ಕುಮಾರ ರೈತ
ವರದಿಗಾರ
ಜೀತ ಎಂಬ ಪದವೇ ಅದರ ಕ್ರೌರ್ಯವನ್ನ ಕಟ್ಟಿಕೊಡುತ್ತದೆ. ಕಾನೂನಿನಿಂದ ನಿಷೇಧಿಸಲ್ಪಟ್ಟಿದ್ದರೂ ಜಮೀನ್ದಾರಿ ವ್ಯವಸ್ಥೆಯಲ್ಲಿ ಇನ್ನೂ ಜೀವಂತವಾಗಿರುವ ಇದು ಸ್ವಾತಂತ್ರ್ಯಪೂರ್ವದಲ್ಲಿ ಹೇಗಿದ್ದಿರಬಹುದು ಎಂಬ ಚಿತ್ರಣವನ್ನು ತಮಿಳು ಸಿನಿಮಾ ಪರದೇಶಿ ಸಮರ್ಥವಾಗಿ ಕಟ್ಟಿಕೊಟ್ಟಿದೆ.
ನೇರವಾಗಿ ಜೀತದ ಬಗ್ಗೆ ಹೇಳಲು ಹೊರಡದ ನಿರ್ದೇಶಕ ಬಾಲ, ಮೊದಲು ಮದ್ರಾಸ್ ಪ್ರೆಸಿಡೆನ್ಸಿಗೆ ಒಳಪಟ್ಟ ಹಿಂದುಳಿದ ಹಳ್ಳಿ, ಅಲ್ಲಿ ಸಹಜವಾಗಿ ಅರಳುವ ಪ್ರೀತಿ, ಅದಕ್ಕೆ ವ್ಯಕ್ತವಾಗುವ ವಿರೋಧದ ಬಗ್ಗೆ ಹೇಳುತ್ತಾರೆ. ಅಲ್ಲಿಯೇ ಕಥೆ ವಿಳಂಬಿಸದೆ ತಾನು ಹೇಳಹೊರಟಿರುವ ವಿಷಯದತ್ತ ಹೊರಳುವ ರೀತಿಯೇ ವಿಶಿಷ್ಟ.

ಬಾಲ್ಯದಲ್ಲಿಯೇ ತಂದೆತಾಯಿ ಕಳೆದುಕೊಂಡು ಅಜ್ಜಿ ಆಶ್ರಯದಲ್ಲಿ ಬೆಳೆಯುತ್ತಿರುವ ರಾಸನ ಮೂಲಕವೇ ಚಿತ್ರದ ಇಡೀ ಕಥೆ ಅಭಿವ್ಯಕ್ತಗೊಳ್ಳುತ್ತದೆ. ಅಜ್ಜಿ, ತನ್ನ ಕುಡಿ ಹೊತ್ತ ಪ್ರೀತಿಸಿದ ಹುಡುಗಿ ತೊರೆದು ಬ್ರಿಟಿಷ್ ಟೀ ಪ್ಲಾಂಟೇಶನ್ ಗೆ ಊರವರೊಂದಿಗೆ ರಾಸ ತೆರಳುತ್ತಾನೆ. ನಯವಾದ ಮಾತುಗಳ ಮೂಲಕವೇ ಇವರೆಲ್ಲ ಹೊರಡುವಂತೆ ಮಾಡಿದ ಮೇಸ್ತ್ರಿ ಕೌರ್ಯ ದಾರಿಯಲ್ಲಿ ಅನಾವರಣವಾದರೂ ಯಾರೂ ಎಚ್ಚತ್ತುಕೊಳ್ಳುವುದಿಲ್ಲ.
ದುಡಿದು ಕಾಸು ಸಂಪಾದಿಸುವ ಆಸೆ ಹೊತ್ತವರಿಗೆ ಎಸ್ಟೇಟ್ ಒಳಗೆ ಹೋಗುತ್ತಿದ್ದಂತೆ ನರಕ ದರ್ಶನ. ಅಲ್ಲಿ ಎಲ್ಲ ವಿಧದ ದೌರ್ಜನ್ಯ. ಪರಾರಿಯಾಗಲು ಯತ್ನಿಸಿದವರ ಮೀನಖಂಡ ತುಂಡು ಮಾಡುವ ಕ್ರೂರತೆ.
ಚಿತ್ರದ ಅಂತ್ಯದ ಅಂತ್ಯವೂ ಊಳಿಗಮಾನ್ಯ ಪದ್ಧತಿ ಜಾಣತನದ ಬಗ್ಗೆ ಹೇಳುತ್ತದೆ. ರಾಸ ಅಲ್ಲಿ ಸಾಂಕೇತಿಕವಾಗುತ್ತಾನೆ. ಜೀತದ ಕ್ರೂರತೆ ನೋಡುಗರನ್ನು ಕುದಿಯುವಂತೆ ಮಾಡುತ್ತದೆ.ಜೀತ ಬಳಸಿಕೊಂಡು ಮತಾಂತರವನ್ನು ಹೇಗೆ ನಡೆಸಲಾಗುತ್ತಿತ್ತು ಎಂಬುದನ್ನು ವಾಸ್ತವಿಕ ನೆಲೆಗಟ್ಟಿನಲ್ಲಿಯೇ ಹೇಳಲಾಗಿದೆ.

ಇಲ್ಲಿನ ಪಾತ್ರಗಳನ್ನು ಅಥರ್ವ (ರಾಸ), ಧನಿಷ್ಕ (ಮರ್ಗದಮ್ಮ), ಜೆರ್ರಿ (ಕಂಗಾನಿ) ಅನುಭವಿಸಿ ನಟಿಸಿದ್ದಾರೆ. ಮೊದಲಾರ್ಧದಲ್ಲಿ ಹುಡುಗಾಟದ ಹುಡುಗಿ ವೈದಿಕ (ಅಂಗಮ್ಮ) ನಟನೆಯೂ ಮನೋಜ್ಞ. ಸಂಕಲನ ಮತ್ತಷ್ಟು ಬಿಗಿಯಾಗಬೇಕಿತ್ತು. ಕ್ಯಾಮರಾವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ದುಡಿಸಿಕೊಳ್ಳಬಹುದಿತ್ತು.







paradesi chitra kuritu keliruve, arthapoornavaagi chitravannu parichayisiruva mitra kumara raita avarige abhinandanegalu, dhanyavadagalu, atharva kannada chalanachitra rangada bangarada manushya siddalingaiah avara mommaga,andare gatisida murali avara maga taane! chitra noduva aase, aadare elli!
kumvee