ಮರಾಠಿ -ಕನ್ನಡ ಸಂಬಂಧಗಳತ್ತ ಕಿರು ನೋಟ
– ಪುರುಷೋತ್ತಮ ಬಿಳಿಮಲೆ
ಕೃಪೆ : ವಿಜಯ ಕರ್ನಾಟಕ
ಕನರ್ಾಟಕದ ಜಾತ್ರೆಗಳೆಲ್ಲೆಲ್ಲಾ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯ ಮೈಲಾರನ ಜಾತ್ರೆ ಬಹಳ ದೊಡ್ಡದು. ಅದೇ ರೀತಿ ಮಹಾರಾಷ್ಟ್ರದ ಜೆಜೂರಿಯಲ್ಲಿ ನಡೆಯುವ ಖಂಡೋಬಾ ಜಾತ್ರೆ ಆ ರಾಜ್ಯಕ್ಕೆ ಬಹಳ ದೊಡ್ಡದು. ಮೈಲಾರನಿಗೆ ಸಂಬಂಧಿಸಿದ ನಿರೂಪಣೆಗಳ ಪ್ರಕಾರ ಆತ ಮೂರು ಹುಡುಗಿಯರನ್ನು ಮೂರು ರೀತಿಯಲ್ಲಿ ಮದುವೆಯಾಗುತ್ತಾನೆ. ಆತನ ಹೆಂಡತಿಯರೆಂದರೆ ಗಂಗಿಮಾಳವ್ವ, ಕುರುಬತ್ತೆವ್ವ ಮತ್ತು ಕೊಮಾಲಿ. ಇವರ ಮದುವೆ ಪ್ರಸಂಗಗಳು ಇಂತಿವೆ.
ಮೈಲಾರನಿಗೆ ಮದುವೆಯಾಗಬೇಕೆಂಬ ಆಸೆ ಹುಟ್ಟುತ್ತದೆ. ತಿರುಪತಿಗೆ ಹೋಗಿ ತಿಮ್ಮ ಶೆಟ್ಟಿಯನ್ನು ಎಬ್ಬಿಸುತ್ತಾನೆ. ‘ಭಿಕ್ಷೆ ಕೊಟ್ಟು ಕಳಿಸಿ’ ಎಂದು ಮಕ್ಕಳಿಗೆ ಹೇಳಿ ಆತ ಮಲಗುತ್ತಾನೆ. ಶೆಟ್ಟಿಯ ಮಗಳು ಗಂಗಮ್ಮಳು ಭಿಕ್ಷೆ ನೀಡಲು ಬರುತ್ತಾಳೆ. ಗೊರವನ ಜೋಳಿಗೆಗೆ ಭಿಕ್ಷೆ ಸುರಿಯುವಾಗ ಮೈಲಾರನು ಗಂಗಮ್ಮನ ಕೈಹಿಡಿದುಕೊಳ್ಳುತ್ತಾನೆ. ತಿಮ್ಮ ಶೆಟ್ಟಿ ದಂಗಾಗುತ್ತಾನೆ. ಏಳು ಕೋಟಿ ಹೊನ್ನು ಕೊಟ್ಟು ಮಗಳನ್ನು ಕರೆದುಕೊಂಡು ಹೋಗು ಎನ್ನುತ್ತಾನೆ. ‘ಊರಿಗೆ ಹೋದ ಮೇಲೆ ಕಳಿಸಿಕೊಡುತ್ತೇನೆ’ ಎನ್ನುತ್ತಾನೆ ಮೈಲಾರ. ತಿಮ್ಮ ಶೆಟ್ಟಿ ಹಣದಾಸೆಗೆ ಬಲಿಬೀಳುತ್ತಾನೆ. ತಂಗಿಯನ್ನು ಮೈಲಾರನಿಗೆ ಮದುವೆ ಮಾಡಿಕೊಡುತ್ತಾನೆ. ಮದುವೆ ಕಳೆದು ಬಹಳ ಕಾಲವಾದರೂ ಮೈಲಾರನು ‘ಏಳುಕೋಟಿ’ ಹಿಂದಿರುಗಿಸುವುದಿಲ್ಲ. ತಿಮ್ಮಶೆಟ್ಟಿ ಸಾಲ ವಸೂಲಿಗೆ ಜನ ಕಳಿಸಿದಾಗ ಭಾರತ ಹುಣ್ಣಿಮೆಯಲ್ಲಿ ಬೀಳುವ ಕಾಣಿಕೆ ಹಣದಿಂದ ಸಾಲ ಮುರಿದುಕೋ ಎಂದು ಹೇಳಿ ಕಳಿಸುತ್ತಾನೆ. ತಿಮ್ಮನು ಕಾರಣಿಕಕ್ಕೆ ಬರುತ್ತಾನೆ. ಆದರೆ ಮೈಲಾರನು ಮಾಯದ ಭಂಡಾರ ತೂರಿ ಕಾಣಿಕೆ ಹಣವನ್ನು ಮಾಯ ಮಾಡುತ್ತಾನೆ. ತಿಮ್ಮ ಗೋಳಾಡುತ್ತಾನೆ. ಜನರು ನ್ಯಾಯ ಮಾಡುತ್ತಾರೆ. ಮೈಲಾರನಿಗೆ ಸೇರಿದ ಹುಣಿಸೆ ತೋಪನ್ನು ಒಂದು ವರುಷದ ಮಟ್ಟಿಗೆ ತಿಮ್ಮನಿಗೆ ಒಪ್ಪಿಸುತ್ತಾರೆ. ಅಲ್ಲಿಯೂ ಮೈಲಾರ ತಿಮ್ಮನಿಗೆ ಮೋಸ ಮಾಡುತ್ತಾನೆ. ಕೋಪಗೊಂಡ ತಿಮ್ಮನು ಇನ್ನು ಮುಂದೆ ನಿನ್ನ ಸಹವಾಸ ಬೇಡ, ನಿನ್ನ ಜನರು ಏಳುಕೋಟಿ, ಏಳುಕೋಟಿ ಎಂದು ಹೇಳುತ್ತಾ ತಿರುಗುತ್ತಿರಲಿ, ಎಂದು ಶಾಪ ಕೊಡುತ್ತಾನೆ. ಮೈಲಾರನ ಮರಾಠೀ ಆವೃತ್ತಿಯಾದ ಖಂಡೋಬನ ಹೆಂಡತಿಯ ಹೆಸರು ‘ಮಾಳಚಿ’. ಈಕೆಯ ಅಪ್ಪನ ಹೆಸರು ಕೂಡಾ ತಿಮ್ಮ ಶೇಟ. ತಿಮ್ಮ ಶೇಟನು ಬಣಜಿಗರವನಾಗಿದ್ದು, ವ್ಯಾಪಾರಿವೃತ್ತಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದನೆಂದು ಮರಾಠೀ ಜನಪದ ಸಾಹಿತ್ಯ ಹೇಳುತ್ತದೆ. ಅಲ್ಲಿಯೂ ಖಂಡೋಬ ತಿಮ್ಮ ಶೇಟನನ್ನು ವಂಚಿಸುತ್ತಾನೆ. ಮೈಲಾರನ ಇನ್ನೊಂದು ಮದುವೆಯು ಕುರುಬತ್ತೆವ್ವನೊಡನೆ ನಡೆಯುತ್ತದೆ. ಇಲ್ಲಿ ಮೈಲಾರನು ಬೇಟೆಗೆಂದು ಕಾಡಿಗೆ ತೆರಳುತ್ತಾನೆ. ಹಿಂದಿರುಗಿ ಬರುವಾಗ ಅವನ ಗಲ್ಲದ ಮೇಲೆ ಗಾಯಗಳಿರುತ್ತವೆ. ಗಲ್ಲದ ಗಾಯ, ತುಟಿಯ ಕೆಂಪು ಕಂಡು ಮನೆಯ ಹೆಂಡತಿ ಗಂಗಮ್ಮ ಕಾರಣ ಕೇಳುತ್ತಾಳೆ. ಮೈಲಾರ ವಿವರ ನೀಡಿದರೂ ಗಂಗಮ್ಮನ ಸಂಶಯ ಕಡಿಮೆಯಾಗುವುದಿಲ್ಲ. ಸಿಟ್ಟುಗೊಂಡ ಮೈಲಾರನು ಮನೆಯಿಂದ ಹೊರಬಂದು ಕುರುಬರ ದೊಡ್ಡಿಗೆ ಬರುತ್ತಾನೆ. ಅಲ್ಲಿ ಕುರಿಜಿಡ್ಡಿನಿಂದ ನಾರುತ್ತಿದ್ದ ಕುರುಬೆತ್ತಿಯ ಮನೆಯಲ್ಲಿ ಜೀತದ ಆಳಾಗಿ ಕೆಲಸಕ್ಕೆ ನಿಲ್ಲುತ್ತಾನೆ. ಪರಿ ಪರಿ ಕಾಟ ಕೊಟ್ಟು ಕೊನೆಗೆ ಕುರುಬೆತ್ತಿಯನ್ನು ಮದುವೆಯಾಗಿ ಮನೆಗೆ ಬರುತ್ತಾನೆ. ಗಂಡ ಇನ್ನೊಬ್ಬಳನ್ನು ಕೂಡಿಕೊಂಡು ಬಂದದ್ದನ್ನು ನೋಡಿ ಗಂಗಮ್ಮ ಕಿಡಿಕಿಡಿಯಾಗುತ್ತಾಳೆ. ಕುರುಬತ್ತೆವ್ವನೂ ಗಂಗವ್ವನೂ ಕಾಲುಕೆರೆದು ಜಗಳವಾಡುತ್ತಾಳೆ. ಕೊನೆಗೆ ಊರಜನರು ಸೇರಿ ನ್ಯಾಯ ಮಾಡಿ, ಮನೆಯೊಳಗೆ ಗಂಗಮ್ಮನೇ ಇರಬೇಕೆಂತಲೂ, ಹೊರಗಡೆ ಅಂಗಳ ಮೂಲೆಯ ಗುಡಿಸಲಲ್ಲಿ ಕುರುಬೆತ್ತವ್ವ ಇರಬೇಕೆಂತಲೂ ತೀಮರ್ಾನವಾಗುತ್ತದೆ. ಮಹಾರಾಷ್ಟ್ರದಲ್ಲಿ ಕುರುಬತ್ತೆವ್ವನಿಗಿರುವ ಹೆಸರು ‘ಬಾಣಾಯಿ’, ಆಕೆಯೂ ಕುರುಬರ ಕನ್ಯೆ. ಬೇಟೆಗೆ ಹೋದ ಖಂಡೋಬನು ಈಕೆಯನ್ನು ಕಂಡು ಮೋಹಗೊಂಡು, ಪರಿಪರಿಯಾಗಿ ಕಾಡಿಸಿ ಅವಳನ್ನು ಮದುವೆಯಾಗುತ್ತಾನೆ. ಬಾಣಾಯಿ ಮತ್ತು ಮಾಳಸರು ಸವತಿ ಮತ್ಸರದಿಂದ ಮರಾಠಿಯಲ್ಲಿ ಭಾರೀ ಜಗಳಾಡಿದರೆ ಕುರುಬತ್ತೆವ್ವ ಮತ್ತು ಗಂಗಮ್ಮರು ಕನ್ನಡಲ್ಲಿ ಖಾರವಾಗಿ ಜಗಳಾಡಿದ್ದಾರೆ. ಮೈಲಾರನ ಮೂರನೆಯ ಮದುವೆಯು ಕೊಮಾಲಿಯೊಡನೆ ನಡೆಯುತ್ತದೆ. ಕೊಮಾಲಿಯು ಮಲ್ಲನ ಗೌಡನ ಮಗಳು. ಮಲ್ಲನ ಗೌಡನಿಗೆ ಗೊರವರನ್ನು ಕಂಡರೆ ತುಂಬಾ ಕೋಪೆ. ಒಂದು ದಿನ ಮಲ್ಲನ ಗೌಡನ ಮನೆಗೆ ವೇಷ ಮರೆಸಿ ಬಂದ ಮೈಲಾರನು ಕೊಮಾಲಿಗೆ ಹನ್ನೆರಡು ತುಂಬಿದಾಗ ಗೊರವನಿಗೆ ಕೊಟ್ಟು ಬಿಡು, ಕೊಡದಿದ್ದರೆ ನಿನ್ನ ಬೆನ್ನಲ್ಲಿ ಹುಣ್ಣು ಬೀಳುತ್ತದೆ ಎಂದು ಹೇಳುತ್ತಾನೆ. ಕೊಮಾಲಿಗೆ ಹನ್ನೆರಡು ತುಂಬುತ್ತದೆ. ಒಂದು ದಿನ ಮನೆಯವರೆಲ್ಲ ಹೊಲದ ಕೆಲಸಕ್ಕೆ ಹೋದ ಹೊತ್ತು ಮೈಲಾರನು ಗೊರವನ ವೇಷ ತೊಟ್ಟು ಭಿಕ್ಷೆಗೆ ಬರುತ್ತಾನೆ. ಕೊಮಾಲಿಯೇ ಅಕ್ಕಿ ನುಚ್ಚನ್ನು ತರುತ್ತಾಳೆ. ನಾನು ಹರಕೆಯ ಗೊರವ, ನನಗೆ ಹೆಣ್ಣಿನ ಭಿಕ್ಷೆ ಬೇಕು ಎನ್ನುತ್ತಾನೆ. ಕೊಮಾಲಿ ತನ್ನ ಅತ್ತೆ ಮಲ್ಲವ್ವನಿಗೆ ದೂರು ಕೊಡುತ್ತಾಳೆ. ಅತ್ತೆಯು ಪೊರಕೆಯಿಂದ ಗೊರವನಿಗೆ ಬಾರಿಸಿ, ಓಡಿಸುತ್ತಾಳೆ. ಮರುಕ್ಷಣದಲ್ಲಿ ಮಲ್ಲವ್ವನಿಗೆ ಹುಚ್ಚು ಹಿಡಿಯುತ್ತದೆ.ಜನರು ಗೊರವನ ಪೂಜೆ ಮಾಡಿ ಸಂಕಷ್ಟಗಳಿಂದ ಪಾರಾಗಲು ನಿರ್ಧರಿಸುತ್ತಾರೆ. ಮಲ್ಲನ ಗೌಡ ತನ್ನ ಹಠವನ್ನು ಬಿಡುವುದಿಲ್ಲ. ಕೊಮಾಲಿಯನ್ನು ಸೋಮನ ಗೌಡನಿಗೆ ಮದುವೆ ಮಾಡಿ ಕೊಡುತ್ತಾನೆ. ಆದರೆ ಮೊದಲ ರಾತ್ರಿ ಸೋಮನ ಗೌಡನ ಬೆನ್ನಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತದೆ. ಅವನಿಗೆ ಕೊಮಾಲಿಯನ್ನು ಮುಟ್ಟಲಾಗುವುದಿಲ್ಲ. ನಿರಾಶನಾದ ಆತ ಕೊಮಾಲಿಯನ್ನು ಹಿಂದೆ ಕರೆದೊಯ್ಯುವಂತೆ ಮಲ್ಲನ ಗೌಡನಿಗೆ ಹೇಳಿ ಕಳಿಸುತ್ತಾನೆ. ಗೌಡ ಅದಕ್ಕೆ ಒಪ್ಪುವುದಿಲ್ಲ. ಸೋಮನ ಗೌಡನು ಕೊಮಾಲಿಯನ್ನು ದಟ್ಟಡವಿಗೆ ಕಳಿಸಿಬಿಡುತ್ತಾನೆ. ಅಡವಿಯಲ್ಲಿ ಮಾರುವೇಷದ ಮೈಲಾರನು ಕೊಮಾಲಿಯನ್ನು ಸಂಧಿಸುತ್ತಾನೆ. ಆತ ಪ್ರತಿ ಹುಣ್ಣಿಮೆಯಂದು ಗುಡ್ಡಕ್ಕೆ ಬಂದು ನನ್ನ ಸೇವೆ ಮಾಡಬೇಕು, ಎನ್ನುತ್ತಾನೆ. ಮಾತಿಗೆ ತಪ್ಪದ ಕೊಮಾಲಿ ಗಭರ್ಿಣಿಯಾಗುತ್ತಾಳೆ. ಕೊನೆಗೋ ಆಕೆ ಕುದುರೆಯೇರಿ ಬಂದ ಮೈಲಾರ ಲಿಂಗನೊಡನೆ ತೆರಳಿ ಗಂಗಮ್ಮನಿಗೆ ತಂಗಿಯಾಗಿ ಬಾಳುವೆ ಮಾಡುತ್ತಾಳೆ. ಮರಾಠಿ ಪಠ್ಯಗಳ ಪ್ರಕಾರ ಕೊಮಾಲಿಯು ಮಣಿ ಮತ್ತು ಮಲ್ಲ ಎಂಬಿಬ್ಬರು ರಾಕ್ಷಸರ ತಂಗಿಯಾಗಿದ್ದಾಳೆ. ಈ ರಾಕ್ಷಸರನ್ನು ಕೊಂದು ಖಂಡೋಬನು ಕೊಮಾಲಿಯನ್ನು ಮದುವೆಯಾಗುತ್ತಾನೆ. ಸಂಸ್ಕೃತದಲ್ಲಿ ರಚಿತವಾಗಿರುವ ಮಲ್ಲಾರಿ ಮಹಾತ್ಮೆ ಮತ್ತು ಜಯಾದ್ರಿ ಮಹಾತ್ಮೆ ಕಾವ್ಯಗಳು ಕೊಮಾಲಿ ಕತೆಯನ್ನೇ ಆಧರಿಸಿವೆ. ಜೆಜೂರಿ ಮತ್ತು ಹಡಗಲಿಗಳಲ್ಲಿ ಮೈಲಾರನ ಪಕ್ಕದಲ್ಲಿಯೇ ಮಾಳಚಿ-ಗಂಗಿ ಮಾಳವ್ವರಿಗೆ ಗುಡಿಗಳನ್ನು ಕಟ್ಟಲಾಗಿದೆ. ಮೈಲಾರನ ಇನ್ನೊಬ್ಬಳು ಹೆಂಡತಿಯಾದ ಕುರುಬತ್ತೆವ್ವನಿಗೆ ಅಥವಾ ಬಾಣಾಯಿಗೆ ಸಂಬಂಧಿಸಿದ ಗುಡಿಯು ಯಾವಾಗಲೂ ಮೈಲಾರನ ಗುಡಿಗಿಂತ ಸಾಕಷ್ಟು ದೂರದಲ್ಲಿದ್ದು ಅಲ್ಲೊಂದು ಬೇವಿನ ಮರವಿರುತ್ತದೆ. ಮೈಲಾರನ ಮೂರನೇ ಹೆಂಡತಿಯಾದ ಕೊಮಾಲಿಗೆ ಗುಡಿಗಳೇ ಇಲ್ಲ. ಮೈಲಾರನಿಗೆ ಸಂಬಂಧಿಸಿದ ಮೂರು ಮದುವೆಗಳು ಚರಿತ್ರೆಯ ವಿವಿಧ ಘಟ್ಟಗಳಲ್ಲಿ ಆ ಪರಂಪರೆಯು ಮೂರು ಭಿನ್ನ ಭಿನ್ನ ಜನ ಸಮುದಾಯಗಳೊಂದಿಗೆ ನಡೆಸಿದ ಸಂಘರ್ಷ ಮತ್ತು ಏರ್ಪಡಿಸಿಕೊಂಡ ಸಮನ್ವಯ ಎಂದು ತೋರುತ್ತದೆ. ಈ ಅರ್ಥದಲ್ಲಿ ಮೈಲಾರನ ಮದುವೆಯು ಕೇವಲ ಧಾಮರ್ಿಕ ಅರ್ಥವುಳ್ಳದ್ದಲ್ಲ, ಬದಲು ಭಿನ್ನ ಸಮುದಾಯಗಳು ಕೆಲವು ನಿದರ್ಿಷ್ಟ ಕಾರಣಗಳಿಗಾಗಿ ಒಂದರೊಡನೊಂದು ಬೆರೆತು ಬೆಳೆದು ಬಂದದ್ದರ ಪರಿಣಾಮವಾಗಿದೆ. ಕನ್ನಡಿಗರ ಮೈಲಾರ ಜಾತ್ರೆಗೆ ಮಹಾರಾಷ್ಟ್ರದಿಂದ ಸಾವಿರಾರು ಚಕ್ಕಡಿಗಳು ಬರುತ್ತವೆ, ಲಕ್ಷಾಂತರ ಜನರು ಭಾಷೆಯ ತೊಡಕ್ಕಿಲ್ಲದೆ ಜಾತ್ರೆಯಲ್ಲಿ ಭಾಗವಹಿಸುತ್ತಾರೆ, ಮರಾಠಿಗರ ಜೆಜೂರಿ ಖಂಡೋಬಾನ ಜಾತ್ರೆಯಲ್ಲಿ ಲಕ್ಷಾಂತರ ಕನ್ನಡಿಗರು ಕಾಣಸಿಗುತ್ತಾರೆ. ಇವರಿಗೆ ಭಾಷಾವಾರು ಪ್ರಾಂತ ರಚನೆಯು ಒಂದು ಸಮಸ್ಯೆಯೇ ಅಲ್ಲ. ಈ ಬಗೆಯ ಚರಿತ್ರೆಯಿಂದ ನಾವೇನಾದರೂ ಪಾಠ ಕಲಿಯಬಹುದೇ ಎಂಬ ಕುತೂಹಲ ನನಗೆ. ]]>




0 Comments