗಲೆಲ್ಲಾ ನನಗೆ ಈ ಕೆಳಗಿನ ಹೊಳಹು ಕಂಡುಬರುತ್ತದೆ.
ಯಾವುದೇ ಮನುಷ್ಯ ಸಾವಿನ ಕೊನೆಯ ಸಮಯದಲ್ಲಿ ನೀರು ಸಿಗದೆ ನೀರಡಿಕೆಯಿಂದ ಸತ್ತು ಹೋದರೆ, ಆ ಮನುಷ್ಯ ತನ್ನ ಕೊನೆಯÀ ತೃಷೆ ತಣಿಸಲು ಮತ್ತೆ ಭೂಮಿಗೆ ಪಾಪಾಸ್ಸಾಗುತ್ತಾರಂತೆ. ಬುದ್ಧ ಈ ಜಗತ್ತಿನ ಜಂಜಾಟಗಳಿಂದ ಬೇಸತ್ತಿದ್ದರೂ ಮತ್ತೆ ಅವರು ಭೂಮಿಗೆ ಹೊಸ ಸಮಯದಲ್ಲಿ ಹೊಸ ರೂಪದಲ್ಲಿ ಹೊಸ ರೀತಿಯಲ್ಲಿ ತಮ್ಮ ಕೆಲಸಗಳನ್ನು ಪೂರ್ಣಗೊಳಿಸಲು ಪೂರ್ಣ ಮಾಡಲು ಬರಬೇಕಾಗಿದೆ. ಬಹುಶ: ಇದೇ ಕಾರ್ಯಕ್ಕಾಗಿ ಆನಂದ ಬುದ್ಧನಿಗೆ ಕೊನೆಯ ಕ್ಷಣದಲ್ಲಿ ನೀರು ಕೊಡಲಿಲ್ಲ ಅನಿಸತೊಡಗುತ್ತದೆ….
ಬುದ್ಧ ಈ ಭೂಮಿಯಿಂದ ನೀರಿನ ದಾಹದಿಂದ ನಿರ್ಗಮಿಸಿದ್ದರು… ಅವರೀಗ “ ಮೈತ್ರೇಯ”* ರಾಗಿ ಭೂಮಿಗೆ ವಾಪಾಸಾಗುತ್ತಾರೆ.
( ಮೈತ್ರೇಯ–ಭವಿಷ್ಯದಲ್ಲಿ ಭೂಮಿಯ ಮೇಲೆ ಅವತರಿಸಿ ಜ್ಞಾನೋದಯ ಹೊಂದಿ ಶುದ್ಧ ಧರ್ಮ ಬೋಧಿಸುವವರು)

‍ಲೇಖಕರು avadhi

18 May, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading