
ಟಿ ಎನ್ ಸೀತಾರಾಂ
‘ನಮ್ಮೊಳಗೊಬ್ಬ ನಾಜೂಕಯ್ಯ’ ನಾಟಕದ ಚಿತ್ರಗಳು
ಕೃಪೆ: ರಂಗಭೂಮಿ ವಿಶ್ಲೇಷಣೆ
ಗಾಜನ್ನು ಚೂರಿಯ ಆಕಾರದಲ್ಲಿ ಚೂಪಾಗಿ ಕತ್ತರಿಸಿ ಮುಕ್ಕಾಲು ಅಡಿಯ ಚೂರಿಯನ್ನು ನನ್ನ ಸೊಂಟದಲ್ಲಿ ಸಿಕ್ಕಿಸಲಾಗಿತ್ತು. ರೇಷ್ಮೆ ಪಂಚೆ ಉಟ್ಟಿದ್ದೆ.. ನನ್ನದು ರಾಜಕುಮಾರನ ಪಾತ್ರ….. ಅಲ್ಲಿ ಮಂಡಿಯೂರಿ ಕೂರಬೇಕಾಗಿತ್ತು… ಕೂತೆ…
ಕೂತ ತಕ್ಷಣ ಗಾಜಿನ ಚೂರಿ ಫಟ್ಟನೆ ಮುರಿಯಿತು.. ನನ್ನ ಒಳತೊಡೆಗೆ ಚೂಪಾದ ಭಾಗ ಚುಚ್ಚಿಕೊಂಡು ಕೂತಿತು… ಯಾರಿಗೂ ಗೊತ್ತಾಗಲಿಲ್ಲ… ನಾನು ಕಿರಿಚಿ ಕೊಳ್ಳುವಂತಿರಲಿಲ್ಲ… ಸಂದರ್ಭ ಹಾಗಿತ್ತು..
ರಕ್ತ ಹರಿದು ತೊಡೆಯ ಮೂಲಕ ನೆಲದ ಮೇಲೆ ತೊಟ್ಟಿಕ್ಕತೊಡಗಿತು…. ನಾನು ಮಾತು ನಿಲ್ಲಿಸಲಿಲ್ಲ.. .ನೋವಿನಲ್ಲೂ ಹೇಳುತ್ತಾ ಹೋದೆ…
ಯಾರೋ ಅದನ್ನು ಕಂಡವರು ಕೂಗಿಕೊಂಡರು… ಅಲ್ಲಿಗೆ ನಾಟಕ ಮುಗಿದು ಹೋಯಿತು… ಇದು ನಾನು ಮೂರನೆಯ ಕ್ಲಾಸಿನಲ್ಲಿ ಓದುವಾಗ ಮಾಡಿದ ನಾಟಕದ ಅನುಭವ..
ಆ ನಾಟಕ ಮಾಡಿದ್ದು ನಮ್ಮ ಮನೆಯ ವರಾಂಡಾದಲ್ಲಿ… ಬೀದಿಯ ಹುಡುಗರು, ಅವರ ಮನೆಯವರು ಬಂದಿದ್ದರು.. entry fee ಐದು ಬಳಪಗಳು…
ನನಗೆ photo ಅಂಗಡಿಯಲ್ಲಿ ಗಾಜಿನ ಚೂರಿ ತಯಾರು ಮಾಡಿಸಿಕೊಂಡು ಬಂದದ್ದು ನನ್ನ ಸ್ನೇಹಿತರು… ರೇಷ್ಮೆ ಸೀರೆಯನ್ನು ಪಂಚೆಯಂತೆ ಉಡಿಸಿದ್ದು ನಮ್ಮ ತಾಯಿ…
ನನ್ನ ತಂದೆ ತಮ್ಮ ಮದುವೆಗೆ ಮುಂಚೆ ಕೆಲವು ತಿಂಗಳ ಯಾವದೋ ನಾಟಕದ ಕಂಪೆನಿ ಸೇರಿಕೊಂಡು ರಾವಣ, ಕಂಸ, ಹಿರಣ್ಯ ಕಶ್ಯಪು ಪಾತ್ರಗಳನ್ನು ಮಾಡುತ್ತಿದ್ದರಂತೆ… ಮನೆಯಲ್ಲಿ ಅದನ್ನು ಅದ್ಭುತವಾಗಿ ಅಭನಯಿಸಿ ನಮ್ಮನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತಿದ್ದರು… ನಮ್ಮ ಅಜ್ಜಿ ಸುಬ್ಬಮ್ಮತ್ತೆಗೆ ಆ ಕಾಲದ ಎಲ್ಲ ನಾಟಕಗಳೂ ಬಾಯಿಪಾಠದಂತೆ ನೆನಪಿತ್ತು… ಆ ಸೀಸಪದ್ಯ ಗಳು, ಕಂದಪದ್ಯಗಳು ಎಲ್ಲಾ.. ಮನೆಯಲ್ಲಿ ಹಾಡುತ್ತಿದ್ದರು…
ಇದೆಲ್ಲದರ ಫಲ ನಾನ ಆ ಮೊದಲ ನಾಟಕ ಮಾಡಿ ಬಳಪ ಮತ್ತು ಗಾಯ ಸಂಪಾದಿಸಿದ್ದು…
ಅದು ನನ್ನನ್ನು ಇವತ್ತು ಈ ಸ್ಥಿತಿ ಮುಟ್ಟಿಸಿದೆ… ಇದರ ಹಿಂದೆ ಸಂಭ್ರಮವಿದೆ, ಚಪ್ಪಾಳೆಯಿದೆ, ಸಾಲವಿದೆ, ಹಣವಿದೆ, ಕಥೆಗಳಿವೆ, ಭಗ್ನ ಕನಸುಗಳಿವೆ… ಇವೆಲ್ಲಾ ನನ್ನನ್ನು ನಾನು ಆಗಿಸಿವೆ..
ವಿಶ್ವ ರಂಗಭೂಮಿಯ ದಿನ ಆ ನೆತ್ತರು ಸಂಭ್ರಮ ಎರಡೂ ನೆನಪು ಬಂತು….
ನನ್ನ ರಂಗಭೂಮಿಯ ಅಧ್ಯಾಯಗಳು ಅತಿ ದಟ್ಟವಾದದ್ದು.






0 Comments