
ಡಿ ವಿ ಪ್ರಹ್ಲಾದ್ ಒಂದು ಸಾಹಸಕ್ಕೆ ಸಜ್ಜಾಗಿದ್ದಾರೆ. ಅದು ಬೆಳ್ಳಕ್ಕಿ ಹಿಂಡನ್ನು ಹಿಡಿಯುವ ಕೆಲಸ. ಎಕ್ಕುಂಡಿ ಎಂಬ ಬೆಳ್ಳಕ್ಕಿ ಮೋಹಗಾರನ ಎಲ್ಲಾ ಕವಿತೆಗಳನ್ನು ಒಂದೆಡೆ ಕೂಡಿಸಿ ‘ಬೆಳ್ಳಕ್ಕಿ ಹಿಂಡು’ ಹೆಸರಿನಲ್ಲಿ ನೀಡುತ್ತಿದ್ದಾರೆ.
ಕಡೆಂಗೋಡ್ಲು ಶಂಕರ ಭಟ್ಟರ ಸಮಗ್ರ ಸಾಹಿತ್ಯ ಹೊರಬಂದಾಗ ಡಿ ವಿ ಪ್ರಹ್ಲಾದ್ ಗೆ ನೆನಪಾದದ್ದು ಎಕ್ಕುಂಡಿ. ಗೋವಿಂದ ಪೈ ಪ್ರತಿಷ್ಠಾನ ಅತ್ಯಂತ ಸೊಗಸಾಗಿ ಮುದ್ರಿಸಿ ಹೊರತಂದ ಈ ಪುಸ್ತಕ ಇನ್ನಿಲ್ಲದಂತೆ ಅವರನ್ನು ಸೆಳೆಯಿತು. ಚಿ ಶ್ರೀನಿವಾಸರಾಜು ಅವರ ಬಳಿ ಚರ್ಚಿಸಿದರು. ಅವರು ನೀಡಿದ ಪ್ರೋತ್ಸಾಹ ಇನ್ನಷ್ಟು ಬಲ ನೀಡಿತು. ಆ ನಂತರ ಎಕ್ಕುಂಡಿ ಕವಿತೆಗಳನ್ನು ಒಂದೆಡೆ ಕೂಡಿಸಿ ತರುವಂತೆ ಕನ್ನಡ ಪುಸ್ತಕ ಪ್ರಾಧಿಕಾರ, ಖಾಸಗಿ ಪ್ರಕಾಶಕರ ಬೆನ್ನು ಹತ್ತಿದರು. ಆಮೇಲೆ ಇವೆಲ್ಲಾ ಸುಮ್ಮನೆ ಆಗದ ಕೆಲಸ ಎನಿಸಿ ಒಂದು ಬೆಳ್ಳಂಬೆಳಗ್ಗೆ ಮುದ್ರಣಾಲಯ ದತ್ತ ಗಟ್ಟಿ ಮನಸ್ಸಿನಿಂದ ನಡೆದರು.
ಒಂದು ವಿಶ್ವವಿದ್ಯಾಲಯ ಮಾಡದ, ಒಂದು ಸರ್ಕಾರಿ ಸಂಸ್ಥೆ ನೆನಪಿಸಿಕೊಳ್ಳದ ವಿಶೇಷ ಕೆಲಸವನ್ನು ಪ್ರಹ್ಲಾದ್ ಮಾಡಿದ್ದಾರೆ. 500 ಕ್ಕೂ ಹೆಚ್ಚು ಪುಟಗಳ ಈ ಪುಸ್ತಕ ಎಕ್ಕುಂಡಿಯವರ ಹಸ್ತಾಕ್ಷರ, ಸಹಿ, ಕವಿತೆ, ಅವರ ಸಂಕಲನಕ್ಕೆ ಪೇಜಾವರ ಮಠಾಧೀಶರೂ ಸೇರಿದಂತೆ ಎಲ್ಲರೂ ಬರೆದಿರುವ ಮುನ್ನುಡಿ, ಎಕ್ಕುಂಡಿಯವರ ಬದುಕು ನಡೆದು ಬಂದ ಹಾದಿ ಎಲ್ಲವನ್ನೂ ಒಟ್ಟು ಮಾಡಿದ್ದಾರೆ. ಎ ಎನ್ ಮುಕುಂದ್ ಅವರ ವಾಹ್! ಎನಿಸುವ ಫೋಟೋಗಳಂತೂ ಎಕ್ಕುಂಡಿಯವರನ್ನೇ ತಂದು ಎದುರಿಗೆ ನಿಲ್ಲಿಸುತ್ತದೆ.
ಈ ಮರೆಯಲಾಗದ ಪುಸ್ತಕವನ್ನು ಯು ಆರ್ ಅನಂತಮೂರ್ತಿ ಅವರು ಜುಲೈ 27 ರಂದು ಸೆಂಟ್ರಲ್ ಕಾಲೇಜ್ ನ ಸೆನೆಟ್ ಹಾಲ್ ನಲ್ಲಿ ಓದುಗರ ಕೈಗಿಡಲಿದ್ದಾರೆ. ಕನ್ನಡದ ೧೫ ಮಹತ್ವದ ಕವಿಗಳು ಎಕ್ಕುಂಡಿ ಕವಿತೆ ವಾಚಿಸಲಿದ್ದಾರೆ. ಖ್ಯಾತ ಶಿಲ್ಪಿ ವೆಂಕಟಾಚಲಪತಿ ಅವರು ಎಕ್ಕುಂಡಿ ಶಿಲ್ಪಾ ಸ್ಮರಣಿಕೆ ರೂಪಿಸಿದ್ದಾರೆ.
ಪುಸ್ತಕದ ಬೆಲೆ ೩೫೦ ರೂ. ಪುಸ್ತಕ ಬಿಡುಗಡೆಗೆ ಮುಂಚೆಯೇ ಬುಕ್ ಮಾಡಿದಾರೆ ೧೦೦ ರೂ ರಿಯಾಯಿತಿ. ಪುಸ್ತಕ ಬೇಕಾದಲ್ಲಿ avadhi.pusthaka@gmail.com ಮೇಲ್ ಮಾಡಿ.






0 Comments