ಒಂದು ಸೀಟಿನ ಮೇಲೆ ಸಂಚಾರಿ ವಿಜಯ
-‘ಅವಧಿ’ ಟೀಮ್
ಚಿತ್ರ: ಪ್ರೀತಿ ನಾಗರಾಜ್
ʻಆರು ತಿಂಗ್ಳು ಯಾರಿಗೂ ಕಾಣಿಸದಿರುʼ ಡೈಲಾಗ್ ಫುಲ್ ವೈರಲ್
ʻಸೀಟು ಕಾಯ್ದಿರಿಸಿʼ ಸಂಚಾರಿ ವಿಜಯಗೆ ʻಗೌರವʼ
ʻಕಾಯ ಅಳಿದಿದೆ
ಕಾಯಕ ಉಳಿದಿದೆʼ
ಇದು ಸಂಚಾರಿ ವಿಜಯ ಮತ್ತು ಆತನಿಲ್ಲದ ಈ ಹೊತ್ತಿನಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ.. ಈ ಕಾರಣಕ್ಕೆ ತಕ್ಷಣ ನೆನಪಾದ ಸಾಲುಗಳು.
ʻಒಂದು ಸೀಟಿನ ಮೇಲೆ ಸಂಚಾರಿ ವಿಜಯʼಎಂದು ಬರೆದಿತ್ತು
ಮತ್ತು ಆ ಸೀಟು ಖಾಲಿಯಾಗಿಯೇ ಇತ್ತು.
ಯಾಕೆಂದರೆ, ಅದು ಸಂಚಾರಿ ವಿಜಯನ ಸ್ಮರಣೆಗಾಗಿ ʻಮೀಸಲಾಗಿರಿಸಿತ್ತುʼ.

ಭೌತಿಕವಾಗಿ ಸಂಚಾರಿ ವಿಜಯ ಇಲ್ಲ. ಆದರೆ, ಆತನ ನೆನಪು ಯಾವತ್ತೂ ಶಾಶ್ವತ. ಜೊತೆಗೇ ಇದ್ದಾನೆ ಎಂಬ ಭಾವ. ಇಂತಹದ್ದೊಂದು ವಿಭಿನ್ನವಾಗಿ ʻಗೌರವʼ ಸೂಚಿಸಿದ್ದು, ʻಪುರುಸೊತ್ತೇ ಇಲ್ಲʼ ಎಂಬ ಟ್ಯಾಗ್ ಲೈನ್ ಇರುವ ʻಪುಕ್ಸಟ್ಟೆ ಲೈಫುʼ ಸಿನಿಮಾದ ಪ್ರೀಮಿಯರ್ ಶೋನಲ್ಲಿ.
ಮೈಸೂರಿನಲ್ಲಿ ಬುಧವಾರ ನಡೆದ ʻಪುಕ್ಸಟ್ಟೆ ಲೈಫುʼ ಸಿನಿಮಾದ ಪ್ರೀಮಿಯರ್ ಶೋನಲ್ಲಿ ʻಒಂದು ಸೀಟು ಕಾಯ್ದಿರಿಸಲಾಗಿತ್ತು.
ಹೌದು, ʻಸಂಚಾರಿ ವಿಜಯʼಗೆ ಈ ಚಿತ್ರತಂಡ ಕೊಟ್ಟ ʻಗೌರವದ ಪರಿʼ ಕಂಡು ಅಲ್ಲಿದ್ದವರಿಗೆಲ್ಲ ಭಾವುಕತೆ ಉಂಟಾಗಿದ್ದು ನಿಜ. ಶಾರೀರಿಕವಾಗಿ ವಿಜಯ ಇಲ್ಲ. ʻಯಾವತ್ತೂ ಜೊತೆಗೇ ಇದ್ದಾರೆʼ ಎಂಬ ಭಾವನೆಯಿಂದ, ವಿಜಯಗಾಗಿ ʻಕುರ್ಚಿʼಯೊಂದನ್ನು ʻಮೀಸಲಿಟ್ಟುʼ, ಪ್ರೀಮಿಯರ್ ಶೋದಲ್ಲಿ ʻನಮನʼ ಮಾಡಿದ್ದು ಇದೀಗ ʻಫುಲ್ ವೈರಲ್ʼ ಆಗಿದೆ.
ದಿವಂಗತ ನಟ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ನಿಧನರಾಗಿ ಮೂರು ತಿಂಗಳಾಯ್ತಷ್ಟೇ. ಇದೇ ಸೆಪ್ಟೆಂಬರ್ ೨೪ ರಿಂದ ‘ಪುಕ್ಸಟ್ಟೆ ಲೈಫುʼ ಥೇಟರಿನಲ್ಲಿ ಕಾಣಿಸಿಕೊಳ್ಳಲಿದೆ. ನಾಯಕ ನಟನಾಗಿ ಅಭಿನಯಿಸಿದ್ದು ಸಂಚಾರಿ ವಿಜಯ. ಕ್ರಿಯಾಶೀಲತೆಯನ್ನು ಇಡೀ ಸಿನಿಮಾದಲ್ಲಿ ತಂದಿದ್ದು ನಿರ್ದೇಶಕ ಅರವಿಂದ್ ಕುಪ್ಳೀಕರ್. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಅಚ್ಯುತ್ ಕುಮಾರ್ ಮತ್ತು ರಂಗಾಯಣ ರಘು ಅವರದು ಪ್ರಧಾನ ಪಾತ್ರಗಳು. ವಸು ದೀಕ್ಷಿತ್ ಹಾಗೂ ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ.
ಬೀಗ ರಿಪೇರಿ ಮಾಡುವ ಮುಸ್ಲಿಂ ಯುವಕನ ಪಾತ್ರ ಮತ್ತು ಪೊಲೀಸರ ರೂಪಿಸುವ ಕಳ್ಳತನ.. ಇಂತಹ ʻಪುಕ್ಸಟ್ಟೆ ಲೈಫಿʼನ ಕಥೆ ಕೊಟ್ಟಿದ್ದು ಸಂಚಾರಿ ವಿಜಯ.

ಸಿಸಿಟಿವಿಯಲ್ಲಿ ಮುಖ ಕಾಣಸ್ತಲ್ಲವಾ ಎಂಬ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿರುವ ಅಚ್ಯುತ್ ಕುಮಾರ ಹೇಳುವ.. ʻಆರು ತಿಂಗಳು ಯಾರಿಗೂ ಕಾಣಿಸಿಕೊಳ್ಳಬೇಡʼ ವೈರಲ್ ಆಗಿರುವ ಡೈಲಾಗ್.
ಇವತ್ತು ʻಗುರುವಾರʼ ಬೆಂಗಳೂರಿನಲ್ಲಿ ಈ ಸಿನಿಮಾದ ಪ್ರೀಮಿಯರ್ ಶೋ ಆಯೋಜಿಸಿದ್ದು, ಸೆ.೨೪ ರಂದು ಚಿತ್ರ ಬಿಡುಗಡೆ ಕಾಣಲಿದೆ.
ಈ ಚಿತ್ರವನ್ನು ನಟ ಸುದೀಪ್ ಅವರೂ ವೀಕ್ಷಿಸಿದ್ದಾರೆ. ಸಂಚಾರಿ ವಿಜಯ ನಟನೆಗೆ ಹ್ಯಾಟ್ಸಾಫ್ ಹೇಳಿದ್ದಾರೆ. ಕನ್ನಡಿಗರ ಮನ ಗೆಲ್ಲುವ ಎಲ್ಲಾ ವಿಶ್ವಾಸ ಈ ʻಪುಕ್ಸಟ್ಟೆ ಲೈಫುʼ ಸಿನಿಮಾಗಿದೆ.
ತಡವೇಕೆ, ನಾಳೆಯೇ ಶುಕ್ರವಾರ.. ಸಿನಿಮಾ ನೋಡೋದೇ, ಸಂಚಾರಿ ವಿಜಯಗೆ ಸಲ್ಲಿಸುವ ʻಸ್ಮರಣೆಯ ಗೌರವʼ.






0 Comments