ನಾಗರಾಜನಾಯಕ ಡಿ. ಡೊಳ್ಳಿನ
ಸ್ವಾತಂತ್ರ್ಯಕ್ಕಾಗಿ ಇಡೀ ದೇಶವೇ ಹೋರಾಟ ನಡೆಸಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಅಸಂಖ್ಯ ಹೋರಾಟಗಾರರು ವೀರ ಮರಣವನ್ನಪ್ಪಿದರು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಈಗಿನಂತೆ ಸಾಮಾಜಿಕ ಜಾಲತಾಣಗಳು ಇರಲಿಲ್ಲ. ಆದರೆ ಪತ್ರಿಕೆಗಳು ಬಹುದೊಡ್ಡ ಕೊಡುಗೆ ನೀಡಿವೆ. ಮಹಾತ್ಮ ಗಾಂಧೀಜಿ, ಬಿ .ಆರ್. ಅಂಬೇಡ್ಕರ್ ಅಷ್ಟೇ ಅಲ್ಲದೆ ದೇಶ ಕಂಡ ಹಲವು ರಾಷ್ಟ್ರ ನಾಯಕರು ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದರು.
ಪತ್ರಿಕೆಗಳಲ್ಲಿನ ಸುದ್ದಿಯನ್ನು ಓದಿ ತಿಳಿದುಕೊಂಡು, ಅದರಲ್ಲಿನ ವಿಷಯಗಳನ್ನು ಅನಕ್ಷರಸ್ಥರಿಗೆ ಸಾಮಾನ್ಯ ಜನತೆಗೆ ತಿಳಿಯುವಂತೆ ಮಾಡಿದ್ದು ಜನಪದರು. ಆಗ ಜನತೆಗೆ ಸ್ವಾತಂತ್ರ್ಯ ಹೋರಾಟದ ಕಥೆ ದೇಶಾದ್ಯಂತ ತಲುಪಿದ್ದು ಜನಪದರಿಂದ. ಜನಪದರು ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ತಮ್ಮದೇ ಶೈಲಿಯಲ್ಲಿ ಲಾವಣಿ, ಗೀಗಿ, ಜನಪದ ಗೀತೆಗಳನ್ನು ಹಾಡಿ ಜನರಿಗೆ ವಿಷಯ ತಲುಪಿಸುತ್ತಿದೆ.

ಇಂದು ಭಾರತ ದೇಶದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲಿಯೂ ಮಹಾತ್ಮ ಗಾಂಧೀಜಿ ಕುರಿತು ಸಾವಿರಾರು ಪುಸ್ತಕಗಳು ಬಹುತೇಕ ಜಗತ್ತಿನ ಎಲ್ಲ ಭಾಷೆಯಲ್ಲೂ ಬಂದಿವೆ. ಆದರೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮಹಾತ್ಮನ ಆಶಯ, ಗುರಿಗಳನ್ನು ಜನರಿಗೆ ತಲುಪಿಸಿದ್ದು ಜನಪದರು.
ಮರೆತೆ ಯಾಕಯ್ಯಾ ನಿನ್ನ ಮಾತೃಭೂಮಿಯ
ನಿರುತ ನಿನ್ನ ಹೊರೆಯ ಹೊತ್ತ ಪೊರೆವ ತಾಯಿಯ
ಸತ್ತು ಬಿದ್ದರೆ ಹೆತ್ತತಾಯಿ ಅತ್ತು ದೂರ ಸರಿವಳು
ಮತ್ತೆ ನಿನ್ನ ಭೂಮಿತಾಯಿ ಎತ್ತಿಕೊಳುವಳೊ ಮನುಜಾ
ಗೇಣು ಭೂಮಿಗಾಗಿ ನಿನ್ನ ಪ್ರಾಣ ಹೋಗಲೆನ್ನುವಿ
ಕಾಣದೇನೊ ದೇಶ ಪರರಾಧೀನವಾಗಿಹುದೊ ಮನುಜಾ
ಭೂಮಿತಾಯಿಯ ಬಗ್ಗೆ ಜನಪದರಿಗೆ ಇರುವ ಅಭಿಮಾನ, ಗೌರವ ಈ ಮೇಲಿನ ಸಾಲುಗಳಿಂದ ತಿಳಿಯುತ್ತದೆ. ನಮ್ಮ ಭೂತಾಯಿಗಾಗಿ ಪ್ರಾಣವನ್ನು ಕೊಡದಿದ್ದರೆ ಬದುಕಿದ್ದು ಸಾರ್ಥಕತೆ ಎನು ? ಅವರ ಬದುಕೆ ಭೂತಾಯಿಗಾಗಿ ಮೀಸಲು ಜನರಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಸಜ್ಜಾಗುವಂತೆ ಮಾಡಿದ್ದು ಜನಪದರು.
ಮಹಾತ್ಮ ಗಾಂಧೀಜಿಯವರು ಖಾದಿ ಸ್ವಾವಲಂಬನೆಯ ಹಾದಿ, ಸ್ವರಾಜ್ಯದ ಮೂಲಮಂತ್ರ ಎಂದು ಗಾಂಧೀಜಿಯವರು ಹೇಳಿದ್ದನ್ನು ಜನಪದರ ಹೀಗೆ ಹೇಳಿದರು…
ಮಳೆಬೆಳೆ ಮರೆತರು ಚಳವಳಿ ಕೇಳ್ವರು
ಚಳವಳಿಯರ್ಥವದೇನಣ್ಣಾ
ಥಳ ಥಳ ಹೊಳೆಯುವ ಖಾದಿಯ ಬಟ್ಟೆಯ
ಚಳವಳಿ ಮಂತ್ರದ ಬೀಜಣ್ಣಾ
ಸುಮ್ಮನೆ ಸ್ವರಾಜ್ಯ ಸ್ವರಾಜ್ಯವೆಂದರೆ
ಸ್ವರಾಜ್ಯ ದೊರೆಯುವುದೇನಣ್ಣಾ
ನಮ್ಮಯ ಬಟ್ಟೆಯ ನಾವೇ ತೊಡುವುದು
ಸ್ವರಾಜ್ಯ ಮಂತ್ರದ ಮೂಲಣ್ಣಾ
ಮಹಾತ್ಮ ಗಾಂಧೀಜಿಯವರು ಹೇಳುತ್ತಿದ್ದ ಜನತೆಗೆ ಚಳವಳಿಯ ಅರ್ಥ, ಮಹಾತ್ಮ ಗಾಂಧೀಜಿಯವರ ಮಾತುಗಳನ್ನು ಜನಪದರು ಈ ರೀತಿ ಹಾಡಿ ಎಲ್ಲೆಡೆ ಹಬ್ಬಿಸುತ್ತಿದ್ದರು. ಇದಷ್ಟೆ ಅಲ್ಲದೇ ಮಹಾತ್ಮ ಗಾಂಧೀಜಿ ಯವರ ಟೊಪ್ಪಿಗೆಯ ಮೇಲೂ ಜನಪದರು ಹಾಡಿದ್ದಾರೆ.
ಗಾಂಧಿ ಟೋಪಿ ಸ್ವಾತಂತ್ರ್ಯ ಹೋರಾಟಗಾರರ ಸಂಕೇತವಾಗಿತ್ತು. ಆಂಗ್ಲರು ಇದನ್ನು ಧರಿಸಿದವರನ್ನು ದ್ರೋಹಿಗಳು ಅಪರಾಧಿಗಳು ಎಂದು ಶಿಕ್ಷಿಸಿದರು. ಮಹಾತ್ಮ ಗಾಂಧೀಜಿ ಟೋಪಿಯು ಮೇಲೆ ಜನಪದರು ಈ ರೀತಿ ಹೇಳುತ್ತಾರೆ.
ಟೊಪ್ಪಗೆ ಹಾಕಿದೆನೊ ನಾನೊಂದು
ದಕ್ಷಿಣ ಆಫ್ರಿಕಾಕ್ಕ ಹೋದ ಟೊಪ್ಪಿಗಿ
ಭಂಗಿಯ ಕೆಲಸ ಮಾಡಿದ ಟೊಪ್ಪಿಗಿ
ಯರವಡಾ ಜೇಲೊಳು ಬೀಸಿದ ಟೊಪ್ಪಿಗಿ
ಸತ್ಯಮಾರ್ಗವ ಹಿಡಿಸುವ ಟೊಪ್ಪಿಗಿ
ಸತ್ಯಾಗ್ರಹವನ್ನು ಮಾಡಿದ ಟೊಪ್ಪಿಗಿ
ಭೃತ್ಯ ಕೆಲಸವ ಮಾಡುವ ಟೊಪ್ಪಿಗಿ
ಮಿಥ್ಯ ಅಲ್ಲ ಇದು ಮಹಾತ್ಮನ ಟೊಪ್ಪಿಗಿ
ಮಹಾತ್ಮ ಗಾಂಧೀಜಿಯವರನ್ನು ದೇವರೆಂದೆ ಪೂಜಿಸಿದ ಜನರು. ಮಹಾತ್ಮ ಗಾಂಧೀಜಿಯವರ ಆಜ್ಞೆಗಳನ್ನು ಪಾಲಿಸಲು ತುದಿಗಾಲ ಮೇಲೆ ನಿಂತ ಜನರು. ಗಾಂಧೀಜಿಯ ಕುರಿತು ನೆನೆಯುವ ಜನಪದರ ಗೀತೆ
ಎಂಥಾ ಶಾಣ್ಯಾ ಮಹಾತ್ಮಾ ಗಾಂಧಿ
ಹಿಂದುಸ್ತಾನಕವನೇ ತಂದಿ
ಮದಲೀಗಿ ನೆನದೇನ ಗುರು ಗಾಂಧಿ
ಮದಲೀಗಿ ನೆನದೇನ…
ಹೀಗೆ ಗಾಂಧೀಜಿಯನ್ನು ನೆನೆಯುತ್ತಿದ್ದರು. ಜನಪದದಲ್ಲಿ ಜೋಗುಳ ಪದಗಳನ್ನು ಕಟ್ಟಿ ಹೆಣ್ಣು ಮಕ್ಕಳು ಸಹ ಮಹಾತ್ಮ ಗಾಂಧೀಜಿಯನ್ನು ನೆನೆಯುತ್ತಿದ್ದರು.
ಜೋ ಜೋ ಎನ್ನ ಜೋತಿಯ ಕಂದಾ ಜೋ ಜೋ
ಹೊಟ್ಟಿಗಿ ಇಲ್ಲದೇ ದೇಶದ ಜನರಾ
ಕಷ್ಟ ಸೋಸದು ಕಂಡ ನಿನ್ನ ಕಣ್ಣಾರ
ಗಟ್ಯಾಗಿ ನಿಂತಿಯೋ ಆಗಿ ತಯ್ಯಾರಾ
ನಡಕಟ್ಟಿ ನೀ ಚಳವಳಿ ಮಾಡಿದೋ ಜೋರಾ
ಮುಪ್ಪಿನ ಕಾಲಕ ಬಂದಿತೊ ಹೌಸಾ
ಉಪ್ಪಿನ ಕಾಯಿದೆ ಮುರಿದಂಥಾ ಕೂಸಾ
ಛಪ್ಪನ್ನ ದೇಶಕ ಮರೆದಂಥಾ ಕೂಸಾ
ದೇಶ ಜೋಪಾನಕ್ಕ ನೀ ಸೋಸಿದಿ ತ್ರಾಸಾ ..
ಜನಪದರು ಸಾಮಾನ್ಯ ಜನತೆಯಲ್ಲಿ ಹಲವಾರು ದೇಶ ಪ್ರೇಮದ ಹಣತೆ ಹಚ್ಚಿದರು. ತಮ್ಮದೇ ಶೈಲಿಯ ಗಾಯನದಲ್ಲಿ ಹೋರಾಟಗಾರರ ಆಶಯ, ಗುರಿ, ಉದ್ದೇಶಗಳನ್ನು ಜನರಿಗೆ ತಲುಪುವಂತೆ ಮಾಡಿದ್ದರಲ್ಲಿ ಪತ್ರಿಕೆಗಳು ಹಾಗೂ ಜನಪದರ ಕೊಡುಗೆ ಅಪಾರ. ದೇಶ ಪ್ರೇಮದ ಗೀತೆಗಳನ್ನು ಹಾಡಿ ಜನರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಕೀರ್ತಿ ಜನಪದರಿಗೆ ಸಲ್ಲುತ್ತದೆ.
ಜನಪದದಲ್ಲಿ ಗಾಂಧೀಜಿ…



0 Comments