
ಚಿತ್ರಾ ಸಂತೋಷ್
ಈ ಲೇಖನ ಫೇಸ್ ಬುಕ್ ನಲ್ಲಿ ಮೊದಲು ಪ್ರಕಟವಾಗಿದೆ
ಭೀಮಸೇನ ಜೋಷಿಯವರು ಗಂಟಲಿಗೆ ತೊಂದರೆಯಾದರೆ ಹಸಿಮೆಣಸಿನಕಾಯಿ ತಿನ್ನುತ್ತಿದ್ದರು ಎಂದು ಹೇಳುವುದನ್ನು ಕೇಳಿದ್ದೆ. ಈ ಬಗ್ಗೆ ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ಅವರು ಒಂದೆಡೆ ಹೀಗೆ ಹೇಳಿದ್ದಾರೆ; ಒಂದು ದಿನ ಜೋಷಿಯವರು ಬಹಳ ಕಫ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಆ ದಿನ ಸಂಜೆಗೇ ಅವರ ಕಛೇರಿಯೂ ನಿಗದಿಯಾಗಿತ್ತು. ಆಯೋಜಕರಿಗೆ ಎಲ್ಲಿ ಕಾರ್ಯಕ್ರಮ ಸ್ಥಗಿತಗೊಳ್ಳುತ್ತದೆಯೋ ಎನ್ನುವ ಆತಂಕ. ಆದರೆ ಜೋಷಿಯವರು ಆಯೋಜಕರಿಗೆ ‘ನೀವೆನು ಆತಂಕ ಪಡುವುದು ಬೇಡ, ಆತಂಕಪಡುವಂಥದ್ದು ಏನೂ ಆಗಿಲ್ಲ. ನೀವು ನನಗೆ 15 ಹಸಿಮೆಣಸುಗಳನ್ನು ತಂದುಕೊಡಿ’ ಎಂದರು.
ಶೀತದಿಂದ ಜೋಷಿಯವರ ಮೂಗು ಮತ್ತು ಕಣ್ಣಿನಿಂದ ಒಂದೇ ಸಮನೆ ಸೋರುತ್ತಿತ್ತು. ಆ ಮೆಣಸಿನಕಾಯಿಗಳನ್ನು ತಿಂದ 15 ನಿಮಿಷದ ನಂತರ ಜೋಷಿಯವರು ನನ್ನ ಶೀತ ಕಡಿಮೆಯಾಗಿದೆ, ಕಛೇರಿ ಶುರುಮಾಡುವ ಎಂದರು!! ಇನ್ನೊಂದೆಡೆ ಗಾಯಕಿ ಶುಭಾ ಮುದ್ಗಲ್ ಕೂಡ ಈ ಮೆಣಸಿನಕಾಯಿ ಕತೆ ಹೇಳಿಕೊಂಡಿದ್ದಾರೆ; ನನ್ನ ಗುರುಬಂಧು ಸುಧೀರ್ ನಾಯಕ್ ಸಾಕಷ್ಟು ಕಾಲ ಜೋಷಿಯವರಿಗೆ ಹಾರ್ಮೋನಿಯಂ ವಾದಕರಾಗಿದ್ದರು. ಅವರು ಹೇಳುವ ಕತೆಗಳು ನಮಗೆ ಬಹಳ ರೋಚಕ ಮತ್ತು ಅಚ್ಚರಿಗೆ ಕಾರಣವಾಗುತ್ತಿದ್ದವು.

ಎಷ್ಟೋ ಬಾರಿ ನೂರಾರು ಮೈಲಿ ಇರುವ ದೂರದ ಕಛೇರಿಗಳಿಗೆ ಕಾರು ಓಡಿಸಿಕೊಂಡು ಹೋಗಿ ಏನೂ ದಣಿವಾಗುತ್ತಿರಲಿಲ್ಲ. ಎಷ್ಟು ದೂರ ಕಾರು ಓಡಿಸಿಕೊಂಡು ಹೋದ್ರೂ ವಿಶ್ರಾಂತಿ ತೆಗೆದುಕೊಳ್ಳದೇ ವೇದಿಕೆ ಹತ್ತಿ ಹಾಡುತ್ತಿದ್ದರು. ಅದೂ ಒಮ್ಮೊಮ್ಮೆ ಕುಡಿದು ಕಾರು ಓಡಿಸುತ್ತಿದ್ದರು. ಆದರೆ ಅವರಿಗಾಗಲೀ ಅಥವಾ ಸಹಪ್ರಯಾಣಿಕರಿಗಾಗಲೀ ಯಾವುದೇ ತೊಂದರೆಯಿಲ್ಲದೆ ಕಾರು ಚಾಲನೆ ಮಾಡಿಕೊಂಡು ತಲುಪಬೇಕಾದ ಸ್ಥಳ ತಲುಪುತ್ತಿದ್ದರಂತೆ. ಗಂಟಲು ಸ್ವಲ್ಪ ಸಮಸ್ಯೆಯಾದರೂ ಒಂದು ಪ್ಲೇಟಿನಲ್ಲಿ ಹಸಿಮೆಣಸಿನಕಾಯಿ ಹಾಕಿಕೊಂಡು ಹಾಗೇ ಜಗಿದು ನುಂಗುವರು. ಇಷ್ಟೆಲ್ಲಾ ಆದರೂ ವೇದಿಕೆಯಲ್ಲಿ ಅವರ ಏಕಾಗ್ರತೆ, ಗಾಯನ ಧ್ಯಾನದ ಸ್ಥಿತಿಯಲ್ಲಿರುತ್ತಿತ್ತು.
ಅಬ್ಬಾ!
ಜೋಷಿಯವರ willpower!!!!






1 Comment