ಪಾರ್ವತಿ ಐತಾಳ್
ಖ್ಯಾತ ಲೇಖಕ ಡಾ.ಜನಾರ್ದನ ಭಟ್ ಅವರ ಕಥಾ ಸಂಕಲನ ‘ದೇಜಪ್ಪಣ್ಣನ ಹಠಯೋಗ’
ಸಾಧನಾ ಪ್ರಕಾಶನ ಪ್ರಕಟಿಸಿದ ಈ ಪುಸ್ತಕದ ಕುರಿತು ಪಾರ್ವತಿ ಐತಾಳ್ ವಿಮರ್ಶೆ ಇಲ್ಲಿದೆ
ಖ್ಯಾತ ಲೇಖಕ ಡಾ.ಜನಾರ್ದನ ಭಟ್ ನನ್ನ ಆತ್ಮೀಯ ಸ್ನೇಹಿತರೂ ಹೌದು. ಮೊನ್ನೆ ಒಂದು ಸಮಾರಂಭದಲ್ಲಿ ಆಕಸ್ಮಿಕವಾಗಿ ಸಿಕ್ಕಿದವರು ತಮ್ಮ ಇತ್ತೀಚೆಗೆ ಬಿಡುಗಡೆಯಾದ ಸಣ್ಣ ಕಥಾ ಸಂಕಲನ ‘ದೇಜಪ್ಪಣ್ಣನ ಹಠಯೋಗ’ದ ಒಂದು ಪ್ರತಿಯನ್ನು ನನಗೆ ಕೊಟ್ಟರು. ಅವರ ಬಿಡಿ ಕಥೆಗಳನ್ನು ಕೆಲವು ಪತ್ರಿಕೆಗಳಲ್ಲಿ ಓದಿದ್ದೆ. ಆದರೆ ೨೧ ಕಥೆಗಳಿರುವ ಇಡೀ ಸಂಕಲನವೇ ಕೈಗೆ ಸಿಕ್ಕಿದಾಗ ತುಂಬಾ ಖುಷಿಯಾಯಿತು.
ಇತಿಹಾಸ, ಸಂಸ್ಕೃತಿ, ಪರಂಪರೆ, ಧಾರ್ಮಿಕ ವಿಚಾರಗಳು, ಗ್ರಾಮೀಣ ಬದುಕು, ವಿದೇಶಿಯರು ಮಾಡಿದ ಆಕ್ರಮಣ-ದೌರ್ಜನ್ಯಗಳ ಕುರಿತು ಅಳವಾಗಿ ಅಧ್ಯಯನ ಮಾಡಿ ಆ ಎಲ್ಲ ಜ್ಞಾನವನ್ನು ತಮ್ಮ ಎಂಟು ಕಾದಂಬರಿಗಳಲ್ಲಿ ಅರ್ಥವತ್ತಾಗಿ ಬಳಸಿರುವ ಭಟ್ಟರ ಸಣ್ಣ ಕಥೆಗಳಲ್ಲೂ ಅದೇ ಕಥನಶೈಲಿ ಬಳಕೆಯಾಗಿದೆ. ಆರಂಭದ ಎರಡು ಮೂರು ಕಥೆಗಳನ್ನಷ್ಟೇ ಓದಿ ಆಗಿದೆ. ತುಂಬಾ ಕುತೂಹಲ ಮೂಡಿಸಿಕೊಂಡು ಹೋಗುವ ಕಥೆಗಳು ಇಲ್ಲಿವೆ.. ತಮ್ಮ ಒಳಗಿರುವ ಇತಿಹಾಸದ ಜ್ಞಾನದ ವಾಸ್ತವ ವಿಚಾರಗಳನ್ನು ಕಲ್ಪನೆಯ ಮೂಸೆಯಲ್ಲಿ ಅದ್ದಿ, ತಕ್ಕ ಸನ್ನಿವೇಶಗಳನ್ನು ಮತ್ತು ಪಾತ್ರಗಳನ್ನು ಸೃಷ್ಟಿಸಿ ಸರಳ ಭಾಷೆಯಲ್ಲಿ ಕಥೆ ಕಟ್ಟುವ ಅವರ ಅದ್ಭುತ ಸೃಜನ ಶಕ್ತಿ ಬೆರಗು ಹುಟ್ಟಿಸುವಂಥದ್ದು.

ಇತಿಹಾಸ-ಪರಂಪರೆಗಳ ಬಗ್ಗೆ ತಿಳಿಯುವ ಆಸಕ್ತಿಯಿದ್ದವರಿಗೆ ಜ್ಞಾನದ ಜತೆಗೆ ಮನರಂಜನೆಯನ್ನು ಕೂಡಾ ಕೊಡುವ ಕಥೆಗಳಿವು. ಕಥೆ, ಕಾದಂಬರಿ, ವಿಮರ್ಶೆ, ಅನುವಾದ, ಪ್ರಬಂಧ ಮೊದಲಾದ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಬಹಳಷ್ಟು ಬರೆದು ಕನ್ನಡದ ಶ್ರೇಷ್ಠ ಲೇಖಕರ ಸಾಲಿಗೆ ಸೇರುವ ಎಲ್ಲಾ ಅರ್ಹತೆಯನ್ನು ಅವರು ಈಗಾಗಲೇ ಪ್ರಕಟಿಸಿರುವ ತಮ್ಮ ನೂರಕ್ಕೂ ಮಿಕ್ಕಿದ ಕೃತಿಗಳ ಮೂಲಕ ಪಡೆದಿದ್ದಾರೆಂಬುದರಲ್ಲಿ ಯಾವ ಸಂದೆಹವೂ ಇಲ್ಲ.
ಬೆಂಗಳೂರಿನ ಸಾಧನಾ ಪ್ರಕಾಶನದ ರವಿಚಂದ್ರರಾವ್ ಅವರು ಈ ಪುಸ್ತಕವನ್ನು ಅಂದವಾಗಿ ಮುದ್ರಿಸಿ ಪ್ರಕಟಸಿದ್ದಾರೆ.






0 Comments