ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾನು ಅವರಿಂದ ಭೂ ವಿಜ್ಞಾನ ಕಲಿತೆ..

ಪ್ರೊ. ಹೆಜಮಾಡಿ ಗಂಗಾಧರ ಭಟ್
ಸಾಗರ ಭೂವಿಜ್ಞಾನ ವಿಭಾಗ, ಮಂಗಳೂರು ವಿ ವಿ
ಕೆ. ಎಸ್.ನಿಸಾರ್ ಅಹ್ಮದ್ ಅವರು ಕನ್ನಡದ ಶ್ರೇಷ್ಠ ಕವಿ, ಸಾಹಿತಿ ಮಾತ್ರವಲ್ಲದೆ ಅವರೊಬ್ಬ ಭೂವಿಜ್ಞಾನದ ಉಪನ್ಯಾಸಕರೂ ಆಗಿದ್ದರು. ಅವರು ಒಬ್ಬ ಶ್ರೇಷ್ಠ ಸಾಹಿತಿಯಲ್ಲದೆ ಭೂವಿಜ್ಞಾನಿಯೂ ಆಗಿದ್ದರು. ಕೆ. ಎಸ್ ನಿಸಾರ್ ಅಹ್ಮದ್ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಆಗಿನ ಮೈಸೂರು ಗಣಿ ಮತ್ತು ಭೂವಿಜ್ಞಾನ (ಈಗಿನ ಕರ್ನಾಟಕ ಗಣಿ ಮತ್ತು ಭೂವಿಜ್ಞಾನ ) ಇಲಾಖೆಯಲ್ಲಿ ಸಹಾಯಕ ಭೂವಿಜ್ಞಾನಿಯಾಗಿ ಗುಲ್ಬರ್ಗದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಅವರು ಭೂವಿಜ್ಞಾನ ಉಪನ್ಯಾಸಕರಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜು, ಚಿತ್ರದುರ್ಗ ದ ಸರಕಾರಿ ಕಾಲೇಜು, ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಮತ್ತು ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜು ಗಳಲ್ಲಿ ಕೆಲಸ ಮಾಡಿದ್ದರು.
ಅವರು ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನ ಉಪನ್ಯಾಸಕರಾಗಿದ್ದಾಗ ನಾನು ಅವರ ವಿದ್ಯಾರ್ಥಿಯಾಗಿದ್ದೆ. ಅಂದರೆ 1981 ರಿಂದ 1984ರ ಅವಧಿ ಯಲ್ಲಿ ನಾನು ಅವರಿಂದ ಭೂವಿಜ್ಞಾನ (Geology) ವಿಷಯ ಕಲಿತಿದ್ದೆ. ಬಹಳ ಚೆನ್ನಾಗಿ ಭೂಗರ್ಭ ಶಾಸ್ತ್ರ ವನ್ನು ನಮ್ಮ ಅಂದಿನ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು.
ಭೂಮಿಯ ಉಗಮದಿಂದ ಹಿಡಿದು ಭೂಮಿಯ ರಚನೆ, ಖನಿಜಗಳು, ಕಲ್ಲುಗಳು, ಭೂಮಿಯ ಒಳಗಡೆಯ ಮತ್ತು ಹೊರಗಡೆಯ ಕಲ್ಲುಗಳು, ಖನಿಜಗಳು ಮುಂತಾದ ವಿಷಯ ಗಳ ಬಗ್ಗೆ ಬಹಳ ಸ್ವಾರಸ್ಯಕರವಾಗಿ ವಿಷಯ ಮನದಟ್ಟು ಮಾಡುತಿದ್ದರು.
ನಾನು ಎರಡನೆಯ ಬಿ. ಎಸ್ಸಿ. ಪದವಿಯಲ್ಲಿ ಓದುತ್ತಿದ್ದಾಗ ‘ಅಮ್ಮ ಆಚಾರ ಮತ್ತು ನಾನು’ ಎಂಬ ಅವರ ಗದ್ಯ ಕೃತಿ ಕನ್ನಡ ಭಾಷೆಯಲ್ಲಿ ಒಂದು ಪಾಠವಾಗಿತ್ತು. 1983/1984ರ ಅವಧಿಯಲ್ಲಿ ಅವರು ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಯಾಕೆಂದರೆ ಸರಕಾರಿ ವಿಜ್ಞಾನ ಕಾಲೇಜು ಮತ್ತು ಕನ್ನಡ ಸಾಹಿತ್ಯ ಅಕಾಡೆಮಿಗೆ ಸಂಬಂಧಪಟ್ಟ ಕಟ್ಟಡಗಳು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿ ಅಕ್ಕಪಕ್ಕದಲ್ಲಿ ಇದ್ದವು. ಭೂವಿಜ್ಞಾನ ತರಗತಿ ಮತ್ತು ಅವರು ಅಧ್ಯಕ್ಷರಾಗಿ ಕೆಲಸ ಮಾಡುತಿದ್ದ ಕಚೇರಿ ಎರಡೂ ಅಕ್ಕ ಪಕ್ಕದಲ್ಲಿ ಇದ್ದವು. ಅಂದರೆ ಹಲವಾರು ಬಾರಿ ಅವರು ಪಕ್ಕದ ಕಟ್ಟಡ ದ ತಮ್ಮ ಕಚೇರಿಯಿಂದಲೇ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸುತ್ತಿದ್ದುದು ಇನ್ನೂ ನನ್ನ ಸ್ಮೃತಿ ಪಟಲದಲ್ಲಿ ಇದೆ.
ಸುಮಾರು 1983/1984, ರ ಸಮಯದಲ್ಲಿ ಆಗ ಬೆಂಗಳೂರು ದೂರದರ್ಶನ ಪ್ರಾರಂಭವಾಗಿತ್ತಷ್ಟೆ. ಅವರ ದೂರದರ್ಶನ ದ ಸಂದರ್ಶನದ ಬಗ್ಗೆ ನಾನು ಅವರಲ್ಲಿ ಸರ್ ನಿನ್ನೆ ಟಿ. ವಿ. ಯಲ್ಲಿ ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಹೇಳಿದ್ದೆ. ಅದಕ್ಕವರು ತುಂಭಾ ಹಾಸ್ಯಮಯವಾಗಿ ‘ನಿನ್ನೆ ನೀವು ನೋಡಿದ್ದು ಸಾರ ಇಲ್ಲದಿರುವ ಅಹ್ಮದ್, ನಾನು ಕೆ. ಎಸ್. ನಿಸಾರ್ ಅಹ್ಮದ್’ ಎಂದು ಹೇಳಿದ್ದರು. ಭೂಗರ್ಭಶಾಸ್ತ್ರ ದ ಪಾಠ ಮಾಡುವಾಗಲೂ ಕನ್ನಡದಲ್ಲಿ, ಭೂಮಿಯ ಬಗ್ಗೆ ಬಹಳ ಸ್ವಾರಸ್ಯವಾಗಿ ವಿಷಯ ಮನದಟ್ಟು ಮಾಡುತ್ತಿದ್ದರು. ಅವರೊಬ್ಬ ಉತ್ತಮ ವಾಗ್ಮಿಯೂ ಆಗಿದ್ದರು.

‍ಲೇಖಕರು avadhi

6 May, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading