ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೂರು ಶಾಲೆಗಳಿಗೆ ನೂರು ಪುಸ್ತಕ ಯೋಜನೆ ಪುಸ್ತಕ ವಿತರಣಾ ಸಮಾರಂಭ..

ಪ್ರತಿಯೊಬ್ಬರಲ್ಲೂ ಪುಸ್ತಕಗಳನ್ನು ಆರಾಧಿಸುವ ಮನೋಭಾವ ರೂಪುಗೊಳ್ಳಬೇಕು ಎಂದು ಹಿರಿಯ ಸಾಹಿತಿ ನಾ ಡಿಸೋಜ ತಿಳಿಸಿದರು.

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ನಗರದ ಕರ್ನಾಟಕ ಸಂಘದಲ್ಲಿ ನೂರು ಶಾಲೆಗಳಿಗೆ ನೂರು ನೂರು ಪುಸ್ತಕ ಯೋಜನೆಯ ಪುಸ್ತಕ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಪುಸ್ತಕಗಳ ಅನಾವರಣಗೊಳಿಸಿ ಮಾತನಾಡಿದ ಅವರು, ಮಕ್ಕಳ ಕೈಗೆ ಪುಸ್ತಕ ಕೊಡುವ ಅಗತ್ಯತೆ ಹಿಂದಿಗಿಂತಲೂ ಈಗ ಹೆಚ್ಚಾಗಬೇಕಿದೆ ಎಂದರು.

ಮೂರನೇ ಮಹಾಯುದ್ಧದಂತಹ ಇಂದಿನ ಸಂದರ್ಭದಲ್ಲಿ ಕಾಗದಗಳೇ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕಾಗದಗಳ ಅಲಭ್ಯತೆಯ ಸನ್ನಿವೇಶದಲ್ಲಿಯೂ ನೂರು ಶಾಲೆಗಳ ಮಕ್ಕಳ ಕೈಗೆ ಪುಸ್ತಕ ನೀಡುವ ಜವಾಬ್ದಾರಿ ಸಾಮಾನ್ಯವಾದುದಲ್ಲ. ಈ ಯೋಜನೆ ರೂಪಿಸಿರುವ ಸಂಘದ ಕಾರ್ಯ ಶ್ಲಾಘನೀಯ. ಪುಸ್ತಕಗಳನ್ನು ಪಡೆದ ಶಿಕ್ಷಕರು ಪುಸ್ತಕಗಳನ್ನು ಮಕ್ಕಳಿಗೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಹಿತಿ ಎಂ.ಎನ್.ಸುಂದರ ರಾಜ್ ಮಾತನಾಡಿ, ಪುಸ್ತಕಗಳು ಜ್ಞಾನದ ಕಿಟಕಿಗಳಿದ್ದಂತೆ, ಇದರ ಸದುಪಯೋಗವನ್ನು ಮಕ್ಕಳು ಪಡೆಯುವಂತಾಗಲು ಎಲ್ಲರೂ ಶ್ರಮಿಸಬೇಕು. ಮಕ್ಕಳು ಭವಿಷ್ಯದ ಉತ್ತಮ ಪ್ರಜೆಗಳಾಗಲು ಪುಸ್ತಕಗಳಿಂದ ಸಾಧ್ಯವಿದೆ ಎಂದರು.

ಶಿಕ್ಷಣ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ ಮಾತನಾಡಿ. ಹತ್ತು ಸಾವಿರ ಪುಸ್ತಕಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ ನೀಡುತ್ತಿರುವ ಸಂಘದ ಪ್ರಯತ್ನ ಪ್ರಶಂಸನೀಯವಾಗಿದೆ. ಎಲ್ಲ ಪುಸ್ತಕಗಳನ್ನು ಮಕ್ಕಳಿಗೆ ತಕ್ಷಣ ನೀಡುವ ಮೂಲಕ ಮಕ್ಕಳ ಜ್ಞಾನ ಹೆಚ್ಚಿಸಲು ಶಿಕ್ಷಕರು ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ಹೆಸರಾಂತ ಪ್ರಕಾಶಕ ಎ ವೈ ದಂತಿಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಅಧ್ಯಕ್ಷತೆ ವಹಿಸಿದ್ದು, ಸಂಘದ ಉಪಾಧ್ಯಕ್ಷ ಐಬಿಹೆಚ್ ಪ್ರಕಾಶನದ ಲಕ್ಷ್ಮಿನಾರಾಯಣ, ಸಿರಿಗನ್ನಡ ಪುಸ್ತಕಮನೆಯ ಸುಂದರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಘದ ಕಾರ್ಯದರ್ಶಿ ದೊಡ್ಡೇಗೌಡ ಸ್ವಾಗತಿಸಿ ಶ್ರೀಮತಿ ಕವಿತಾ ಸಾಗರ್ ನಿರೂಪಿಸಿದರು.

‍ಲೇಖಕರು Admin

22 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading