ಚರ್ಚೆಗೆ ಸ್ವಾಗತ
ನಿಮ್ಮ ಅಭಿಪ್ರಾಯವನ್ನು avadhiag@gmail.com ಗೆ ಕಳಿಸಿ
ಡಾ. ಇಂದಿರಾ ಹೆಗ್ಗಡೆ
ಪ್ರಕೃತಿ ಪೂಜಕರಾದ ಬುಡಕಟ್ಟು ಸಮುದಾಯದವರು ಹಿಂದೂಗಳು ಅಲ್ಲವಾದರೆ ಬುಡಕಟ್ಟು ಮೂಲದ ಉಪಾಸನಾ ಪದ್ಧತಿಯಾದ ಭೂತಾರಾಧಾನಾ ಪಂಥದವಳಾದ ನಾನು ಯಾರು ಎಂಬ ಪ್ರಶ್ನೆ ನನ್ನನ್ನು ಕಾಡಿತು.
ತುಳುವರು ವೇದಾಧಾರಿತ ಸಮಾಜದವರು ಅಲ್ಲ.
ತುಳು ನೆಲದ ಮಕ್ಕಳಲ್ಲಿ ಪಿತೃ ಪ್ರಧಾನ ಸಂಸ್ಕೃತಿಯಿಲ್ಲ. ಇಂದಿಗೂ ಕನ್ಯಾದಾನ ಇಲ್ಲ. ವಿವಾಹ ಒಂದು ಒಪ್ಪಂದ. ಉತ್ತಮ ಸಂತಾನಕ್ಕಾಗಿ ಮತ್ತು ಸುಖ ಬಾಳುವೆಗಾಗಿ. ಈ ಎರಡರಲ್ಲೂ ತೊಡಕಾದರೆ ಮದುವೆಯನ್ನು ಹಿರಿಯರೇ ನಿಂತು ಮುರಿಯುತ್ತಾರೆ.
ವೇದಾಧಾರಿತ ಸಮಾಜದಂತೆ ವಿವಾಹ ಎನ್ನುವುದು ಜನ್ಮ ಜನ್ಮದ ಅನುಬಂಧ ಅಲ್ಲ.
ನೆಲದ ಮಕ್ಕಳ ಪ್ರಕಾರ ಇಲ್ಲಿ ಇರುವುದೊಂದೇ ಜನ್ಮ. ಸಮಾಜ ಕಂಟಕರನ್ನು ಭೂತಗಳು ಇರುವ ಜನ್ಮದಲ್ಲಿಯೇ ಶಿಕ್ಷಿಸುತ್ತವೆ ಎನ್ನುವ ನಂಬಿಕೆ ಇದೆ. ದುಷ್ಟನಾದವನು ಈ ಇರುವ ಜನ್ಮದಲ್ಲಿಯೇ ದುಷ್ಕೃತ್ಯದ ಫಲ ಅನುಭವಿಸುತ್ತಾನೆ. ಅದೇ ನರಕ. ಒಳ್ಳೆಯವ ಈ ಜನ್ಮದಲ್ಲಿಯೇ ಅದರ ಫಲ ಅನುಭವಿಸುತ್ತನೆ ಅದೇ ಸ್ವರ್ಗ.
ತುಳು ಜನಪದರಲ್ಲಿ ಬೇರೆ ಸ್ವರ್ಗ ನರಕದ ಕಲ್ಪನೆ ಇಲ್ಲ.
ಕಾಡಿನ ಮೂಲದ ಹುಟ್ಟಿನ ಚಿತ್ತೇರಿ -ಮೂಲಸ್ಥಾನ ಎನ್ನುವುದು ತುಳುವರ ಹುಟ್ಟು ಮತ್ತು ಸಾವಿನ ಕೇಂದ್ರ.. ಫಲವಂತಿಕೆಯನ್ನು ಪಡೆಯುವುದೂ ಇಲ್ಲಿ. ಸತ್ತ ನಂತರ ಸೇರುವುದೂ ಇಲ್ಲಿ. `ಇದ್ದರೆ ಇಲ್ಲಿ ಈ ಭೂಮಿಯಲ್ಲಿ ಸತ್ತರೆ ಅಲ್ಲಿ ನಾಗಬೆರ್ಮೆರ ಬಳಿ’ ಇದು ಜನಪದರ ನಂಬಿಕೆ.
ತಾವು ನಾಗ ಬ್ರಹ್ಮನ ಮೂಲಸ್ಥಾನದ ಕಾಡಿನಿಂದ ಬಂದವರು, ಮೂಲಸ್ಥಾನದ ಕಾಡಿಗೇ ಸೇರುವವರು ಎನ್ನುವುದು ನಂಬಿಕೆ. ಮಣ್ಣಿನಿಂದ ಬಂದವರು ಮಣ್ಣಿಗೇ ಸೇರುವವರು. ಪ್ರಕೃತಿಯ ಮಕ್ಕಳು ಪ್ರಕೃತಿಗೆ ಸೇರುವವರು. ಸೈವರಿಗೆ ಕೈಲಾಸ, ವೈಷ್ಣವರಿಗೆ ವೈಕುಂಠ ಎಂಬ ನಂಬಿಕೆಯಂತೆ ತುಳು ನೆಲದ ಸಂಸ್ಕೃತಿಯಲ್ಲಿ ತುಳುವರಿಗೆ ನಾಗ ಬ್ರಹ್ಮಸ್ಥಾನ.
ಮಾತೃ ವಂಶೀಯ ತುಳು ಸಂಸ್ಕೃತಿಯಲ್ಲಿ ವಿವಾಹಾನಂತರ ತುಳುವರ ಹೆಣ್ಣು ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುವುದಿಲ್ಲ. ವೈದಿಕ ಸಂಪ್ರದಾಯ ಪುರುಷ ಪ್ರಧಾನವಾಗಿದ್ದರೆ ಸ್ಥಳೀಯ ಸಂಸ್ಕೃತಿಯಲ್ಲಿ ಸ್ತ್ರೀ ಪ್ರಧಾನ (ಪ್ರಕೃತಿ ಪ್ರಧಾನ) ಪ್ರಕೃತಿ ಮತ್ತು ಸ್ತ್ರೀ ಎರಡೂ ಫಲ ಶಕ್ತಿದಾಯಿಗಳು.
ತುಳುವರ ಮೂಲಸ್ಥಾನ ಕ್ಷೇತ್ರಗಳಲ್ಲಿ ಪ್ರಕೃತಿ ಮತ್ತು ಸ್ತ್ರೀಯನ್ನು ಪೂಜಿಸಲಾಗುತ್ತಿದೆ.
“ಒಂದು ಬುಡಕಟ್ಟು ಹಿಂದೂಕರಣಗೊಂಡಾಗ ಅದರ ಸ್ಥಾನಮಾನ ವೃದ್ಧಿಸುತ್ತದೆ.” ಎನ್ನುತ್ತಾರೆ ಮ್ಯಾಕ್ಸ್ ವೆಬರ್. ಒಂದು ಬುಡಗಟ್ಟು ನಾಗರಿಕ ಜಗತ್ತಿನೊಂದಿಗೆ ಬೆರೆತಾಗ ಅದರ ಸ್ಥಾನಮಾನ ಹೆಚ್ಚುತ್ತದೆಯೇ ವಿನಃ ಅದು ಹಿಂದೂಕರಣಗೊಂಡಾಗ ಅದರ ಸ್ಥಾನ ಮಾನ ವೃದ್ಧಿಸುವುದು ಹೇಗೆ?
ವಾಸ್ತವವಾಗಿ ಹಿಂದೂಕರಣ ಎಂದರೇನು? ಪರಂಪರೆಯಿಂದ ಬಂದಂತಹ ಬುಡಗಟ್ಟು ಸಂಪ್ರದಾಯದ ಆಚರಣೆಗಳನ್ನು ಉಪಾಸನ ಪದ್ಧತಿಗಳನ್ನು ನಿರಾಕರಿಸಿ ಶ್ರೀ ರಾಮ, ಶ್ರೀ ಕೃಷ್ಣನನ್ನು ಪೂಜಿಸಿದ ಮಾತ್ರಕ್ಕೆ ಹಿಂದೂಕರಣವೆ?
ಶಿವನನ್ನು ಪೂಜಿಸಿದರೆ ಲಿಂಗಾಯಿತೀಕರಣವೇ? ಈಗಿನ ಪರಿಭಾಷೆಯ ಹಿಂದೂಗಳಲ್ಲಿ ಅನೇಕ ಅಬ್ರಾಹ್ಮಣರು ಚರ್ಚ್ಗೂ ಹೋಗುತ್ತಾರೆ, ದರ್ಗಾಕ್ಕೂ ನಂಬಿ ನಡೆಯುತ್ತಾರೆ. ಮುಸ್ಲಿಂ ಜನಾಂಗದಲ್ಲೂ ಅನೇಕರು ಸ್ಥಳೀಯ ದೇವತಾರಾಧನೆಯನ್ನು ಒಪ್ಪಿ ನಡೆಯುತ್ತಾರೆ. ತುಳುನಾಡಿನ ಭೂತಾರಾಧನೆಯಲ್ಲಿ ಮುಸ್ಲಿಂ ಸಮುದಾಯದ ಅನೇಕರು ಭಾಗವಹಿಸಿ ಹರಕೆ ಒಪ್ಪಿಸುತ್ತಾರೆ.
ಇವೆಲ್ಲ Religion -ಮತವನ್ನು ಮೀರಿನಿಂತಿದೆ ಮಾನವ ಧರ್ಮ.
ಪ್ರಕೃತಿಯ ಆರಾಧನೆಯ ಭಾಗವಾದ ಭೂತಾರಾಧನೆ ಮಾನವ ಧರ್ಮವನ್ನು ರಕ್ಷಿಸುವ ಹೊಣೆಗಾರಿಕೆಯಿಂದ ಕೂಡಿದೆ. ಮಾನವೀಯತೆ ಇರುವ ಮಾನವರಾಗುವುದು ಇಂದಿನ ತುರ್ತು ಅಗತ್ಯ






100℅ ನಿಜ ಮೇಡಂ
Indira Mam,
Hats off to your openmindedness. Manava Dharmada bagge Heliddeeri. nimma nammanthavara sankhye hechchali endu Ashisuttene.
nutana doshetty
ಇವೆಲ್ಲ Religion -ಮತವನ್ನು ಮೀರಿನಿಂತಿದೆ ಮಾನವ ಧರ್ಮ.
ಪ್ರಕೃತಿಯ ಆರಾಧನೆಯ ಭಾಗವಾದ ಭೂತಾರಾಧನೆ ಮಾನವ ಧರ್ಮವನ್ನು ರಕ್ಷಿಸುವ ಹೊಣೆಗಾರಿಕೆಯಿಂದ ಕೂಡಿದೆ.
ಎಲ್ಲ ತುಳುವರೂ ಓದಲೇ ಬೇಕಾದ ಅಮೂಲ್ಯ ಲೇಖನ
ಇಂದಿರಾ ಮೇಡಂ ಚರ್ಚೆಯನ್ನು ಸುರುಹಚ್ಚಿದ್ದಕ್ಕೆ ವಂದನೆಗಳು. ನನ್ನದೊಂದು ಸಂದೇಹವೇನೆಂದರೆ ಅಪ್ಪಟವೈದಿಕ ಪದ್ಧತಿಯಲ್ಲೂ ಪ್ರಕೃತಿ ಉಪಾಸನೆಯೇ ತಾನೇ ಇರುವುದು?ದೇವಾಲಯ ಸಂಸ್ಕೃತಿ ಆ ಮೇಲೆ ಹುಟ್ಟಿಕೊಂಡದ್ದಲ್ಲವೇ? ಭೂತಾರಾಧನೆಯಲ್ಲೂ ಭೂತಕಟ್ಟುವ ಮಂದಿ ಮತ್ತು ಆರಾಧಿಸುವ ಮಂದಿ ಎಂಬ ಸಾಮಾಜಿಕ ವರ್ಗೀಕರಣವಿಲ್ಲವೇ..?ವೈಯಕ್ತಿಕವಾಗಿ ಯಾವುದೇಆರಾಧನಪದ್ಧತಿಯನ್ನು ಅನುಸರಿಸಲಿ ಮಾನವೀಯತೆಯುಳ್ಳ ಮಾನವರಾಗುವುದು ಇಂದಿನ ಮತ್ತು ಎಲ್ಲಾ ಕಾಲದ ಅಗತ್ಯಎನ್ನುವುದರಲ್ಲಿ ಎರಡು ಮಾತಿಲ್ಲ.
ನನ್ನ ತುಳುನಾಡಿನ ಅನುಭವವೂ ಇದೆ ತೆರನಾದುದು.ಅಲ್ಲಿಯ ಇತ್ತೀಚಿನ ತುಳುಸಮ್ಮೇಳನಗಳು ಬಿಂಬಿಸುವ ತುಳುಸಮಾಜ ವೇದಪ್ರಮಾಣದ್ದು.ಊಳಿಗಪ್ರಧಾನದ್ದು .ಸ್ತ್ರೀಧಮನದ್ದು.ಹಂತಹಂತವಾಗಿ ಪುರುಷಪ್ರಧಾನ ಸಮಾಜದಕಡೆಗೆ ಹೊರಳಿದ ಚಿತ್ರಣವೇ ಹಾಗಿದೆ.
ಹಾಲಿಯಲ್ಲಿ ನಮ್ಮ ದೇಶದಲ್ಲಿ ಯಾವುದೇ ಮತ /ಧರ್ಮ ವೇದಗಳ ಆಶಯ, ನಿಲವುಗಳನ್ನು ಅನುಸರಿಸುತ್ತಿಲ್ಲ ಎನ್ನುವುದು ನನ್ನ ಅನಿಸಿಕೆ. ಈಗ ನಮ್ಮಲ್ಲಿರುವುದು ಪುರಾಣ ಪ್ರೇಣಿತ ಅಸಂಬಂಧ ಮೌಢ್ಯಾಚರಣೆ. ತುಳುವರ ಆಚರಣೆಗಳು ಸಹ ಇದರಿಂದ ಹೊರತಲ್ಲ ಎನ್ನುವುದು ನನ್ನ ಅಭಿಪ್ರಾಯ.