ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಂಧುವಾಗಿ ನಮ್ಮ ಬಳಿ..

-ಕೆ.ಎಸ್. ಪೂರ್ಣಿಮಾ

w5

ಹೈಸ್ಕೂಲಿನ ದಿನಗಳು–ತುಂಬ ಉತ್ಸಾಹದ, ವಿಚಿತ್ರ ಸಂಕೋಚಗಳ, ಸಣ್ಣ ಸಣ್ಣ ನಾಚಿಕೆಗಳ ವಯಸ್ಸು. ನಮ್ಮೂರಿನಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ, ಅಲ್ಲಿನ ಎಲ್ಲ ಶಿಕ್ಷಕರು ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಪ್ರಭಾವಿಸುತ್ತಾರೆ ಎಂದು ಭಾಸವಾಗುತ್ತಿದ್ದ ಕಾಲ. ಹಾಗಿದ್ದೂ ಕೆಲವರ ಬಗ್ಗೆ ಮೆಚ್ಚುಗೆ, ಕೆಲವರ ಬಗ್ಗೆ ಆಕರ್ಷಣೆ, ಕೆಲವರ ಬಗ್ಗೆ ಭಯ, ಇನ್ನು ಕೆಲವರ ಬಗ್ಗೆ ನಿರಾಸಕ್ತಿ ಈ ಎಲ್ಲವು ಅಪ್ರಯತ್ನವಾಗಿ ಮೂಡಿದ ಭಾವನೆಗಳು.

ಇಂಥ ವಾತಾವರಣದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ತಮ್ಮ ಲವಲವಿಕೆಯ ವರ್ತನೆ, ಆಲೋಚನೆಗಳಿಂದಾಗಿ ವಿಶಿಷ್ಟರಾಗಿ ಕಾಣುತ್ತಿದ್ದ ಶಾಂತಾರಾಮ-ಸರ್ವೇ ಸಾಮಾನ್ಯವಾಗಿ -ಎಸ್.ಆರ್.ಎಸ್. ಎಂದೇ ಪರಿಚಿತರಾಗಿದ್ದ ಆ ಮೇಷ್ಟರು ನನಗೆ ಇಂದಿಗೂ ನೆನಪಾಗುತ್ತಾರೆ. ಮೂಲತ: ಅವರು ವಿಜ್ಞಾನ ಶಿಕ್ಷಕರು. ನಮಗೆ ವಿಜ್ಞಾನ ಹಾಗು ಗಣಿತ ಕಲಿಸುತ್ತಿದ್ದವರು. ನನ್ನ ಹಗಲುಗನಸಿನ ಮನಸ್ಸಿನಲ್ಲಿ ಗಣಿತ ಅಷ್ಟಾಗಿ ಕೂರುತ್ತಿರಲಿಲ್ಲ. ಹಾಗಾಗಿ ಅವರ ಕಲಾತ್ಮಕ ಆಲೋಚನೆ ಪ್ರತಿಭೆಗಳ ಬಗ್ಗೆ ತುಂಬ ಸೆಳೆತವಿದ್ದರೂ ಅವರ ಜತೆ ಸಹಜ ಮಾತುಕತೆ ನಡೆಸಲು ಸಹ ನನ್ನ ಗಣಿತಭಯ ಅದಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಆದರೆ ಎಸ್.ಆರ್.ಎಸ್ ನಮ್ಮ ಶಾಲೆಯಲ್ಲಿ ಕೇವಲ ಶಿಕ್ಷಕರು ಮಾತ್ರವಾಗಿರದೆ ತಮ್ಮ ಬಹುಮುಖ ವ್ಯಕ್ತಿತ್ವದಿಂದ. ಬಹುಮುಖೀ ಆಸಕ್ತಿಗಳಿಂದ, ಶಿಸ್ತಿನ ವರ್ತನೆಯಿಂದ, ತಮ್ಮ ಪ್ರತಿಭೆಯಿಂದ ಉತ್ತಮ ಸಂವೇದನೆಗಳ ಆದರ್ಶದ ಪ್ರತೀಕದಂತಿದ್ದರು.

ಆ ನಂತರ ಎಷ್ಟೋ ದಶಕಗಳು ಕಳೆದಿವೆ. ಶಾಂತಾರಾಮ ಮೇಷ್ಟ್ರು ಈಗ ನಮ್ಮ ಮನೆಯ ಬಳಿಯೇ ವಾಸವಾಗಿದ್ದಾರೆ. ಆಗಿಗಿಂತ ಬಹಳಷ್ಟು ವಿಸ್ತಾರವಾದ ಇಂದಿನ ಬಾಳ ಸಂದರ್ಭದಲ್ಲಿ ಅವರನ್ನು ಮತ್ತೆ ಮತ್ತೆ ಭೇಟಿ ಮಾಡುತ್ತೇನೆ. ಸಂಸಾರದ್ದೇ ಆಗಿರಲಿ ಸಮಾಜದ್ದೆ ಆಗಿರಲಿ ಅಥವಾ ಅವರ ಇನ್ನೊಂದು ಗಾಢವಾದ, ತೀವ್ರವಾದ ಆಸಕ್ತಿ ವಿಶೇಷ–ಸಂಗೀತವಾಗಿರಲಿ-ಅವುಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತ ಅದರಿಂದಾಗಿ ನನ್ನ ಬುದ್ಧಿ ಮನಸ್ಸು ಹಿಗ್ಗಿವೆ ಅಲ್ಲವೇ ಅಂತ ಆನಂದಪಡುತ್ತೇನೆ. ದಿಢೀರಂತ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ತೊಂದರೆ ಬಂದರೆ, ನ್ಯಾಶನಲ್, ಇಂಟರ್ನ್ಯಾಶನಲ್ ವಿಷಯಗಳ ಮಾಹಿತಿ ಬೇಕಾಗಿದ್ದರೆ ನಾನು ಅವರ ಜತೆ ಚರ್ಚಿಸಿ ನಿರ್ಧರಿಸಲು ಅವರಲ್ಲಿಗೆ ಓಡುತ್ತೇನೆ. ಅತ್ಯಂತ ಕೃತಕೃತ್ಯತೆಯ ಸಂಗತಿ ಎಂದರೆ -ಸಂಗೀತ,ಸಾಹಿತ್ಯ, ರಾಜಕೀಯ, ಸಮಾಜ, ವಿಜ್ಞಾನ, ಆರೋಗ್ಯ,ವಾಸ್ತುಶಿಲ್ಪ—-ಹೀಗೇ ಇನ್ನೂ ಅನೇಕ ಆಸಕ್ತಿಗಳು, ಜ್ಞಾನಗಳು ಮೈಗೂಡಿದಂಥ ಅವರ ವ್ಯಕ್ತಿತ್ವ ನನ್ನ ದೃಷ್ಟಿಯಲ್ಲಿ ಮತ್ತಷ್ಟೂ ಮೇಲೇರಿದೆ. ಅಂಥ ಹೃದಯವಂತ, ಸರಳ, ಜೀವಂತಿಕೆ ತುಂಬಿದ, ತನ್ನ ಸಹಾಯ ಬಯಸಿದವರನ್ನು ಎಂದೂ ಉಪೇಕ್ಷಿಸದ, ಹಲವರ ದೃಷ್ಟಿಯಲ್ಲಿ ವಿಕ್ಷಿಪ್ತವೆನ್ನಿಸುವ ಈ ಜೀನಿಯಸ್-ಎಸ್.ಆರ್.ಎಸ್ ನನಗೆ ಚಿರಗುರುವಾಗಿ, ಬಂಧುವಾಗಿ ನಮ್ಮ ಬಳಿಯಿರುವುದೇ ನನಗೆ ಸಿಗುತ್ತಿರುವ ವಿಶೇಷ ಸಮಾಧಾನ, ಸಂತೋಷ ಹಾಗು ತೃಪ್ತಿ.

‍ಲೇಖಕರು avadhi

5 September, 2009

2 Comments

  1. D P SATISH

    Both Poornima ma’am and SRS were my teachers!
    I can’t forget SRS’ dynamism and genius.
    Also, Poornima ma’am’s love, affection and
    helpful nature. She is a wonderful lady.
    I mean it.

  2. Berlinder

    ಕೆ.ಎಸ್.ಪೂರ್ಣೀಮ ಅವರಿಗೆ ವಂಧನೆಯ ನಮಸ್ಕಾರ.
    ನಿಮ್ಮ ಲೇಖನ “ಬಂಧುವಾಗಿ…” ಗುರುವರ್ಯರಿಗೆ ಪುರಸ್ಕಾರ.
    ಓದುವಾಗ ವೃದ್ಧರನ್ನೂ ಬಾಲ್ಯಕ್ಕೆ ಪರಿವರ್ತಿಸುವ ತರ
    ಕೆಲವು ಗಳಿಗೆ ಹಳೆಯ ನೆನಪುಗಳ ಜೀವಂತಗೊಳಿಸುವ ಚರ
    *
    ವಿದ್ಯಾಭ್ಯಾಸ ಪಡೆದವರಿಗೆಲ್ಲ ಅನಿಸಬಹುದಾ ಸದ್ಭಾವನೆ,
    ಕಳೆದ ಕಾಲದ ಯುವಕ ಬಾಳಿನ ಮನಕಲ್ಲೋಲ ಉದ್ಭಾವನೆ!
    ಇಡೀ ಬಾಳಲಿ ಶಾಲೆಗಳ ಬಾಳೇ ಅಮಿತ ಉಲ್ಲಾಸದ ಭಾಗ್ಯ ಎನುತಾರೆ.
    ಆ ಮಾತುಗಳಲುಂಟು ಸತ್ಯ ಅದೊಂದು ಬಗೆಯ ಯೋಗ್ಯದ ಅರ್ಥಪರಂಪರೆ!
    *
    ಶಾಲೆಗಳ ಬಾಳಿನ ಪರ್ವ ಒಂದು ವಿಚಿತ್ರ ವಿಧದ ಸುಚಿತ್ರ,
    ಕಾಲಾಂತರ ಅದರ ಸೊಗಸು ಹೊಳೆದು ಅರಳಿ ತೋಚುವುದು ಪವಿತ್ರ,
    ಆ ಬದುಕಿನ ವಿಭಾಗ ಸೊಗಸಾಗೆ ಕಾರಣ ಗುರುಗಳ ದಯದಿಂದ.
    ಬದುಕಿನ ಮುಖ್ಯ ವರ್ಗಗಳು: ತಾಯಿತಂದೆ, ಮಿತ್ರರು, ಗುರುವೃಂಧ!
    *
    ವೃಧ್ದಾಪ್ಯದಲಾ ಕಳೆದ ಯೋಚನೆಗಳು ವಿಧ್ಯುತ್ಚಳಕಗಳಂತೆ,
    ಕಿರು ಕಾಲಮಾನ ಹೊಳೆದು ನೆನಪಿಗೆ ತರಿಸಿ ಕನಸುಗಳಂತೆ,
    ಮನೋಭ್ರಾಂತಿ ಪಡಿಸಿ ’ಅಯ್ಯೋ ಹಾಳದವೆ’ ಎನಿಸಿ ಕೊರಗಿಸುವಂತೆ,
    ಗುರುಗಳಿಗೆ ನಮಿಸಿ ಅಂದಾಗದಿದ್ದ ಗುರುದಕ್ಷಿಣೆ ಇಂದರ್ಪಿಸುವಂತೆ!
    ಭವಿಷ್ಯದ ಹೊತ್ತು ಎಲ್ಲೋ ಹಾಕಿದ ವಿಧಿಯ ಗೊತ್ತು ನಿಂದಿಸುವಂತೆ!
    *
    – ವಿಜಯಶೀಲ, ಬೆರ್ಲಿನ್, ೦೫.೦೯.೦೯

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading