ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೀರಿನ ನಿಲುತಾಣ: ಹರೀಶ ಕೇರರ ಪ್ರತಿಕ್ರಿಯೆಗೆ ಉತ್ತರ

ನೀನಾಸಂ ತನ್ನ ಮರು ತಿರುಗಾಟದಲ್ಲಿ ಪ್ರದರ್ಶಿಸಿದ ನಾಟಕ ‘ನೀರಿನ ನಿಲುತಾಣ’. ಈ ನಾಟಕ ಪ್ರದರ್ಶನದ ಬಗ್ಗೆ ‘ಅವಧಿ’ ಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಈ ಚರ್ಚೆ ನಾಟಕವನ್ನು ಅರ್ಥ ಮಾಡಿಕೊಳ್ಳುವ ಬಗೆಯ ಬಗ್ಗೆ, ನಾಟಕ ವಿಮರ್ಶೆ ಹೇಗಿರಬೇಕು ಎನ್ನುವುದರ ಬಗ್ಗೆ ಬೆಳಕು ಚೆಲ್ಲುತ್ತಿದೆ.

ಈ ಚರ್ಚೆಯ ಭಾಗವಾಗಿ ಸುಂದರ ರಾಯರು ಮಂಡಿಸಿದ ಅಭಿಪ್ರಾಯಕ್ಕೆ ಹರೀಶ್ ಕೇರ ಎತ್ತಿದ ತಕರಾರು ಇಲ್ಲಿದೆ.

ಈ ಚರ್ಚೆಯನ್ನು ಸುಂದರ ರಾಯರು ಇಲ್ಲಿ ಮುಂದುವರಿಸಿದ್ದಾರೆ..

ಎಚ್ ಸುಂದರ ರಾವ್

“ನಾಟಕದ ನಿಧಾನ ಗತಿ, ಆಧುನಿಕ ಬದುಕಿನ ವಿವೇಚನಾರಹಿತ ತೀವ್ರಗತಿಗೆ ಕನ್ನಡಿ ಹಿಡಿದಿರುವ ವ್ಯಂಗ್ಯ.”

ಇರಬಹುದು. ಆದರೆ ಈ ನಿಧಾನಗತಿ ಪ್ರೇಕ್ಷಕನಿಗೆ ಬೋರ್ ಆಗುತ್ತದೆ.

“ಅಲ್ಲಿ ನೋಡುಗನಿಗೆ ದೊರೆಯುವ ಅಪಾರ ಬಿಡುವಿನ ಮೌನದ ಅವಕಾಶ, ನಾಟಕಕ್ಕೆ ಸಂವಾದವೊಂದನ್ನು ತನ್ನೊಳಗೇ ತಕ್ಷಣ ರೂಪಿಸಿಕೊಳ್ಳುವ ಅವಕಾಶ.”

ವ್ಯಾಸರು ಭಾರತ ಹೇಳುವಾಗ ಗಣಪತಿ ಬರೆಯುವುದು. ನಿಬಂಧನೆ ಏನೆಂದರೆ, ವ್ಯಾಸರು ನಿಲ್ಲಿಸದೆ ಹೇಳುತ್ತ ಹೋಗಬೇಕು. ನಿಲ್ಲಿಸಿದರೆ ಗಣಪತಿ ಕೆಲಸಕ್ಕೆ ರಾಜೀನಾಮೆ! ಅದಕ್ಕೆ ವ್ಯಾಸರದೂ ಒಂದು ಷರತ್ತು: ನಾನು ನಿಲ್ಲಿಸದೆ ಹೇಳುತ್ತ ಹೋಗುತ್ತೇನೆ. ನೀನು, ನಾನು ಹೇಳಿದ್ದನ್ನು ಅರ್ಥ ಮಾಡಿಕೊಂಡು ಬರೆಯುತ್ತ ಹೋಗಬೇಕು. ಎಡೆಯಲ್ಲಿ ಒಮ್ಮೆ ವ್ಯಾಸರಿಗೆ ಸ್ವಲ್ಪ ನಿಲ್ಲಿಸಬೇಕಾಯಿತಪ್ಪ, ಆಗ ಅವರದ್ದೊಂದು ಉಪಾಯ: ಒಂದು “ಕೂಟಶ್ಲೋಕ” ಬಿಡುವುದು! ಗಣಪತಿ ಅದನ್ನು ಅರ್ಥ ಮಾಡಿಕೊಳ್ಳಲಿಕ್ಕೆ ತಿಣುಕುತ್ತಿರುವಾಗ ವ್ಯಾಸರು ಮುಂದಿನ ಶ್ಲೋಕಕ್ಕೆ ತಯಾರ್. ಏನು ನಮ್ಮದು ನಾಟಕವೋ, ಕೂಟಶ್ಲೋಕವೋ?

ಸಾಹಿತ್ಯ ಮೀಮಾಂಸೆಯಲ್ಲಿ ಧ್ವನಿ ಸಿದ್ಧಾಂತದ ಮೂಲದ ಬಗ್ಗೆ ಹೇಳುತ್ತಾ “ಸ್ಫೋಟ ಸಿದ್ಧಾಂತ”ದ ಪ್ರಸ್ತಾವ ಮಾಡುತ್ತಾರೆ (ವಿವರ ಬೇಕಾದರೆ ತೀನಂಶ್ರೀಯವರ ಭಾರತೀಯ ಕಾವ್ಯಮೀಮಾಂಸೆ ನೋಡಬಹುದು) “ಹೋಗು” ಎಂದು ಒಬ್ಬ ಹೇಳಿದ್ದರ ಅರ್ಥ ಇನ್ನೊಬ್ಬನಿಗೆ ಆಗಬೇಕಾದರೆ ಆ ಶಬ್ದದ ಪ್ರತಿಯೊಂದು ಅಕ್ಷರವನ್ನೂ ಒಂದು ಹದದ ವೇಗದಲ್ಲಿ ಉಚ್ಚರಿಸಬೇಕು. “ಹೋ” ಎಂದು ಹೇಳಿ ಎರಡು ನಿಮಿಷ ಬಿಟ್ಟು “ಗು” ಎಂದು ಹೇಳಿದರೆ ಅರ್ಥ ಸಂವಹನ ಆಗುವುದಿಲ್ಲ. ಆ ಸಿದ್ಧಾಂತವನ್ನು ಚಲನೆಗೂ ಅನ್ವಯಿಸಬಹುದೆಂದು ಕಾಣುತ್ತದೆ. ಒಂದು ಹದದ ವೇಗದ ನಡಿಗೆ ನಡಿಗೆ. ಒಂದು ಹೆಜ್ಜೆಯಿಟ್ಟು, ಎರಡು ನಿಮಿಷ ಬಿಟ್ಟು ಇನ್ನೊಂದು ಹೆಜ್ಜೆ ಇಟ್ಟರೆ, ಅದೆಂತದು?

ಸಾಮ್ಯುಯೆಲ್ ಬೆಕೆಟ್ “ವೇಟಿಂಗ್ ಫಾರ್ ಗೋಡೋ” ನಾಟಕ ಮಾಡಿದಾಗಲೂ ಈ ಬಗೆಯ ಪ್ರತಿಕ್ರಿಯೆ ಬಂದಿತ್ತು. ಇದೇನು ನಾಟಕ, ಕತೆಯಿಲ್ಲ, ಮಾತಿಲ್ಲ. ಮುಖ್ಯಪಾತ್ರ ರಂಗದ ಮೇಲೆ ಬರುವುದೇ ಇಲ್ಲ- ಎಂದೆಲ್ಲ ಕಮೆಂಟ್ ಬಂದಿತ್ತು.

“ವೇಟಿಂಗ್ ಫಾರ್ ಗೋಡೋ” ನಾಟಕದಲ್ಲಿ ಮಾತು ಇದೆ. ಚಲನೆಗೆ ಹದವಾದ ವೇಗ ಇದೆ.

* ಗುಲ್ಬರ್ಗ, ಬಿಜಾಪುರದ ಮಂದಿ ತಮ್ಮೂರಿನಲ್ಲಿ ಮಳೆ ಬಾರದೆ ದಕ್ಷಿಣ ಕನ್ನಡಕ್ಕೆ ಹೊಟ್ಟೆಯ ತುತ್ತಿಗಾಗಿ ಗುಳೆ ಬಂದಾಗ, ಅವರನ್ನು ದ.ಕ.ದ ಮಂದಿ ಸ್ವೀಕರಿಸಿದ ರೀತಿಯೇ ವಿಚಿತ್ರವಾಗಿತ್ತು. ಅವರ ಮಾತು, ವರ್ತನೆ ಎಲ್ಲ ಒರಟು, ಕ್ಲೀನಿಲ್ಲ, ಎಲ್ಲ ಕಡೆ ಗಲೀಜು ಮಾಡ್ತಾರೆ ಎಂದೆಲ್ಲ ಅಸಹನೆಯಿಂದ ಕಮೆಂಟ್ ಮಾಡಿ, ಅಟ್ಟುವ ಪ್ರಯತ್ನಗಳು ನಡೆದಿದ್ದವು. ರಾಯರ ಪ್ರತಿಕ್ರಿಯೆಯಲ್ಲಿ ಇದೇ ಅಸಹನೆ ನನಗೆ ಕಾಣುತ್ತಿದೆ. ನಮ್ಮದಲ್ಲದ ಸಂಸ್ಕೃತಿಯೊಂದರ ಮೂಲದಿಂದ ಬಂದ ಸಾಹಿತ್ಯ ಕೃತಿಯನ್ನು ಸಹನೆಯಿಂದ ನೋಡಿ, ಅಧ್ಯಯನ ಮಾಡಿ, ಅರ್ಥ ಮಾಡಿಕೊಳ್ಳುವ ತಾಳ್ಮೆ ಅಗತ್ಯ.

ನಾಟಕ ವಿದೇಶೀ ಮೂಲದ್ದು ಎಂಬುದು ನನ್ನ ಅಭಿಪ್ರಾಯಗಳಿಗೆ ಕಾರಣವಲ್ಲ.

* ನಾಟಕಕ್ಕೆ ಮಾತು ಅಗತ್ಯ ಎಂಬುದು ರಾಯರ ವಾದ. ಇದು ಯಕ್ಷಗಾನ ತಾಳಮದ್ದಳೆ ಕೇಳುಗರ ವಾದ. ಒಳ್ಳೆಯ ನಾಟಕಕ್ಕೆ ಮಾತು ಅನಿವಾರ್ಯವೇ ಅಲ್ಲ. ರಾಯರ ವಾದವನ್ನು ವಿಸ್ತರಿಸುವುದಾದರೆ, ಚಿತ್ರಜಗತ್ತಿನ ದಂತಕತೆಗಳಾದ ಚಾಪ್ಲಿನ್ನ ಮೂಕಿ ಚಿತ್ರಗಳು, ಕೆಲ ಭಾರತೀಯ ಮೂಕಿ ಚಿತ್ರಗಳು, ಪುಷ್ಪಕ ವಿಮಾನಂ ಮುಂತಾದ ಕ್ಲಾಸಿಕ್ಗಳೆಲ್ಲ ಬರಿ ತಿಪ್ಪೆ.

ಗೊಂದಲ ಮಾಡಿಕೊಳ್ಳಬೇಡಿ. ನಾಟಕ ಮಾಧ್ಯಮ ಬೇರೆ; ಸಿನಿಮಾ ಮಾಧ್ಯಮ ಬೇರೆ. ನಾನು ಡಾ. ಕೆ. ಮಹಾಲಿಂಗ ಭಟ್ಟರ ಹತ್ತಿರ ಈ ಪ್ರಶ್ನೆ ಎತ್ತಿದಾಗ ಅವರು “ಕಥಕ್ಕಳಿಯಲ್ಲೂ ಮಾತಿಲ್ಲವಲ್ಲ” ಎಂದರು. ನಾನು “ಅದಕ್ಕೊಂದು ಪರಂಪರೆಯಿದೆ” ಇದೆ ಎಂದೆ. “ಈ ತರದ ನಾಟಕಗಳಿಗೂ ಜಪಾನಿನಲ್ಲಿ ಪರಂಪರೆ ಇದೆ. ನಮ್ಮಲ್ಲಿ ಇಲ್ಲ ಅಷ್ಟೆ” ಅಂದರು. ಪರಂಪರೆ ಇರುವ ಅಭಿವ್ಯಕ್ತಿ ಮಾಧ್ಯಮಗಳಿಗೆ ಶೈಲೀಕೃತ ಅಭಿವ್ಯಕ್ತಿ ವಿಧಾನಗಳಿರುತ್ತಾವೆ. ಈ ವಿಧಾನವನ್ನು ಮಾತಿಗೆ ಪರ್ಯಾಯವಾಗಿ ಅಲ್ಲಿ ಅಳವಡಿಸಿಕೊಂಡಿರುತ್ತಾರೆ. ನಮ್ಮ ಯಕ್ಷಗಾನಕ್ಕಿರುವಂತೆ ಕಥಕ್ಕಳಿಗೂ ಒಂದು ಧಾರ್ಮಿಕ ಮಹತ್ವ ಇದೆ ಅಂದುಕೊಂಡಿದ್ದೇನೆ. ಈ ಧಾರ್ಮಿಕ ಮಹತ್ವವೂ ಅದು ಉಳಿದುಬರಲು ಕಾರಣ ಇರಬಹುದು. ಎಲ್ಲದಕ್ಕಿಂತ ಮುಖ್ಯವಾಗಿ, ಕಥಕ್ಕಳಿಗೆ ಹಿನ್ನೆಲೆಯಲ್ಲಿ ಹಾಡು ಇದೆ. ಭರತ ನಾಟ್ಯ, ಒಡಿಸ್ಸಿ ನೃತ್ಯಗಳಲ್ಲೂ ಹೀಗೆಯೇ.

* “ಕುರ್ಚಿಗೆ ಒದ್ದು ಎದ್ದು ಹೋಗಿಬಿಡೋಣ ಎಂದು ಉರಿಯುತ್ತಿತ್ತು”- ಯಾರು ಬೇಡ ಎಂದಿದ್ದರು ?

ಅಲ್ಲೇ ಉತ್ತರ ಇದೆ.

* ನಾಟಕದ ಒಳ್ಳೆಯ ಪ್ರೇಕ್ಷಕರಿಗೆ ಹೊಸ ಪ್ರಯೋಗಗಳ ಬಗ್ಗೆ ಗೌರವ ಇರುತ್ತದೆ, ಅಸಹನೆ ಅಲ್ಲ.

ಪ್ರಯೋಗದ ಗುಣಮಟ್ಟ ಪ್ರತಿಕ್ರಿಯೆಯ ಸ್ವರೂಪವನ್ನು ನಿರ್ಧರಿಸುತ್ತದೆ. “ನಿಮಗೆ ನಾಟಕ ಇಷ್ಟವಾಗದಿದ್ದರೂ, ನಿಮ್ಮ ಪ್ರತಿಕ್ರಿಯೆ ನಮಗೆ ಬೇಕು” ಎಂದು ಅಲ್ಲಿ ಹೇಳಿದ್ದರು

 

‍ಲೇಖಕರು G

17 May, 2011

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading