ಮದುವೆಯಾದ ಮೂರನೇ ತಿಂಗಳಿಗೇ ಮಂಜುನಾಥ ಹಳೆಯ ಗೆಳೆಯರ ಪಾಲಿಗೆ ಶತ್ರುವಾಗಿಬಿಟ್ಟಿದ್ದ. ಅವನ ಅಷ್ಟೂ ಗೆಳೆಯರೂ ಮಂಜುನಾಥನನ್ನು ತಮ್ಮ ಗೆಳೆಯರ ಬಳಗದ ಪಟ್ಟಿಯಿಂದ ಕಿತ್ತುಹಾಕಿದ್ದರು. ಆರಂಭದಲ್ಲಿ ತಮಾಷೆಯಿಂದ ಮಾತಾಡುತ್ತಿದ್ದವರು, ಕ್ರಮೇಣ ಅಸಹನೆಯಿಂದಲೇ ಅವನ ವರ್ತನೆಯನ್ನು ಖಂಡಿಸತೊಡಗಿ ಕೊನೆಗೆ ಅವನು ಸ್ನೇಹಕ್ಕೆ ಯೋಗ್ಯನಲ್ಲ ಎಂದು ತೀರ್ಮಾನಕ್ಕೆ ಬಂದುಬಿಟ್ಟಿದ್ದರು.
ಅದಕ್ಕೆ ಮುಖ್ಯ ಕಾರಣ ಮಂಜುನಾಥನಲ್ಲಾದ ಬದಲಾವಣೆ. ಸಿರಿಗೆರೆಯ ಕಾಮಾಕ್ಷಿಯನ್ನು ನೋಡಿ ಬಂದ ಶಾಸ್ತ್ರ ಮುಗಿಸಿದ್ದೇ ತಡ ಮಂಜುನಾಥ ಏಕಾಏಕಿ ಗಂಭೀರನಾಗಿಬಿಟ್ಟ. ಮಾಮೂಲಿಯಂತೆ ಗೆಳೆಯರ ಜೊತೆ ಫಲ್ಗುಣೀ ನದಿಯ ಹಳೆಯ ಸೇತುವೆಯ ಮೇಲೆ ಕೂರುವುದನ್ನು ನಿಲ್ಲಿಸಿಬಿಟ್ಟಿದ್ದ. ಸಿನಿಮಾಕ್ಕೆ ಕರೆದರೆ ಒಲ್ಲದ ಮನಸ್ಸಿನಿಂದ ಹೋಗುತ್ತಿದ್ದ. ಅಲ್ಲಿ ಕೂಡ ಅನ್ಯಮನಸ್ಕನಾಗಿ ಕೂತಿದ್ದು, ಸಿನಿಮಾ ಮುಗಿಯುತ್ತಲೇ ಎದ್ದು ಬರುತ್ತಿದ್ದ. ಅವನ ಗೆಳೆಯರಿಗಿದ್ದ ಹಾಗೆ ಮಂಜುನಾಥನಿಗೆ ಸಿಗರೇಟು ಚಟವಿರಲಿಲ್ಲ. ಗೆಳೆಯರೆಲ್ಲ ಬೀರು ಕುಡಿಯುತ್ತಾ ಕೂತಿದ್ದರೆ ಮಂಜುನಾಥ ಮಾತ್ರ ಜ್ಯೂಸು ಕುಡಿಯುತ್ತಾ ಸಂತೋಷಪಡುತ್ತಿದ್ದ. ಕನಿಷ್ಟ ಮದುವೆ ಆಗೋ ತನಕ ಎಂಜಾಯ್ ಮಾಡೋ ಎಂದು ಗೆಳೆಯರೆಲ್ಲ ಬಡಕೊಂಡರೂ ಮಂಜುನಾಥ ಮಾತ್ರ ತನ್ನ ನಿಷ್ಠೆ ಸಡಿಲಿಸಿರಲಿಲ್ಲ.
ಕಾಮಾಕ್ಷಿ ಅವನ ಮನಸ್ಸನ್ನು ಗೆದ್ದುಬಿಟ್ಟಿದ್ದಳು. ಕೊಂಚ ಕಪ್ಪಗೂ ಕುಳ್ಳಗೂ ಇದ್ದ ತನ್ನನ್ನು ಯಾವ ಪ್ರಶ್ನೆಯನ್ನೂ ಕೇಳದೇ ಮದುವೆಯಾಗಲು ಒಪ್ಪಿದ್ದ ಅವಳ ಬಗ್ಗೆ ಅವನಿಗೆ ಅಪಾರ ಗೌರವ ಮತ್ತು ಪ್ರೀತಿ ಉಕ್ಕಿಬಂದಿತ್ತು. ಮಂಜುನಾಥನ ಅಣ್ಣಂದಿರು ಶತಾಯಗತಾಯ ಪ್ರಯತ್ನಿಸಿ, ತಮಗೆ ಗೊತ್ತಿದ್ದವರಿಗೆಲ್ಲ ಹೆಣ್ಣು ನೋಡಲು ಹೇಳಿ ಕೊನೆಗೆ ಮಂಜುನಾಥನಿಗೆ ಮದುವೆ ಯೋಗವಿಲ್ಲ ಎಂದು ಸುಮ್ಮನಾಗಿದ್ದರು. ಯಾವುದೋ ಟೀವಿಯಲ್ಲಿ ಪ್ರತಿ ಶನಿವಾರ ಹಾಜರಾಗುವ ಜ್ಯೋತಿಷಿಗೆ ಕೂಡ ಮಂಜುನಾಥ ತನ್ನ ಜಾತಕ ಕಳುಹಿಸಿಕೊಟ್ಟಿದ್ದ. ಅವರು ಮಂಜುನಾಥನಿಗೆ ಈ ವರುಷ ಮದುವೆ ಯೋಗವಿದೆ. ಒಂದು ವೇಳೆ ಈ ವರ್ಷ ಕಂಕಣಭಾಗ್ಯ ಕೂಡಿಬರದೇ ಇದ್ದರೆ ಇನ್ನು ಮೂರು ವರುಷ ಮದುವೆ ಆಗುವುದಿಲ್ಲ ಅಂದುಬಿಟ್ಟಿದ್ದರು. ಅವರು ಹೇಳಿದ ಅವಧಿ ಇನ್ನೇನು ಮುಗಿಯುತ್ತದೆ ಅನ್ನುವ ಹೊತ್ತಿಗೆ ಕಾಮಾಕ್ಷಿ ಅವನ ಕೈ ಹಿಡಿಯಲು ಒಪ್ಪಿ ಅವನ ಜನ್ಮ ಪಾವನವಾಗುವಂತೆ ಮಾಡಿದ್ದಳು.
ಮಂಜುನಾಥನ ಸಮಸ್ಯೆಗಳು ಶುರುವಾಗಿದ್ದು ಮದುವೆಯ ನಂತರವೇ. ಮದುವೆಗೆ ಮುನ್ನವೇ ಆದ ಒಪ್ಪಂದದ ಪ್ರಕಾರ, ಅವನ ಅಣ್ಣಂದಿರೆಲ್ಲ ಸೇರಿ ಅವನಿಗೆ ಬೇರೆ ಮನೆ ಮಾಡಿಕೊಟ್ಟಿದ್ದರು. ಹೊತ್ತು ಹೊತ್ತಿಗೆ ಅತ್ತಿಗೆಯಂದಿರು ಹಾಕುವ ಊಟ ಮಾಡುತ್ತಾ, ಅಣ್ಣಂದಿರು ವಹಿಸಿದ ಸಣ್ಣಪುಟ್ಟ ಕೆಲಸ ಮಾಡುತ್ತಾ ಓಡಾಡಿಕೊಂಡಿದ್ದ ಮಂಜುನಾಥ, ಇದ್ದಕ್ಕಿದ್ದ ಹಾಗೆ ತನ್ನ ಮೇಲೆ ಸಂಸಾರದ ಭಾರ ಬಿದ್ದಾಗ ಕಂಗಾಲಾಗಿಬಿಟ್ಟಿದ್ದ. ಕಾಮಾಕ್ಷಿ ಕೂಡ ಅವನ ಊಹೆಯಲ್ಲಷ್ಟೇ ಅವನ ಕನಸಿನ ಹೆಣ್ಣಾಗಿದ್ದಳು. ಹೆಂಗಸರೆಲ್ಲರೂ ತನ್ನ ಅತ್ತಿಗೆಯಂದಿರ ಥರ ಇರುತ್ತಾರೆ ಎಂದು ನಂಬಿದ್ದ ಮಂಜುನಾಥನಿಗೆ ಭ್ರಮನಿರಸನವಾಗಿತ್ತು. ಕಾಮಾಕ್ಷಿ ಮನೆ ಬಿಟ್ಟು ಕದಲುತ್ತಿರಲಿಲ್ಲ. ಹೀಗಾಗಿ ಉಪ್ಪಿಟ್ಟಿಗೆ ಬೇಕಾದ ಕೊತ್ತಂಬರಿ ಸೊಪ್ಪಿನಿಂದ ಹಿಡಿದು, ಅವಳ ತಿಂಗಳ ಸಮಸ್ಯೆಗೆ ಬೇಕಾದ ವಸ್ತುವನ್ನೂ ಅವನೇ ತಂದುಕೊಡಬೇಕಿತ್ತು.
ಅದಕ್ಕೆಲ್ಲ ಅವನು ತನ್ನನ್ನು ಬಹಳ ಬೇಗ ಒಗ್ಗಿಸಿಕೊಂಡುಬಿಟ್ಟ. ಆದರೆ, ಆಫೀಸು ಬಿಟ್ಟ ತಕ್ಷಣ ಮನೆಗೆ ಬರಬೇಕು ಎಂದವಳು ತಾಕೀತು ಮಾಡಿಬಿಟ್ಟಳು. ಆರಂಭದಲ್ಲಿ ಅವಳನ್ನು ಮೆಚ್ಚಿಸುವುದಕ್ಕೋಸ್ಕರ ಅವನು ಬೇಗ ಬರುತ್ತಿದ್ದ. ಕ್ರಮೇಣ ಅದು ಕಡ್ಡಾಯವಾಯಿತು.
ಸಂಜೆ ಮನೆಗೆ ಬಂದು ಅವಳನ್ನು ವಾಕಿಂಗಿಗೆ ಕರೆದೊಯ್ಯಬೇಕು. ಅವಳು ಜೊತೆಗಿರುವಾಗ ಗೆಳೆಯರ ಜೊತೆ ಮಾತಾಡುತ್ತಾ ನಿಲ್ಲಬಾರದು. ಮನೆಗೆ ಬಂದ ನಂತರ ಮೊಬೈಲು ಬಳಸಬಾರದು. ಒಂಟಿಯಾಗಿ ಕೂತು ಟೀವಿ ನೋಡಬಾರದು- ಹೀಗೆ ಅವಳ ಕರಾರುಗಳ ಪಟ್ಟಿ ಬೆಳೆಯುತ್ತಾ ಹೋಯ್ತು. ಗೆಳೆಯರೆಲ್ಲ ಹೆಂಡತಿಯನ್ನು ಆರಂಭದಲ್ಲೇ ಹತೋಟಿಯಲ್ಲಿ ಇಟ್ಟುಕೊಳ್ಳಬೇಕಾಗಿತ್ತು. ಈಗ ಏನೂ ಮಾಡೋದಕ್ಕಾಗಲ್ಲ. ಎಂಥವನು ಹೇಗಾಗಿಹೋದ ಎಂದು ಅನುಕಂಪದಿಂದ ಮಾತಾಡುತ್ತಿದ್ದವರು, ಬರಬರುತ್ತಾ ಅವನ ಹೇಡಿತನವನ್ನು ಹೀಯಾಳಿಸಿ ಮಾತಾಡತೊಡಗಿದರು.
ಮಂಜುನಾಥನಿಗೆ ಕಾಮಾಕ್ಷಿ ತನ್ನ ಎಲ್ಲಾ ಸಂತೋಷವನ್ನೂ ಒಂದೇಟಿಗೆ ಆಪೋಷನ ತೆಗೆದುಕೊಳ್ಳಲು ಬಂದವಳಂತೆ ಕಾಣಿಸತೊಡಗಿದಳು. ಗುಲಾಮಗಿರಿಗೂ ತನ್ನ ಬದುಕಿಗೂ ವ್ಯತ್ಯಾಸವೇ ಇಲ್ಲ ಅನ್ನುವುದು ಅವನಿಗೆ ಅರಿವಾಗುತ್ತಾ ಬಂತು. ತನ್ನಾಫೀಸಿನ ಕಂಪ್ಯೂಟರಿನ ಹಾಗೇ ಮಂಜುನಾಥ ಕೂಡ ಹೆಂಡತಿಯ ಬೈನರಿ ಸನ್ನೆಗಳನ್ನಷ್ಟೇ ಗುರುತಿಸುವ ಹಂತ ತಲುಪಿದ.
–೨-
ಅವನನ್ನು ನಿಜಕ್ಕೂ ಪುಲಕಿತಗೊಳಿಸಿದ್ದು ಶಾಂಭವಿ ನಾಯಕ್. ಅವಳು ಯಾವ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಳೋ ಅವನಿಗೆ ಗೊತ್ತಿರಲಿಲ್ಲ. ಆದರೆ ಪ್ರತಿ ಸಂಜೆ ಉತ್ಸಾಹ ಉಲ್ಲಾಸಗಳನ್ನು ಸಲ್ವಾರ್ ಕಮೀಜಿನ ಹಾಗೆ ತೊಟ್ಟುಕೊಂಡು ತಾನು ಬಸ್ಸಿಗೆ ಕಾಯುವ ಬಸ್ಸ್ಟಾಂಡಲ್ಲೇ ಕಾಯುತ್ತಿರುವುದನ್ನು ಮೂರು ದಿನಗಳ ನಂತರ ಮಂಜುನಾಥ ಗಮನಿಸಿದ. ಆಮೇಲೆ ಪ್ರತಿಸಂಜೆ ಗಮನಿಸುತ್ತಾ ಹೋದ.
ಇದಾಗಿ ಒಂದು ದಿನ ಅವಳು ತಾನಾಗಿಯೇ ಮಂಜುನಾಥನನ್ನು ಮಾತಾಡಿಸಿದಳು ಕೂಡ. ಎಷ್ಟೋ ದಿನಗಳ ತನಕ ಬಸ್ಸ್ಟಾಂಡಿನಲ್ಲಿ ಇಬ್ಬರೇ ಉಳಿದು ಇಬ್ಬರ ಆಸೆಗಳೂ ಡಿಕ್ಕಿಹೊಡೆದು ಆಗಲೇ ತುಂಬ ದಿನಗಳಾಗಿದ್ದವು. ತನ್ನ ಒಂಟಿ ಸೆಲ್ಗೆ ಮರಳುವ ಮೊದಲು ಒಮ್ಮೆ ಆಕಾಶವನ್ನು ದಿಟ್ಟಿಸಿ ನೋಡುವ ಕೈದಿಯಂತೆ ಬಸ್ಸು ಹತ್ತುವುದಕ್ಕೆ ಮುಂಚೆ ಅವಳನ್ನೊಮ್ಮೆ ನೋಡಿ ಮಂಜುನಾಥ ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದ.
ಅವಳು ಆ ದಿನ ಮಂಜುನಾಥನನ್ನು ಕೇಳುವುದಕ್ಕೆ ಬಂದದ್ದು ಒಂದೇ ಪ್ರಶ್ನೆ. ಆವತ್ತು ಅವಳು ತಡವಾಗಿ ಬಂದಿದ್ದಳು. ಓಡೋಡಿ ಬಂದಿದ್ದಳು. ತನ್ನ ಬಸ್ಸು ಹೊರಟುಬಿಟ್ಟಿತೇನೋ ಅನುಮಾನ ಅವಳಲ್ಲಿದ್ದಂತಿತ್ತು. ಬಂದವಳೇ ಸರ್, ನನ್ನ ಬಸ್ಸು ಹೋಯ್ತಾ’ ಎಂದು ಅದು ಕೇಳಬಾರದ ಪ್ರಶ್ನೆಯೇನೋ ಎಂಬಂತೆ ಕೇಳಿದಳು. ಅವಳು ಕೇಳುವ ಮೊದಲು ತಾನೇ ಹೇಳಬಹುದಿತ್ತು ಅನ್ನೋದು ಮಂಜುನಾಥನಿಗೆ ಆಗ ಹೊಳೆಯಿತು.
ಆವತ್ತು ಮಂಜುನಾಥನ ಮನಸ್ಸು ಸರಿಯಿರಲಿಲ್ಲ. ಆಕಸ್ಮಿಕವಾಗಿ ಅವನ ಹಳೆಯ ಗೆಳೆಯ ಪಾಣಿ ಎದುರಾಗಿದ್ದ. ಇಬ್ಬರೂ ಮಾತಾಡುತ್ತಾ ನಿಂತಾಗ ಪಾಣಿ ಹೆಂಡತಿ ಫೋನ್ ಮಾಡಿದ್ದಳು. ಪಾಣಿ ಅವಳೊಂದಿಗೆ ಎಷ್ಟು ಹುರುಪಿನಿಂದ ಮಾತಾಡಿದನೆಂದರೆ ಮಂಜುನಾಥನಿಗೆ ಅಂಥದ್ದೆಲ್ಲ ಸಾಧ್ಯವಾ ಅನ್ನಿಸಿತು. ತಾನು ಮಾತಾಡಿದ್ದಲ್ಲದೇ, ನನ್ನ ಚಡ್ಡಿದೋಸ್ತ್ ಮಂಜುನಾಥ ಸಿಕ್ಕಿದ್ದಾನೆ ಕಣೇ. ಅವನ ಜೊತೆ ಮಾತಾಡ್ತಿದ್ದೀನಿ. ನಾನು ಹೇಳ್ತಿರಲಿಲ್ವಾ… ಮಂಜು ಅಂತ, ಅವನೇ. ಹಲೋ ಹೇಳು’ ಎಂದು ಫೋನನ್ನು ಮಂಜು ಕೈಗೆ ವರ್ಗಾಯಿಸಿದ್ದ. ಆಕೆಯ ದನಿ ಕೇಳಿದ್ದೆ, ಮಂಜು ಬೆರಗಾಗಿ ಹೋದ. ಹೇಗಿದ್ದೀರಿ ಮಂಜು, ಮನೆಗೆ ಬನ್ನಿ. ನಿಮ್ಮ ಬಗ್ಗೆ ಪಾಣಿ ಹೇಳ್ತಾ ಇರ್ತಾನೆ. ಬನ್ನೀ , ಪ್ಲೀಸ್’ ಎಂದು ಆಕೆ ಹೇಳಿದ್ದು ಕೇಳಿ ಪಾಣಿಯ ಬಗ್ಗೆ ಅವನಿಗೆಂಥ ಅಸೂಯೆ ಬಂದಿತೆಂದರೆ ಆ ಕ್ಷಣವೇ ಬಟ್ಟೆ ಬಿಚ್ಟೆಸೆದು ಬೆತ್ತಲೆ ನಿಂತುಬಿಡಬೇಕು ಅನ್ನಿಸಿತು.
ಅದೇ ಗುಂಗಿನಲ್ಲಿ ನಿಂತಿದ್ದ ಮಂಜುನಾಥನ ಕಿವಿಗೆ ಬಿದ್ದದ್ದು ಶಾಂಭವಿಯ ಮಧುರಸ್ವರ. ಐಸ್ಕ್ರೀಮನ್ನು ತೆಳುವಾದ ಚೂರಿಯಿಂದ ಕತ್ತರಿಸಿದಂತಿದ್ದು ಅವಳ ದನಿ. ಆದರೆ ಅವಳ ಪ್ರಶ್ನೆಗೆ ಮಂಜುವಿಗೆ ಉತ್ತರ ಗೊತ್ತಿರಲಿಲ್ಲ. ಹೀಗಾಗಿ ಆತ ಒಂದು ಕ್ಷಣ ತಡವರಿಸಿದ. ಅಷ್ಟರಲ್ಲಿ ಅವನ ಮಾನ ಕಾಪಾಡುವುದಕ್ಕೆಂಬಂತೆ ಅವಳ ಬಸ್ಸು ಬಂದೇ ಬಿಟ್ಟಿತು. ಬಂತು ನೋಡಿ ಎಂದು ಹೇಳಿ ಅವನು ಪಾರಾದ.
ಹಾಗೆ ಶುರುವಾದ ಸಣ್ಣದೊಂದು ಸ್ನೇಹ ವಿಶ್ವಾಸಕ್ಕೆ ತಿರುಗಿ, ಅನುಕಂಪದಲ್ಲಿ ಮಿಂದು, ವಿರಹದಲ್ಲಿ ತೊಳಲಾಡಿ, ಚುಂಬನದಲ್ಲಿ ಕ್ಷಣಭಂಗುರವಾಗಿ, ಮತ್ಸರದಲ್ಲಿ ಧಗಧಗಿಸಿ, ಮಸಾಲೆದೋಸೆಯೊಂದಿಗೆ ಜೀರ್ಣವಾಗುತ್ತಾ ಹೋಯಿತು. ಸಣ್ಣ ಪುಟ್ಟ ಸುಳ್ಳುಗಳನ್ನು ಹೇಳುವುದಕ್ಕೆ ಮಂಜುನಾಥ ಅಭ್ಯಾಸ ಮಾಡಿಕೊಂಡ. ನಮ್ಮ ಬಾಸ್ನ ಮಗ ಆತ್ಮಹತ್ಯೆ ಮಾಡಿಕೊಂಡ, ಬಸ್ಸು ಆಟೋಗೆ ಹೊಡೆದು ಗುದ್ದಿತು. ಆಟೋ ಡ್ರೈವರ್ಗಳೆಲ್ಲ ಮುತ್ತಿಗೆ ಹಾಕಿದರು. ಓವರ್ಟೈಮು, ನಮ್ಮಾಫೀಸಿನಲ್ಲಿ ಅರುವತ್ತು ಮಂದಿ ಕೆಲಸ ಕಳ್ಕೋತಾರಂತೆ ; ಮಾರ್ಕೆಟ್ಟೆ ಬಿದ್ದು ಹೋಗಿದ್ಯಂತೆ, ನಮ್ಮ ತಾಯಿ ತಂಗಿ, ಸದಾಶಿವನಗರದಲ್ಲಿದ್ದಾರಲ್ಲ, ಅವರು ತೀರಿಕೊಂಡ್ರು,ನನಗೆ ಬೆನ್ನು ನೋವು, ದಿನಾ ಸಂಜೆ ಫಿಸಿಯೋಥೆರಪಿ ಮಾಡಿಸ್ಕೋಬೇಕು ಅಂತ ವಿಧವಿಧವಾದ ಕಾರಣಗಳನ್ನು ಮುಂದೊಡ್ಡಿ ಮಂಜುನಾಥ ಶಾಂಭವಿಯೊಂದಿಗೆ ಸುತ್ತಾಡಿದ. ಕಾಮಾಕ್ಷಿಯ ವಾಕಿಂಗು ನಿಂತೇ ಹೋಯ್ತು.
ಶಾಂಭವಿಯ ಕತೆಯೂ ಅವನಿಗೆ ತಿಳಿಯುತ್ತಾ ಹೋಯ್ತು. ತನ್ನ ರಸಕಂಠದಲ್ಲಿ ಆಕೆ ಮದುವೆ ಆದದ್ದು, ಗಂಡ ಅನುಮಾನದ ಪಿಶಾಚಿ ಆಗಿದ್ದಿದ್ದು, ಕೊನೆಗೆ ಇಬ್ಬರೂ ಬೇರೆಯಾಗಲು ನಿರ್ಧರಿಸಿದ್ದನ್ನೆಲ್ಲ ಹೇಳಿದಳು. ಒಲ್ಲದ ಸಂಗಾತಿ ಜೊತೆ ಇಡೀ ಜನ್ಮ ಕಳೆಯೋದು ಕಷ್ಟ ಅನ್ನಿಸಿ ಹೊರಬಂದೆ ಅಂದಳು. ಅವಳ ಪರಿಸ್ಥಿತಿಗೆ ಮಂಜುನಾಥ ಮಮ್ಮಲ ಮರುಗಿದ ದಿನ, ಅವರಿಬ್ಬರೂ ಶಾಂಭವಿಯ ಮನೆಯಲ್ಲಿ ಗುಟ್ಟಾಗಿ ಸೇರುತ್ತಿದ್ದರು. ಕಾಮಾಕ್ಷಿ ತುಂಬಾ ರೇಗಾಡಿದ ದಿನ ಅವಳ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆಂದು ಮಂಜುನಾಥ ಅವಳ ಮನೆಗೆ ಹೋಗಿ ಬರುತ್ತಿದ್ದ.
–೩-
ಮಂಜುನಾಥನೂ ಕಾಮಾಕ್ಷಿಯೂ ಬೇರೆಯಾಗಿ ಶಾಂಭವಿಯ ಜೊತೆ ಹೊಸ ಸಂಸಾರ ಹೂಡಿದ ಮಂಜುನಾಥ. ಕಾಮಾಕ್ಷಿ ಹೆಚ್ಚೇನೂ ರಾದ್ಧಾಂತ ಮಾಡಲಿಲ್ಲ. ಇಷ್ಟ ಇಲ್ಲ ಅಂದಮೇಲೆ ಯಾಕೆ ಕಟ್ಕೋಬೇಕಾಗಿತ್ತು ಅಂತ ಹೇಳಿ ಸೂಟ್ಕೇಸು ಹೊತ್ತುಕೊಂಡು ಹೋದವಳು ಮತ್ತೆ ಬರಲಿಲ್ಲ. ತವರಿಗೂ ಹೋಗಿಲ್ಲ ಅಂತ ಮಂಜುನಾಥನಿಗೆ ಗೊತ್ತಾಯಿತು. ಬೆಂಗಳೂರಲ್ಲೇ ಎಲ್ಲೋ ಇದ್ದಾಳೆ ಅಂತ ಗೆಳೆಯರು ಹೇಳಿ, ಎಷ್ಟೊಳ್ಳೆ ಹೆಂಡ್ತಿ ಸಿಕ್ಕಿದ್ಳಲ್ಲಯ್ಯಾ, ಅಂಥವಳನ್ನು ಬಿಟ್ಟು. ಏನೋ ಇದೆಲ್ಲಾ ಅಂತ ಬೇಜಾರು ಮಾಡಿಕೊಂಡರು. ಆ ಗೆಳೆಯರ ಹೆಂಡಂದಿರೆಲ್ಲ, ಇನ್ನು ಮೇಲೆ ಆ ಮಂಜುನಾಥನ ಹೆಸರೆತ್ತಬೇಡಿ ಈ ಮನೇಲಿ ಅಂತ ಹೇಳಿದರು.
ಹೀಗೆ ಸಾಗುತ್ತಿದ್ದಾಗ ಒಂದು ಸಂಜೆ ಮಂಜುನಾಥ ತಡವಾಗಿ ಬಂದ. ಯಾರ ಜೊತೆ ಹೋಗಿದ್ರಿ, ಸುಳ್ಳು ಬೇರೆ ಹೇಳ್ತೀರಾ, ನಿಮ್ಮಾಟ ಎಲ್ಲ ನಂಗೊತ್ತಾಗೋಲ್ಲ ಅಂದ್ಕೊಂಡ್ರಾ. ಸುಳ್ಳು ಪಳ್ಳು ಎಲ್ಲಾ ಆ ನಿಮ್ಮ ಮೊದಲನೇ ಹೆಂಡ್ತಿ ಹತ್ರ ನಡೀತಿತ್ತೇನೋ, ಪಾಪದ ಹೆಂಗಸು ಅದು. ನನ್ನ ಹತ್ರ ಅದನ್ನೆಲ್ಲ ಇಟ್ಕೋಬೇಡಿ’ಎಂದು ಖಾರವಾಗಿ ಮಾತಾಡಿದಳು. ಕಣ್ತುಂಬಿ ಬಂದು ಅವಳನ್ನೇ ನೋಡಿದ.
ತನ್ನ ಮುಂದೆ ನಿಂತಿರುವುದು ಕಾಮಾಕ್ಷಿಯೋ ಶಾಂಭವಿಯೋ ಎಂಬುದು ಅವನಿಗೆ ಸ್ಪಷ್ಟವಾಗಿ ಕಾಣಿಸದಂತೆ ಕಣ್ಣೀರು ತುಂಬಿಕೊಂಡಿತ್ತು.







sir, thumba vyangyada, aste arthagarbhita kathe. neevu matra bareyabahudada shaily idu
-vikas negiloni
superb write up….
ಇಂಥದ್ದೊಂದು ವ್ಯಂಗ್ಯವನ್ನು ಇಷ್ಟು ಆಪ್ತವೆನಿಸುವಂತೆ ಬರೆಯಲು ನಿಮಗೆ ಮಾತ್ರ ಸಾಧ್ಯ ಸರ್. ಇಷ್ಟು ದಿನ ನಿಮ್ಮ ಪುಸ್ತಕಗಳು ಮನೆಯಲ್ಲಿದ್ದವು. ಈಗ ನಿಮ್ಮ ಬ್ಲಾಗ್ ಬರಹಗಳು ಕಂಪ್ಯೂಟರಿನಲ್ಲಿ. ಬದುಕಿನಲ್ಲಿ ಸಂಬಂಧಗಳ ಸಂಕೀರ್ಣತೆಗಳ ಬಗ್ಗೆ ನಿಮ್ಮಂತೆ ಬರೆಯಬಲ್ಲವರು ಕನ್ನಡದಲ್ಲಿ ತುಂಬಾ ಕಡಿಮೆ ಮಂದಿ. ಹ್ಯಾಟ್ಸ್ ಆಫ್ ಟು ಯು ಸರ್. ನೀವು ಬರೆಯುತ್ತಲೇ ಇರಿ. ನಾವು ಓದುತ್ತಲೇ ಇರುತ್ತೇವೆ.
ಅಂದ ಹಾಗೆ, ನಾನು ‘ಶಮ’ ಅಂತ. ಬೆಳ್ತಂಗಡಿಯ ನಂದಿಬೆಟ್ಟದ ಹುಡುಗಿ. ಸದ್ಯ ಬೆಂಗಳೂರಿನಲ್ಲಿ ಉದ್ಯೋಗಿಯಾಗಿ ಕಳೆದು ಹೋಗಿರುವಾಕೆ.