ದೇಹ ಸಿರಿ
ಮೋಹನ್ ವಿ ಕೊಳ್ಳೇಗಾಲ
ನಾಳೆ ರಜೆ ಕೊಡಲಾಗುವುದಿಲ್ಲವೆಂದು ಚೀರಿಕೊಂಡ ಬಾಸಿನ ಮಾತನ್ನೂ ಧಿಕ್ಕರಿಸಿ, ಮರೆತು, ಖುಷಿಯಿಂದ ಓಡೋಡಿ ಮನೆಗೆ ಬಂದೆ. ಹೆಂಡತಿ ತುಸು ನಾಚಿಕೊಂಡಳು. ಬಾಣಂತಿ ಕೊಠಡಿಗೆ ಕಾಲಿಡುವಷ್ಟರಲ್ಲಿಯೇ ‘ಕಾಲು ತೊಳೆಯದೇ ಒಳಗೆ ಬರಬೇಡಿ ಬಾವ, ಅದೆಷ್ಟು ಭೂತ ಚೇಷ್ಟೆಗಳು ಆ ಪಾದಕ್ಕಂಟಿರುವವೋ?’ ಎಂದಳು ನಾದಿನಿ.
‘ಅದೇನು ಜನಗಳೋ, ನಿಮ್ಮ ಮನೆ ಭೂತಾಯಿಯ ಮೇಲೇ ಇಲ್ಲ, ಆಕಾಶದಲ್ಲಿ ಕಿರುಗುಟ್ಟುತ್ತಿದ್ದೀರಿ, ನೀನು, ನಿಮ್ಮಕ್ಕ ಇರುವಾಗ ಈ ಮನೆಗೆ ದೆವ್ವ ಬರುವುದುಂಟೆ? ಅದೇನು ಕಟ್ಟುನಿಟ್ಟೋ’ ಎಂದೆ.
‘ರೀ…’ ಎಂದಳು ಅವಳು
‘ಗೊತ್ತಾಯ್ತು ಕಣೆ…’ ಎಂದವನೇ ಕಾಲು ತೊಳೆದುಕೊಂಡೆ. ನಾದಿನಿ ಒಳಗೊಳಗೆ ನಕ್ಕಳು.
ಒಳಗೆ ಓಡೋಡಿ ಬಂದವನೇ ನನ್ನ ಮಗುವನ್ನು ನೋಡಿ ಒಮ್ಮೆಲೇ ಪುಳಕಗೊಂಡೆ. ಮೈ ಕೈ ಸವರಿದೆ. ಒಮ್ಮೆಲೆ ನನ್ನೊಳಗೆ ನನ್ನದೇ ಜೀವ ತುಂಬಿಕೊಂಡು, ತವಕಗೊಂಡು, ಅದರ ಸ್ಪರ್ಶಕ್ಕೆ ಪುಳಕಿತಗೊಳ್ಳುವುದರೊಂದಿಗೆ ಬಾಂಧವ್ಯ ಭಾವ ಲೋಕದಲ್ಲೊಮ್ಮೆ ಅನುರಕ್ತಗೊಂಡು ತೇಲಾಡಿದೆ.
ನನ್ನಾಕೆ ಟೀ ಮಾಡಿ ತರಲು ಹೊರ ಹೋದಳು. ಪಿಣಿ ಪಿಣಿ ಕಣ್ಣು ಬಿಟ್ಟ ಕಂದಮ್ಮನನ್ನು ನೋಡಿದೆ. ಇದೆಲ್ಲಿತ್ತಪ್ಪ ಇಷ್ಟು ದಿನ ಎಂದುಕೊಂಡೆ? ಇಂದು ಕಂಡು ನನ್ನ ಮನಸ್ಸನ್ನರಳಿಸಿದೆ ಎಂದು ಕೆನ್ನೆಗೆ ತೃಪ್ತಿಯಾಗುವವರೆವಿಗೂ ಮುತ್ತಿಕ್ಕಿದೆ. ಮೂಗು ಮಾತ್ರ ಸತ್ತುಹೋದ ನಮ್ಮಪ್ಪನಂತೇ ಇದೆ. ಇದ್ದಕ್ಕಿದ್ದಂತೆ ಅಳಲು ಪ್ರಾರಂಭಿಸಿತು. ಪ್ರಯಾಣ ಮಾಡಿಬಂದು ಸುಸ್ತಾಗಿರುವವನು ನಾನಲ್ಲವೇ? ನಾನತ್ತರೆ ಅದಕ್ಕೊಂದು ಕಾರಣವಿದೆ. ಈ ಪಾಪುವೇಕೆ ಈ ರೀತಿ ಚೀರುತ್ತಿದೆ, ಇದು ಇಲ್ಲಿಗೆ ಸರಾಗವಾಗಿ ಬಂತೇ, ಇಲ್ಲ ಸೋತು ಸೋತು ಗೆದ್ದು ಬಂತೆ ಎಂದುಕೊಳ್ಳುವಷ್ಟರಲ್ಲಿ, ಮುಂದೆ ಬಿದ್ದಿದ್ದ ಪುಸ್ತಕದಲ್ಲಿ ಈ ಸಾಲುಗಳು ಕಾಣುತ್ತಿದ್ದವು
ಕತ್ತಲ ಕೋಟೆಯಲ್ಲಿ ಯುದ್ಧ
ಕೋಟಿ ಕೋಟಿ ಜನ
ಮುತ್ತಲು
ಒಬ್ಬ ಗೆದ್ದು ಬಂದ ಧೀರ
ಸುತ್ತ ಕತ್ತಲು
ಅಲ್ಲೊಬ್ಬಳಿದ್ದಳು ನೀರೆ
ಕಾದು ಕೂಡಲು
ಅಂಡಾಣು ವೀರ್ಯಾಣು
ತಬ್ಬಲು
ಹೆತ್ತವರು ಮೈ ಹಬ್ಬಲು
ಅದೊಂದು ದ್ರಾಕ್ಷಿ ಮುದ್ದೆ
ಬೆಳೆದು ಚದುರೆ ನಾನಿದ್ದೆ
ಹೃದಯ ಕಪಾಟು
ತರೆದು
ನೆತ್ತರ ಸೇದದರೊಳಗೆ
ನಗು ಅಳು ಸುರಿದು
ಏನೋ ನಿಂತಿದೆ ನೋಡು
ಗೌಣವಲ್ಲ ಹಿಡಿ ಅದರ ಜಾಡು
ಓಹೋ, ಈತ ಯುದ್ಧ ಮಾಡಿ ಗೆದ್ದು ಬಂದಿರುವ ಧೀರನೇ ಸರಿ. ನಾನು, ಹೆಂಡತಿ ಮೈ ಮರೆತಿದ್ದಾಗ ಯಾರೋ ಸ್ವಯಂವರ ಏರ್ಪಡಿಸಿದ್ದಾರೆ.
ಅಷ್ಟಕ್ಕೆ, ಮಗು ಮೃದುವಾಗಿ ಒದೆಯಿತು. ಒದೆಸಿಕೊಳ್ಳುವುದರಲ್ಲೂ ಇದೆಂಥ ಸುಖವಿದೆ ಎಂದು ಖುಷಿಯಾಯಿತು. ನೋವಾಯಿತೇನೋ ಎಂದು ಅದರ ಮೃದು ಪಾದವನ್ನು ಅಷ್ಟೇ ಮೃದುವಾಗಿ ಒತ್ತಿದೆ. ಕೈಗೆ ಹೆಬ್ಬೆರಳು ಸಿಕ್ಕಿತು. ಆಹಾ! ಈ ಹೆಬ್ಬೆರಳು ನೋಡಿದರೆ ಸ್ವಚ್ಚ ಮತ್ತು ನುಣುಪು ಗೋಡೆಗೆ ಬಡಿದ ಬೆಣೆಯಂತಿದೆ, ಇದೇನಿದು ಎಕ್ಸ್ಟ್ರಾ ಫಿಟ್ಟಿಂಗು? ನನ್ನ ಹೆಬ್ಬೆಟ್ಟು ಆ ಹೆಬ್ಬೆರಳು ಹಿಡಿದುಕೊಂಡಿದ್ದನ್ನು ಮರೆತು ಯೋಚಿಸಿದಾಗ
ಜಗದಲ್ಲಿ ನೀ ಜಂಗಮ
ಚಲಿಸು ಚಲಿಸು
ನಿಲ್ಲದೆಲ್ಲವ ಆವರಿಸು
ಚಿಂತೆ ಬೇಡ
ಮುಂದಿನ ದಾರಿ
ನೋಡ
ನಿನಗೇಕೀ
ದೇಹದ ತೂಕ
ಹೊರುವುದು
ಹೆಬ್ಬೆರಳ ಕಾಯಕ
ಹೆಬ್ಬೆರಳಿಗೆ ದೇಹ ಕೆತ್ತನೆಯೋ
ದೇಹಕ್ಕೆ ಹಬ್ಬೆರಳೋ
ಯೋಚಿಸಿ ಒಮ್ಮೆ ನಕ್ಕುಬಿಡು
ಕಳೆದ ತೇದಿಯಲ್ಲಿ ಹೆಬ್ಬೆರಳ ಮೇಲೆ ಲಾರಿ ಹರಿದು, ಕೊನೆಗೆ ಹೆಬ್ಬೆರಳು ತೆಗೆಸಿಕೊಂಡು, ನಡೆದರೆ ಕೆಳಗೆ ಬೀಳುವ ತಮ್ಮನ ನೆನಪಾಗಿ ಬೇಸರಗೊಂಡೆ. ಹೆಬ್ಬೆರಳೇ ನಿನೆಲ್ಲರಲ್ಲೂ ಇರಬೇಕೆಂದು ಕೈ ಮುಗಿದು ಬೇಡಿಕೊಂಡೆ. ಅದಿರಲಿ, ಹೆಬ್ಬೆರಳ ಜೊತೆಗೆ ಇದೇನಿದು ನಾಲ್ಕು ಸಣ್ಣ ಬೆರಳುಗಳು. ಛೆ! ಇವು ಬೇಡವಾಗಿತ್ತಲ್ಲವೇ? ಬೇಡವೆಂದರೆ ಈಗೇನು ಕತ್ತರಿಸಿದರೆ ಈ ಕಂದಮ್ಮ ಸುಮ್ಮನಿರುವುದೇ? ಹೊತ್ತು ತಂದಿದೆ, ಹೊತ್ತುಕೊಂಡು ಹೋಗಲಿ ಎಂದುಕೊಳ್ಳುವಷ್ಟರಲ್ಲಿ ಮನೆಯ ಹೊರಗೆ ಏನೋ ‘ಧಡಾರ್’ ಎಂಬ ಶಬ್ದ ಕೇಳಿಸಿತು. ಗಾಬರಿಗೊಂಡು ‘ಏನಾಯಿತೂ’ ಎಂದು ಚೀರಿ ಬಂದು ನೋಡಿದರೆ, ಮನೆ ಮುಂದಿನ ಚಪ್ಪರ ಗಾಳಿಗೆ ನಿಲ್ಲದೆ ಉದುರಿ ಬಿದ್ದಿದೆ.
‘ಅಪ್ಪನಿಗೆ ಹೇಳಿದ್ದೆ, ಇನ್ನೊಂದೆರಡು ಕಂಬವಾದರೂ ಸಿಕ್ಕಿಸು ಎಂದು’ ಎಂದು ಹೆಂಡತಿ ಗೊಣಗಿಕೊಂಡಳು. ಏನೋ ಹೊಳೆದಂತಾಗಿ, ಹೆಂಡತಿಗೊಂದು ಕವಿತೆ ಕಟ್ಟಿ ಮಗುವಿನ ಬೆರಳಿಗರ್ಪಿಸಿದೆ.
ಚಪ್ಪರ ಕಟ್ಟಿದ ಅಪ್ಪ
ಕಂಬವೊಂದೆ
ಬೆಪ್ಪ
ಮತ್ತೆರಡೂರುಗೋಲ
ನೆಟ್ಟಿದ್ದರೆ
ತಡೆಯಬಹುದಿತ್ತೀ ತಪ್ಪ
ಹೆಬ್ಬೆರಳ ನೋವ
ನುಂಗಲೆಂದು ಸಾವ
ಕಿರುಬೆರಳ
ಜೊತೆಗಾರರು
ದಾರಿಯಲ್ಲಿ ಕಾಲಿಗಂಬು
ಸಿಗದಿರೆ ಸಾಕು
ಬೆಳೆದುಗುರದರ ಚಾಕು
ಮಗು ನಗುತ್ತಿತ್ತು. ನಾನೂ ಮಗುವನ್ನು ನೋಡಿ ನಗುವಾಗ ಅದರ ಕಣ್ಣಲ್ಲಿ ನನ್ನ ಬಿಂಬವೇ ಕಾಣುತ್ತಿತ್ತು. ನಾನು ಮಗುವಾಗಿದ್ದಾಗ ಅಪ್ಪನೂ ಹೀಗೆಯೇ ಭಾವಿಸಿರಬಹುದು. ನಾನು ಹೇಗೆ ಮೂಗು ಅವನಂತೆಯೇ ಇದೆ ಎಂದುಕೊಂಡನೋ ಹಾಗೆ ಅವನೂ ನನ್ನ ಮೂಗನ್ನು ನೋಡಿ ಅಜ್ಜನನ್ನು ನೆನಪಿಸಿಕೊಂಡಿರಬಹುದು. ‘ಸತ್ತುಹೋದರವರು’ ಎನ್ನುವುದೇ ತಪ್ಪೇನೋ? ನಮಗರಿಯದಂತೆ, ಆದರೆ ಕಾಣುವಂತೆ ಈ ರೀತಿಯ ಕುರುಹುಗಳನ್ನು ಬಿಟ್ಟುಹೋಗುವರಲ್ಲವೇ? ಮುಂದಿನ ಬಾಗಿಲಲ್ಲಿ ಮರೆಯಾಗಿ ಹಿತ್ತಲ ಬಾಗಿಲಲ್ಲಿ ಬರುವರಲಲ್ಲವೇ ಎಂದೆನಿಸಿತು.
ಓಹೋ…! ಮಗುವಿನ ಬಾಯಿಯಲ್ಲಿ ಹಲ್ಲೇ ಇಲ್ಲವಲ್ಲ. ನಂತರ ಬೆಳೆಯುವುದಾದರೂ ಇತ್ತು, ಜೊತೆಗೆ ಜೋಡಿಸಿ ಕಳುಹಿಸುವುದಲ್ಲವೇ ಎಂದುಕೊಂಡೆ. ‘ಮಗುವಿಗೆ ಹಾಲು ಕುಡಿಸಿದ್ದಿಯೇನೆ?’ ಮತ್ತೆ ನಾದಿನಿ ಕೂಗಿಕೊಂಡಳು. ‘ಈಗ ತಿಳಿಯಿತು ನೋಡಿ, ಎದೆ ಚೀಪುವ ಪೋರ, ಹಲ್ಲಿದ್ದರೆ ಕಚ್ಚೇ ಬಿಡುತ್ತಾನೆ. ಈ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆಯೇ ಈತ ಇಲ್ಲಿಗೆ ಬಂದಿರಬಹುದು. ಹಾಲ್ದುಟಿಯ ನಗು ನನ್ನಲ್ಲಿ ಖುಷಿ ಉಕ್ಕಿಸಿತು. ಏನೂ ಅರಿಯದ ಈ ಕಂದಮ್ಮಗಳು, ಇನ್ನು ಕೆಲವೇ ದಿನಗಳಲ್ಲಿ ಎಲ್ಲವನ್ನೂ ತಿಳಿದುಕೊಳ್ಳುತ್ತವೆ. ವಿಶಾಲ ಚಿಂತನೆಯ ಸೊಗಡಿನಲ್ಲೇ ಬೆಳೆಯುತ್ತಿದ್ದರೂ ಅಲ್ಪತ್ವಕ್ಕೆ ಹೊಂದಿಕೊಳ್ಳುತ್ತವೆ. ಮನಸ್ಸಿನಲ್ಲಿ ರಾಡಿಯೆದ್ದು ಅರಳಿದ ಜೀವ ಮುರುಟಿಕೊಳ್ಳುತ್ತವೆ ಎಂದುಕೊಂಡು ಆತನೆಡೆಗೆ ತಿರುಗುವಷ್ಟರಲ್ಲಿಯೇ ತನ್ನ ಬೊಚ್ಚುಬಾಯಿ ಬಿಟ್ಟ.
ಮತ್ತೆ ಆತನ ಬಾಯಿ ನೋಡಿದೆ. ಕನ್ನಡಿಯಲ್ಲಿ ನನ್ನ ಮುಖವನ್ನೊಮ್ಮೆ ದುರುಗುಟ್ಟಿಕೊಂಡು ನೋಡುತ್ತ ಹಲ್ಲು ಕಿರಿದೆ. ಬೆನ್ನ ಹಿಂದೆ ಒಂದು ಹಳೆಯ ಮಿಕ್ಸಿ ಕಾಣುತ್ತಿತ್ತು.
ನಾಲಗೆ ರುಚಿ ತೀಟೆಗೆ
ಆಹಾರದ ತುಂಡು
ಜಗಿದ ಹಲ್ಲು
ಕಿಣ್ವ ಸುರಿಸಿದ ಜೊಲ್ಲು
ಜರಿದ ಜಠರ
ಪುಡಿಗೊಂಡ ಅನ್ನ ಸಾಕ್ಷಿ
ಇದಲ್ಲವೇ ಮಿಕ್ಸಿ!
ನೋಡಿ, ಬಾಯಿ ನೋಡಿಕೊಂಡೆ ಮಿಕ್ಸಿ ಕಂಡು ಹಿಡಿದಿದ್ದು. ‘ನನ್ನ ಮಗು ನನ್ನ ಪ್ರಾಣ’ವೆಂದೆನಿಸಿತು. ತಬ್ಬಿಕೊಂಡೆ. ಒದ್ದಾಡಿ, ಕೈಕಾಲು ಅದುರಿಸತೊಡಗಿದ. ಮತ್ತೆ ಮಲಗಿಸಿಬಿಟ್ಟೆ ನನ್ನವಳು ಕೂಗಿಕೊಳ್ಳುತ್ತಾಳೆಂಬ ಭ್ರಮೆಯಿಂದ. ಒಹೋ, ನಾನು ಮುಟ್ಟಿದಾಕ್ಷಣ ಒದ್ದಾಡಿಕೊಂಡಿತು, ಅಂದರೆ…. (ಮುಂದುವರೆಸೋಣ… 🙂 )



“ಈಗ ತಿಳಿಯಿತು ನೋಡಿ, ಎದೆ ಚೀಪುವ ಪೋರ, ಹಲ್ಲಿದ್ದರೆ ಕಚ್ಚೇ ಬಿಡುತ್ತಾನೆ” ಈ “ಸಾಲಿನ ಪ್ಯಾರ” ದ ಒಪ್ಪಂದದ ಮುಗ್ದತೆ ಹಿಡಿಸಿತು . ನಿಮ್ಮ ಬ್ಲಾಗ್ ಸದಾ ಓದ್ತಾ ಇರ್ತೀನಿ . ಹೀಗೆ ಮುಂದುವರೆಯಲಿ ನಿಮ್ಮ ಬರವಣಿಗೆ .
Nice Mohan.. As usual.. U can go to innernes of innernes
ಕತ್ತಲ ಕೋಟೆಯಲ್ಲಿ ಯುದ್ಧ
ಕೋಟಿ ಕೋಟಿ ಜನ
ಮುತ್ತಲು
– ಕವನಗಳು ಇಷ್ಟವಾದವು, ಆದರೂ ಹೆಬ್ಬೆರಳಿಗೆ ದೇಹ ಕೆತ್ತನೆಯೋ, ದೇಹಕ್ಕೆ ಹಬ್ಬೆರಳೋ ಅನ್ನುವಂತೆ ಲೇಖನಕ್ಕೆ ಕವನವೋ ಕವನಕ್ಕೆ ಲೇಖನವೋ ಎನ್ನಿಸಿ – ಇಷ್ಟವಾಯಿತು…
ಮೋಹನಣ್ಣ ಶರಣು ನಿಮ್ಮ ಕಾವ್ಯ ಪ್ರೌಢಿಮೆಗೆ. ಪ್ರಗಾಥಗಳ ಬಗ್ಗೆ ಕೇಳಿದ್ದೆ, ಸಂಪೂ ಕಾಲಂ ನಲ್ಲಿ ದೊ.ರಂ.ಗೌ. ರ ಪ್ರೀತಿ ಪ್ರಗಾಥದ ಬಗ್ಗೆ ಸೂಚ್ಯವಾದ ವಿವರಣೆ ಓದಿದ್ದೆ. ಆಗ ನನಗೆ ಅನಿಸಿದ್ದು ಪಾಶ್ಚಾತ್ಯರಿಂದ ಬಂದ ಈ ಕಾವ್ಯ ಪ್ರಕಾರವನ್ನು ಬಳಸಿಕೊಂಡು ಕನ್ನಡದಲ್ಲೂ ಸಾಕಷ್ಟು ಸಾಹಿತ್ಯ ಕೃಷಿ ಆಗಬೇಕು. ಈ ಪ್ರಕಾರವನ್ನು ಬಿ.ಎಂ.ಶ್ರೀ, ದೊ.ರಂ.ಗೌ. ಮತ್ತು ಮೊದಲಾದವರೂ ಸಾಕಷ್ಟು ಕನ್ನಡಿಗರ ಮನೆ ಮುಟ್ಟಿಸಿದ್ದಾರೆ ಆದರೆ ಆ ಪ್ರಕಾರವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾದರೆ ಅವುಗಳನ್ನು ಮುಂದುವರೆಸುವ ಕೊಂಡಿಗಳು ಬೇಕು. ಅಂತಹ ಒಂದು ಪ್ರಯತ್ನ ನಿಮ್ಮ ಕಥಾನಕದಲ್ಲಿ ಗಮನಿಸಿದ್ದೇನೆ. ಮನಸ್ಸಿಗೆ ಬಹಳಾ ಹತ್ತಿರವಾದ ವಿಷಯವನ್ನಿಟ್ಟು ಬಹಳ ಅಚ್ಚುಕಟ್ಟಾಗಿ ಬರೆದಿದ್ದೀರಿ, ಮುಂದುವರೆಸಿ ಈ ಪ್ರಗಾಥವನ್ನು. ಓದಿಸಿಕೊಂಡು ಹೋಗುತ್ತದೆ. ಒಮ್ಮೆ ಬರಹಗಾರನೂ ಮತ್ತೊಮ್ಮೆ ಆ ಬೊಚ್ಚು ಬಾಯಿಯ ಮುದ್ದು ಕಂದನೂ ಆಗುತ್ತಾನೆ ಓದುಗ. ಬಹಳ ಹಿಡಿಸಿತು.