
ನವೀನ ಸೊರಬ
ಸ್ಯಾಂಕಿ ಕೆರೆಯ ಅಂಚಿಗೆ
ಬೆಂಕಿ ಹಚ್ಚುವುದೇ ಬೇಡ
ದಿನಾ ಸಂಜೆ ಸೂರ್ಯನೆ
ಗೀರುತ್ತಾನೆ ಬೆಂಕಿಕಡ್ಡಿ
ಕೆರಳುತ್ತದೆ ಕೆಂಪು ಮೋಡ
ಗಾಳಿ ಬೀಸುತ್ತದೆ
ಅಲೆಗಳಿಗೆ ಶಕ್ತಿ ಬರುತ್ತದೆ
ನನ್ನ ಕಾಗದದ ದೋಣಿ
ಚಲಿಸುತ್ತದೆ
ಚೂರು ಚಲಿಸಿದ್ದೇ ತಡ
ಹಸಿಯಾಗುತ್ತದೆ ಬುಡ
ಕಿಡಿಗೇಡಿ ಸೂರ್ಯ
ಕಿಡಿತಾಕಿಸಿದ್ದಾನೆ ತುದಿಗೆ
ಉರಿಯಬೇಕೋ;ಮುಳುಗಬೇಕೋ
ಎಂಬ ಗೊಂದಲ ದೋಣಿಗೆ
ಎಷ್ಟು ಶುದ್ಧ ಬೆಂಕಿಯ ಕೆನ್ನಾಲಿಗೆ
ತಿಂದಷ್ಟು ಹಸಿವು ನೀರಿನ ಅಲೆಗೆ
ಎರಡರಲ್ಲೂ
ಸಾವು ಕೊನೆಗೆ





0 Comments