– ಪರಶುರಾಮ ತಹಸಿಲ್ದಾರ್
ಸಮೂಹ ಸನ್ನಿ ಅನ್ನೋದು ಇತ್ತೀಚೆಗೆ ಜಾಸ್ತಿ ಆಗಿದೆ. ಸಂವಹನ ಸಾಧನಗಳು ನಮ್ಮ ಜನರನ್ನು ಹುಂಬರನ್ನಾಗಿ ಮಾಡುತ್ತಿವೆಯಾ ಗೊತ್ತಾಗುತ್ತಿಲ್ಲ. ಅಸ್ಸಾಂ ಗಲಭೆ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಗಾಳಿಸುದ್ದಿಯಿಂದಾಗಿ ನಡೆದ ಸಾಮೂಹಿಕ ವಲಸೆ, ರಂಜಾನ್ ಸಂದರ್ಭದಲ್ಲಿ ಡೇಟ್ಬಾರ್ ಮೆಹಂದಿ ಸೃಷ್ಟಿಸಿದ ಅವಾಂತರ ನಿಮಗೆಲ್ಲ ನೆನಪಿದೆ. ಇದೆಲ್ಲಾ ತನ್ನಗಾಗುವಷ್ಟರಲ್ಲಿ ನಿನ್ನೆ ರಾತ್ರಿ ಏಕಾಏಕಿ ಹುಟ್ಟಿಕೊಂಡ ದಿಢೀರ್ ಸಾಯುತ್ತೀರಿ ಎನ್ನುವ ಸುದ್ದಿ ರಾಜ್ಯದ ವಿವಿದೆಡೆ ಜನರ ನಿದ್ದೆ ಕೆಡಿಸಿತ್ತು….
ಕಳೆದ ರಾತ್ರಿ ಸಿಹಿನಿದ್ದೆಯಲ್ಲಿದ್ದ ನನಗೆ 2:30 ಕ್ಕೆ ಬಂದ್ ಫೋನ್ ಕರೆ ಕಕ್ಕಾಬಿಕ್ಕಿಯಾಗುವಂತೆ ಮಾಡಿತ್ತು. ಕರೆಮಾಡಿದ ಧ್ವನಿ ಸಾರ್ ಚನ್ನಗಿರಿ ತಾಲ್ಲೂಕಿನ ನಲ್ಲೂರಿನಲ್ಲಿ ಹಸುವೊಂದು ಮೂರು ಕಣ್ಣಿರುವ ಹೆಣ್ಣುಮಗುವಿಗೆ ಜನ್ಮ ನೀಡಿದೆಯಂತೆ ಅಂದ. ಅಷ್ಟೆ ಅಲ್ಲ ಹುಟ್ಟಿದ ಕೆಲಹೊತ್ತಿನಲ್ಲಿ ಮಾತನಾಡಲಾರಂಭಿಸಿದ ಆ ಮಗು ಮಲಗಿದವರನ್ನೆಲ್ಲ ಸರ್ವನಾಶ ಮಾಡುತ್ತೇನೆಂದು ಹೇಳಿ ಮೃತಪಟ್ಟಿದೆಯಂತೆ ಎಂದು ಹೇಳಿದ. ಅಲ್ಲಿಗೆ ನನಗೆ ಅರ್ಥವಾಗಿದ್ದೆಂದರೆ ಇನ್ನು ಜನ್ರೂ ಮಲ್ಗಲ್ಲಾ.. ನಮ್ಮನ್ನೂ ಮಲಗಲು ಬಿಡಲ್ಲಾ ಎಂದು….
ನಾನಂದುಕೊಂಡಿದ್ದು ನಿಜವಾಯಿತು ಪ್ರತಿ ನಿಮಿಷಕ್ಕೂ ಫೋನ್ ಕರೆಗಳು ಬರಲಾರಂಭಿಸಿದವು. ಸಾರ್ ಮಗು ಸಾಯುವಾಗ ಮಲಗಿದವರೆಲ್ಲ ನನ್ನವರು ಎಂದಿದೆ, ನಾವೆಲ್ಲ ಎದ್ದು ಜಾಗರಣೆ ಮಾಡುತ್ತಿದ್ದೇವೆ ಎಂದು ಕೆಲವರು ಹೇಳಿದ್ರೆ. ಸಾರ್ ಊರಿಗೆ ಊರೆ ದೇವಸ್ಥಾನದಲ್ಲಿ ಕುಳಿತು ಭಜನೆ ಮಾಡುತ್ತಿದ್ದೇವೆ ಎಂದು ಇನ್ನೂ ಕೆಲವರು ಫೋನಾಯಿಸಿದರು. ಅದೆಲ್ಲ ಗಾಳಿಸುದ್ದಿ ಕಿವಿಗೊಡಬೇಡಿ ಎಂದು ಹೇಳುವಷ್ಟರಲ್ಲಿ ನನಗೆ ಸಾಕುಸಾಕಾಗಿ ಹೋಯ್ತು. ವದಂತಿ ಎಷ್ಟು ಬೇಗ ಹರಡಿತ್ತೆಂದರೆ ಪಕ್ಕದ ಚಿತ್ರದುರ್ಗ, ಶಿವಮೊಗ್ಗ ಸೇರಿದಂತೆ ಮೈಸೂರಿನವರೆಗೆ ಗುಸುಗಸು ಶುರುವಾಗಿತ್ತು….
ಸ್ವಲ್ಪ ಜನ್ರು ಅದು ನಲ್ಲೂರು ಅಲ್ಲಾ ಆಂದ್ರದ ಕರ್ನೂಲು ಅಂದ್ರು. ಕೆಲವರಿಗಂತೂ ಸಾಮೂಹಿಕ ಸಾವಿನ ಸುದ್ಧಿಯನ್ನು ರೋಚಕವಾಗಿ ಹೇಳುವುದರಲ್ಲಿಯೇ ಮಜಾ ಬರುತ್ತಿತ್ತು ಅಂತ ಅವರ ಮಾತುಗಳಿಂದ ಅರ್ಥವಾಗುತ್ತಿತ್ತು.
ಇಷ್ಟರಲ್ಲಾಗಲೇ ಸಾವಿರಾರು ಪಾಲಕರು ತಮ್ಮ ಮಕ್ಕಳನ್ನು ಎಚ್ಚರಿಸಿದ್ದರು. ಮಲಗಿದ್ದ ಹಸುಳೆಗಳನ್ನು ಎಚ್ಚರಿಸಿ ಆಟವಾಡಿಸುತ್ತಾ ಕುಳಿತವರ ಪಾಡು ಕೇಳಿ ನಗಬೇಕೋ.. ಅಳಬೇಕೋ… ತಿಳಿಯಲಿಲ್ಲ….
ಅಷ್ಟರಲ್ಲೇ ಚನ್ನಗಿರಿ ತಾಲ್ಲೂಕಿನ ಕೊಗಲೂರು ಗ್ರಾಮದಿಂದ ಮತ್ತೊಬ್ಬ ಮಹಾಶಯ ಫೋನ್ ಮಾಡಿ ಸಾರ್ ನಾನು ಊರ ಗೌಡ ಡಂಗುರ ಹೊಡೆಸಿ ಜನರನ್ನೆಲ್ಲ ಊರ ಹೊರಗಿನ ದೇವಸ್ಥಾನದಲ್ಲಿ ಸೇರಿಸಿದ್ದೇವೆ, ಭಜನೆ ಮಾಡುತ್ತಿದ್ದೇವೆ ಬ್ರೆಕ್ಕಿಂಗ್ ಕೊಡಿ ಎಂದ. ನನಗಾಗಲೆ ಪಿತ್ತನೆತ್ತಿಗೇರಿತ್ತು ಲೇ ಗೂಬೆ ಮುಂಡೇದೆ ಅವರನ್ನೆಲ್ಲ ಮನೆಗೆ ಹೋಗಿ ಮಲಗಲು ಹೇಳು, ಇಲ್ಲಾ ನಿನ್ನ ಮನೆಮುಂದೆ ಹೊಗೆಹಾಕಿ ಹಲಗೆ ಬಾರಿಸಬೇಕಾಗುತ್ತೆ ಅಂತ ಬೆದರಿಸಿದೆ..
ಇನ್ನೇನು ಮಾಧ್ಯಮ ಮಿತ್ರರ ನಿದ್ದೆಗೂ ಹೊಗೆ ಬಿದ್ದಿತ್ತು. ಎಲ್ಲರೂ ಪರಸ್ಪರ ಫೋನ್ ಮಾಡಿ ನಿದ್ದೆ ಕದ್ದವರ ಬಗ್ಗೆ ಹಿಡಿಶಾಪ ಹಾಕಲಾರಂಭಿಸಿದ್ದೆವು. ಅಷ್ಟರಲ್ಲಿ ಬೆಳಗಿನ ಜಾವ ಐದಾಗಿತ್ತು. ಜನರೆಲ್ಲ ವದಂತಿಗೆ ಹೆದರಿ ಜಾಗರಣೆ ಮಾಡಿದ್ರೆ ಮಾಧ್ಯಮದವ್ರು ಕಿಡಿಗೇಡಿಗಳ ಅವಾಂತರಕ್ಕೆ ನಿದ್ದೆಗೆಡಬೇಕಾಯಿತು.
ಇಷ್ಟರಲ್ಲೆ ಆಫೀಸ್ಗೆ ಕರೆಮಾಡಿದ ನಾನು ಸುಳ್ಳು ವದಂತಿಗೆ ಹೆದರುವ ಅವಶ್ಯಕತೆ ಇಲ್ಲ ಎಂದು ಬ್ರೆಕ್ಕಿಂಗ್ ಹಾಕಲು ಹೇಳಿದೆ. ಬಿಪಿ ರಘು ಕಾಲ್ ರಿಸೀವ್ ಮಾಡಿ ಟಿಕ್ಕರ್ನಲ್ಲಿ ಯಾರು ಇಲ್ಲ 6 ಗಂಟೆಗೆ ಬಂದ ಮೇಲೆ ಹೇಳುವೆ ಅಂದ. ಇನ್ನು ನನಗೂ ಭಜನೆಯೇ ದಿಕ್ಕು ಎಂದು ಹೊರಗೆ ಬಂದು ನೋಡಿದರೆ ದಾವಣಗೆರೆಯಲ್ಲಿ ಮಳೆ ಸುರಿಯುತ್ತಿತ್ತು. ಅದರ ಮಧ್ಯದಲ್ಲೆ ವಿವಿದೆಡೆ ಜನ ಮಲಗದೆ ಹಾಳುಹರಟೆ ಗಾಳಿಸುದ್ದಿಯಲ್ಲಿ ತೊಡಗಿದ್ದ ಮಾಹಿತಿ ಬರುತ್ತಲೇ ಇತ್ತು….
ಇಷ್ಟೆಲ್ಲದರ ನಡುವೆ ಸುಶಿಕ್ಷಿತರು ಮತ್ತು ಸ್ನೇಹಿತರ ಕಾಟವೇನು ಕಡಿಮೆ ಇರಲಿಲ್ಲ. ಕಾಲ್ ಮಾಡಿ ಮೊದ್ಲು ನಮ್ಮ ಆರೋಗ್ಯ ವಿಚಾರಿಸ್ತಿದ್ರು ಬ್ರದರ್ ನೀವು ಹೇಗಿದೀರಿ, ಎಚ್ಚರ ಇದೀರಿ ತಾನೆ ಅಂತೆಲ್ಲ ಕೇಳ್ತಿದ್ರು. ನಾವು ಮಲಗಿ ಅಲ್ಲೇ ಮಟಾಷ್ ಆಗಿದೀವಿ ಅಂತಾ ಸಂಶಯ ಇತ್ತು ಕಾನ್ಸುತ್ತೆ ಗುಬಾಲ್ಗಳಿಗೆ. ಆಮೇಲೆ ಮೆಲ್ಲಗೆ ವಿಷಯಕ್ಕೆ ಬರ್ತಿದ್ರು. ಅದೇನೋ ಸುದ್ದಿ ಕೇಳಿದ್ವಿ ನಿಜಾನಾ? ಹಸು ಮಗುವಿಗೆ ಜನ್ಮ ನೀಡ್ತಾ? ನವಜಾತ ಶಿಶು ಮಾತಾಡಿದ್ದು ಹೌದಾ? ಭೂಮಿ ಕಂಪಿಸ್ತಾ ? ಅಂತೆಲ್ಲಾ ಪ್ರಶ್ನೆಗಳ ಸುರಿಮಳೆಗರೆಯುತ್ತಿದ್ದರು. ಲೇ ದಡ್ಡ್ ಪಿತಾಮಹರೆ ಸುಶಿಕ್ಷಿತರಾಗಿ ಕೇಳೊ ಪ್ರಶ್ನೇನಾ ಇವು. ಅದೆಲ್ಲಾ ಸಾಧ್ಯಾನಾ ಅಂದ್ರೆ… ಇಲ್ಲಪ್ಪ ನಮ್ಮನೇಲಿ ಹೆಣ್ಮಕ್ಳು ಮಲ್ಗೋಕೆ ಬಿಡ್ತಿಲ್ಲಾ ಅಂತಾ ಅವರ ಮೇಲೆ ಆಪಾದನೆ ಹೊರಿಸ್ತಿದ್ರು. ಕೆಲವು ಹೆಂಗಸರಿಗೆ ಇಂತಹ ವದಂತಿಗಳೆಂದರೆ ಅದೇನಾಗುತ್ತೋ ದೇವರೆ ಬಲ್ಲ. ಇದ್ದಬದ್ದ ಸಂಬಂಧಿಕರು ಸ್ನೇಹಿತರಿಗೆಲ್ಲ ಕರೆಮಾಡಿ ಪ್ರಚಾರಮಾಡುತ್ತಾರೆ. ಸುದ್ದಿಗಳಿಗೆ ಇಂಬು ಸಿಗಲು ಇಷ್ಟು ಸಾಕು ಅಲ್ವಾ.
ಹೀಗೆ ಯಾರೋ ನಿದ್ದೆಬಾರದ ಅವಿವೇಕಿಗಳು ಹುಟ್ಟುಹಾಕಿದ ರೂಮರ್ಗೆ ನೂರಾರು ಗ್ರಾಮಸ್ಥರು ಒಂದುರಾತ್ರಿ ನಿದ್ದೆಗೆಟ್ಟಿದ್ದು ಮಾತ್ರ ದುರಂತ. ವಾರಕ್ಕೊಮ್ಮೆಯಾದರೂ ಇಂತಹ ಗಾಳಿಸುದ್ದಿಗಳಿಂದಾಗಿ ನಿದ್ದೆಕೆಡಿಸಿಕೊಳ್ಳುವ ನಮ್ಮ ಪಾಡು ದೇವರಿಗೇ ಪ್ರೀತಿ….
ಇನ್ನು ಡಿಸೆಂಬರ್ 21ರಂದು ಮಹಾಪ್ರಳಯವಾಗುತ್ತೆ ಅನ್ನುವ ಮತ್ತೊಂದು ಪುಕಾರು ನಿಮಗೆಲ್ಲ ಗೊತ್ತೇ ಇದೆ. ಆ ದಿನ ಬಂದು ಹೋಗುವವರೆಗೆ ಅದ್ಯಾವ್ಯಾವ ಬಟ್ಟೆಹಾವುಗಳು, ಕಾಗದದ ಹುಲಿಗಳು ಹೊರಗೆ ಬರುತ್ತವೋ, ಬಣ್ಣಬಣ್ಣದ ಕಾಗೆಗಳು ಹಾರಾಡುತ್ತವೋ ನಾಕಾಣೆ. ಸ್ನೇಹಿತರೇ ಇಂತಹ ಅವಾಂತರಗಳನ್ನು ತಡೆಗಟ್ಟಲು ನಿಮ್ಮಲ್ಲಿ ಏನಾದರೂ ಅಮೂಲ್ಯ ಸಲಹೆಗಳಿದ್ದರೆ ದಯವಿಟ್ಟು ಸೂಚಿಸಿ ಪುಣ್ಯಕಟ್ಟಿಕೊಳ್ಳಿ….
ಇಂತೀ ನಿಮ್ಮ ನಿದ್ದೆಗೆಟ್ಟ ಪತ್ರಕರ್ತ 🙂
ಪರಶುರಾಮ್ ತಹಶಿಲ್ದಾರ್.]]>






0 Comments