ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುವೆಂಪು ವಿವಿಯಲ್ಲಿ ಜೋಗತಿ ಮಂಜಮ್ಮ

ಅನುಕಂಪ ಬೇಡ ಅವಕಾಶ ನೀಡಿ
ಮಂಗಳ ಮುಖಿಯರನ್ನು ಅನುಕಂಪದಿಂದ ನೋಡಬೇಡಿ; ಬದಲಿಗೆ ಅವಕಾಶ ನೀಡಿ ಸಮಾಜದ ಮುಖ್ಯವಾಹಿನಿಗೆ ತನ್ನಿ. ಹೆಣ್ಣಿನ ಆತ್ಮ, ಗಂಡಿನ ಶಕ್ತಿಯನ್ನು ಹೊಂದಿರುವ ನಾವು, ಎಲ್ಲ ಕೆಲಸವನ್ನು ಮಾಡಲು ತಯಾರಿದ್ದೇವೆ. ಮಂಗಳಮುಖಿ ಸಮುದಾಯವನ್ನು ರಕ್ಷಿಸುವುದರ ಜೊತೆಗೆ ಹೆಚ್ಚು ಮೀಸಲಾತಿ ನೀಡಿ ಎಂದು ಮಾತನಾಡುತ್ತ ಪದ್ಮಶ್ರೀ ಪುರಸ್ಕೃತೆ ಜೋಗತಿ ಮಂಜಮ್ಮ ಕೆಲಕ್ಷಣ ಭಾವುಕರಾದರು ಮತ್ತು ಈ ದೃಶ್ಯಕ್ಕೆ ಸಾಕ್ಷಿಯಾದ ಸಭಿಕರ ಕಣ್ಣಾಲಿಗಳು ತುಂಬಿಬಂದವು.

ಸ್ವಾತಂತ್ರ್ಯ ಭಾರತದಲ್ಲಿ ಎಲ್ಲರಿಗೂ ತಮ್ಮ ಆಯ್ಕೆಯಂತೆ ಬದುಕುವ ಹಕ್ಕಿದೆ. ವರ್ಣ, ವರ್ಗ, ಲಿಂಗಭೇದಗಳನ್ನು ಮಾಡದೇ ಎಲ್ಲರನ್ನು ಸಮಾನತೆಯಿಂದ ಕಾಣುವುದರ ಜೊತೆಗೆ ಮಂಗಳಮುಖಿಯರ ಮತ್ತು ಅಲಕ್ಷಿತ ಸಮುದಾಯಗಳ ಹಕ್ಕುಗಳನ್ನು ಗೌರವಿಸಿ, ಅವಕಾಶ ನೀಡಿ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು ಮತ್ತು ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಬಿ. ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಪ್ರೊ. ಎಸ್. ಪಿ. ಹಿರೇಮಠ ಸಭಾಂಗಣದಲ್ಲಿ ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಡಾ. ಬಾಬು ಜಗಜೀವನ್ ರಾಮ್ ಅವರ ೧೧೫ನೇ ಜನ್ಮದಿನಾಚರಣೆ ಹಾಗೂ ‘ಅಲಕ್ಷಿತ ಸಮುದಾಯಗಳು ಮತ್ತು ಸಾಮಾಜಿಕ ನ್ಯಾಯ’ ವಿಷಯ ಕುರಿತ ಎರಡು ದಿನದ ರಾಷ್ಟೀಯ ವಿಚಾರ ಸಂಕಿರಣವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಸಮಾನತೆಯನ್ನು ತರುವುದು ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ ಅವರ ಚಿಂತನೆಗಳಾಗಿದ್ದವು. ಅದರಂತೆ ನಡೆಯುವುದೇ ಸಂವಿಧಾನ ಮತ್ತು ಅವರುಗಳಿಗೆ ನಾವು ನೀಡಬಹುದಾದ ಗೌರವ. ದಲಿತರು, ದಮನಿತರು, ಅಂಚಿನಲ್ಲಿರುವ ಸಮುದಾಯಗಳಾದ ನಮಗೆ ಅನುಕಂಪ ಬೇಡ. ಶಿಕ್ಷಣ ಮತ್ತು ದುಡಿಯುವ ಅವಕಾಶಗಳನ್ನು ನೀಡಿ. ಉತ್ತಮವಾದ ಶಿಕ್ಷಣಕ್ಕೆ ಸಮಾಜದಲ್ಲಿ ಸಮಾನತೆ ತರುವ ಶಕ್ತಿಯಿದೆ. ಅಸಾಧ್ಯ ಎಂದು ಯಾರೂ ಹಿಂದುಳಿಯಬಾರದು; ಬದುಕುವ ಮಾರ್ಗ ಸರಿಯಿದ್ದರೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ತಿಳಿಸಿದರು.

ವಿಚಾರ ಸಂಕಿರಣದ ದಿಕ್ಸೂಚಿ ನುಡಿಗಳನ್ನಾಡಿದ ಕನ್ನಡ ವಿವಿ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಕೆ ಎಮ್ ಮೇತ್ರಿ, ಸಾಮಾಜಿಕ ನ್ಯಾಯದ ಮೂಲಕ ಬುಡಕಟ್ಟು ಸಮುದಾಯಗಳೂ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಜನರಿಗೆ ಧೀರ್ಘಕಾಲಿಕ ಯೋಜನೆಗಳನ್ನು ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು. ನಿರ್ಲಕ್ಷಿತರಿಗೆ ಶಿಕ್ಷಣ, ಉದ್ಯೋಗವನ್ನು ನೀಡಬೇಕು. ನಿರ್ಲಕ್ಷಿತರ ಮೇಲೆ ಅಧ್ಯಯನ ಮಾಡಿ ಸಮಾಜದ ಮುಂದೆ ಅವರ ಸಮಸ್ಯೆಗಳನ್ನು ಪ್ರಸ್ತುತಪಡಿಸುವಂತಹ ಕಾರ್ಯಕ್ರಮಗಳು ಜರುಗಬೇಕು. ಅಲಕ್ಷಿತ ಸಮಾಜದ ಜನರ ವಿಶಿಷ್ಟ ಜೀವನ ಶೈಲಿಗಳು, ಸಂಸ್ಕೃತಿಗಳನ್ನು ಅಧ್ಯಯನಿಸಿ ಅರಿಯಬೇಕು, ಗೌರವಿಸಬೇಕು ಆ ಮೂಲಕ ಸರ್ಕಾರದ ನೀತಿ ನಿರೂಪಣೆಗಳಲ್ಲಿ ಅವುಗಳು ಬಿಂಬಿತವಾಗುವಂತೆ ನೋಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಡಾ. ಬಾಬು ಜಗಜೀವನ್ ರಾಮ್ ಅವರು ಕೃಷಿ, ಕಾರ್ಮಿಕ, ವಿಮಾನಯಾನ, ರಕ್ಷಣೆ ಸೇರಿದಂತೆ ವಿವಿಧ ಸಚಿವಾಲಯಗಳಲ್ಲಿ ಸವಾಲುಗಳಿದ್ದಾಗ ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸಿ ಮೇಲ್ಪಂಕ್ತಿ ಹಾಕಿಕೊಟ್ಟವರು. ಅಂತಹವರ ಆಲೋಚನೆಗಳು ಸಾಮಾನ್ಯ ಕೂಲಿ ಕಾರ್ಮಿಕನಿಂದಿಡಿದು ಎಲ್ಲ ವರ್ಗಗಳ ಅಭಿವೃದ್ಧಿ ಆಶಯಗಳಿಗೆ ಪೂರಕವಾಗಿರುವುದನ್ನು ಕಂಡಿದ್ದೇವೆ. ಆದಕಾರಣ ಅವರ ಅಧ್ಯಯನ ಪ್ರಸ್ತುತದ ಅಂಚಿನ ಸಮುದಾಯಗಳ ಅಭಿವೃದ್ಧಿಗೆ ದಾರಿದೀವಿಗೆಯಾಗಬಲ್ಲದು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಖ್ಯಾತ ಜನಪದ ಗಾಯಕ ಜೋಗಿಲ ಸಿದ್ಧರಾಜು ಅವರು ಜನಪದ ಗೀತೆಯೊಂದನ್ನು ಹಾಡಿ ಸಭಿಕರನ್ನು ರಂಜಿಸಿದರು. ವಿವಿಯ ಕುಲಸಚಿವೆ ಅನುರಾಧ ಜಿ., ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್ ಕಮಾರ್ ಎಸ್. ಕೆ., ಈ ದಿನ ಡಾಟ್ ಕಾಂ ವೆಬ್‌ತಾಣದ ಸುದ್ದಿ ಸಂಪಾದಕ ಬಿ ವಿ ಶ್ರೀನಾಥ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಚಾಲಕ ಡಾ. ಸತ್ಯಪ್ರಕಾಶ್ ಎಮ್. ಆರ್. ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ವಿವಿಗಳ ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಹಾಜರಿದ್ದರು.

ಡಾ. ಅರುಣ್ ಜೋಳದ ಕೂಡ್ಲಿಗಿ ಅವರು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸಮಸ್ಯೆಗಳ ಕುರಿತು ಉಪನ್ಯಾಸ ನೀಡಿದರು. ನಂತರ ಸಂಶೋಧನಾರ್ಥಿಗಳು ಮತ್ತು ಉಪನ್ಯಾಸಕರು ಸಮಾವೇಶದ ವಿವಿಧ ಉಪವಿಷಯಗಳ ಮೇಲೆ ಪ್ರಬಂಧಗಳನ್ನು ಮಂಡಿಸಿದರು.

ಪುಸ್ತಕ ಬಿಡುಗಡೆ: ಕಾರ್ಯಕ್ರಮದಲ್ಲಿ ಹಾವೇರಿಯ ಕರ್ನಾಟಕ ಜಾನಪದ ವಿವಿಯ ಅಧ್ಯಾಪಕ ಡಾ. ಅರುಣ್ ಜೋಳದ ಕೂಡ್ಲಿಗಿ ಅವರು ‘ಸಂಸತ್ತಿನಲ್ಲಿ ಡಾ. ಬಾಬು ಜಗಜೀವನ್ ರಾಮ್ ಭಾಷಣಗಳು- ಸಂ ೧ ರಕ್ಷಣೆ’ ಎಂಬ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಪುಸ್ತಕದ ಪ್ರಸ್ತುತತೆ ಮತ್ತು ವಸ್ತುನಿಷ್ಠತೆ ಕುರಿತು ವಿಜಯ ಕರ್ನಾಟಕದ ಹಿರಿಯ ಪತ್ರಕರ್ತ ಬಿ ಎನ್ ಅನಿಲ್ ಕುಮಾರ್ ಮಾತನಾಡಿದರು.

‍ಲೇಖಕರು Admin

7 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading