ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಣೇಶನ ಕಥೆ: ಮೊದಲು ಪುಸ್ತಕವನ್ನು ಓದಬೇಕು..

ಯೋಗೀಶ್ ಮಾಸ್ಟರ್ ಎಂಬ ಅರೆ ಚಿಂತಕರು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ನಡೆಸಿದ ಪ್ರಣವಾನಂದ ಮತ್ತು ಮುತಾಲಿಕ್….

ಶಶಿಧರ ಭಟ್

 

ಢುಂಢಿ ಎಂಬ ವಿವಾದಾತ್ಮಕ ಕಾದಂಬರಿ ಬರೆದ್ ಯೋಗಿಶ್ ಮಾಸ್ಟರ್ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಹಿಂದೂ ಮಹಾಸಭಾದ ಪ್ರಣವಾನಂದ್ ಸ್ವಾಮೀಜಿ ದೂರು ನೀಡಿದ್ದರು, ಅವರ ದೂರಿನ ಪ್ರಕಾರ ಯೋಗಿಶ್ ಮಾಸ್ಟರ್ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನ್ನು ಉಂಟು ಮಾಡಿದ್ದಾರೆ.
ಯೋಗೀಶ್ ಮಾಸ್ಟರ್ ಅವರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ. ಅವರು ಬರೆದ ಯಾವುದೇ ಬರೆಹವನ್ನು ನಾನು ಓದಿಲ್ಲ. ಢುಂಢಿ ಕಾದಂಬರಿಯನ್ನು ನಾನು ಓದಿಲ್ಲ. ಪತ್ರಿಕೆಗಳನ್ನು ಈ ಕಾದಂಬರಿಯಲ್ಲಿ ಇರುವ ವಿಚಾರಗಳ ಬಗ್ಗೆ ಕೆಲವು ವಿವರಗಳು ಬಂದಿದ್ದರೂ ಅದರ ಆಧಾರದ ಮೇಲೆ ತೀರ್ಪು ನೀಡುವುದು ಸರಿಯಲ್ಲ.
ಆದರೆ ಯೋಗೀಶ್ ಮಾಸ್ಟರ್ ಅವರಿಗ ಕೇಳಬೇಕಾದ ಕೆಲವು ಪ್ರಶ್ನಗಳಿವೆ; ಈ ಪ್ರಶ್ನೆಗಳಿಗೆ ಅವರ ಯಾವುದೇ ಟೀವಿ ಸಂದರ್ಶನದಲ್ಲಿ, ಚರ್ಚಾ ಕಾರ್ಯಕ್ರಮಗಳಲ್ಲಿ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ಯಾರೂ ಅವರನ್ನು ಪ್ರಶ್ನಿಸಿಯೂ ಇಲ್ಲ.
ಅವರು ಬರೆದ ಢುಂಢಿ- ಅರಣ್ಯಕನೊಬ್ಬ ಗಣೇಶನಾದ ಕಥೆ ಕಾದಂಬರಿಯೂ ಅಥವಾ ಸಂಶೋಧನಾ ಗ್ರಂಥವೂ ? ಅದು ಒಂದೊಮ್ಮೆ ಕಾದಂಬರಿಯಾಗಿದ್ದರೆ ನಮ್ಮ ಮುಂದೆ ಬರುವ ಪ್ರಶ್ನೆಗಳು ಬೇರೆ. ಅದು ಸಂಶೋಧನಾ ಗ್ರಂಥವಾಗಿದ್ದರೆ ಎದುರಾಗುವ ಪ್ರಶ್ನೆಗಳು ಬೇರೆ.
ಈ ಪುಸ್ತಕವನ್ನು ಕಾದಂಬರಿ ಎಂದು ಪತ್ರಿಕೆಗಳು ಕರೆದಿವೆ. ಆದರೆ ಯೋಗೀಶ್ ಮಾಸ್ಟರ್ ತಮ್ಮ ಮುನ್ನಡಿಯಲ್ಲಿ ಇದನ್ನು ಸಂಶೋಧನಾ ಗ್ರಂಥ ಎಂದು ಕರೆದಿದ್ದಾರೆ ಎಂದು ನಾನು ಕೇಳಿದ್ದೇನೆ. ಇದು ನಿಜವಾಗಿದ್ದರೆ ಇದು ಕಾದಂಬರಿಯೇ ಅಥವಾ ಸಂಶೋಧನಾ ಗ್ರಂಥವೇ ಎಂಬುದು ಮೊದಲು ತೀರ್ಮಾನವಾಗಬೇಕು. ಇದಾದ ಮೇಲೆ ಪುಸ್ತಕದ ಬಗ್ಗೆ ಚರ್ಚೆ ನಡೆಯಬೇಕು.
ಕಾದಂಬರಿ ಒಂದು ವಿಭಿನ್ನ ಸಾಹಿತ್ಯ ಪ್ರಕಾರ. ಅದನ್ನು ಆಂಗ್ಲ ಭಾಷೆಯಲ್ಲಿ ಫಿಕ್ಷನ್ ಎಂದು ಕರೆಯುವ ಪ್ರಕಾರಕ್ಕೆ ಸೇರಿದ್ದು. ಅಲ್ಲಿ ಇರುವುದೆಲ್ಲ ಸತ್ಯವಲ್ಲ. ಕಾದಂಬರಿಕಾರ ತಾನು ಹೇಳಲು ಹೊರಟಿದ್ದನ್ನು ಪರಿಣಾಮಕಾರಿ ಕಥೆಯ ಮೂಲಕ ಹೇಳುತ್ತಾನೆ. ಆದ್ದರಿಂದ ಕಥೆ ಕಾಲ್ಪನಿಕ. ಯೋಗಿಶ್ ಮಾಸ್ಟರ್ ಕಾದಂಬರಿ ಬರೆದಿದ್ದರೆ ಅದನ್ನು ಒಂದು ಸಾಹಿತ್ಯ ಕೃತಿಯಾಗಿ ನೋಡಬೇಕು, ಸಂತೋಷಪಡಬೇಕು. ಕಾದಂಬರಿ ಏನನ್ನು ಧ್ವನಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಪೊಲೀಸ್ ಪ್ರಕರಣ ಹಾಕುವ ಮೂಲಕವಲ್ಲ..
ಇದು ಸಂಶೋಧನಾ ಗ್ರಂಥ ಎಂದು ತಕ್ಷಣ ಬರುವ ಸಮಸ್ಯೆಗಳು ಒಂದೆರಡಲ್ಲ. ಮೊದನೆಯದಾಗಿ ಇತಿಹಾಸ ಮತ್ತು ಪುರಾಣದ ಮೂಲಭೂತ ಸಮಸ್ಯೆ. ಇತಿಹಾಸವನ್ನು ಇತಿಹಾಸವನ್ನಾಗಿ ಸ್ವೀಕರಿಸಬೇಕು. ಪುರಾಣವನ್ನು ಪುರಾಣವನ್ನಾಗಿ ಸ್ವೀಕರಿಸಬೇಕು. ಪುರಾಣ ಮತ್ತಿ ಇತಿಹಾಸದ ನಡುವೆ ಸಂಘರ್ಷ ಉಂಟಾದಾಗ ಪುರಾಣವನ್ನು ನಂಬಿಕೆಯೆಂದು ಸ್ವೀಕರಿಸಿ ಅದಕ್ಕೆ ಕೊಡಬೇಕಾದ ಗೌರವವನ್ನು ಸಲ್ಲಿಸಬೇಕು. ಯಾಕೆಂದರೆ ಪುರಾಣಗಳ ಹಿಂದೆ ಬಲವಾದ ನಂಬಿಕೆಯ ಇತಿಹಾಸ ಇರುತ್ತದೆ. ಈ ನಂಬಿಕೆಯ ಇತಿಹಾಸ ಸಂಶೋಧಿತ ಇತಿಹಾಸದ ಜೊತೆ ಯಾವಾಗಲೂ ಸಂಘರ್ಷವನ್ನು ನಡೆಸುತ್ತಲೇ ಇರುತ್ತದೆ. ಸಂಶೋಧಿತ ಇತಿಹಾಸಕ್ಕೆ ಒಬ್ಬ ವ್ಯಕ್ತಿಯ ವಿಚಾರ ಲಹರಿ ಮತ್ತು ಆತ ನಂಬಿರುವ ಪಂಥವೇ ತಳಹದಿಯಾಗಿರುತ್ತದೆ. ಆದರೆ ಪುರಾಣ ಹಾಗಲ್ಲ. ಅದು ಜನರ ನಂಬಿಕೆಯ ನಡುವೆ ಬೆಳೆದ ಸತ್ಯವಾಗಿರುತ್ತದೆ. ಜನರ ನಂಬಿಕೆ ಎಂದೂ ತಾತ್ವಿಕ ಮತ್ತು ತಾರ್ಕಿಕ ಸತ್ಯವನ್ನು ನಂಬುವುದಿಲ್ಲ. ಅದು ಬಹುಮಟ್ಟಿಗೆ ಭಾವನಾತ್ಮಕವಾದುದು.
ಒಬ್ಬ ಸಂಶೋಧಕ ಇದನ್ನು ಅರ್ಥ ಮಾಡಿಕೊಳ್ಖಬೇಕು.
ನಂಬಿಕೆಯ ಮೇಲೆ ಬದುಕುವ ಜನ ತಮ್ಮ ನಂಬಿಕೆಗೆ ಪೂರಕವಾದ ಪುರಾಣದ ಸೃಷ್ಟಿಗೆ ಕಾರಣರಾಗಿರುತ್ತಾರೆ. ಈ ಪುರಾಣ ನಂಬಿಕೆಯ ಆಧಾರದ ಮೇಲೆ ದೇವರನ್ನು ಸೃಷ್ಟಿಸುತ್ತದೆ. ಈ ದೇವರು ಅವ್ಯಕ್ತದಿಂದ ವ್ಯಕ್ತವಾಗುವುದು ಹೀಗೆ. ವ್ಯಕ್ತವಾಗುವುದು ರೂಪದಿಂದ. ಈ ರೂಪವನ್ನು ನಾನು ಪ್ರತಿಮೆ ಅಥವಾ ಮೂರ್ತಿ ಎಂದು ಕರೆಯುತ್ತೇನೆ. ಜನರ ಪುರಾಣಾಧಾರಿತ ನಂಬಿಕೆಯ ಮೇಲೆ ಸೃಷ್ಟಿಯಾದ ಪ್ರತಿಮೆ ಇರುವುದು ಪೂಜೆಗಾಗಿ, ಪೂಜಿಸುವವರಿಗಾಗಿ. ಇದನ್ನು ಓಡೆದು ಹಾಕಲು ಇತಿಹಾಸ ಯತ್ನ ನಡೆಸಿದ ತಕ್ಷಣ ಸಮಸ್ಯೆ ಪ್ರಾರಂಭವಾಗುತ್ತದೆ. ಎಡಪಂಥೀಯ ವಿಚಾರವಾದಿಗಳು ಈಗ ಮಾಡುತ್ತಿರುವ ಕೆಲಸ ಇದೇ. ಅದೂ ನಂಬಿಕೆಯ ಮೂರ್ತಿಯನ್ನು ಭಂಜಿಸುವ ಕೆಲಸ. ಇದಕ್ಕೆ ಅವರು ಇತಿಹಾಸದ ಸತ್ಯದ ಲೇಪವನ್ನು ಹಾಕುತ್ತಿದ್ದಾರೆಹುಮುಖ್ಯ
ಇನ್ನು ಇದು ಸಂಶೋಧನಾ ಗ್ರಂಥವಾಗಿದ್ದರೆ ಇದರ ಒಳಗೆ ಇರುವ ವಿಚಾರಗಳ ಬಗ್ಗೆ ಸಂಶೋಧನೆ ನಡೆಸಬೇಕು, ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಬೇಕು. ಯಾವುದು ಸತ್ಯ ಎಂಬುದನ್ನು ತಿಳಿದುಕೊಳ್ಳಲು  ಯತ್ನ ನಡೆಸಬೇಕು. ಆಗ್ಲೂ ಒಮ್ಮೆಲೆ ಪೋಲೀಸ್ ಪ್ರಕರಣ ದಾಖಲಿಸುವುದಲ್ಲ.
ಆದರೆ ನಾವೆಲ್ಲ ತಪ್ಪುತ್ತಿದ್ದೇವೆ. ನಮಗೆ ಸಹನೆ ಕಡಿಮೆಯಾಗುತ್ತಿದ್ದೆ. ಫ್ಯಾಸಿಸ್ಟ್ ಭಾವನೆ ಹೆಚ್ಚುತ್ತಿದೆ. ನಮ್ಮ ನಂಬಿಕೆಗಳ ವಿರುದ್ಧ ಯಾರೂ ಮಾತನಾಡಿದರೂ ಅವರನ್ನು ಮುಗಿಸುವ ಮಾತು ಹೇಳುವಷ್ಟು ಹಿಂಸಾ ಪ್ರವೃತ್ತಿ ಹೆಚ್ಚುತ್ತಿದೆ. ಈ ವಿಚಾರದಲ್ಲಿ ಪರಂಪರೆಯ ಪರವಾಗಿ ಇರುವವರು ಮತ್ತು ಎಡಪಂಥೀಯ ವಿಚಾರಧಾರೆಯನ್ನು ಹೊಂದಿದವರು, ಇಬ್ಬರೂ ತಪ್ಪು ಮಾಡುತ್ತಿದ್ದಾರೆ. ಇವರಲ್ಲಿ ಯಾರಿಗೂ ಸತ್ಯ ತಿಳಿದುಕೊಳ್ಳುವುದು ಬೇಕಾಗಿಲ್ಲ.
ಈ ದೇಶದಲ್ಲಿ ಎರಡು ರೀತಿಯ ಸಂಶೋಧಕರು ಮತ್ತು ಇತಿಹಾಸಕಾರರನ್ನು ನೋಡಬಹುದು. ಎಡಪಂಥೀಯ ವಿಚಾರಧಾರೆಗಳಿಂದ ಪ್ರಭಾವಿತರಾದ, ವಿದೇಷಿ ಮಾನದಂಡ ಬಳಸಿ ವಿಮರ್ಷಿಸುವ ಇತಿಹಾಸಕಾರರು ಒಂದೆಡೆಯಾದರೆ ಪಕ್ಕಾ ಬಲಪಂಥೀಯ ಇತಿಹಾಸಕಾರರು ಇನ್ನೊಂದೆಡೆ. ಇವರೆಬ್ಬರು ತಾವು ಹಾಕಿಕೊಂಡ ಬಣ್ಣದ ಕನ್ನಡಕದ ಮೂಲಕವೇ ಇತಿಹಾಸವನ್ನು ನೋಡುವವರು.
ಭಾರತಕ್ಕೆಬ್ರಿಟೀಶರು ಬಂದು ಪ್ರಭುತ್ವವನ್ನು ಸಾಧಿಸಿದ ಮೇಲೆಈ ಸಮಸ್ಯೆ ಪ್ರಾರಂಭವಾಯಿತು. ಬ್ರಿಟೀಷರು ಭಾರತದ ಇತಿಹಾಸವನ್ನು ಆಂಗ್ಲ ಕಣ್ಣುಗಳಿಂದ ನೋಡತೊಡಗಿದರು. ಹೀಗಾಗಿ ಭಾರತೀಯ ಇತಿಹಾಸ ನಮಗೆ ಅಪರಿಚಿತವಾಗುವಂತಾಯಿತು. ಇದಕ್ಕೆ ಬಹುಮುಖ್ಯ ಕಾರಣ ನಮ್ಮ ಬಲಪಂಥೀಯ ವೈಚಾರಿಕರು ಮತ್ತು ಇತಿಹಾಸಕಾರರು. ಇವರ ಇತಿಹಾಸ ಎಲ್ಲವನ್ನೂ ವೈಭವೀಕರಿಸಿವ, ದೈವತ್ವಕ್ಕೇರಿಸುವ ಇತಿಹಾಸವಾಗಿತ್ತು. ಒಂದೆಡೆ ಭಾರತೀಯತೆಯೂ ಸೇರಿದಂತೆ ಎಲ್ಲವನ್ನೂ ನಿರಾಕರಿಸುವ ವಿಚಾರಧಾರೆ ಮತ್ತು ಇತಿಹಾಸ. ಮತ್ತೊಂದೆಡೆ ಎಲ್ಲವನ್ನೂ ಒಪ್ಪಿಕೊಂಡು ಚಿನ್ನದ ಬಟ್ಟಲಿನಲ್ಲಿ ಮುಂದಿಡುವ ವಿಚಾರಧಾರೆ ಮತ್ತು ಇತಿಹಾಸ.
ಯೋಗೀಷ್ ಮಾಸ್ಟರ್ ಮೊದಲನೆಯ ಗುಂಪಿಗೆ ಸೇರಿದ ವಿಚಾರಧಾರೆಯನ್ನು ಒಪ್ಪಿಕೊಂಡವರು ಎಂದು ಅನ್ನಿಸುತ್ತದೆ. ಅವರು ತಮ್ಮ ಪುಸ್ತಕಕ್ಕೆ ನೀಡಿದ ಬಹುತೇಕ ಆಕರ ಗ್ರಂಥಗಳು ನಾನು ಈ ಮೊದಲೇ ಹೇಳಿದ ಎಡಪಂಥೀಯ ವೈಚಾರಿಕರು ಮತ್ತು ಇತಿಹಾಸಜ್ನರು ಬರೆದ ಆಕರ ಗ್ರಂಥ ಗಳು ಎಂಬುದನ್ನು ಗಮನಿಸಿದ್ದೇನೆ. ಈ ಮೂಲಕ ಅವರು ತಮ್ಮ ನಿಲುಮೆಯನ್ನು ಸ್ಪಷ್ಟಪಡಿಸಿದ್ದಾರೆ.ತಾವು ಎಡಪಂಥೀಯರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರದು ಎಡಪಂಥೀಯ ವಿಚಾರಧಾರೆ, ಆದರೆ ಅವರು ಈಗ ನಾವು ನಂಬಿರುವ ನಮ್ಮೆಲ್ಲರ ಮನೆ ಮನಸ್ಸುಗಳಲ್ಲಿ ಸ್ಥಾಪಿತನಾದ ಗಣೇಶನ ಬಗ್ಗೆ ಮಾತನಾಡಿಲ್ಲ. ಅವರು ಹೇಳಿದ್ದು ಗಣೇಶ ಹೀಗಿದ್ದ ಎಂದು.ಹೀಗಾಗಿ ಯಾರೂ ತಲೆ ಕೆಡಿಸಿಕೊಳ್ಲಬೇಕಿಲ್ಲ. ನಮಗೆ ಈಗ ಗಣೇಶ ಏನಾಗಿದ್ದಾನೆ ಎಂಬುದು ಮುಖ್ಯ. ನಾವೆಲ್ಲ ನಾವು ಕಂಡುಕೊಂಡಿರುವ ಗಣೇಶನನ್ನು ಪೂಜೆ ಮಾಡೋಣ.
ಇದೆಲ್ಲ ಪಂಥಗಳಿಗೆ ಜೋತು ಬಿದ್ದವರ ಸಮಸ್ಯೆ. ಪಂಥಗಳಿಗೆ ಜೋತು ಬಿದ್ದವರು ಅದನ್ನು ಬಿಟ್ಟು ಯೋಚನೆ ಮಾಡುವುದಿಲ್ಲ.
ಗಣೇಶನ ಇತಿಹಾಸದ ಬಗ್ಗ್ರೆ ವೈಚಾರಿಕರು ಎಡಪಂಥೀಯರು ಆಡುವ ಮಾತುಗಳನ್ನು ವಿರೋಧಿಸುವವರು ನಿಜವಾದ ಧಾರ್ಮಿಕರಾಗಿದ್ದರೆ ಅವರ ಜೊತೆ ಮಾತನಾಡುವುದಕ್ಕೆ ಚರ್ಚಿಸುವುದಕ್ಕೆ ಸಿದ್ಧರಿರಬೇಕು. ಈ ದೇಶದಲ್ಲಿ ಧರ್ಮ ಸಂಸ್ಥಾಪನೆ ಮಾಡಿದ ಶಂಕಾರಾಚಾರ್ಯರಂಥವರೂ ಚರ್ಚೆಗೆ ಸದಾ ತೆರೆದುಕೊಂಡಿದ್ದರು. ಇಂತಹ ಮನಸ್ಥಿಯಿಂದಾಗಿಯೇ ಧಾರ್ಮಿಕರು ಇರುವಾಗಲೇ ಚಾರ್ವಾಕರಿಗೂ ಇಲ್ಲಿ ಅವಕಾಶವಿತ್ತು. ಚಾರ್ವಾಕರನ್ನು ಯಾವ ಧಾರ್ಮಿಕರೂ ಜೈಲಿಗೆ ಕಳುಹಿಸಲಿಲ್ಲ. ಅವರ ಕೊಲೆ ಮಾಡಲಿಲ್ಲ. ಹಾಗೆ ಈ ನೆಲದಲ್ಲಿ ಹಿಂದೂ ಧರ್ಮದ ಜೊತೆಗೆ ಜೈನ ಮತ್ತು ಬೌದ್ಧ ಧರ್ಮಗಳು ಹುಟ್ಟಿ ಬೆಳಯಲು ಕಾರಣವಾಗಿದ್ದು ಇಂತಹ ಮುಕ್ತ ಮನಸ್ಥಿತಿಯಿಂದಲೇ. ಆದರೆ ಇಂದು ಹಿಂದೂ ಧರ್ಮವನ್ನು ಉಳಿಸುತ್ತಿದ್ದೇವೆ ಎಂದು ಮಾತನಾಡುವವರು ಚರ್ಚೆಗೆ ಮುಂದೆ ಬರುತ್ತಿಲ್ಲ. ಕಾಲು ಕೆದರಿ ಜಗಳ ಮಾಡಲು ಮುಂದೆ ಬರುತ್ತಿದ್ದಾರೆ. ಹಿಂದೂ ಧರ್ಮದ ಬಗ್ಗೆ ಮಾತನಾಡುವಾಗ ಮುಸ್ಲಿಂ ರ ಬಗ್ಗೆ ಮಾತನಾಡಿ ಎಂದು ಸವಾಲು ಹಾಕುತ್ತಾರೆ. ಆ ಮೂಲಕ ಹಿಂದೂ ಧರ್ಮವನ್ನು ಇನ್ನೊಂದು ಧರ್ಮಕ್ಕೆ ಸಮಾನ ಎಂಬಂತೆ ಪ್ರತಿಬಿಂಬಿಸಿ ತಪ್ಪು ಮಾಡುತ್ತಿದ್ದಾರೆ.
ಯೋಗೀಶ್ ಮಾಸ್ಟರ್ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ ಪ್ರಣವಾನಂದ ಸ್ವಾಮೀಜಿ ಎನ್ನುವವರು ಟೀವಿ ಚರ್ಚೆಯಲ್ಲಿ ಆಡಿದ ಮಾತುಗಳು ಯಾರಿಗೂ ಶೋಭೆ ತರುವಂತೆ ಇರಲಿಲ್ಲ. ನಾನು ಈ ಕಾದಂಬರಿಯನ್ನು ಓದುವುದಿಲ್ಲ. ಇವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಹೇಳುತ್ತಿದ್ದರು. ಪುಸ್ತಕವನ್ನು ಓದದೇ ಅದರಲ್ಲಿ ಇರುವ ವಿಚಾರವನ್ನು ತಿಳಿದುಕೊಳ್ಳದೇ ಒಪ್ಪುವುದಾಗಲೀ ವಿರೋಧಿಸುವುದಾಗಲಿ ಸರಿಯಲ್ಲ ಎಂಬ ಸಾಮಾನ್ಯ ಜ್ನಾನ ಕೂಡ ಅವರಿಗೆ ಇದ್ದಂತಿರಲಿಲ್ಲ. ಹಾಗೆ ಇನ್ನೊಬ್ಬ ಜ್ಯೋತಿಷಿ ಟಿವಿ ಸ್ಟೂಡಿಯೋದಲ್ಲಿ ಪುಸ್ತಕವನ್ನು ಹರಿದುಹಾಕಿ ವೀರಾವೇಷದ ಮಾತುಗಳನ್ನು ಆಡಿದರು.
ಯಾವುದೋ ಒಂದು ಪುಸ್ತಕದ ಮೂಲಕ ಹಿಂದೂ ಧರ್ಮ ನಶಿಸುವಂತಿದ್ದರೆ ಅದು ೫ ೦೦೦ ವರ್ಷಗಳಿಂದ ಇಲ್ಲಿ ಇರುತ್ತಿರಲಿಲ್ಲ. ಇಲ್ಲಿ ನಡೆಯುತ್ತಿರುವ ಬೇರೆ ಧರ್ಮಗಳ ಧಾಳಿ, ಮತಾಂತರಗಳ ಮೂಲಕ ಎಂದೋ ಮರೆಯಾಗಬೇಕಾಗಿತ್ತು. ಆದರೆ ಹಿಂದೂ ಧರ್ಮ ಕೇವಲ ಆಚರಣೆಯಾಗದೇ ಒಂದು ತಾತ್ವಿಕತೆ ಆದ್ದರಿಂದ ಅದು ಉಳಿದುಕೊಂಡಿದೆ. ಅದು ನಮಗೆ ಪರಮತ ಸಹಿಷ್ಣತೆಯನ್ನು ಬೇರೆಯವರ ವಿಚಾರವನ್ನು ಒಪ್ಪಿಕೊಳ್ಳದಿದ್ದರೂ ಅದನ್ನು ಗೌರವಿಸಬೇಕು ಎಂಬ ಸಜ್ಜನಿಕೆಯನ್ನು ನಮಗೆ ಕಲಿಸಿಕೊಟ್ಟಿದೆ.
ವೇದ ಕಾಲದಿಂದಲೂ ಈ ದೇಶದಲ್ಲಿ ಚಾರ್ವಾಕರಿದ್ದರು. ಅವರ ಜೊತೆ ಮುಖಾಮುಖಿಯಾಗಿಯೇ ಈ ಧರ್ಮದಲ್ಲಿ ಹಲವು ರೀತಿಯ ರೂಪಾಂತರಗಳು ಸಂಭವಿಸಿದ್ದು. ಪ್ರಕೃತಿ ಪೂಜೆಯಿಂದ ಮನುಷ್ಯರಂತೆ ದೈಹಿವಾಗಿ ಕಾಣುವ ದೇವರುಗಳವರೆಗೆ ದೈವ ಪೂಜೆ ಬೆಳೆದುಬಂದಿದ್ದು. ಇದೇ ಹಿಂದೂ ಧರ್ಮ ವಿಭಿನ್ನ ಧರ್ಮವಾಗಿ ಉಳಿದುಕೊಂಡಿದ್ದು.
ಆದರೆ ಪ್ರಣವಾನಂದ ಅಂಥವರಿಗೆ ಇದೆಲ್ಲ ಅರ್ಥವಾಗುವುದಿಲ್ಲ. ಧರ್ಮ ಮತ್ತು ಧಾರ್ಮಿಕತೆಯ ನಡುವೆ ಇರುವ ವ್ಯತ್ಯಾಸ ತಿಳಿಯುವುದಿಲ್ಲ. ಧಾರ್ಮಿಕತೆ ಇರದವರ ಕೈಯಲ್ಲಿ ಯಾವಾಗಲೂ ಧರ್ಮ ಅಪಾಯಕ್ಕೆ ಸಿಲುಕಿಕೊಳ್ಳುತ್ತದೆ. ಧರ್ಮ ಆಂತರಿಕವಾಗಿ ಘಟಿಸುವಂತಹುದು. ಅದು ಬಹಿರಂಗವಾಗಿ ಪ್ರದರ್ಶಿಸುವುದಲ್ಲ. ಜೊತೆಗೆ ವಿಚಾರಗಳು ಮತ್ತು ವ್ಯಕ್ತಿಗಳ ನಡುವಿನ ವ್ಯತ್ಯಾಸ ಅರ್ಥ ಆಗದಿದ್ದರೆ ಯಾರೊಬ್ಬರು ಧಾರ್ಮಿಕನಾಗಲು ಸಾದ್ಚ್ಯವಿಲ್ಲ. ಆದರೆ ವಿಚಾರಗಳನ್ನು ವಿರೋಧಿಸುವವರು ದುರ್ಬಲರಾಗಿದ್ದರೆ ಆಗ ವ್ಯಕ್ತಿಗಳ ಮೇಲೆ ಪ್ರಹಾರ ಮಾಡಲು ಪ್ರಾರಂಭಿಸುತ್ತಾರೆ.
ನನಗೆ ಯೋಗೀಶ್ ಮಾಸ್ಟರ್ ಅಂತಹ ಮಹಾನ್ ಸಂಶೋಧಕ ಎಂದು ಅನ್ನಿಸುತ್ತಿಲ್ಲ.ಅವರು ವಿಕ್ಷಿಪ್ತರೂ ಆಗಿರಬಹುದು, ವಿಕೃತಿಯೂ ಅವರಲ್ಲಿ ಇರಬಹುದು, ಆದರೆ ಆತ ಮೆಂಟಲ್ ಎಂಬ ಮಾತುಗಳು ಮಾಧ್ಯಮದಲ್ಲಿ ಕೇಳಿ ಬರತೊಡಗಿದೆ, ಹಾಗೆ ಇನ್ನೂ ಕೆಲವರು ಅವರನ್ನು ಹಿರೋ ಮಾಡುತ್ತಿದ್ದಾರೆ. ಯೋಗೀಶ್ ಮಾಸ್ಟರ್ ಎನೇ ಆಗಿರಲಿ, ಅವರು ವ್ಯಕ್ತಪಡಿಸಿದ ವಿಚಾರಗಳ ಬಗ್ಗೆ ಚರ್ಚೆ ನಡೆದು ಒಂದು ತಾರ್ಕಿಕ ಅಂತ್ಯಕ್ಕೆ ಬರುವದು ಅಗತ್ಯ. ಆದರೆ ಇಲ್ಲಿ ವಿಚಾರಕ್ಕಿಂತ ವ್ಯಕ್ತಿಯನ್ನು ನಾವು ಮುಖ್ಯರನ್ನಾಗಿ ಮಾಡುತ್ತಿದ್ದೇವೆ., ಇದು ವಿಚಾರವನ್ನು ಎದುರಿಸಲಾಗದೇ ವ್ಯಕ್ತಿಗಳ ಮೇಲೆ ಆಕ್ರಮಣ ನಡೆಸುವ ಅಸಹಾಯಕ ಸ್ಥಿತಿ. ಇಂತಹ ಅಸಾಯಕ ಸ್ಥಿತಿಗೆ ನಿಜವಾದ ಧಾರ್ಮಿಕರು ಬರಲು ಸಾಧ್ಯವಿಲ್ಲ. ಆದರೆ ಹಿಂದೂ ಧರ್ಮದ ಪ್ರತಿಪಾದಕರು ಇಂತಹ ಸ್ಥಿತಿಗೆ ಬಂದು ತಲುಪಿದ್ದಾರೆ. ಅವರು ನಿಜವಾದ ಧಾರ್ಮಿಕರಲ್ಲ. ಅವರು ನಿಜವಾದ ಹಿಂದೂಗಳಲ್ಲ. ಜೊತೆಗೆ ಇವರಿಗೆ ನಿಜವಾಗಿ ಧರ್ಮ ಕಾಳಜಿ ಇದೆಯೆ ಎಂಬ ಬಗ್ಗೆ ಕೂಡ ಅನುಮಾನ ಮೂಡುತ್ತದೆ.
ಈಗ ಯೋಗಿಶ್ ಅವರು ಜೈಲಿಗೆ ಹೋಗುವ ಮೂಲಕ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ಸಾಯುವುದಿಲ್ಲ. ಯಾಕೆಂದರೆ ವ್ಯಕ್ತಿಗಳಿಗೆ ಸಾವಿದೆ. ವಿಚಾರಕ್ಕೆ ಸಾವಿಲ್ಲ. ವ್ಯಕ್ತಿ ಜೈಲಿಗೆ ಹೋದರೆ ಅವರ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಜೈಲಿಗೆ ಹಾಕುವುದು ಸಾಧ್ಯವಿಲ್ಲ. ಧಾರ್ಮಿಕತೆ ಯಾರಲ್ಲಿ ಇದೆಯೋ ಅವರು ಮನಸ್ಸನ್ನು ಮುಚ್ಚಿಕೊಂಡಿರುವುದಿಲ್ಲ. ಮನಸ್ಸನ್ನು ತೆರೆದಿಟ್ಟುಕೊಂಡರೆ ಮಾತ್ರ ದೇವರ ದರ್ಶನವಾಗುತ್ತದೆ. ದರ್ಶನ ಎಂದು ಹೇಳುವುದಕ್ಕಿಂತ ಅನುಭವವಾಗುತ್ತದೆ ಎಂದು ಹೇಳುವುದು ಹೆಚ್ಚು ಸೂಕ್ತ.
ಪ್ರ ಣವಾನಂದ ಸ್ವಾಮೀಜಿ, ಪ್ರಮೋದ್ ಮುತಾಲಿಕ್ ಹಾಗೂ ಇತರ ಹಿಂದೂ ಸಂಘಟನೆಗಳ ನಾಯಕರು ಮೊದಲು ಪುಸ್ತಕವನ್ನು ಓದಬೇಕು. ಅದನ್ನು ಓದಿದ ಮೇಲೆ ಯಾವ ಯಾವ ಅಂಶಗಳ ಬಗ್ಗೆ ಅವರಿಗೆ ಭಿನ್ನಾಭಿಪ್ರಾಯಗಳಿವೆಯೋ ಅದರ ಬಗ್ಗೆ ಲೇಖಕರ ಜೊತೆ ಮುಕ್ತ ಚರ್ದೆ ನಡೆಸಬೇಕು. ಅದನ್ನು ಬಿಟ್ಟು ಜೈಲು ಹೊಡೆದಾಟ ಪ್ರತಿಭಟನೆಯ ಬಗ್ಗೆ ಮಾತನಾಡಿದರೆ ಅದರಿಂದ ಯಾವ ಸಾಧನೆಯನ್ನು ಮಾಡಿದಂತಾಗುವುದಿಲ್ಲ. ಹಿಂದೂ ಧರ್ಮಕ್ಕೂ ಕೊಡುಗೆ ನೀಡುವುದಕ್ಕಿಂತ ಕೆಡುಕು ಮಾಡಿದಂತಾಗುತ್ತದೆ ಎಂಬುದನ್ನು ಇವರೆಲ್ಲ ಅರ್ಥ ಮಾಡಿಕೊಳ್ಳಬೇಕು.
ಯೋಗೀಶ್ ಮಾಸ್ಟರ್ ಕೂಡ ತಾವು ಬರೆದ ವಿಚಾರಗಳಿಗೆ ತಾವೇ ಜವಾಬ್ದಾರರು. ತಾವು ಯಾವ ಯಾವ ಗ್ರ್ಸಂಥಗಳ ಆಧಾರದ ಮೇಲೆ ಈ ಅಂಶಗಳನ್ನು ಪ್ರತಿಪಾದಿಸಿದರೋ ಅದನ್ನು ಸಾಬೀತುಪಡಿಸುವುದು ಅವರ ಹೊಣೆಗಾರಿಕೆ.
 

‍ಲೇಖಕರು G

31 August, 2013

14 Comments

  1. Ananda Prasad

    ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಹಿಂದೂ ಧಾರ್ಮಿಕ ಮೂಲಭೂತವಾದ ಹೆಚ್ಚಿದೆ. ಧರ್ಮವನ್ನು ರಾಜಕೀಯ ಉದ್ದೇಶಗಳಿಗೆ ಬಿಜೆಪಿಯ ಮಹನೀಯರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಇದಕ್ಕೆ ಕಾರಣ. ನಿಜವಾದ ಧಾರ್ಮಿಕ ಹಾಗೂ ಅಧ್ಯಾತ್ಮಿಕ ಶ್ರದ್ಧೆ ಉಳ್ಳವರು ದೇವರನ್ನು ಎಷ್ಟೇ ನಿಂದಿಸಿದರೂ, ಟೀಕಿಸಿದರೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಹಿಂದೆ ಇಷ್ಟು ಅಸಹನೆ ಇರಲಿಲ್ಲ. ಎ. ಎನ್. ಮೂರ್ತಿರಾಯರ ‘ದೇವರು’ ಪುಸ್ತಕದಲ್ಲಿ ದೇವರು, ದೇವತೆಗಳ ಅನೈತಿಕತೆಯ ಕೆಲವು ಪ್ರಸ್ತಾಪ ಬರುತ್ತದೆ. ಇದನ್ನು ನೋಡಿ ಯಾವುದೇ ಆಸ್ತಿಕರು ಮೂರ್ತಿರಾಯರನ್ನು ಬಂಧಿಸಬೇಕು ಅಥವಾ ಪುಸ್ತಕವನ್ನು ನಿಷೇಧಿಸಬೇಕು ಎಂದು ಬೊಬ್ಬೆ ಹಾಕಲಿಲ್ಲ. ಪೊಲೀಸರು ಅತ್ಯಾತುರದಲ್ಲಿ ಯೋಗೇಶ್ ಮಾಸ್ಟರ್ ಅವರನ್ನು ಬಂಧಿಸಿರುವುದು ಬಹುಶ: ಮಾಧ್ಯಮಗಳ (ಮುಖ್ಯವಾಗಿ ಒಂದು ಸಬ್ಸಿಡಿ ದರದ ಪತ್ರಿಕೆಯ) ಉತ್ಪ್ರೇಕ್ಷಿತ ವರದಿಗಳು ಎಬ್ಬಿಸಿದ ಉನ್ಮಾದದ ಪರಿಣಾಮ ಎಂದು ಕಾಣುತ್ತದೆ. ಪತ್ರಿಕೆಗಳು ಇಂಥ ಕ್ಷುಲ್ಲಕ ವಿಚಾರಗಳಿಗೆ ಮಹತ್ವ ಕೊಡಬಾರದು. ಒಂದು ಟಿವಿ ವಾಹಿನಿ ಯೋಗೇಶ್ ಮಾಸ್ಟರ್ ಅವರನ್ನು ಹುಚ್ಚ, ಮೆಂಟಲ್ ತರಹ ವರದಿ ಮಾಡಿ ವೈಯಕ್ತಿಕ ತೇಜೋವಧೆ ಮಾಡಲು ಹೊರಟದ್ದು ವಿಚಿತ್ರವಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಇಂಥ ಒಂದು ಬಂಧನ ನಡೆದುದು ಕಾಂಗ್ರೆಸ್ ಪಕ್ಷದ ದ್ವಂದ್ವ ನೀತಿಯನ್ನು ತೋರಿಸುತ್ತದೆ. ಇದು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಡಳಿತದ ಒಂದು ಕಪ್ಪು ಚುಕ್ಕೆಯಾಗಿ ಇತಿಹಾಸದಲ್ಲಿ ನಿಲ್ಲಲಿದೆ.

    • Thippeswamy Nakikere

      Hagadare congress sarkara banda thakshana yogeesh master anthavru huttikondru annodannu oppikollabekagutte. ellavannu sinikathanadinda noduvudarinda samasye mugiyalla. illi left and right ibbaru athurapaduttidare. lekhandalliruvante, ellavannu nidhanavagiye horege hachhabeku. dhundi pusthakada vicharadalli madyamagala patra shlaghaneeya…

      • Ananda Prasad

        ಒಂದು ಕೃತಿ ಸಮಾಜದಲ್ಲಿ ಕ್ಷೋಭೆ ಉಂಟು ಮಾಡುತ್ತದೆ ಎಂದಾದರೆ ಅದನ್ನು ನಿಷೇಧಿಸುವ ಅವಕಾಶ ಸರ್ಕಾರದ ಬಳಿ ಇದ್ದೇ ಇದೆ. ಅದನ್ನು ಬಳಸಿದರೆ ಸಾಕು. ಆದರೆ ಇಲ್ಲಿ ಕೃತಿಕಾರನ ಬಂಧನ ನಡೆದಿದೆ. ಕೃತಿಕಾರ ಬಂಧಿಸಲು ಭೀಕರ ಉಗ್ರಗಾಮಿಯೇನೋ ಅಲ್ಲ ಅಥವಾ ಕ್ರೂರ ಕೊಲೆಗಡುಕನೂ ಅಲ್ಲ. ಹೀಗಿರುವಾಗ ಕೃತಿಕಾರನನ್ನು ಬಂಧಿಸಿರುವುದು ಅಕ್ಷಮ್ಯ ಹಾಗೂ ಸರ್ವಾಧಿಕಾರ ಮನೋಭಾವದ ಪ್ರತೀಕ. ಇಂಥ ಅಸಹನೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾಗ ಇಲ್ಲ.
        ಉತ್ತರ ಭಾರತದಲ್ಲಿ ಆಸಾರಾಂ ಬಾಪು ಎಂಬ ಸನ್ಯಾಸಿ ಹದಿಹರೆಯದ ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ ಬಗ್ಗೆ ಕೇಸು ದಾಖಲಾಗಿದ್ದರೂ ಇನ್ನೂ ಅವರನ್ನು ಬಂಧಿಸಿಲ್ಲ. ಅವರನ್ನು ಬಂಧಿಸಿ ಕಾನೂನು ಪ್ರಕಾರ ವಿಚಾರಣೆ ನಡೆಸಬೇಕೆಂದು ಯಾವುದೇ ಹಿಂದೂಪರ ಸಂಘಟನೆಗಳು ಬೊಬ್ಬೆ ಹಾಕುವುದು ಕಂಡುಬರುವುದಿಲ್ಲ. ಸನ್ಯಾಸಿಗಳಿಗೆ ಎಂದು ಭಾರತದ ಸಂವಿಧಾನದಲ್ಲಿ ವಿಶೇಷ ರಿಯಾಯತಿಯೇನಾದರೂ ಇದೆಯೇ ಎಂದು ಪ್ರಜ್ಞಾವಂತರು ಕೇಳಬೇಕಾಗಿದೆ. ಸನ್ಯಾಸಿ ಅತ್ಯಾಚಾರ ಮಾಡಿದರೆ ಅದು ಅಪರಾಧ ಅಲ್ಲವೇ? ಈ ಬಗ್ಗೆ ಯಾವುದೇ ಹಿಂದೂವಾದಿಗಳೂ ಬೊಬ್ಬೆ ಹಾಕುವುದು ಕಂಡು ಬಂದಿಲ್ಲ. ಬಿಜೆಪಿಯ ಕೆಲವು ರಾಜಕಾರಣಿಗಳು (ಉಮಾಭಾರತಿಯಂಥವರು) ಈಗಾಗಲೇ ಆಸರಾಂ ಬಾಪುವಿಗೆ ನಿರಪರಾಧಿ ಎಂಬ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅತ್ಯಾಚಾರಕ್ಕೊಳಗಾದ ಹುಡುಗಿಯ ತಂದೆ ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಅದರೂ ಸನ್ಯಾಸಿಯ ಬಂಧನ ಮಾಡಲು ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ. ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಕಾನೂನು ಅತ್ಯಂತ ಉಗ್ರವಾಗಿದ್ದರೂ ಅದನ್ನು ಸನ್ಯಾಸಿಯ ಮೇಲೆ ಏಕೆ ಬಳಸುತ್ತಿಲ್ಲ? ಸಾಮಾನ್ಯ ವ್ಯಕ್ತಿ ಅತ್ಯಾಚಾರ ಮಾಡಿದರೆ ಪೊಲೀಸರು ಈ ರೀತಿ ರಿಯಾಯತಿ ನೀಡುತ್ತಿದ್ದರೇ?

  2. ಚೈತನ್ಯ

    ಇಲ್ಲಿ ನನಗೆ ಇನ್ನೊಂದು ನೆನಪಾಗುತ್ತದೆ. ಸಲಮಾನ್ ರಷ್ದಿಯವರ ‘ಸಟಾನಿಕ್ ವರ್ಸಸ್’ನ್ನು ರಾಜೀವ ಗಾಂಧಿ ಬ್ಯಾನ್ ಮಾಡುವಾಗ ಅವರನ್ನು ಯಾರೂ ಇದನ್ನು ಓದಿ ಬ್ಯಾನ್ ಮಾಡಿದಿರಾ ಎಂದು ಕೇಳಲೇ ಇಲ್ಲವಲ್ಲ! ಎಷ್ಟು ವರ್ಷಗಳಾದವು, ಇಪ್ಪತ್ತೈದೋ, ಮೂವತ್ತೋ? ಈ “ಬ್ಯಾನ್ ಸಂಸ್ಕೃತಿ” ಅಂದಿನಿಂದಲೂ ಇದೆ ಮತ್ತು ಚೆನ್ನಾಗಿ ಬೆಳೆದು ನಿಂತಿದೆ.

  3. Srinivasamurthy

    ಹಿಮಾಲಯನ್ ಬ್ಲಂಡರ್ ಹೊತ್ತಗೆಯೂ ನಿಶೇಧಕ್ಕೆ ಒಳಪಟ್ಟಿರುವ ವಿಷಯ ತಮಗೂ ತಿಳಿದಿಯೇ ಇದೆ. ದೇಶಕ್ಕೆ ಒಳಿತನ್ನು ಮಾಡುವ ಬಯಕೆ ಉಳ್ಳವರನ್ನೂ ಈ ಪೊಳ್ಳುಗರು ಬಿಡಲೇ ಇಲ್ಲ.

  4. ಓದುಗ

    ಇಂತಹ ಬೆಳವಣಿಗೆಗಳು ಸಮಾಜದಲ್ಲಿ ಘಟಿಸಿದಾಗ ಎಲ್ಲಾರು ಆಶ್ರಯಿಸುವುದು “ಅಭಿವ್ಯಕ್ತಿ ಸ್ವಾತಂತ್ರ್ಯ” ಎಂಬ ಹಕ್ಕನ್ನು. ವಾಸ್ತವದಲ್ಲಿ ನಮ್ಮ ಮಧ್ಯೆಯಿರುವ “ಅಭಿವ್ಯಕ್ತಿ ಸ್ವಾತಂತ್ರ್ಯ” ದ ಕಲ್ಪನೆ ಎಷ್ಟು ಸರಿಯಾಗಿದೆ ಎಂಬುವುದನ್ನು ಅವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಯಾವುದೇ ಸ್ವಾತಂತ್ರ್ಯವಾಗಲಿ ಅದಕ್ಕೊಂದು ಮಿತಿಯಿರುತ್ತದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆಯೆಂದು ನಾವು ಬಯಸಿದಂತೆಲ್ಲಾ ಬೇರೆ ದೇಶಗಳ ಮೇಲೆ ಅಕ್ರಮಣ ಮಾಡಲು ಆಸ್ಪದವಿಲ್ಲ. ಎಲ್ಲಾ ಸ್ವಾತಂತ್ರ್ಯಗಳಿಗೆ ಯಾವುದಾದರು ಇತಿಮಿತಿಗಳಿದ್ದೇ ಇರುತ್ತವೆ- ಅದು ನೈತಿಕ, ಸಾಮಾಜಿಕ, ಧಾರ್ಮಿಕ, ಭಾವನಾತ್ಮಕ ನಂಬುಗೆ ಅಥವಾ ರಾಜಕೀಯವೂ ಆಗಿರಬಹುದು. ಸ್ವಾತಂತ್ರ್ಯವು ಸ್ವೇಚ್ಚಾಚಾರವಾದರೆ ಸಮಾಜದಲ್ಲಿ ಕ್ಷೋಭೆಯನ್ನು ಬಿಟ್ಟು ಬೇರೇನನ್ನು ನಾವು ಆಪೇಕ್ಷಿಸುವಂತಿಲ್ಲ.
    ನಾವು (ಲೇಖಕನಾಗಿರಲಿ, ಪತ್ರಕರ್ತನಾಗಿರಲಿ, ಕಲಾವಿದನಾಗಿರಲಿ ಅಥವಾ ಯಾರೇ ಆಗಿರಲಿ) ಒಂದೋ ಸ್ವಾತಂತ್ರ್ಯದ ಪರಿಧಿಯನ್ನು ಅರಿತುಕೊಂಡು ಕೆಲಸ ಮಾಡಬೇಕು. ಭಾರತವು ಬಹುಧಾರ್ಮಿಕ, ಸಾಂಸ್ಕೃತಿಕ, ನಂಬುಗೆಯ ದೇಶ. ನಮ್ಮ ದೇಶವಾಸಿಗಳು “ವಿಚಾರವಾದಿಗಳ” ಹಂತಕ್ಕೆ ಇನ್ನೂ ಬೆಳೆದಿಲ್ಲ. ಯಾವ ಮಾತನ್ನು ಎಲ್ಲಿ ಆಡಬೇಕು, ಹೇಗೆ ಆಡಬೇಕು ಎಂಬುವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಅಥವಾ ಉಂಟಾಗುವ ಪರಿಣಾಮಗಳನ್ನು ಎದುರಿಸಲು ಸಿದ್ಧವಾಗಿರಬೇಕು. ಇಲ್ಲಿ ಪ್ರತಿಭಟಿಸುತ್ತಿರುವ ಜನರು ಕೂಡಾ ವ್ಯಕ್ತಪಡಿಸಿರುವುದು ಕೂಡಾ ಭಾರತದ ಸಂವಿಧಾನವು ನೀಡಿರುವ ಪ್ರತಿಭಟಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಬುದ್ದಿಜೀವಿಗಳು “ಪ್ರತಿಭಟಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ” ವನ್ನು ಕೂಡಾ ಅಂಗೀಕರಿಸಬೇಕು.
    ಬುದ್ದಿಜೀವಿಗಳ ಕರ್ತವ್ಯವೇನಾಗಿರಬೇಕೆಂದರೆ ಆ ಪ್ರತಿಭಟನೆಗಳು ಮಾನವೀಯ ಹಾಗೂ ಸಾಂವಿಧಾನಿಕ ಚೌಕಟ್ಟಿನೊಳಗೆ ಇವೆಯೆಂಬುವುದನ್ನು ಖಾತ್ರಿ ಮಾಡಬೇಕು. ಯೋಗಿಶ್ ಮಾಸ್ಟರ್ ನ ವಿಷಯಕ್ಕೆ ಸಂಬಂಧಿಸಿದಂತೆ, ತಮ್ಮ ಭಾವನೆ-ಘ್ಹಾಸಿಗೊಂಡವರು ಕಾನೂನಿನ ನೆರವನ್ನು ಪಡೆದಿದ್ದಾರೆಯೇ ವಿನಹ ಯೋಗೆಶ್ ಮಾಸ್ಟರರ ಮೇಲೆ ಹಲ್ಲೆಯನ್ನಂತೂ ನಡೆಸಿಲ್ವಲ್ಲ. ಪ್ರತಿಭಟನಕಾರರು ಕಾದಂಬರಿ/ಸಂಶೋಧನೆಯ ಉತ್ತರವನ್ನು ಕಾದಂಬರಿ/ಸಂಶೋಧನೆಯ ಮೂಲಕವೇ ನೀಡಬೇಕಿತ್ತು, ಕಾನೂನನ್ನು ಆಶ್ರಯಿಸಬಾರದೆಂದೂ ನಾವು ಆಗ್ರಹಿಸುವುದು ಕೂಡಾ ಸಮಂಜಸವಲ್ಲ. ಪೋಲಿಸ್ ಕೇಸ್ ಆದಲ್ಲಿ ಅಥವಾ ಅರೆಸ್ಟ್ ಆದಲ್ಲಿ ಲೇಖಕರ ಘನತೆ-ಗೌರವಕ್ಕೆ ಯಾವುದೇ ಕೊರತೆಯುಂಟಾಗುವುದಿಲ್ಲ ಅನ್ಲೆಸ್ ಅನ್ದ್ ಉನ್ಟಿಲ್ಳೆ ನ್ಯಾಯಲಯ ಅವರನ್ನು ತಪ್ಪಿತಸ್ಥರೆಂದು ಹೇಳುವವರೆಗೆ. (ಲೇಖಕರ ಪರವಿರುವವರು ಪೋಲಿಸರು ಅರೆಸ್ಟ್ ಮಾಡಿರುವುದು ಸರಿಯೋ ಅಲ್ಲವೋ ಎಂಬುವುದನ್ನು ವಿಮರ್ಶಿಸಬಹುದೇ ವಿನಹ ಕೇಸ್ ದಾಖಾಲಿಸಬಾರದಿತ್ತು ಎಂದು ವಾದಿಸಲಾಗದು.)
    ಮತ್ತೊಂದು ವಿಷಯ, ಲೇಖಕರ ಪರವಿರುವವರು ಗಮನಿಸಬೇಕಾದ ವಿಷಯ, ಈ ಬೆಳವಣಿಗೆಗೆ ಸಂಬಂಧಿಸಿದಂತೆ ಕೆಲ ಮಾಧ್ಯಮಗಳು ಕೂಡಾ “ಅಭಿವ್ಯಕ್ತಿ ಸ್ವಾತಂತ್ರ್ಯ” ಎಂಬ ಟೂಲನ್ನು ಉಪಯೋಗಿಸಿಕೊಂಡೇ ಯೋಗೀಶ್ ಮಾಸ್ಟರ್ ರ ತೇಜೋವಧೆಯನ್ನು ಮಾಡುತಿದ್ದಾರೆ. ಇಲ್ಲಿ ದುರುಪಯೋಗವಾಗುತ್ತಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ಕಲ್ಪನೆ. ಈ ಪ್ರವೃತಿ ಮುಂದುವರೆದಲ್ಲಿ ನೈಜ ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ..

  5. k.satyanarayana

    There are extremists and fundamentalists on both side. No one is better than other though both of them think they are superior to each other.Any argument or idea is alright as long as it is presented in a nuanced and discussion mode. Our armchair debates should not push in the middle domain to extremism.Unfortunately the sad part is more and more people get pushed to xtreme position whenever such controversies take place.

  6. Anonymous

    Abivyakti svatantryada hesarinalli ondu samudayada bavanegalige dakke tarabaradu.
    Ide taraha bere darmadavara bagge barediddare paristiti bereye iruttittu.

  7. ರುದ್ರೇಶ ಕಿತ್ತೂರ ಮುದ್ದೇಬಿಹಾಳ

    ಭಾರತದಲ್ಲಿ ಧರ್ಮದಬಗ್ಗೆ ವಿಮರ್ಷಾತ್ಮಕವಾಗಿ ಅರಿತುಕೊಳ್ಳುವ ಸ್ವಾತಂತ್ರ್ಯವಿಲ್ಲದಿದ್ದರೆ ನಮ್ಮದು ಹೇಗೆತಾನೆ ಮಹಾನ ಧರ್ಮವಾಗಲು ಸಾದ್ಯ ? ಸುಳ್ಳಿನಮೇಲೆ ನಿಂತ ಧರ್ಮವಾಗಿದ್ದರೆ ಮಾತ್ರ ಹೆದರಬೇಕು . ವರಗೆ ಹಚ್ಚಿದಾಗಮಾತ್ರ ಚಿನ್ನದ ಮೂಲಗುಣ ಅರಿಯಲು ಸಾದ್ಯವಲ್ಲವೆ ?

  8. ಜೆ.ವಿ.ಕಾರ್ಲೊ, ಹಾಸನ

    ಅಸರಾಂ ಬಾಪುವಿನ ಬಗ್ಗೆ ಬಹಳ ಎಚ್ಚರಿಕೆಯಿಂದ ಶಬ್ಧಗಳನ್ನು ಉಪಯೋಗಿಸುವವರು, ಯೋಗಿಶ್ ಮಾಸ್ಟರ್, ಅವರ ಪುಸ್ತಕವನ್ನು ಓದದೆಯೇ ಅವರು ಅಂತಾ ವಿಧ್ವಾಂಸರಲ್ಲ, ವಿಕ್ಷಿಪ್ತ,ವಿಕೃತ, ಮೆಂಟಲ್ ಎಂದು ತೀರ್ಪು ಕೊಡುವುದು ಎಷ್ಟು ಸಮಂಜಸ?

    • ವಿಜಯ್

      ಅಸರಾಂ ಬಾಪುವಿನ ರಕ್ಷಣೆ ನೀವು ತಿಳಿದುಕೊಂಡವರಿಂದ ಆಗುತ್ತಿಲ್ಲ..ರಕ್ಷಿಸುವ ಕೈ ಯಾರದು ಎಂದು ಸಧ್ಯದಲ್ಲಿಯೇ ತಿಳಿಯುತ್ತದೆ..ಕಾದು ನೋಡಿ.

  9. Vedanta Adiga

    ಅಸಾರಂ ಬಾಪು ಸನ್ಯಾಸಿ ಅಲ್ಲ, ಆತ ಗೃಹಸ್ಥ. ಆತನಿಗೆ ಹೆಂಡತಿ ಮಕ್ಕಳು ಇದ್ದಾರೆ.

  10. shashikant yadahalli

    ಚಾರ್ವಾಕರನ್ನು ಯಾವ ಧಾರ್ಮಿಕರೂ ಜೈಲಿಗೆ ಕಳುಹಿಸಲಿಲ್ಲ. ಅವರ ಕೊಲೆ ಮಾಡಲಿಲ್ಲ. ಹಾಗೆ ಈ ನೆಲದಲ್ಲಿ ಹಿಂದೂ ಧರ್ಮದ ಜೊತೆಗೆ ಜೈನ ಮತ್ತು ಬೌದ್ಧ ಧರ್ಮಗಳು ಹುಟ್ಟಿ ಬೆಳಯಲು ಕಾರಣವಾಗಿದ್ದು ಇಂತಹ ಮುಕ್ತ ಮನಸ್ಥಿತಿಯಿಂದಲೇ yemba Shashidhar bhatravara matugalu shudda sullu. shankaracharyara kaladalli lokayataru mattu charuvakarannu sarvanashamadalaitu. avara kruthigalannu sudalaitu. indigu namage charavakaru iddaru ennuvudu shankaracharara grantadindale tiliyuttade. charuvakara jote vadadalli sota shankaracharyaru tamma shishyarige charavakarannu kollalu adeshisuttare. virodhi dwaniyannu nashamadiddarindale indu namage charavahakara yava grantagalu labyavilla. hageye vyadika dharmavannu virodisiddarinda boudda darma gadi paragi chaina, japan, srilanka serabekaitu. purohitashahigalindagi basavanna atmahatye madikollabekaitu. illivaregu endu yavattu purohitashahigalu virodhi dwaniyannu nashamuva prayatna bittilla, biduvudu illa.

  11. shashikant yadahalli

    kruthiyannu vodade pratikrayisida shashidhar bhatravarige abhindanegalu. atta edapantiyarannu itta balapantiyarannu vimarshisida nadupantiya bhatt ravaru dayavittu avadhi yalli prakatagonda C.N. Ramachadraravara lekhanavannu vodabeku hagu deviprasad chattopadyara “Mith & Reality” kruthiyannu yavude bannada kannadaka hakikollade vodabeku. jotege yogesh ravara dundi kruthiyannu biduvu madikondu vodi nantara tamma comment madabeku endu savinaya prarthane.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading