ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ವಿ ಸುಬ್ರಹ್ಮಣ್ಯ ಓದಿದ ‘ನನ್ನೊಳಗಿನ ಮಾತುಕತೆ’

ಕೆ ವಿ ಸುಬ್ರಹ್ಮಣ್ಯ

ವ್ಯಕ್ತಿತ್ವವನ್ನು ನಿರ್ಲಕ್ಷಿಸಿದ, ಕರಾಳ ಸಂದರ್ಭದ ಮುಖ, ಮುಖವಾಡಗಳ ವಿಕ್ಷಿಪ್ತ ಗ್ರಹಿಕೆಗಳು .
ನಮ್ಮ ಸಂದರ್ಭದ ಅನುಭವ ಗ್ರಹಿಕೆಗಳನ್ನು, ತಮ್ಮ ಬುದ್ಧಿ ಭಾವಗಳಿಂದ, ವಿಶಿಷ್ಟವಾಗಿ, ಜಾಣತನದಿಂದ ವಿಸ್ತರಿಸಬಲ್ಲ ಕಲಾವಿದ ಎ. ಎಮ್. ಪ್ರಕಾಶ್ ಅವರ “ಮಾತುಕತೆ” ಶೀರ್ಷಿಕೆಯ ರೇಖಾಚಿತ್ರಗಳು, (ಕರ್ನಾಟಕ ಚಿತ್ರಕಲಾಪರಿಷತ್, ಬೆಂಗಳೂರು, ಗ್ಯಾಲರಿ 2-3 , ಆಗಸ್ಟ್ 1-7,2022.) ಅಲ್ಲಲ್ಲಿ ಅಕ್ಷರ / ಪಠ್ಯದ ವಿವರಣೆಗಳ ವಿದ್ಯುದಾಲಿಂಗನದಜೊತೆಗೆ ಪ್ರದರ್ಶಿಸಲ್ಪಟ್ಟವು. ಅವರ ಅಭಿವ್ಯಕ್ತಿಯ ಆಶಯದ ವ್ಯಾಪ್ತಿ, ವಿಸ್ತಾರ ಎಷ್ಟೆ೦ದರೆ, ಸ್ಥಳವೇ ಸಾಲದೇನೋ ಎಂಬಂತೆ ಇಡುಕಿರಿದಿದ್ದ ಕೃತಿ ಸಮೂಹ ! ಹಾಗಾಗಿ,ಗ್ಯಾಲರಿಯಲ್ಲಿ ಒಂದೇ, ನೇರ ಸಾಲಿನಲ್ಲಿ ಕಲಾಕೃತಿ ಗಳನ್ನು ಪ್ರದರ್ಶಿಸಬೇಕೆಂಬ ನಿಲುವು ಎದ್ದುಕಂಡಿತು.

ದೃಶ್ಯಕಲಾ ಇತಿಹಾಸದ ಪೂರ್ವಸೂರಿಗಳ ಪ್ರಭಾವದ ಆತಂಕವನ್ನು ಮೀರಿ, ಪರ್ಸಪೆಕ್ಟಿವ್ ನಿಯಮಗಳ ಆವರಣವನ್ನು, ಪಕ್ವ ರೇಖಾ ಲಯದ ಲಾಸ್ಯವನ್ನು ಅವಲಂಬಿಸಿಯೂ, ಎ. ಕೆ. ರಾಮಾನುಜನ್ ವ್ಯಾಕರಣ ಮೀರಿದ ಸ್ವಚ್ಛ೦ದ ಛoದಸ್ಸಿನಲ್ಲಿ ಸೃಷ್ಟಿಸಿದ ಕಾವ್ಯದಂತೆ ಪ್ರಕಾಶ್ ರವರ ರೇಖಾಲಹರಿ ಹರಿದಿದೆ : ಸಂಕೀರ್ಣವೂ, ಸುಂದರವೂ ಆಗಿದೆ.

ಕರಾಳ, ಅಸಹನೀಯ ನೋವಿನ ‘ಕರೋನವಿಶ್ವ’ ಸಂದರ್ಭದಲ್ಲಿನ ಅಭಿವ್ಯಕ್ತಿಗಳ ದೃಶ್ಯಲೋಕ ಅಪೂರ್ವವಾದುದು. ಅಕ್ಷರ ಸಾಹಿತ್ಯದ ರಾಜಾರಾಮ್ ತಾಲ್ಲೂರರ ‘ಕರಿಡಬ್ಬಿ’ ಪ್ರಬಂಧಗಳು, ಆ ಸಂದರ್ಭದ ಅಪರೂಪದ ಮುಖಗಳ ನಗ್ನಸತ್ಯಗಳನ್ನು ಶಕ್ತಿಯುತವಾಗಿ ಬಿಂಬಿಸುತ್ತವೆ. ಆ ತೀವ್ರ ಅಕ್ಷರ ಅಭಿವ್ಯಕ್ತಿಯ ಸಂದರ್ಭದಲ್ಲಿಯೇ ಅಭಿವ್ಯಕ್ತಗೊಂಡ ಎ. ಎಮ್. ಪ್ರಕಾಶ್ ರವರ ಸಂವೇದನಾಶೀಲ ದೃಶ್ಯರೇಖಾ ಅಭಿವ್ಯಕ್ತಿಗಳಿವು.

ಆ ‘ಲಾಕ್ ಡೌನ್’ ಸಂದರ್ಭದ ‘ಬ್ಲಾಕ್ ಔಟ್’ ಧೋರಣೆಯನ್ನು ಪ್ರಕಾಶ್ ಈ ರೇಖಾ ಚಿತ್ರಗಳಲ್ಲಿ ಅಪೂರ್ವ ಮತ್ತು ಅನನ್ಯವಾಗಿ ಬಿಂಬಿಸಿರುವುದು ಗಣನೀಯ. ತೀಕ್ಷ್ ಣ, ತೀವ್ರ ಮತ್ತು ಸಂವೇದನಾಶೀಲ ನೋಡುಗರನ್ನು ಅನುಭವಿಸಲು ಆಹ್ವಾನಿಸಿ ಯಶಸ್ವಿ ಯಾಗುವ ಸಾಮರ್ಥ್ಯದ ಕೃತಿಗಳಿವು. ಇಂತಹ ಕೃತಿಗಳಿಗೆ ಭಾರವಾಗುವಷ್ಟು ಅಕ್ಷರ ಸಾಹಿತ್ಯದ ನೆರವು, ಗ್ಯಾಲರಿ ಪ್ರದರ್ಶನ ಅವಧಿ /ಸಂದರ್ಭದಲ್ಲಿಯೇ ಪಡೆದಿರುವುದು ನಮ್ಮ ನೋಡುಗರ ಸಾಮರ್ಥ್ಯವನ್ನು ಅನುಮಾನಿಸಿದಂತೆ.

‘ನೋಡುವಿಕೆ’ ಮತ್ತು ‘ನೋಟ’ ಗಳಿಗೆ ನಾವು ಹೆಚ್ಚಿನ ಒತ್ತು ನೀಡುವಂತಾಗುವುದು ಇಂದಿನ ಅಗತ್ಯ.ಅದು ಆದ ನಂತರ, ಅಕ್ಷರ ಲೋಕದ ಉಳಿದ ಪ್ರಕ್ರಿಯೆಗಳು ಸಹಜವಾಗಿ ಹಿಂಬಾಲಿಸಿದರೆ ಉತ್ತಮ. ಇಡಿಯಾಗಿ ಇದೊಂದು ಅಪರೂಪದ ಪ್ರದರ್ಶನ. ಮೊನ್ನೆ ಹೇಳಿದಂತೆ ಈ ಪ್ರದರ್ಶನವನ್ನೂ ನೋಡುಗರು ಗ್ಯಾಲರಿಯಲ್ಲಿಯೇ ನೋಡುವುದು ಉತ್ತಮ.

ಎ. ಎಮ್. ಪ್ರಕಾಶರ “ನನ್ನೊಳಗಿನ ಮಾತುಕತೆ” kanglish, ಕನ್ನಡ /ಇಂಗ್ಲಿಷ್, ವಿ. ಹರಿರಾಮ್ ಮೊದಲಾದ ಹಲವರ ಮಾತು, ಅಭಿಪ್ರಾಯಗಳಿರುವ ಪುಸ್ತಕವೂ ‘ಸುಂದರ ಪ್ರಕಾಶನ’ ದಿಂದ ಸುಂದರವಾಗಿ, ಸಾಂಕೇತಿಕ ‘ಕಪ್ಪು ಬಿಳುಪು’ ಬಣ್ಣದಲ್ಲಿ ಒಂದು ಕೆಂಪು ರೇಖೆಯೊಂದಿಗೆ (ಮುಖಪುಟ) ಬಿಡುಗಡೆಯಾಗಿದೆ. ಓದುಗರು ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಓದಬಹುದು. ಆದರೆ ಪ್ರದರ್ಶನ ಮತ್ತೆ ಮತ್ತೆ ಆಗದು. ಪ್ರದರ್ಶನ ಅವಧಿಯಲ್ಲಿ ಗ್ಯಾಲರಿಗೆ ಹೋಗಿಯೇ ನೋಡಬೇಕು.

‍ಲೇಖಕರು Admin

7 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading