ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚುನಾಯಿತ ಅನರ್ಹ ಶಾಸಕರ ಕಥೆಯ ಸುತ್ತಮುತ್ತ…

ಮುರಳಿ ಕೃಷ್ಣ 

ಕಾರ್ಲ್ ಮಾರ್ಕ್ಸ್ ಜನಜನಿತ ಉಕ್ತಿಯೊಂದಿದೆ: ‘ಇತಿಹಾಸ ಮೊದಲನೆಯ ಬಾರಿ ದುರಂತವಾಗಿ, ಎರಡನೆಯ ಬಾರಿ ಪ್ರಹಸನವಾಗಿ ಮರುಕಳಿಸುತ್ತದೆ’.  ಇದು ಕರ್ನಾಟಕದ ರಾಜಕಾರಣದ ಮಟ್ಟಿಗೆ ಡಿಸೆಂಬರ್ 9, 2019ರಂದು ಸಾಬೀತಾಯಿತು!

ಕರ್ನಾಟಕದ ರಾಜಕಾರಣದ ಇತಿಹಾಸದ ಪುಟಗಳನ್ನು ತಿರುಗಿಸೋಣ…

ಇಸ್ವಿ 2008…

ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಭಾಜಪ ಸರ್ಕಾರ ರಚಿಸಲು ಮೂರು ಸೀಟುಗಳು ಕಡಿಮೆಯಿದ್ದವು. ಆಗ ಮಾಜಿ ಸಚಿವ, ಗಣಿಧಣಿ ಗಾಲಿ ಜನಾರ್ಧನ ರೆಡ್ಡಿ, ಪಕ್ಷಾಂತರ ವಿರುದ್ಧ ಕಾಯಿದೆಯನ್ನು ನಿಶ್ಚೇತನಗೊಳಿಸಲು, 112 ಸ್ಥಾನಗಳನ್ನು ಪಡೆಯಲು ತಮ್ಮ ಪಕ್ಷದ ವರಿಷ್ಟರ ವಿಶ್ವಾಸವನ್ನು ಗಳಿಸಿಕೊಂಡು ಒಂದು ಹುನ್ನಾರವನ್ನು ಹೆಣೆದರು.  ಅದೇ ‘ಆಪರೇಷನ್ ಕಮಲ’.  

 

ಆಗ ಮೂವರು ಕಾಂಗ್ರೆಸ್ ಮತ್ತು ನಾಲ್ಕು ಜೆಡಿಎಸ್ ಶಾಸಕರು ರಾಜೀನಾಮೆಯನ್ನು ನೀಡುವಂತೆ ನೋಡಿಕೊಳ್ಳಲಾಯಿತು! ಈ ನಿಟ್ಟಿನಲ್ಲಿ ಏನೇನು ವಿನಿಮಯವಾಯಿತು ಎಂಬುದು ಸೂರ್ಯನ ಬೆಳಕಿನಷ್ಟೇ ಸ್ಪಷ್ಟವಾಗಿರುವುದರಿಂದ ಹೆಚ್ಚೇನೂ ತಿಳಿಸಬೇಕಿಲ್ಲ! ಏಳೂ ಮಂದಿ ಭಾಜಪ ಟಿಕೆಟುಗಳನ್ನು ಪಡೆದು ಮರುಚುನಾವಣೆಯಲ್ಲಿ ಸ್ಪರ್ಧಿಸಿದರು. ಅವರಲ್ಲಿ ಐದು ಮಂದಿಗೆ ಮತದಾರರು ವಿಜಯದ ಹಾರವನ್ನು ಕೊರಳಿಗೇರಿಸಿದರು! ಭಾಜಪದ ಬಲಾಬಲ 110ರಿಂದ 115ಕ್ಕೆ ಏರಿತು.  ಅದರ ಸರ್ಕಾರ ರಚನೆಗೊಂಡಿತು.  ನಂತರ ಮೂರು ಮುಖ್ಯಮಂತ್ರಿಗಳನ್ನು ಕಂಡಿತು!

ಇದು ದುರಂತ…

ಇಸ್ವಿ 2019…

ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿತು. ವಿಧಾನಸಭೆಯ ಸಭಾಪತಿ ರಮೇಶ್ ಕುಮಾರ್ 17 ಶಾಸಕರನ್ನು ಸಭೆಯ ಅವಧಿಯ ಕೊನೆಯವರೆಗೆ ಅಂದರೆ 2023ರವರೆಗೆ ಅನರ್ಹಗೊಳಿಸಿದರು.  

ರೆಸಾರ್ಟ್ ರಾಜಕೀಯ ಎಗ್ಗುಸಿಗ್ಗಲ್ಲದೆ, ಬೊಂಬಾಟಾಗಿ ಜರುಗಿತು. ಯಡಿಯೂರಪ್ಪನವರ ನಾಯಕತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಅನರ್ಹತೆಯ ವಿಷಯವನ್ನು ದೇಶದ ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಸ್ತಾಪಿಸಲಾಯಿತು. ನ್ಯಾಯಾಲಯ ಅನರ್ಹತೆಯನ್ನು ಎತ್ತಿ ಹಿಡಿಯಿತು. ಆದರೆ ಅನರ್ಹ ಶಾಸಕರು ಪುನಃ ಜರುಗುವ ಮರುಚುನಾವಣೆಯಲ್ಲಿ ಸ್ಪರ್ಧಿಸಬಹುದೆಂದು ತೀರ್ಪನ್ನು ನೀಡಿತು!

ಡಿಸೆಂಬರ್ 5ರಂದು 15 ಕ್ಷೇತ್ರಗಳಲ್ಲಿ ಮರುಚುನಾವಣೆ ನಡೆಯಿತು. ಅನರ್ಹರಾಗಿದ್ದ ಶಾಸಕರ ಪೈಕಿ 12 ಮಂದಿ ಪುನಃ ಚುನಾಯಿತರಾಗಿದ್ದಾರೆ.  ಇಬ್ಬರು ಸೋತಿದ್ದಾರೆ.

ಇದು ಪ್ರಹಸನ…

ಈ ಇಡೀ ವೃತ್ತಾಂತದಲ್ಲಿ ಯಾರು ವಿಜಯಶಾಲಿಗಳಾದರು? ಯಾರು ಪರಾಭವಗೊಂಡರು? ನಮ್ಮ ಪ್ರಜಾಸತ್ತೆ ಎತ್ತ ಸಾಗುತ್ತಿದೆ? ಅದರ ಭವಿಷ್ಯವೇನು ಎಂಬಿತ್ಯಾದಿ ಪ್ರಶ್ನೆಗಳು ನಮ್ಮೆದುರಿಗಿವೆ.

‍ಲೇಖಕರು

10 December, 2019

2 Comments

  1. ಮ ಶ್ರೀ ಮುರಳಿ ಕೃಷ್ಣ

    ನನ್ನ ಬರಹವನ್ನು ಪ್ರಕಟಿಸಿದ್ದಕ್ಕೆ ‘ಅವಧಿ’ ಮತ್ತು ಶ್ರೀ ಮೋಹನ್ ಗೆ ಧನ್ಯವಾದ..ಮ ಶ್ರೀ ಮುರಳಿ ಕೃಷ್ಣ

  2. santhosh kumar

    ಭಾರತದಲ್ಲಿ ಈಗ ಇರುವುದು ಹುಸಿ ಪ್ರಜಾಪ್ರಭುತ್ವ ವ್ಯವಸ್ಥೆ. ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದಲ್ಲಿ ರೂಪುಗೊಳ್ಳಲೇ ಇಲ್ಲ. ಎಲ್ಲಿಯವರೆಗೆ ಎಚ್ಚತ್ತ ಪ್ರಜೆಗಳು ರೂಪುಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಿಜವಾದ ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುದು ಮರೀಚಿಕೆಯೇ ಸರಿ. ಹಣ, ಹೆಂಡ, ಜಾತಿ, ಧರ್ಮ ಹಾಗೂ ವ್ಯಕ್ತಿನಿಷ್ಠ ಮತದಾನ ನಡೆಯುತ್ತಿರುತ್ತದೋ ಅಲ್ಲಿಯವರೆಗೆ ನಿಜವಾದ ಪ್ರಜಾಪ್ರಭುತ್ವ ರೂಪುಗೊಳ್ಳಲಾರದು. ನಿಜವಾದ ಪ್ರಜಾಪ್ರಭುತ್ವದಲ್ಲಿ ಜನರ ಬೇಡಿಕೆಗೆ ಅನುಗುಣವಾಗಿ ಕಾನೂನುಗಳು ರೂಪುಗೊಳ್ಳಬೇಕು, ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕು ಆದರೆ ಇಂದು ನಮ್ಮ ದೇಶದಲ್ಲಿ ಜನರ ಬೇಡಿಕೆಗೆ ಅನುಗುಣವಾಗಿ ಕಾನೂನುಗಳು ರೂಪುಗೊಳ್ಳುತ್ತಿಲ್ಲ. ಸಂಸತ್ತು ಹಾಗೂ ವಿಧಾನಸಭೆಗಳು ಸರಿಯಾದ ಜನಪರ ಕಾನೂನುಗಳನ್ನು ರೂಪಿಸುತ್ತಿಲ್ಲ. ಇಲ್ಲಿ ಕಾನೂನುಗಳನ್ನು ರೂಪಿಸುತ್ತಿರುವುದು ಅಧಿಕಾರಶಾಹಿಗಳೇ ಹೊರತು ಶಾಸಕರು, ಸಂಸದರು ಅಲ್ಲ. ಅಧಿಕಾರಶಾಹಿ ರೂಪಿಸಿದ ಕಾನೂನುಗಳನ್ನು ಪ್ರಜೆಗಳ ಮೇಲೆ ಬಲಾತ್ಕಾರವಾಗಿ ಹೇರಲಾಗುತ್ತಿದೆ. ನಮ್ಮ ದೇಶದಲ್ಲಿ ಸ್ವತಂತ್ರ ಚಿಂತನಶೀಲ ಪ್ರಜೆಗಳು ಬಹಳ ಕಡಿಮೆ. ಹೀಗಾಗಿ ಪ್ರಜಾಪ್ರಭುತ್ವ ರೂಪುಗೊಳ್ಳುತ್ತಿಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading