ಕಾಲುದಾರಿ ಬಳಗ
‘ಕಾಲುದಾರಿ’ಯ ಎರಡನೇ ಸಂಚಿಕೆಯಲ್ಲಿ ದಾದಾಪೀರ್ ಜೈಮನ್ ಅವರ ‘ನೀಲಕುರಿಂಜಿ’ ಕಥಾ ಸಂಲಕನದ ಕುರಿತು ಒಂದೊಳ್ಳೆ ಚರ್ಚೆ ನಡೆಯಿತು.
ಭಾಗವಹಿಸಿದ್ದು ಕೇವಲ 11 ಜನರು ಮಾತ್ರ. ಆದ್ರೆ ಎಲ್ಲರೂ ಕಥೆಗಳನ್ನು ಓದಿಕೊಂಡು ಮತ್ತು ಟಿಪ್ಪಣಿ ಮಾಡಿಕೊಂಡು ಮಾತಾಡಿದ್ದು ವಿಶೇಷ. ಎಲ್ಲರೂ ಒಂದು ಸುತ್ತು ತಮ್ಮಗಳ ಅನಿಸಿಕೆ ಹಂಚಿಕೊಂಡ ಎರಡನೆ ಸುತ್ತಿನಲ್ಲಿ ಕತೆಗಾರ ದಾದಾಪೀರ ಅವರಿಗೆ ಪ್ರಶ್ನೆಗಳನ್ನು ಕೇಳುವ ಮೂಲಕ ಸಂವಾದ ಮುಂದುವರೆಯಿತು.
ಓದುಗ ಮತ್ತು ಬರಹಗಾರನ ನಡುವೆ ಪರಸ್ಪರ ಕೊಡುಕೊಳ್ಳುವ ಪ್ರಕ್ರಿಯೆಯೇ ಕಾಲುದಾರಿಯ ಪಯಣ. ಇದರಲ್ಲಿ ಓದುಗರು ಕೃತಿಕಾರನಿಗೆ ತಮಗನಿಸಿದ ಇತಿಮಿತಿಗಳನ್ನು ನೇರವಾಗಿ ಹಂಚಿಕೊಳ್ಳುತ್ತಾರೆ. ಅದರಲ್ಲಿ ತಮಗೆ ಬೇಕಾದುದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಕೃತಿಕಾರನಿಗೆ ಇರುತ್ತದೆ.

ದಾದಾಪೀರ್ ಜೈಮನ್ ಅವರ ಎಲ್ಲ ಕಥೆಗಳ ಸ್ಥಾಯಿಭಾವ ತಾಯ್ತನದ ಅಂತಃಕರಣ. ಸಂಕಲನದಲ್ಲಿನ ಹತ್ತೂ ಕಥೆಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ನಗರದ ಒತ್ತಡದ ಬದುಕು ಗ್ರಾಮೀಣರ ಅಭದ್ರತೆಯ ಬದುಕುಗಳಲ್ಲಿ ಮನುಷ್ಯಪ್ರಜ್ಞೆ ಹುಡುಕಾಟವನ್ನು ಈ ಕಥೆಗಳು ನಡೆಸುತ್ತವೆ. ಕ್ವೀರ್ ಸಮುದಾಯದ ಕುರಿತು ಬರೆದ ಎರಡು ಕತೆಗಳಂತೂ ಓದುಗನಿಗೆ ಶಾಕ್ ಕೊಡುವಷ್ಟು ತೀವ್ರವಾಗಿವೆ ಎಂದು ಸಂವಾದದಲ್ಲಿನ ಬಹುತೇಕರು ಹಂಚಿಕೊಂಡರು.
ದಾದಾಪೀರ್ ಅವರು ಬರೆಯಬೇಕಾದ ಕತೆಗಳಿನ್ನು ಬಹಳಷ್ಟಿವೆ. ಅವರು ಸ್ಪರ್ಧೆಗಳಿಗೆ ಕಳಿಸುವ ಹಂಗಿನಿಂದ ಹೊರಬಂದು ಒಟ್ಟು ಪರಿಸರದ ಸ್ವಾದವನ್ನು ಉಣಬಡಿಸುವ ಕಥೆಗಳನ್ನು ಹೆಚ್ಚು ಹೆಚ್ಚು ಬರೆಯಲಿ ಎನ್ನುವ ಸಲಹೆಯು ವ್ಯಕ್ತವಾಯಿತು. ಹಿರಿಯರಾದ ರಮಕಾಂತ ಪುರಾಣಿಕ ಅವರು ತಮ್ಮ ಮನೆಯಲ್ಲಿ ಕಾಲುದಾರಿಯ ಪಯಣಿಗರು ಸೇರಲು ಅವಕಾಶ ಮಾಡಿಕೊಟ್ಟುದಲ್ಲದೇ, ಶುಚಿರುಚಿಯಾದ ಊಟವನ್ನು ಬಡಿಸಿ ಬಿಳ್ಕೊಟ್ಟರು.







0 Comments