ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಗೌರಮ್ಮನಿಗೆ ತವರಾಗುವ ಕಲ್ಪನೆಯೇ ಎಷ್ಟು ಸೊಗಸು…’ – ಸ್ವರ್ಣಾ

Swarna-20150627_002735-150x15011

ಸ್ವರ್ಣ ಎನ್ ಪಿ

ಹಬ್ಬದ ಹೊತ್ತಿನಲ್ಲಿ ಒಂದಷ್ಟು ನೆನಪುಗಳಿಗೆ ಮತ್ತೆ ಬಣ್ಣ ತುಂಬೋಣ . ಒಂದೆರಡು ದಶಕಗಳ ಹಿಂದೆ ಹೋಗೋಣ .
ಬಳೆ , ಬಿಚ್ಚೋಲೆ, ಮೊರದ ಜೊತೆ ಮುಂತಾದ  ಸಾಮಾನುಗಳನ್ನು ತರುವುದರೊಂದಿಗೆ ಗೌರಿ ಹಬ್ಬ ಶುರುವಾಗುತ್ತಿತ್ತು . ಕಪಾಟಿನ ಮೂಲೆಯಲ್ಲಿ ಪಂಚೆಯಲ್ಲಿ ಮುದುರಿ ಕುಳಿತಿರುತ್ತಿದ್ದ  ಬೆಳ್ಳಿಯ ಸಾಮಾನುಗಳು  (ಲಾಕರ್ನಲ್ಲಿಡೋ ಅಷ್ಟು ಬೆಳ್ಳಿ ಬಂಗಾರ ಇರಲಿಲ್ಲ ಆಗ) ಹೊರಬರುತ್ತಿದ್ದವು . ಬಟ್ಟಲುಗಳಿಗೆ ಅರಿಶಿನ ಕುಂಕುಮ ತುಂಬಿಸಿ , ಅನುಕೂಲ ತಟ್ಟೆ ಎಂದು ಕರೆಯಲ್ಪಡುವ ಒಂದು ದೊಡ್ಡ ಬೆಳ್ಳಿತಟ್ಟೆಯಲ್ಲಿ ಪೂಜೆ ಸಾಮನುಗಳನ್ನ ಅಣಿ ಮಾಡಿ ಇಡುತ್ತಿದ್ದೆವು. ಹಬ್ಬದ ಹಿಂದಿನ ರಾತ್ರಿ ಅಜ್ಜಿ ಒಮ್ಮೆ ತಯಾರಿಗಳನ್ನು ಪರೀಕ್ಷಿಸುತ್ತಿದ್ದಳು . ಮಾರನೆಯ ದಿನ ಬೆಳಿಗ್ಗೆ ಮೊಮ್ಮಕ್ಕಳು ಕಡ್ಡಾಯವಾಗಿ ಬೆಳ್ಳಿಯ ಗೆಜ್ಜೆ ಧರಿಸಿ ,  ಹೂ ಮುಡಿದು , ರೇಶಿಮೆಯ ಲಂಗ ಜಾಕೀಟು ತೊಟ್ಟುಕೊಳ್ಳಲೇ ಬೇಕಿತ್ತು . ಇದು ಅಜ್ಜಿಯ ಅಲಿಖಿತ ನಿಯಮ. ಹೀಗೆ ತಯಾರಾದ ಸವಾರಿ ಹಬ್ಬದ ದಿನ ನಸುಕಿನಲ್ಲೇ ಗುಡಿಗೆ ಹೊರಡುತ್ತಿತ್ತು .
ಕೆಲವರು ಗೌರಿಯನ್ನು ಮನೆಯಲ್ಲೇ ಪೂಜಿಸಿದರೆ ಕೆಲವರಿಗೆ ‘ಇಟ್ಟ ಮನೆ ಗೌರಿ’ ಎಂಬ ಪಧ್ಧತಿ ಇದೆ. ಈ ಪದ್ಧತಿ ಇದ್ದವರು ಮನೆಯಲ್ಲಿ ಗೌರಿಯನ್ನು ಕೂಡಿಸುವುದಿಲ್ಲ. ‘ಇಟ್ಟ ಮನೆಗೆ’ ಹೋಗಬಹುದು  ಆದರೆ ಇಲ್ಲಿ ಹೆಣ್ಣು ಮಕ್ಕಳಿಗೆ ಕೆಲವು ‘ಜಾಗತಿಕ’ ಸಮಸ್ಯೆಗಳಿವೆ  ಉದಾಹರಣೆಗೆ ಅನ್ಯರ  ಮನೆಗೆ ಹೋದರೆ ಅವರು ತಾವು ಕಟ್ಟಿದ ಹೂವಿನ ಹಾರವನ್ನೇ ಮೇಲೆ ಹಾಕುತ್ತಾರೆ . ನೀವು ದೂರದಿಂದಲೇ ಪೂಜೆ ಮಾಡಿ ಎನ್ನುತ್ತಾರೆ.  ಅವರು ಹೇಳಿದ ಸಮಯಕ್ಕೇ ಪೂಜೆ. ಎಷ್ಟೋ ದಿನ ಕಷ್ಟ ಪಟ್ಟು, ವರ್ತಿ ಇಟ್ಟು ಮಾಡಿದ ನಮ್ಮ ಗೆಜ್ಜೆ ವಸ್ತ್ರ ವನ್ನು ಕೆಳಗೆ ಹಾಕಿ ತಮ್ಮದನ್ನೇ ಮೇಲೆ ಹಾಕುತ್ತಾರೆ . ಈ ಗೆಜ್ಜೆ ವಸ್ತ್ರದ ಬಗ್ಗೆ ಸುಶ್ರುತ ದೊಡ್ಡೇರಿ ತಮ್ಮ ‘ಮೌನಗಾಳ ‘ ಬ್ಲಾಗಿನಲ್ಲಿ ಚಂದದ ಪ್ರಬಂಧ ಬರೆದಿದ್ದರು.
ಕೆಲವು ದೇವಸ್ಥಾನದಲ್ಲಿ ಗೌರಿಯನ್ನು ಕೂಡಿಸಿ ಅಲ್ಲಿನ ಪುರೋಹಿತರು ಪೂಜೆ ಮಾಡಿಸುತ್ತಾರೆ.ಮೇಲೆ ತಿಳಿಸಿದ ಸಮಸ್ಯೆಗಳಿಗೆ ಉತ್ತರವಾಗಿ ಅಮ್ಮನೂ ಅಂಥಾ ಒಂದು ದೇವಸ್ಥಾನಕ್ಕೆ ಹೋಗುತ್ತಿದ್ದಳು.ಅದೊಂದು ರಾಮ ದೇವಸ್ಥಾನ. ಪ್ರಾಂಗಣದಲ್ಲಿದ್ದ ಮಂಟಪದಲ್ಲಿ  ಮಣ್ಣಿನ ಗೌರಿ ಮತ್ತು ಅಲಂಕಾರದ ಗೌರಿ ಎಂದು ಕರೆಯಲ್ಪಡುವ  ೨-೩ ಅಡಿ ಎತ್ತರದ ಮರದ ಗೌರಿಯನ್ನು ಖುರ್ಚಿಯ ಮೇಲೆ ಕೂಡಿಸಿರುತ್ತಿದ್ದರು. ಮರದ ಗೌರಿಗೆ ಸೀರೆ ಉಡಿಸಿ , ಒಂದೆರಡು ಸರ ಹಾಕಿರುತ್ತಿದ್ದರು. ಆ ಗೌರಮ್ಮ ಎಷ್ಟು ಮುದ್ದಾಗಿದ್ದಳೆಂದರೆ ಪ್ರತೀ ವರ್ಷ ಅವಳನ್ನು ನೋಡಲು ನಾವು ಕಾತರದಿಂದ ಕಾಯುತ್ತಿದ್ದೆವು.  ನಮ್ಮ ಕಡೆ ಗೌರಿ ಎನ್ನುವುದಕ್ಕಿಂತ ಗೌರಮ್ಮ ಎನ್ನುವುದೇ ಹೆಚ್ಚು .
2
ದೇವಸ್ಥಾನದಲ್ಲಿ ಎಲ್ಲರೂ ಸಮಾನರು ಹಾಗಾಗಿ ಇಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದೇನೂ ಇರಲಿಲ್ಲ. ಇಲ್ಲಿನ ಸಮಸ್ಯೆಗಳು ಬೇರೆ ರೀತಿಯವು ಅಷ್ಟೇ.  ಮುದ್ದಾದ ಗೌರಿಯ ಎಡ ಬಲಕ್ಕೆ  ಮಂಟಪದ ಎರಡೂ ಬದಿ ೧೦-೧೫ ಜನ ಸಾಲಾಗಿ  ಕುಳಿತು ಪೂಜೆ ಮಾಡುವ ವ್ಯವಸ್ಥೆ ಮಾಡಿರುತ್ತಿದ್ದರು . ಇಟ್ಟ ವಿಗ್ರಹಕ್ಕೆ ‘ಪ್ರಾಣ ಪ್ರತಿಷ್ಟಾಪನೆ’ ಮಾಡುವುದು ಪೂಜೆಯ ಮುಖ್ಯ ಅಂಗ. ಹಾಗೆ ಮಾಡುವಾಗ ಜೋಯಿಸರು ಹೂವು ಅಕ್ಷತೆ ಹಿಡಿದು ಬಲ ಕೈಯಿಂದ ದೇವರನ್ನು ಸ್ಪರ್ಶಿಸಿಕೊಳ್ಳಿ ಎನ್ನುತ್ತಾರೆ . ೧೦-೧೫ ಜನ ಸಾಲಾಗಿ ಕುಳಿತ ಸಾಲಿನಲ್ಲಿ ಎಲ್ಲರೂ ಹೇಗೆ ಗೌರಿಯನ್ನು ಸ್ಪರ್ಶಿಸೋದು ? ಅದಕ್ಕೆ ಹಿಂದಿನವರು ಮುಂದಿನವರನ್ನು ಸ್ಪರ್ಶಿಸಿಕೊಳ್ಳಿ ಎನ್ನೋರು . ಬೇಗ ಬಂದು ಸಾಲಿಗೆ ಮೊದಲು ಕುಳಿತಿದ್ದರೆ ನಾನೇ ಗೌರಿಯನ್ನು  ಮುಟ್ಟ ಬಹುದಿತ್ತು ಎಂಬ ಆಸೆ ಬಹುತೇಕ ಹೆಂಗಸರದ್ದು . ಈ ರೀತಿಯ ಸ್ಪರ್ಧೆಗಳು ಒಗ್ಗಿ ಬರದ ಕಾರಣ ನಾನು ಇದರಲ್ಲಿ ಭಾಗವಹಿಸಿದ್ದು ಕಡಿಮೆ. ಆದರೆ ತಂಗಿಗೆ ಮಾತ್ರ ಅಮ್ಮನೇ ಮೊದಲನೇಯವಳಾಗಲಿ ಅನ್ನೋ ಆಸೆ. ೫.೩೦ಕ್ಕೆ ಪೂಜೆ ಶುರು ಎಂದರೆ ಇವಳು ಮೂರಕ್ಕೆ ಹೋಗಿ ಅಲ್ಲಿ ಮೊದಲ ಸೀಟು ಕಾಯ್ದಿರಿಸಿ  ಅಮ್ಮನನ್ನು ಗೌರಿಯ ಪಕ್ಕ ಪ್ರತಿಷ್ಟಾಪಿಸುವುದರಲ್ಲಿ ಯಶಸ್ವಿಯಾಗುತ್ತಿದ್ದಳು. ಕೆಲವು ವರ್ಷದ ನಂತರ ಇವಳಿಗಿಂತ ಜಾಣ ಹೆಂಗಸರು  ಬೇರೊಂದು ಉಪಾಯ ಮಾಡಿದರು. ಅವರ ಗಂಡಂದಿರ ಹತ್ತಿರ ಹಿಂದಿನ ದಿನ ರಾತ್ರಿಯೇ ಸಾಮಾನು ಕಳಿಸಿ ಮೊದಲ ಸೀಟನ್ನು ಕಾಯ್ದಿರಿಸಿಕೊಳ್ಳುತ್ತಿದ್ದರು.
ಎರಡು ಜೊತೆ ಬಾಗಿನಗಳನ್ನು ಜೋಡಿಸಿ ಒಂದನ್ನು ಗೌರಮ್ಮನಿಗೆ ಕೊಟ್ಟು ಮತ್ತೊಂದನ್ನು ಬೇರೆಯವರಿಗೆ ಕೊಡುವುದು ಪಧ್ಧತಿ.  ಈ ಬಾಗಿನ ಯಾರಿಗೆ ಕೊಡಬೇಕು ? ಹೋದವರ್ಷ ಯಾರಿಗೆ ಕೊಟ್ಟಿದ್ದೆ ? ನನಗೆ ಹೋದವರ್ಷ ಯಾರು ಕೊಟ್ಟಿದ್ದರು ? ಏನೇನು ಕೊಟ್ಟಿದ್ದರು ? ಈ ಬಾರಿ ಅವರಿಗೇ ಕೊಡಲಾ ?  ಗಂಡಸರಿಗೆ ಚುನಾವಣೆಯ ಫಲಿತಾಂಶ ಎಷ್ಟು ಮುಖ್ಯವೋ ಹೆಂಗಸರಿಗೆ ಈ ಪ್ರಶ್ನೆಗಳು ಅಷ್ಟೇ ಮುಖ್ಯ . ಅಳೆದು ತೂಗಿ  ಯಾರಿಗೋ ಬಾಗಿನ ಕೊಟ್ಟು, ಮನೆಗೆ ಬಂದು ,ಕಾಯಿ ಹೋಳಿಗೆ ಮಾಡಿ ತಿಂದರೆ ಗೌರಿಹಬ್ಬದ ಒಂದು ಮಜಲು ಮುಗಿದಂತೆ.  ಗೌರಿಗೆ ಉಪ್ಪಕ್ಕಿ ಇಟ್ಟು ಮತ್ತೆ ಅವಳನ್ನು ಗಂಡನ ಮನೆಗೆ ಕಳಿಸೋದು ಎರಡನೇ ಹಂತ .
ಕೈಲಾಸದಲ್ಲಿದ್ದ  ‘ಆರ್ಧ್ರ ಗರುವದ’ ಹೆಣ್ಣು ಗೌರಿ ಬುವಿಯಲ್ಲಿದ್ದ ತವರಿಗೆ ಹೋಗಬೇಕೆಂದು ಆಸೆ ಪಡುತ್ತಾಳೆ.  ಗಂಗೆ ಇದ್ದೂ ಗೌರಿಯನ್ನು ಬಿಡಲೊಲ್ಲದ ಪರಶಿವ ಅದೆಷ್ಟೋ ಪುಸಲಾಯಿಸಿದ ಮೇಲೆ ಹೋಗಿ ಬಾ , ಆದರೆ ಮೂರು ದಿನ , ಐದು ದಿನ ತಪ್ಪಿದರೆ ಏಳು ದಿನದ ಒಳಗೆ ನೀನು ಹಿಂತಿರುಗಬೇಕು ಎನ್ನುತ್ತಾನೆ . ಅದಕ್ಕೆ ಗೌರಮ್ಮನನ್ನು ಏಳು ದಿನಗಳಿಗಿಂತ ಹೆಚ್ಚಿಗೆ ಇಟ್ಟುಕೊಳ್ಳಲ್ಲ ಅಂತ ನಮ್ಮಮ್ಮ ಕಥೆ ಹೇಳೋಳು.  ದೈವಕ್ಕೇ ತವರಾಗುವ ಕಲ್ಪನೆಯೇ ಎಷ್ಟು ಸೊಗಸಾಗಿದೆ! ಮಂಗಳವಾರ ಶುಕ್ರವಾರ ಕಳುಹಿಸುವಂತಿಲ್ಲ. ಮನೆಗೆ ಬಂದ ಮಗಳು ಇನ್ನೊಂದೆರಡು ದಿನ ಇದ್ದರೆ ಚೆನ್ನಿತ್ತು ಎಂಬ ಆಸೆ. ಮೂರು ಅಡಿಯ ಮುದ್ದು ಗೌರಿಗೆ ಅಮ್ಮ ಉಪ್ಪು ಅಕ್ಕಿಯನ್ನು ಮಡಿಲಲ್ಲಿ ಇಟ್ಟರೆ ‘ಕಳಿಸೋದು ಬೇಡ ಬಿಡಮ್ಮ , ಇವಳಿಲ್ಲೇ ಇರಲಿ ‘ ಎಂದು ನಮಗೆ ಅನ್ನಿಸುತ್ತಿತ್ತಾ ? ಗೊತ್ತಿಲ್ಲ .
ಹೆಂಡತಿಯನ್ನು ಬಿಟ್ಟಿರಲಾರದ ಶಿವ ‘ನಿನ್ನಮ್ಮ ಅಲ್ಲೇ ಕುಂತಾಳು , ಹೋಗಿ ಕರೆ ತಾ ‘ ಎಂದು ಗಣಪನನ್ನು ಗೌರಿಯ ಹಿಂದೆಯೇ ಕಳಿಸುತ್ತಾನಂತೆ. ಗೌರಿ ಹಬ್ಬದ ಸಂಜೆ ಪೇಟೆಗೆ ಹೋಗಿ ಮೂರ್ತಿ ಮಾಡುವವನಿಗೆ ಅಮ್ಮ ಕೊಟ್ಟ ದುಡ್ಡು ಕೊಟ್ಟು , ಅವನು ಕೊಟ್ಟ ಗಣಪನನ್ನು ಅಕ್ಕಿ ತುಂಬಿದ  ತಟ್ಟೆಯಲ್ಲಿಟ್ಟು ತರುತ್ತಿದ್ದೆವು. ನಂತರದ ದಿನಗಳಲ್ಲಿ ಅಮ್ಮ ಯಾರಿಂದಲೋ ಪರಸರ ಗಣಪತಿಯನ್ನು ಮಾಡಿಸಲು ಶುರು ಮಾಡಿ ಪೇಟೆಗೆ ಹೋಗುವುದು ನಿಂತುಹೋಯಿತು. ಹಳೆಯ ಕಾಲದ ದೊಡ್ಡ ಮರದ ಖುರ್ಚಿ ಗಣಪನ ಮಂಟಪವಾಗುತ್ತಿತ್ತು . ಸುತ್ತ ಮಾವಿನ ತೋರಣ , ಬಾಳೆಯ ಕಂಬ , ರಂಗೋಲಿ , ಅಲಂಕಾರ ಏನು ಸಡಗರ…  ಮನೆಗೆ ಯಾರೋ ಅತಿಥಿ ಬಂದಂತೆ.  ‘ಗಜಮುಖನೇ ಗಣಪತಿಯೇ ..’ ಎಂದು ಎಲ್ಲ ಸ್ಪೀಕರುಗಳು  ಒಟ್ಟಿಗೆ ಹಾಡುವುದರೊಂದಿಗೆ ಹಬ್ಬ ಶುರುವಾಗುತ್ತಿತ್ತು. ಬರಾಕ್ನಿಂದ ಬಿನ್ ಲಾಡೆನ್ ವರೆಗೆ ಎಲ್ಲರೂ ಗಣಪತಿಯ ಪೆಂಡಾಲಿನಲ್ಲಿ ಕಾಣುತ್ತಿದ್ದರು , ಈಗಲೂ ಕಾಣುತ್ತಾರೆ.  ಎಲ್ಲರನೊಳಗೊಂಡವನು ಬೆನಕ.  ಚಕ್ಕುಲಿ , ಕಡುಬು, ಮೋದಕ… ಅದೆಷ್ಟು ಬಗೆಯ ತಿಂಡಿಗಳು. ಸಾಲು ಸಾಲು ಮನೆಗಳ ಪೂಜೆ ಒಪ್ಪಿಕೊಂಡ ಜೋಯಿಸರು ಬೆಳಗಿನಜಾವಕ್ಕೇ ಬರುತ್ತಿದ್ದರು. ಗಣಪ ಇಷ್ಟ ಆದರೆ ಬೇಗ ಏಳೋದು ಕಷ್ಟ!  ತಂಗಿ ಮಾತ್ರ ಮೊದಲೇ ಗಣಪನ ಮುಂದೆ ಕೂತಿರೋಳು. ಹಬ್ಬದೂಟವಾಗಿ ಒಂದು ರೌಂಡ್ ನಿದ್ದೆ ತೆಗೆಯುತ್ತಿದ್ದಂತೆ ಸಣ್ಣ ಸಣ್ಣ ಡಬ್ಬಗಳನ್ನು ಕೈಲಿ ಹಿಡಿದ ಮಕ್ಕಳ ಕೂಗು ಕೇಳೋದು . ೧೧, ೨೧, ೧೦೧ ಹೀಗೆ ಇಂತಿಷ್ಟು ಗಣಪನನ್ನು ನೋಡಿದರೆ ಇಷ್ಟಾರ್ಥ ಸಿಧ್ಧಿ, ವಿಧ್ಯಾರ್ಥಿಗಳಿಗೆ ವಿಧ್ಯೆ ಎಂದು ಯಾರೋ ಹೇಳಿದ್ದರೋ ಕಾಣೆ.  ‘ಗಣಪತಿ ಕುಂಡ್ರುಸಿರೇನ್ರಿ’ ಎಂದು ಗೇಟಿನಲ್ಲೇ ನಿಂತು ಕೂಗೋರು.ಹೌದೆಂದರೆ ಗುಂಪಿನೊಡನೆ ಒಳಗೆ ಬಂದು ‘ಶ್ರೀ ಶ್ರೀ ವಿಧ್ಯಾ ಗಣಪತಿ ಕೀ ಜೈ ‘ ಎಂದು ಕೂಗಿ ತಮ್ಮ ಡಬ್ಬದಿಂದ ತೆಗೆದ  ಅಕ್ಷತೆ ಹಾಕಿ ಹೊರಡೋರು.  ಕೆಲವು ಕಿಲಾಡಿ ಮಕ್ಕಳು ಮನೆಯವರು ಗಣಪನ ಮುಂದಿಟ್ಟಿದ್ದ ಎಲ್ಲ ಅಕ್ಷತೆಯನ್ನೂ ತಮ್ಮ ಡಬ್ಬಕ್ಕೆ ಸುರುವಿಕೊಂಡು ಹೋಗಿ ಬಿಡೋರು. ಸಂಜೆ ಸೂರ್ಯ ಜಾರುತ್ತಿದ್ದಂತೆ ಅಜ್ಜಿ ಎಚ್ಚರಿಸೋಳು ‘ಆಕಾಶದ ಕಡೆ ನೋಡಲೇ ಬೇಡಿ’, ಎಲ್ಲಿಂದಲೋ ಶಮಂತಕೋಪಾಖ್ಯಾನದ ಕಥೆ ಕೇಳಿ ಬರೋದು.ಅಷ್ಟರಲ್ಲಿ ರಾತ್ರಿಯಾಗಿ ಗಣಪನನ್ನು ವಾಪಾಸ್ ಕಳಿಸುವ  ತಯಾರಿ ಶುರುವಾಗುತ್ತಿತ್ತು .  ಮಾಡಿದ ಅಲಂಕಾರ ,ಗೆಜ್ಜೆ ವಸ್ತ್ರ , ಖಾಲಿ ಖುರ್ಚಿಯನ್ನು ನಮ್ಮ ಪಾಲಿಗೆ ಬಿಟ್ಟು ಸರಿಯಾಗಿ  ಮಾತನಾಡುವ ಮೊದಲೇ, ಬಂದ ಅತಿಥಿ  ಹೊರಟು ಬಿಡುತ್ತಿದ್ದ. ಈ ಚಿತ್ರವನ್ನು ಶತಾವಧಾನಿ ಗಣೇಶರು ಸುಂದರ ಕವಿತೆಯನ್ನಾಗಿಸಿದ್ದರು. ಬಣ್ಣ ತುಂಬಲು ಕುಳಿತರೆ ನೆನಪುಗಳಿಗೆ ಬರವಿಲ್ಲ.
ಗಣಪ ಬರುವನೆಂಬ ಸಂಭ್ರಮ ಈಗಲೂ ಇದೆ. ತವರಿಗೆ ಬರುವ ಗೌರಿಯನ್ನು ಈಗಲೂ ಕಾಯುತ್ತೇವೆ. ನಮ್ಮೂರಿನ ಮುದ್ದುಗೌರಿಯಷ್ಟು ಸುಂದರಿಯನ್ನು ನಾನಿನ್ನೂ ನೋಡಿಲ್ಲ .  ಒಂದೆರಡು ವಾರಗಳ ಹಿಂದೆ ಸಂಧ್ಯಾರಾಣಿಯವರು ಬರೆದಂತೆ ಕಾಲ ಬದಲಾದರೂ ಗೌರಮ್ಮ ಬರುತ್ತಾಳೆಂಬ ಸಡಗರ ಕಡಿಮೆಯಾಗಿಲ್ಲ , ಉಪ್ಪಕ್ಕಿಯನಿಟ್ಟು  ಬಾಳು ಬಂಗಾರವಾಗಲಿ  ಮಗಳೇ, ಬೇಗ ಮತ್ತೆ ಬಾ  ಎಂದು ಹರಸುವ ತಾಯಿ ಬದಲಾಗಿಲ್ಲ.
 

‍ಲೇಖಕರು G

16 September, 2015

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. sucheta

    Very nicely written …really that type celebration is different from what we celebrate with our children now.

  2. anuradha

    brought back the memories.
    It is different now, but it still is a continuation of our childhood. Thats life and that is good.

  3. ಕುಸುಮಬಾಲೆ

    ಸ್ಮಾರ್ಟ್ ಸಿಟಿಗಳಲೂ ಗೌರಮ್ಮ ಬರುವಳೆಂಬ ನಂಬಿಕೆ ಇದೆ ನನಗೆ ಸ್ವರ್ಣಾ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading