ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಪ್ರಕಾಶ ಹಬ್ಬು ಕಂಡಂತೆ ʼಗಾಂಧಾರಿ ಸ್ವಗತಗಳುʼ

ಜಯಪ್ರಕಾಶ ಹಬ್ಬು

ಮಹಾಭಾರತ ವ್ಯಾಸನ ಮೂಲ ಕೃತಿ. ಅದರ ಆಕರ್ಷಣೆ ಆಳ ಹಾಗೂ ಮಾನವೀಯ ಸ್ವಭಾವಗಳ ಎತ್ತಿ ಹಿಡಿದು ನ್ಯಾಯ ತಕ್ಕಡಿಯಲ್ಲಿ ಜೋತಾಡಿ ಮನುಜನ ಇರುವಿಕೆಯ ಅಳತೆಗೊಲಾಗಿ ಮೆರೆದ ಗ್ರಂಥ. ಅಲ್ಲಿ ನಡೆದಿರುವ ಎಲ್ಲಾ ಘಟನೆಗಳು ಸಹಜ ರೀತಿಯಲ್ಲಿ ಹರಿದು ಹೋಗಿದೆಯಲ್ಲದೆ ಮನಸ್ಸಿಗೆ ಪರಿಣಾಮಕಾರಿಯಾಗಿ ತಟ್ಟುವ ಕ್ರಿಯೆಗಳಾಗಿದ್ದಾವೆ. ಕುಮಾರವ್ಯಾಸ, ಪಂಪರನ್ನು ಸಹ ಬರೆಯಿಸಿದ ಸಾಹಿತ್ಯ ಮಹಾಭಾರತ. ವೈವಿದ್ಯತೆಯಲ್ಲಿ ಏಕತೆ ಕಂಡ, ಸಂಪುಷ್ಟವಾದ ಕಥೆಯ ಹಂದರ ಹೊಂದಿ ಜೀವನದ ಎಲ್ಲಾ ಪ್ರಕಾ ರಗಳ ಅರಿವನ್ನು ಮೂಡಿಸುವ, ಎಲ್ಲಾ ಪಾತ್ರಗಳು ಜೀವಂತವಾಗಿ ನಮ್ಮ ಮುಂದೆ ಕುಣಿಯುವಂತೆ ಪರಿಪೂರ್ಣತೆಯ ಪರಿಜ್ಞಾನ ಹಾಗೂ ಪರಿಣಾಮಗಳ ಸಾಂದ್ರತೆಯನ್ನು ಒದಗಿಸುವ ಬೃಹತ್ ಗ್ರಂಥ.

ಅದರೊಳಗೆ ಉದಯಕುಮಾರರಿಗೆ ಕಾಡಿದ ಪಾತ್ರ ಗಾಂಧಾರಿ. ಗಾಂಧಾರಿಯ ಸ್ವ ಗತದಲ್ಲಿ ಮನಸ್ಸಿನಾಳದ ಮಾತುಗಳ ವಿಶ್ಲೇಷಣೆ ಅದ್ಭುತವಾಗಿ ಮೂಡಿ ಬಂದಿದೆ. ಗಾಂಧಾರಿಯ ಜೀವನ ದೃಪದನ ಕಟ್ಟಾಸೆಗೆ ಬಲಿಬಿದ್ದು ಕುರುಡು ದೃತಾರಾಷ್ಟ್ರನಿಗೆ ವಿವಾಹ ವಾದ ಕ್ಷಣದಲ್ಲಿ ತನ್ನನ್ನು ಬಂಧಿಸಿಕೊಂಡಳು ಗಾಂಧಾರಿ. ಮುಂದಾಗುವದನ್ನು ನೋಡಲಾರೆ, ದೃತಾರಾಷ್ಟ್ರನಲ್ಲಿ ಹೊರಹೊಮ್ಮವ ಸ್ವಾರ್ಥ, ಮೋಹದ ಪರಾಕಾಷ್ಟೇ, ಇನ್ನೊಬ್ಬರು ಹಾಳಾದರು ಅಡ್ಡಿಯಿಲ್ಲ ತಮ್ಮವರು ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುವ ಕ್ಷಣಗಳನ್ನು ಕಾಣುವ ತವಕದ ಎಲ್ಲಾ ಭಾವನೆಗಳ ಅಭಿವ್ಯಕ್ತಿಗಳನ್ನು, ಅವನು ವ್ಯಕ್ತಪಡಿಸುವ ವ್ಯಂಗ್ಯ ನಗುವಿನ ವಿಕಾರವನ್ನು ಕಾಣಲಾರೆ ಎನ್ನುವಂತೆ ಗಾಂಧಾರಿ ಪಟ್ಟಿ ಕಟ್ಟಿಕೊಂಡಳೆ? ಕುರುಡನಾದ ತನಗೆ ಆಶ್ರಯವಾಗಬಹುದೆಂದು ಎನಿಸದರೆ ಪತಿವೃತಾಸಿರೋಮಣಿ ಥರ ನನ್ನ ಗಂಡನಿಗಿಲ್ಲದ ದೃಷ್ಟಿ ತನಗೇಕೆ ಎಂಬಂತೆ ತಾನೂ ಪರಾವಲಂಬಿ ಯಾಗುವಂತೆ ತನ್ನನ್ನು ಮಾರ್ಪಡಿಸಿಕೊಂಡಳಲ್ಲಾ ಎಂಬುದು ದೃತಾರಾಷ್ಟ್ರನ ಕ್ರೋಧ. ಇದೆಲ್ಲವನ್ನು ಸಹಿಸಿಕೊಂಡ ಗಾಂಧಾರಿ ಮಹಾಭಾರತದಲ್ಲಿ ನಡೆದ ಘಟನೆಗಳನ್ನು ಮೊದಲು ಸ್ವಾರ್ಥ್ ಬುದ್ದಿಯಿಂದ ನೋಡುತ್ತಾ, ಕ್ರಮೇಣ ಎಲ್ಲವನ್ನು ಕಳೆದುಕೊಂಡಾಗ, ಕುಂತಿಯ ಆಶ್ರಯದಲ್ಲಿ ಸಹಾಯ ಹಸ್ತವನ್ನು ಪಡೆದು ತನ್ನ ವೃದ್ಯಾಪ್ಯ,ಕುರುಡುತನವೆಲ್ಲಾ ಮರೆಯುವ ರೀತಿಯಲ್ಲಿ ಸೇವೆ ಪಡೆದುಕೊಳ್ಳುವಾಗ ಆತ್ಮಜ್ಞಾನ ಹೊಂದಿ, ಪಶ್ಚಾತಾಪ ಬೇಗೆಯಲ್ಲಿ ಮಿಂದೆಳುತ್ತಾಳೆ.

ಈ ಗಾಂಧಾರಿಯ ಮನೋಬಿತ್ತಿಯ ಆತ್ಮ ವಿಶ್ಲೇಷಣೆ ಎನ್ನುವದು ಪರಿವರ್ತನೆ ಮತ್ತು ಜೀವನದ ನಿಜವಾದ ಅರಿವು ಮೂಡುವ ಕ್ಷಣಗಳನ್ನು ಉದಯಕುಮಾರ ಹಬ್ಬುರವರು ಸರಳವಾಗಿ, ಭಾಷೆಯಲ್ಲಿ ಹಿಡಿತ ಭಾವದಲ್ಲಿ ಮಿಡಿತವನ್ನು ಮನ ಮಿಡಿಯುವಂತೆ ಪರಿಕಲ್ಪನೆಯನ್ನತ್ತಿದ್ದಾರೆ. ಮಹಾಭಾರತದ ವೈಚಿತ್ರ್ಯವೆಂದರೆ ಯಾವದೇ ಸಾಹಿತಿಗಳು ತಮ್ಮ ಅನುಭವದ ಆಳದಲ್ಲಿ ತಮ್ಮದೇ ವೈಶಿಷ್ಟ್ಯ ಬರೆದರೂ ಓದಿದಷ್ಟು ಇನ್ನೂ ಓದುವ ಕುತೂಹಲ ಭರಿತ ಹಾಗೂ ಆತ್ಮ ಸಂತೃಪ್ತಿ ಕೊಡುವ ಕಥಾನಕವಾಗಿ ಹೃಯವನ್ನು ತಟ್ಟುತ್ತದೆ. ಹೀಗೆ

“ಗಾಂಧಾರಿಯ ಸ್ವ ಗತಗಳು” ಗಾಂಧಾರಿಯ ಬಗ್ಗೆ ಪಶ್ಚಾತಾಪ, ದುಃಖ, ಅವಳ ಅಂತರಾಳದ ಭಾವಗಳನ್ನು ಮೆಲಕು ಹಾಕಿ ಆತ್ಮದ ಭಾವವನ್ನು ಉಕ್ಕಿಸುವ, ಸಂಪೂರ್ಣ ಮಹಾಭಾರತದ ಕಥೆಯನ್ನು ಸಂಕ್ಸಿಪ್ತವಾಗಿ ತೆರೆದಿಟ್ಟಂತೆ ಅನುಭೂತಿಯನ್ನು ಉದಯಕುಮಾರ ಹಬ್ಬುರವರು ಈ ಕೃತಿಯಲ್ಲಿ ನಿರೂಪಿಸಿದ್ದಾರೆ. ಆತ್ಮಕ್ಲೇಷವನ್ನು ಹೊರದೂಡಿ, ಖುಷಿಯಿಂದ ಮಕ್ಕಳೊಂದಿಗೆ ಇರಬಹುದಾಗಿದ್ದ ಕುಂತಿ ಸಹ ತಮ್ಮೊಂದಿಗೆ ವಾನಪ್ರಸ್ಥಕ್ಕೆ ಹೊರಟ ಪರಿಗೆ ಗಾಂಧಾರಿ ಆತ್ಮದ ನಿಜವಾದ ಅರಿವನ್ನು ಪಡೆದು ಶುದ್ಧ ಮನಸ್ಸಿನಿಂದ ವಿಚಾರ ಮಾಡುವ ಸ್ಪಟಿಕದಂತೆ ಶುದ್ಧವಾಗುತ್ತಾಳೆ ನಿರ್ವಾಣ ಹಂತದಲ್ಲಿ.

ಕಾದಂಬರಿಯ ಕೊನೆಗೆ ಧರ್ಮಗ್ಲಾನಿತ್ವದ ಒಳಹೂ ರಣವನ್ನು ಋಷಿ ಹಾಗೂ ದ್ರತರಾಷ್ಟ್ರ ಸಂಭಾಷಣೆಯ ಮೂಲಕ ಸುಂದರವಾಗಿ ವಿಶ್ಲೇಸಿಸಲಾಗಿದೆ. ಧರ್ಮ – ಅಧರ್ಮಗಳ ಬಗ್ಗೆ, ಪಾಪ – ಪುಣ್ಯಗಳ ಬಗ್ಗೆ, ಮಾಡಿದ, ಹೂಡಿದ ತಂತ್ರ -ಕುತಂತ್ರಗಳ, ಪಾಪಗಳ ಪರಿಹಾರ ಹಾಗೂ ಶುದ್ಧತೆಯ ಪರಿಹಾರವನ್ನು ಕಂಡುಕೊಳ್ಳುವ ಪೃಕ್ರಿಯೆ ಯನ್ನು ಕಂಡಕೊಳ್ಳುವ ದೃಷ್ಟಿಯಿಂದಲೋ ಏನೋ? ಕಾದಂಬರಿಯನ್ನು ಓದಿ ಅದರ ಸ್ವಾದ ಅರಿಯಿರಿ.

“ಬಹುಷಃ ನಾವು ಮಾಡಿದ ಅನ್ಯಾಯ ಫಲವೇ ನಾವು ಅನುಭವಿಸುತ್ತಿದ್ದೇವೆ. ಇದಕ್ಕೆಲ್ಲ ಪರಿಹಾರ ಸಾವು. ಎಲ್ಲಾ ಸಂಕಟಗಳಿಂದ ಪರಿಹಾರ ಮಾಡುವವನೆ ಕಾಮಧೇನು? ನಾವು ಸಾಯಲೇಬೇಕು ? ಹೇಗಾದ್ರು ಸೈ !” ಗಾಂಧಾರಿಯ ಸ್ವ ಗತ ಕೊನೆಗೂಳ್ಳುತ್ತದೆ.

ಉದಯಕುಮಾರ ಹಬ್ಬುರವರು ಮೂಲ ವ್ಯಾಸ ಭಾರತ, ಕುಮಾರವ್ಯಾಸ ಭಾರತ, ಪಂಪ ಭಾರತ ಹಾಗೂ ಇರಾವತಿ ಕರ್ವೆ ಯವರ “ಯುಗಾಂತ” ಈ ಗ್ರಂಥಗಳನ್ನು ಅಭ್ಯಸಿಸಿ ಗಾಂಧಾರಿಯ ಮನದಾಳದ ಸ್ವಗತವನ್ನು ಮೆಲಕು ಹಾಕಿ ಹೊಸ ಅನುಭವವನ್ನು ಮತಿಸಿಕೊಳ್ಳುವ ರೀತಿಯಲ್ಲಿ ಮನಸ್ಸಿನ ಆಳದಲ್ಲಿ ಇಳಿಯುವಂತೆ ಭಾವನಾತ್ಮಕವಾಗಿ ಹೊಸೆಸಿದ್ದಾರೆ. ಸುಂದರ ಕಥಾನಕ, ಉತ್ತಮ ವಿಶ್ಲೇಷಣೆ ಹಾಗೂ ಒಮ್ಮೆ ಕೈಯಲ್ಲಿ ಹಿಡಿದರೆ ಓದಿಸಿಕೊಂಡು ಹೋಗುವ ಉತ್ತಮ ಕೃತಿ

‍ಲೇಖಕರು Admin

4 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading