ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ದೇವರು..

ಕನ್ನಡದ ಪ್ರಸಿದ್ಧ ವಾರಪತ್ರಿಕೆಯೊಂದು ‘ನನ್ನ ದೇವರು’ ಹೆಸರಡಿ ಲೇಖಕರ, ಚಿಂತಕರ ಅನ್ನಿಸಿಕೆಗಳನ್ನು ಪ್ರಕಟಿಸುತ್ತಿತ್ತು. ಅಕಸ್ಮಾತ್ ನನ್ನನ್ನೂ ಕೇಳಿದರೆ ಯಾವುದಕ್ಕೂ ಇರಲಿ ಎಂದು ನಾನು ಬರೆಯಬೇಕಾದುದನ್ನು ಅಂದಾಜಿಸಿಕೊಂಡಿದ್ದೆ. ಆದರೆ ಪತ್ರಿಕೆಯವರು ನನಗೆ ದೇವರಿಲ್ಲ ಎಂದು ನಿರ್ಧರಿಸಿಕೊಂಡೋ ಏನೋ ನನ್ನನ್ನು ಕೇಳಲೇ ಇಲ್ಲ. ನಾನು ಅಂದಾಜಿಸಿಕೊಂಡಿದ್ದ ನನ್ನ ದೇವರು ನನ್ನೊಳಗೇ ಉಳಿಯಿತು.

ನನ್ನ ದೇವರು ನನ್ನೊಳಗೆ ಉಳಿದಿರುವುದು ಹೀಗೆ:

ಕವಿ ಸಿದ್ಧಲಿಂಗಯ್ಯ ಒಮ್ಮೆ ನನಗೆ ಹೇಳಿದ ಕತೆಯಲ್ಲಿ ಮನೆಮಂಚಮ್ಮ ಎಂಬ ಗ್ರಾಮದೇವತೆಯ ಒಳಗಿಂದ ನನ್ನ ದೇವರು ಒಡಮೂಡುತ್ತದೆ- ಒಂದ್ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಹೀಗೆ ಕಟ್ತಾ ಚಾವಣಿಮಟ್ಟಕ್ಕೆ ಆ ಗುಡಿ ಬಂದಾಗ ಒಬ್ಬನ ಮೈಮೇಲೆ ಆ ದೇವತೆ ಮಂಚಮ್ಮ ಆವಾಹಿಸಿಕೊಂಡು ‘ನಿಲ್ಸಿ ನನ್ ಮಕ್ಕಳಾ’ ಎಂದು ಅಬ್ಬರ ಮಾಡುತ್ತಾಳೆ. ಆ ಅಬ್ಬರಕ್ಕೆ ಜನ ತಮ್ಮ ಕೆಲ್ಸ ನಿಲ್ಸಿ ಕಕ್ಕಾಬಿಕ್ಕಿಯಾಗಿ ನೋಡುತ್ತಿರಲು ಆ ದೇವತೆ ಹಾಗೂ ಆ ಜನರ ನಡುವೆ ಮಾತುಕತೆ ನಡೆಯುತ್ತದೆ:

‘ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ?’

‘ನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ ತಾಯಿ’

‘ಓಹೋ, ನನಗೇ ಗುಡಿಮನೆ ಕಟ್ತಾ ಇದ್ದೀರೋ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ?’

‘ನನಗಿಲ್ಲ ತಾಯಿ’- ಅಲ್ಲೊಬ್ಬ ಹೇಳ್ತಾನೆ.

‘ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ’

-ಹೀಗೆಂದ ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ!

ಛಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ.  ಈ ರೀತಿಯಲ್ಲಿ ಛಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ.

 

 

‍ಲೇಖಕರು G

27 September, 2020

5 Comments

  1. nagraj.harapanahalli

    devanuru ………..anupama barahagaara…..
    ದೇವರ ಹೆಸರಲ್ಲಿ ಗುಡಿ ಕಟ್ಟಿ ಶೋಷಿಸುವವರನ್ನ ಟೀಕಿಸುವ ಸರಳ ಕತೆ…….

  2. Mohan V Kollegal

    ಎಂಥಹ ಮಾತು..!

  3. ಉಷಾಕಟ್ಟೆಮನೆ

    ಇದನ್ನು ಓದುವಾಗ ನನಗೆ ಬಯಲಲ್ಲಿ ನಿಂತಿರುವ ಧರ್ಮಸ್ಥಳದ ಸಮೀಪವಿರುವ ಸೌತಡ್ಕ ಗಣೇಶ ಹೇಳಿದನೆಂದು ಭಕ್ತರು ನಂಬುವ ಕಥೆ ನೆನಪಾಯ್ತು.ಅದು ಹೀಗಿದೆ…ಆತನಿಗೆ ಭಕ್ತರು ಗುಡಿ ಕಟ್ಟಲು ಪ್ರಯತ್ನಿಸಿದಾಗಲೆಲ್ಲ ಆತ ಹೇಳುತ್ತಾನಂತೆ. ’ತನಗೆ ಗುಡಿ ಕಟ್ಟುವುದೇ ಆದಲ್ಲಿ ತಾನು ಇಲ್ಲಿಂದಲೇ ಕಾಶಿಯಲ್ಲಿರುವ ತನ್ನಪ್ಪ ವಿಶ್ವನಾಥನನ್ನು ನೋಡುವ ಹಾಗಿರಬೇಕು’ ಎಂದು. ಹಾಗಾಗಿ ಆತನಿಗೆ ಇವತ್ತಿಗೂ ಗುಡಿಯ ಭಾಗ್ಯವಿಲ್ಲ.

  4. bharathi

    ಎಂಥ ಅದ್ಭುತ ವಿಚಾರ ! ಇಷ್ಟು ಸರಳವಾಗಿ ಎಂಥ ಸತ್ಯ ಹೇಳಿದಿರಿ …!

  5. Prasad V Murthy

    ನಾನು ದೇವನೂರರನ್ನು ಇನ್ನೂ ಆಳವಾಗಿ ಓದಲು ಪ್ರಾರಂಭಿಸಿಲ್ಲ. ಅವರ ಕೆಲವು ಲೇಖನಗಳಿಂದಲೂ, ಅವರನ್ನು ಓದಿ ಅರಗಿಸಿಕೊಂಡ ಕೆಲವರಿಂದಲೂ ಅವರ ವ್ಯಕ್ತಿತ್ವವನ್ನು ಅರಿಯಲು ಪ್ರಯತ್ನಿಸಿದ್ದೇನೆ. ಸಧ್ಯದ ಮಟ್ಟಿಗೆ ಅವರೊಬ್ಬ ಸಮಾನತೆಯ ಸಂತನಂತೆ ಕಾಣುತ್ತಿದ್ದಾರೆ, ಈ ಬರಹದಲ್ಲಿನ ಅವರ ದೇವರ ಕಲ್ಪನೆ ಅದ್ಭುತವಾದದ್ದು. ದೇವನೂರರಲ್ಲಿ ಇನ್ನೆಷ್ಟು ಆಯಾಮಗಳನ್ನು ಹೆಕ್ಕಬಹುದೋ ಎಂಬುದನ್ನು ಓದೇ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಇನ್ನು ಕೆಲವು ದಿನಗಳಲ್ಲಿಯೇ ಮಾಡಲಿದ್ದೇನೆ.

    – ಪ್ರಸಾದ್.ಡಿ.ವಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading