ಪತ್ರಕರ್ತೆ ಡಾ ವಿಜಯ ಅವರ ಆತ್ಮಕಥನ ‘ಕುದಿ ಎಸರು’
‘ನಾಕುತಂತಿ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತು ಹಳೆಮನೆ ರಾಜಶೇಖರ ಅವರ ಅನಿಸಿಕೆ ಇಲ್ಲಿದೆ.
–ಹಳೆಮನೆ ರಾಜಶೇಖರ
ಮಹಿಳೆಯ ಭಾವಕೋಶ ಭಾಷಿಕ ಸಂವೇದನೆಯಾಗಿ ಕನ್ನಡ ಜಗತ್ತನ್ನು ನಿಧಾನಕ್ಕೆ ಆವರಿಸಿಕೊಳ್ಳುತ್ತಿದೆ. ಪ್ರಮಾಣಿಕವಾಗಿ ನಿರ್ಭಿಡೆಯಿಂದ ತಮ್ಮ ಅನುಭವ ಜಗತ್ತನ್ನು ದಾಖಲಿಸುತ್ತಿದ್ದಾರೆ. ಅಕ್ಷರ ಪಡೆದ ಮಹಿಳೆಯರು ತಮ್ಮ ಹಿಂದಣ ಜಗತ್ತನ್ನು ತಿರಿಗಿ ನೋಡಿದಾಗ ಕಾಣುವ ಬದುಕಿನ ದಂದುಗಗಳು ಎದೆಯನ್ನು ತೋಯಿಸುತ್ತವೆ. ಬಹುತೇಕ ಮಹಿಳೆಯರ ಬದುಕುಗಳು ಯಾತನೆಯಲ್ಲಿ ಕುದ್ದು ಕುದ್ದು ಅರಳಿದವುಗಳೇ ಆಗಿವೆ. ಮಹಿಳೆಯನ್ನು ಕೇವಲ `ದೇಹ’ವಾಗಿ ಕಾಣುವ ಪುರುಷನ ಪುರುಷನ ಮನೋಭಾವವು ಅತ್ಯಂತ ಅಮಾನುಷವಾದುದು. ಮಹಿಳೆಯ ದೇಹವನ್ನು ತನ್ನಿಚ್ಚಿಗೆ ತಕ್ಕಂತೆ ಕತ್ತರಿಸಿ ರುಚಿ ನೋಡುವುದೇ `ಸಾಮಾಜಿಕ ಸತ್ಯ’ ಎಂಬ ಸಾಮೂಹಿಕ ನಂಬಿಕೆ ಪುರುಷನನೊಳಗೆ ಸ್ಥಾಯಿಯಾಗಿದೆ. `ಮದುವೆ’ ಎಂಬ ಸಾಮಾಜಿಕ ನಿಯತಿ ಪುರುಷನನ್ನು ಯಜಮಾನನ್ನಾಗಿ ಮಹಿಳೆಯನ್ನು ಸೇವಕಿಯಾಗಿ ರೂಪಿಸುತ್ತಾ ಬಂದಿದೆ. ಯಾವುದೇ ಮಹಿಳೆಯ ಬದುಕನ್ನು ನೋಡಿದರೆ ಮದುವೆ ಪೂರ್ವದ ದಿನಗಳ ದಿನಚರಿ ಬೇರೆಯಿರುತ್ತದೆ. ಮದುವೆ ನಂತರ ದಿನಚರಿ ಬೇರೆ ಇರುತ್ತದೆ. ಮದುವೆ ನಂತರ ಪುರುಷಾಧೀನಕ್ಕೆ ಒಳಗಾಗುವ ಮಹಿಳೆ ತನ್ನತನವನ್ನು ಕಳೆದುಕೊಂಡು ಪರಾಧೀನಳಾಗುತ್ತಾಳೆ. ಸುದೈವದಿಂದ ಹೆಣ್ತನವನ್ನು ಗೌರವಿಸುವ ಗಂಡ ಸಿಕ್ಕರೆ ಆಕೆಯ ಬದುಕು ಹೂವಿನ ನಡೆಗೆಯಾಗುತ್ತದೆ. ಇಲ್ಲದಿದ್ದರೆ ಮುಳ್ಳಿನ ಮೇಲಿನ ನಡಿಗೆ.
ಡಾ. ವಿಜಯಮ್ಮರ ಜೀವನ ಕುಲುಮೆಯಲ್ಲಿ ಬೆಂದು ಅರಳಿದ ಜೀವನ. ಮದುವೆಯ ನಂತರದ ಬದುಕು ಊಹೆಗೆ ನಿಲುಕಲಾರದಷ್ಟು ಯಾತನೆಯಿಂದ ಕೂಡಿದ್ದು. ಬೇಜವಾಬ್ದಾರಿಯ, ಅನುಮಾನದ, ಅತಿಕಾಮಿಯ ಗಂಡನಿಂದ ಆಕೆ ಅನುಭವಿಸಿದ ದೈಹಿಕ, ಮಾನಸಿಕ ಹಿಂಸೆಗಳು ಮನುಷ್ಯತ್ವಕ್ಕೆ ಒಡ್ಡುವ ಸವಾಲುಗಳು. ನಿರಂತರ ಲೈಂಗಿಕ ದಾಳಿಗೆ ಒಳಗಾಗುತ್ತಲೇ ಬಂದ ಈಕೆಯ ಬದುಕು ಕರುಳಿರುವಂತದ್ದು. ಗಂಡನ ಎಲ್ಲಾ ಕ್ರೌರ್ಯವನ್ನು ಅನುಭವಿಸಿ ಸಹಿಸಿಕೊಂಡು, ಸಂಸಾರಕ್ಕಾಗಿ ತನ್ನನ್ನು ತೇದು ಗಂಧವಾದ ಕಥನ ಕುದಿ ಎಸರು.
ಚಾರಿತ್ರಿಕವಾಗಿ, ಸಾಮಾಜಿಕವಾಗಿ ಮಹಿಳೆ ವಿವಾಹ ಬಂಧನದಲ್ಲಿ ಲೀನವಾದ ಮೇಲೆ ಬೇರೆ ಆಯ್ಕೆಗಳಿಲ್ಲ. ಆ ವಿವಾಹ ಬಂಧ ಮುಳ್ಳಿನ ಕಟ್ಟೋ, ಹೂವಿನ ಕಟ್ಟೋ ಧರಿಸಿ ಜೀವಿಸಲೇಬೇಕು. ತಾಳಿಕೆಯ, ಸಹನೆಯ, ತ್ಯಾಗದ, ಸೇವೆಯ ಮೌಲ್ಯಗಳ ಉರುಲಲ್ಲಿ ಸಿಕ್ಕಿಕೊಂಡ ಮಹಿಳೆ ಅದನ್ನು ದಾಟಿ ಬದುಕನ್ನು ಸ್ವತಂತ್ರವಾಗಿ, ಸ್ವಾವಲಂಬಿಯಾಗಿ ಕಟ್ಟಿಕೊಳ್ಳುವ ಸಾಮಾಜಿಕ ವಿನ್ಯಾಸ ಲೋಕದಲ್ಲಿ ಇಲ್ಲ. ಆದ್ದರಿಂದ ಲೋಕದ ಮಹಿಳೆಯರು ಸಾಂಸಾರಿಕ ಜಂಜಾಟದಲ್ಲಿ ಎದುರಾಗುವ ಗಂಡಂದಿರ ಎಲ್ಲಾ ಅಧಿಕಾರ ಮತ್ತು ಹಿಂಸೆಯನ್ನು ಒಪ್ಪಿಕೊಂಡು, ಸಹಿಸಿಕೊಂಡು ಬದುಕುವ ಅನಿವಾರ್ಯತೆಗೆ ಒಳಗಾಗುತ್ತಾರೆ. ʻಸಹನೆʻ ಎಂಬ ಕಟ್ಟಳೆಗೆ ಅರ್ಪಿಸಿಕೊಂಡ ಮಹಿಳೆ ಬದುಕನ್ನು ಆಹ್ವಾನಿಸಿಕೊಳ್ಳುವ, ಹೋರಾಡುವ, ಛಲದಿಂದ ಬದುಕನ್ನು ಕಟ್ಟಿಕೊಳ್ಳುವ ಪರಿ ವಿಸ್ಮಯ ಮೂಡಿಸುತ್ತದೆ. ಮಹಿಳೆ ಅಬಲೆ ಎಂಬ ಪರಂಪರಾಗತ ವ್ಯಾಖ್ಯಾನವನ್ನು ಮರು ಪರಿಶೀಲಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಕುದಿ ಎಸರು ಕೃತಿಯನ್ನು ಗಮನಿಸಬೇಕಾಗುತ್ತದೆ. ಪುರುಷಧಿಕಾರದ ನೆಲೆಗಳನ್ನು ಈ ಆತ್ಮ ಕಥೆ ಒಡೆಯುತ್ತಾ ಹೋಗುತ್ತದೆ. ಮಹಿಳೆಯ ಧೀಮಂತ ಅಸ್ಮಿತೆಯನ್ನು ಸಾಬೀತು ಪಡಿಸುತ್ತದೆ. ಆದ್ದರಿಂದ ಈ ಕೃತಿ ಕನ್ನಡದಲ್ಲಿ ಮಹತ್ವದ್ದಾಗುತ್ತದೆ.
ಕುದಿ ಎಸರು ಆತ್ಮ ಕಥೆ ವಿಸ್ಮಯವನ್ನು ಮೂಡಿಸುತ್ತಲೇ ಹೋಗುತ್ತದೆ. ಆತ್ಮ ಕಥೆಯ ಪ್ರತಿ ಪುಟಗಳು ಯಾತನೆ, ಕ್ರೌರ್ಯದಿಂದ ಬಳಲುತ್ತವೆ. ಒಂದು ಕ್ಷಣವೂ ಪತ್ನಿಯೊಂದಿಗೆ ಸಂವೇದನೆಯಿಂದ ಬದುಕದ ಪತಿಯ ಎಲ್ಲಾ ಹಿಂಸೆಯೊಂದಿಗೆ ಪಯಣಿಸಿದ ಮಹಿಳೆಯ ಕಥನವಿದು. ಈ ಕಥನ ಗಂಡ ಕೊಡುವ ಕಷ್ಟಗಳನ್ನು ಎಲ್ಲಿಯೂ ವೈಭವೀಕರಿಸದೆ ತಣ್ಣಗೆ ಓದುಗರ ಕರುಳಿರುವಂತೆ ನಿರೂಪಿಸುತ್ತದೆ. ಓದುಗನ ಮನಸ್ಸಿನಲ್ಲಿದ್ದ ಹಿಂಸೆಯ ಕರಾಳತೆಯನ್ನು ಕರಿಗಿಸುತ್ತಾ ಹೋಗುತ್ತದೆ. ಬದುಕಿನಲ್ಲಿ ಬಂದೊದಗುವ ಎಲ್ಲಾ ಹಿಂಸಾಮಯ ಯಾತನೆಗಳಿಗೆ ಪತಿಯೇ ಕಾರಣವಾದರೂ ಅದನ್ನು ಎಲ್ಲಯೂ ದೂರದೆ ಆತ್ಮಾವಲೋಕನ ದಾಟಿಯಲ್ಲಿ ಈ ಆತ್ಮಕಥನ ಬೆಳೆಯುತ್ತದೆ.

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಮಹಿಳೆಯ ಆತ್ಮಕಥೆಗಳು ಅನೇಕ ಬಂದಿವೆ. ಈ ಆತ್ಮಕಥೆಯ ನಿರೂಪಣೆ ಅತ್ಯಂತ ಸಹಜ, ಸರಳ, ನೇರ, ಪ್ರಮಾಣಿಕ ಆಯಾಮವನ್ನು ಹೊಂದಿದೆ. ಬದುಕಿನ ಪ್ರತಿ ಕ್ಷಣವನ್ನು ಭರ್ಚಿಯ ಮೇಲೆ ನಿಂತತೆ ಕಳೆದ ವಿಜಯಮ್ಮ, ಭರ್ಚಿಗಳನ್ನು ದಾಟಿಕೊಂಡು ಬಂದ ದಾರಿ ಬೆರಗು ಮೂಡಿಸುತ್ತದೆ. ಆಕೆಯೊಳಗಿದ್ದ ಆತ್ಮಸ್ಥೈರ್ಯ, ಗಟ್ಟಿತನ, ನೈತಿಕತೆ , ಸಾಂಸ್ಕೃತಿಕ ಮನಸ್ಸು, ಆಂತಃಕರಣದ ಮಾನವೀಯತೆ, ಹೋರಾಟದ ಮನೋಭಾವ ಬದುಕನ್ನು ಮುನ್ನಡಿಸಿದೆ. ಈ ಅಂಶಗಳು ಇಡೀ ಆತ್ಮಕಥೆಯಲ್ಲಿ ಸಾಂಸ್ಕೃತಿಕ ನೋಟಗಳಾಗಿ ಬಂದಿವೆ. ಇದರಿಂದ ಈ ಆತ್ಮಕಥೆ ಕನ್ನಡದ ಆತ್ಮಕಥೆಗಳಲ್ಲಿ ಭಿನ್ನವಾಗಿ ನಿಲ್ಲುತ್ತದೆ.
ಈ ಆತ್ಮಕಥನ ಆರಂಭವಾಗುವುದೇ ಹಲ್ಲೆಗೆ ಒಳಗಾದ ಮಹಿಳೆಯ ರೋದನದಿಂದ. ಆ ರೋದನವೂ ಸಿಂಪತಿಯ ಸ್ಥಿತಿಯಲ್ಲಿ ನಿಲ್ಲದೆ, ಒಂದು ಮಾನವೀಯ ನೆಲೆಗೆ ತಲುಪುವುದು ವಿಶೇಷ. ಇದು ಸಹನೆಯ, ಕೌಟಂಬಿಕ ಪ್ರೀತಿಯ ಪ್ರತೀಕವೋ ಅಥವಾ ʻಇದು ಅನುಭವಿಸಲೇಬೇಕು ಇದುವೇ ಜೀವನʼ ಎಂದು ನಂಬಿಸಿದ ವ್ಯವಸ್ಥೆಯ ಸಿದ್ದಾಂತವೋ ಎಂಬ ಜಿಜ್ಞಾಸೆಯನ್ನು ಹುಟ್ಟು ಹಾಕುತ್ತದೆ.
ʻಅದೇನಾಯಿತೋ… ನನ್ನ ಹಿಡಿದೆಳೆದಂತಾಯಿತು… ತಿರುಗಿದೆ. ಹೌದು ನನ್ನ ಜಡೆ ಬಹಳ ಉದ್ದವಿತ್ತು. ಅದರ ಬಗ್ಗೆ ನನಗೆ ಹೆಮ್ಮೆಯಿತ್ತು. ಹಾಗೇ ಕೂದಲು ಬಹಳ ಇದ್ದರೆ ತುಂಬಾ ಕಷ್ಟ ಬರುತ್ತೆ. ಸೀತೆಗೂ ಹಾಗೇ ಉದ್ದ ಕೂದಲಿತ್ತು… ಅಂದಿದ್ದ ಹಿರಿಯರ ನೆನಪಾಗುತ್ತದೆ. ನಾನು ಸೀತೆ ಅಲ್ಲ. ಆಕೆ ನನ್ನ ಆದರ್ಶವೂ ಅಲ್ಲ. ಅಥವಾ ಏಕೆ ಯಾರಾದರೂ ಆದರ್ಶವಾಗಬೇಕು? ಇಷ್ಟರಲ್ಲಿ ನಾನು ಆ ಎಳೆದಾಟದಿಂದಾಗಿ ಮುಗ್ಗರಿಸಿ ಬಿದ್ದೆ. “ಏನು ಏನು” ಎಂತ ಚೀರಿದೆನೇನೊ…
ಆದರೆ ಆತ ನನ್ನನ್ನು ಎಳೆದಾಡಿದ… ತನ್ನ ಬೂಟುಗಾಲಿಂದ ನನ್ನನ್ನು ರಸ್ತೆಯಲ್ಲಿ ಉರುಳಿಸತೊಡಗಿದ. ಟ್ಯಾಕ್ಸಿ ಸ್ಟ್ಯಾಂಡಿನಿಂದ ಹತ್ತಿರ ಹತ್ತಿರ ಕೃಷ್ಣರಾವ್ ಪಾರ್ಕ್ವರೆಗೂ ಉರುಳಿಸುತ್ತಲೇ ಇದ್ದ. ರಸ್ತೆಯ ಎರಡೂ ಬದಿ ಓಡಾಡುತ್ತಿದ್ದ ವಾಹನಗಳು ಬ್ರೇಕ್ ಹಾಕಿದವು… ಸಾಲುಗಟ್ಟಿ ನಿಂತವು… ಜನ ನುಗ್ಗಿ ನುಗ್ಗಿ ಬಂದರು. ನನ್ನ ಕೈಯಲ್ಲಿ ಆಗಷ್ಟೇ ಅಂಗಡಿಯಲ್ಲಿ ಬದಲಾಯಿಸಿ ತಂದಿದ್ದ ನನ್ನ ಮಗನ ಬೂಟುಗಳಿದ್ದವು… ಗಟ್ಟಿಯಾಗಿ ಹಿಡಿದಿದ್ದೆ. ಅದು ಬಿದ್ದು ಹಾಳಾಗಬಾರದು. ಮಗನಿಗೆ ಶಾಲೆಗೆ ಹೋಗಲು ತೊಂದರೆ ಆಗುತ್ತೆ ಎಂಬ ಒಳಗಿನ ಆತಂಕವಿರಬಹುದೇನೋ. ಜನರ ಹಾಹಾಕಾರ – ನನ್ನ ಚೀರಾಟ – ದಿಗ್ಭ್ರಮೆ… ಆತ ದೂಡುತ್ತಲೇ ಇದ್ದ. ಅದ್ಯಾವ ದೈತ್ಯ ಆತನ ಒಳಗೆ ಹೊಕ್ಕಿದ್ದನೋ…
ಕಡೆಗೆ ಯಾರೋ ಮಹಾನುಭಾವ ನನ್ನನ್ನು ಎತ್ತಿ ಹಿಡಿದುಕೊಂಡ… ಜನ ಆತನ ಮೇಲೆ ಹರಿಹಾಯ್ದರು. ಆತನಿಗೆ ಭಯವಾಗಿರಬೇಕು… ಅಥವಾ ಏನನ್ನಿಸಿತೋ ಆ ಜನರನ್ನೆಲ್ಲ ತನ್ನ ಕಡೆಗೆ ತಿರುಗಿಸಿಕೊಳ್ಳಬೇಕೆಂಬ ಯೋಚನೆ ಬಂತೋ… ಥಟ್ಟನೆ ಆತ ಕೂಗಿದ “ನೋಡಿ… ನೋಡಿ… ಅವಳು ನನ್ನ ಹೆಂಡತಿ. ಆ ಮನುಷ್ಯ ಅವಳನ್ನು ಹಾರಿಸಿಕೊಂಡು ಹೋಗುತ್ತಿದ್ದಾನೆ… ಅದಕ್ಕೇ…”
ಪ್ರಾಯಃ ಜನರ ಕೋಪವೆಲ್ಲ ನನ್ನ ಜೊತೆಗಿದ್ದ ಮೂರ್ತಿಯವರ ಕಡೆಗೆ ತಿರುಗಲಿ ಎಂಬ ಆಲೋಚನೆ ಇರಬೇಕು… ಆದರೆ ನನ್ನೊಳಗೂ ಒಂದು ಧೈರ್ಯ ನುಗ್ಗಿರಬೇಕು… ಥಟ್ಟನೆ ಕಿರುಚಿದೆ… “ದಯವಿಟ್ಟು ಕ್ಷಮಿಸಿ. ಇದು ನಮ್ಮ ಸ್ವಂತ ವಿಷಯ. ನಾವೇ ಪರಿಹರಿಸಿ ಕೊಳ್ಳುತ್ತೇವೆ. ನಾನು ಈಗಲೇ ಪೊಲೀಸರಿಗೆ ಕಂಪ್ಲೇಂಟ್ ಕೊಡುತ್ತೇನೆ. ನೀವೆಲ್ಲ ಹೊರಡಿ. ನಿಮ್ಮ ಉಪಕಾರಕ್ಕೆ ಋಣಿ…” ಎಂಬಂಥ ಮಾತುಗಳನ್ನು ಆಡಿದೆ. ಮೂರ್ತಿಯವರಿಗೆ ಶಾಕ್ ಆಗಿತ್ತು. ಗರಬಡಿದಂತೆ ನಿಂತುಬಿಟ್ಟಿದ್ದರು.
ಈ ಹೊತ್ತಿಗೆ ಟ್ಯಾಕ್ಸಿಯವನೊಬ್ಬ ನನ್ನ ವಿರೋಧವನ್ನೂ ಲೆಕ್ಕಿಸದೆ ಎಳೆದು ಟ್ಯಾಕ್ಸಿಯಲ್ಲಿ ಹಾಕಿಕೊಂಡು ಹೊರಟೇ ಬಿಟ್ಟ. ಅವನು ಸೀದಾ ಕರೆತಂದದ್ದು ಕಲಾಮಂದಿರಕ್ಕೆ…
ಅ. ನ. ಸುಬ್ಬರಾಯರು ಸೊಸೆ ಕಮಲಾ ಅವರೊಂದಿಗೆ ಮಾತಾಡುತ್ತ ಕೂತಿದ್ದರು. “ಈಯಮ್ಮನ್ನ ನೋಡ್ಕೊಳ್ಳಿ. ಇನ್ನೊಂದೈದು ನಿಮಿಷ ಇದ್ದಿದ್ರೆ ಸತ್ತೇಹೋಗ್ತಿದ್ರು. ಏನೇನೋ ಆಗೋಯ್ತು. ವಸಿ ಸಮಾಧಾನ ಮಾಡಿ. ನೀರು ಕೊಡಿ. ಮೈ-ಕೈ ಗಾಯ ಆಗ್ಯದೆ. ಏನಾರಾ ಔಸ್ದಿ ಹಾಕಿ, ಕಾಪಡಾ ಕೊಡಿ…” ಅಂತ ಹೇಳಿ ಹೊರಟುಹೋದ.
ಇವತ್ತಿಗೂ ಈ ಸಂಗತಿ ನೆನೆದಾಗೆಲ್ಲ ನಿಜವಾದ ಮನುಷ್ಯ-ಮನುಷ್ಯತ್ವ ಎಂದರೆ ಆ ಟ್ಯಾಕ್ಸಿ ಡ್ರೈವರಿನಲ್ಲಿ ಕಂಡೆ ಅನ್ನಿಸುತ್ತದೆ. ಹಾಗೆ ಒಂದು ಅಪಾಯದಿಂದ ಪಾರಾದೆ…. ಆ ಗಲಭೆಯಲ್ಲಿ ನನ್ನ ಕೊರಳಲ್ಲಿದ್ದ ಮಂಗಳಸೂತ್ರ ಕಳಚಿಹೋಗಿತ್ತು…. ಇದ್ದ ಒಂದೇ ಒಂದು ಕೊಂಡಿಯೂ ತನ್ನಂತೆ ಕಳಚಿತು. ಇನ್ನೆಂದೂ ನಾನು ಕೊರಳಲ್ಲಿ ನನಗಾಗಿ ಮಾಂಗಲ್ಯ ಧರಿಸಲಿಲ್ಲ! ಅದು ಮುಖ್ಯ ಎನ್ನಿಸಲಿಲ್ಲ.ʼ (ಪು. ೨- ೩) ಈ ಪ್ರಸಂಗದ ಮೂಲಕ ಆತ್ಮ ಕಥನ ಆರಂಭವಾಗುತ್ತದೆ. ಗಂಡನ ಅಮಾನುಷ ಹಲ್ಲೆಗೆ ಒಳಗಾಗುವ ಈ ಘಟನೆ ವಿಜಯಮ್ಮ ತನ್ನ ಬದುಕಿನಲ್ಲಿ ಅನುಭವಿಸಿದ ಚಿತ್ರಹಿಂಸೆಯನ್ನು ಮುಂದಿಡುತ್ತದೆ. ಈ ರೀತಿಯ ಹಲ್ಲೆಗೆ ಒಳಗಾಗುವ ಮಹಿಳೆಯರ ರೋದನದ ಅಸಾಹಕತೆಯ ಸಂದರ್ಭವಾಗಿಯೂ ಈ ಪ್ರಸಂಗ ಕಾಣುತ್ತದೆ.
ಲೋಕ ಕಟ್ಟಿದ ಬಂಧನದಲ್ಲಿ ಬೆಂದ ಜೀವ ಬಿಡುಗಡೆಯಾಗಿ ಲೋಕವನ್ನು ಒಳಗೊಂಡು ಬದುಕಿದ ಪರಿಯೇ ವಿಸ್ಮಯ. ಇಂತಹ ಗಂಡನ ಜೊತೆಗೂಡಿ ಪಯಣಿಸಿದ ಜೀವನ ನರಕಮಯ. ಅದನ್ನು ನರಕ ಅಂದುಕೊಳ್ಳದೇ ಅದರೊಂದಿಗಿದ್ದು ಬದುಕನ್ನು ಮುನ್ನಡಿಸಿದ್ದೇ ಒಂದು ಪವಾಡ.
ಬದುಕನ್ನು ಗ್ರಹಿಸುವ, ಅರ್ಥ ಮಾಡಿಕೊಳ್ಳುವ ಉನ್ನತ ತಾತ್ವಿಕಗೆ ತಲುಪಿದ ವಿಜಯಮ್ಮ ತನ್ನ ಬದುಕನ್ನು ಹಿಂತುರಿಗಿ ನೋಡಿದಾಗ ನೋಡಿದಾಗ ಕಂಡ ನೆನಪುಗಳನ್ನು ಪೋನಿಸುತ್ತಾ ಹೋಗಿದ್ದಾರೆ. ಈ ಪೋಣಿಸುವುಕೆ ದಾರಕ್ಕೆ ಭಾರವಾಗದೆ ಸಹಜವಾಗಿದೆ. ಕೇವಲ ಅನುಭವಗಳನ್ನು ಮಾತ್ರ ದಾಖಲಿಸುತ್ತಾ ಹೋಗಿರುವದರಿಂದ, ಆ ಅನುಭವಗಳು ಓದುಗರ ಹೃದಯಕ್ಕಿಳಿದು ಮನಸ್ಸಿನ ಹಿಂಸೆಯನ್ನು ಕರಗಿಸಿ ತಿಳಿಗೊಳಿಸುತ್ತವೆ.
ಆಯ್ಕೆಯ ಸ್ವಾತಂತ್ರವೇ ಇಲ್ಲದ ಮಹಿಳೆ ಹಿರಿಯರು ತೋರಿಸಿದ್ದನ್ನೇ ಆಯ್ಕೆ ಮಾಡಿಕೊಳ್ಳಬೇಕು. ಮುಂದೆ ಆ ಆಯ್ಕೆಯೊಂದಿಗೆ ಬದುಕಬೇಕು. ಆಯ್ಕೆಯೂ ಮೇಲ್ನೋಟಕ್ಕೆ ಸರಳವಾಗಿದ್ದರೂ ಅದು ʻಅಧೀನತೆʼಯನ್ನೇ ಬೋಧಿಸುತ್ತದೆ. ಈ ಅಧೀನತೆಯನ್ನು ಮೀರಿ ಬದುಕನ್ನು ಕಟ್ಟಿಕೊಳ್ಳಲು ಪಡುವ ಕಷ್ಟಗಳು ಲೋಕಕ್ಕೆ ಕಾಣುವುದೇ ಇಲ್ಲ. ಆ ಕಷ್ಟ ಕೋಟಲೆಗಳು ಪ್ರತಿ ಮಹಿಳೆಗೆ ಸಹಜವಾದುದು. ಅದೇ ʻಮಹಿಳೆಯ ಕರ್ಮʼ ಎಂಬ ಮನೋಭಾವದ ನಡುವೆ ಏಗಿ ಪಾರಾಗುವುದು ದೊಡ್ಡ ಹೋರಾಟ. ಇಂತಹ ಹೋರಾಟದ ಅಗ್ನಿಕುಂಡದಲ್ಲಿ ಹಾದು ಬಂದ ಬದುಕನ್ನು ಈ ಆತ್ಮಕಥೆಯಲ್ಲಿ ಕಾಣುತ್ತೇವೆ.
ತನ್ನ ಬದುಕಿನ ಆಯ್ಕೆಯ ಬಗ್ಗೆ ಆಕೆ ಹೇಳುವ ಮಾತುಗಳನ್ನು ಗಮನಿಸಬೇಕು. ʻನಾನು ಏನನ್ನಾದರೂ ಆಯ್ಕೆ ಮಾಡಕೊಂಡೆನೆ ? ಆಯ್ಕೆ –ಅಗತ್ಯಗಳ ಬಗ್ಗೆ ಯೋಚಿಸುವದಕ್ಕೆ ಮೊದಲೇ ಅವೆಲ್ಲ ನನ್ನ ಉಡಿಗೆ ಬಿದ್ದವು. ಉಡಿಯಲ್ಲಿ ಕೆಂಡ ತುಂಬಿತ್ತೋ ಕೆಂಡ ಸಂಪಿಗೆ ತುಂಬಿತ್ತೋ ನೋಡಲೂ ಇಲ್ಲ. ಹೊಟ್ಟೆಗೆ ಒತ್ತಿಕೊಂಡು ಕಟ್ಟಿಕೊಂಡೆ. ಒಡಲು ಬೆಂದದ್ದು ಹೌದು.ʼ (ಪು. ೭) ಆಕೆಯ ಇಡೀ ಜೀವನ ಬೆಂಕಿಯಲ್ಲಿ ಬಿದ್ದು ಸುಟ್ಟು ಹೊಸ ರೂಪವನ್ನು ಪಡೆಯುತ್ತಲೇ ಹೋಗುತ್ತದೆ. ಗಂಡನಿಂದ ಒದಗಿದ ಗಂಡಾತರಗಳನ್ನೆಲ್ಲ ಹೊತ್ತುಕೊಂಡು ಸಾಗಿದ ಆಕೆಯ ಜೀವನ ಕಲ್ಲಲ್ಲಿ ಜೀವ ಚಿಗುರೊಡದಂತದು.
ಕಥನದಲ್ಲಿ ಬರುವ ಗಂಡನ ಲೈಂಗಿಕ ಕಿರುಕುಳಗಳು ಊಹೆಗೆ ಮೀರಿದವು. ಅವೆಲ್ಲವನ್ನೂ ಮೂಕವಾಗಿ ಸಹಿಸಿಕೊಂಡು ಕೊನೆಗೆ ಅದರಿಂದ ಮುಕ್ತಿ ಪಡೆದ ಸಂದರ್ಭ ಮಹಿಳೆಯ ಧರಣಶಕ್ತಿಯನ್ನು ಸೂಚಿಸುತ್ತದೆ. ʻಕೆಲವೇ ದಿನಗಳ ಹಿಂದೆ ಆತ ರಾತ್ರಿ ನಾನು ಗಾಢ ನಿದ್ದೆಯಲ್ಲಿದ್ದಾಗ ಪಿಸುಗುಟ್ಟುವಂತೆ ಮಾತಾಡಿದ್ದ. ನನಗೆ ಎಚ್ಚರವಾಗಿತ್ತು. ನಿದ್ರೆ ನಟಿಸಿದೆನೇನೊ…. ಆತ ಹೇಳುತ್ತಲೇ ಇದ್ದ.. “ನೀನು ನನ್ನನ್ನು ಪ್ರೀತಿಸುತ್ತಿ…. ನಾನು ಮದ್ಯ ಸೇವಿಸುವುದರಿಂದ…. ನಾನು ಸಿಗರೇಟ್ ಸೇದುವುದರಿಂದ.. ನಾನು ನಾನೀಗ ನಿನ್ನೊಳಗೆ ಇಳಿಯುತ್ತಿದ್ದೇನೆ…. ನನ್ನದೂ ತಪ್ಪಾಗಿದೆ….” ಹೀಗೆ ಹೇಳುತ್ತ ಹೇಳುತ್ತ ಆತ ನಿಧಾನವಾಗಿ ಲೈಂಗಿಕ ಕ್ರಿಯೆಗೆ ತೊಡಗಲು…. ಆದರೆ ಆತನಿಗೆ ನನ್ನೊಳಗೆ ತಾನು ಸಹಜವಾಗಿ ಪ್ರವೇಶಿಸುವುದು ಸಾಧ್ಯವಿರಲಿಲ್ಲ. ಆತ ಆಡುತ್ತಿದ್ದ ಮಾತುಗಳು ಅಸಹ್ಯ ತರಿಸಿದವು. ನನ್ನ ಬಗ್ಗೆ ಏನೆಂದು ತಿಳಿದಿದ್ದಾನೆ ಈತ? ಗಂಡನಾಗಿ ತನ್ನ ಕರ್ತವ್ಯಗಳನ್ನು ನಿರ್ವಹಿಸಲಾಗದವನು. ಹೀಗೇಕೆ ಸಂಶಯದಿಂದ ಮತ್ತು ನಾನು ಗೌರವದಿಂದ ಕಾಣುವ ವ್ಯಕ್ತಿಯನ್ನು ತನ್ನೊಳಗೆ ಆರೋಪಿಸಿಕೊಂಡು ಹೀಗೆಲ್ಲ ವರ್ತಿಸುವುದೇ? ನನ್ನನ್ನು ನಿದ್ರೆಯಲ್ಲಿ ಮರುಳುಗೊಳಿಸುವ ಅಸ್ತ್ರ ಅಂದುಕೊಂಡನೆ? ನಾನು ಸೋಲುವ ಹೆಣ್ಣಾಗಿರಲಿಲ್ಲ. ಈ ಮನಶ್ಯಾಸ್ತ್ರೀಯ ವಿಧಾನ ಬಳಸಿ ನನ್ನನ್ನು ಒಗ್ಗಿಸಿಕೊಳ್ಳುವ ಅಥವಾ ನನ್ನ ಬಾಯಿಂದ ಏನನ್ನಾದರೂ ರಹಸ್ಯ ಹೊರಡಿಸುವ ವಿಧಾನವೇ ಅಸಹ್ಯ ತರಿಸುವ ಸಂಗತಿಯಾಗಿತ್ತು. ನಾನು ಒಮ್ಮೆಲೇ ಸಿಡಿದೆದ್ದೆ…. ನಾನು ತಳ್ಳಿದ ರಭಸಕ್ಕೆ ಆತ ಎದುರಿಗಿದ್ದ ಗೋಡೆಗೆ ತಲೆ ಬಡಿಸಿಕೊಂಡು ಬೀಳುವಂತಾಗಿತ್ತು. ಆತ ರಾತ್ರಿಯೆಲ್ಲ ಕೂತೇ ಇದ್ದರು, ಏನೇನೊ ಗೊಣಗಿಕೊಳ್ಳುತ್ತಿದ್ದರು.
ಬೆಳಗಿನ ಝಾವ ಇರಬೇಕು. ಆತ ಬಾಗಿಲು ತೆರೆದುಕೊಂಡು ಹೊರಗೆ ಹೋದರು ನನ್ನ ಪಾಡಿಗೆ ಎದ್ದು ಮನೆಗೆಲಸದಲ್ಲಿ ತೊಡಗಿದೆ. ಮುಂದಿನ ಕೋಣೆಯಲ್ಲಿ ನನ್ನ ತಮ್ಮ ಮಕ್ಕಳಿಬ್ಬರೂ ಇನ್ನೂ ಮಲಗಿದ್ದರು. ನನ್ನ ಭವಿಷ್ಯದ ಬದುಕಿನ ನಿರ್ಣಾಯಕ ಘಟ್ಟವೆ ಇದಾಗಬಹುದೆಂಬ ಕಲ್ಪನೆಯೇ ನನಗಿರಲಿಲ್ಲ.ʼ (ಪು. ೮)
ಈ ಸಿಡದೇಳುವ ಅರಿವಿನಿಂದ ಈ ಆತ್ಮ ಕಥನ ಬೆಳೆಯುತ್ತದೆ. ಇದು ಮುಖ್ಯವಾದುದು. ತನ್ನಲ್ಲಾ ಯಾತನೆಗಳನ್ನು ಅವಲೋಕನ ಮಾಡಿಕೊಳ್ಳುತ್ತಾ ಸಾಗುತ್ತದೆ. ಇದರಿಂದ ಮಹಿಳೆ ತನ್ನ ಬದುಕಿನಲ್ಲಿ ಲೋಕವನ್ನು ಎದುರಿಸಿ ಗಟ್ಟಿಗೊಳ್ಳಬೇಕಾದ ಪ್ರಕ್ರಿಯೆಯನ್ನು ಮನಗಾಣಿಸುತ್ತದೆ.
ಕಥನದಲ್ಲಿ ಬರುವ ಬಾಲ್ಯದ ದಿನಗಳು ಸಮೃದ್ಧಿಯಿಂದ ಕೂಡಿವೆ. ತಾತ, ಅಜ್ಜಿ, ಅಮ್ಮ, ಅಪ್ಪ ದೊಡಪ್ಪ, ದೊಡಮ್ಮ, ಸಂಬಂಧಿಕರ ಒಡನಾಟ ಎಲ್ಲವೂ ಸುಮಧುರವಾಗಿವೆ. ತಾಯಿಯ ಜೀವನ ಮಾತ್ರ ಯಾತನೆಯಿಂದ ಕೂಡಿದೆ. ಗಂಡನ ಹಿಂಸೆಗೆ ತಾಯಿಯೂ ಒಳಗಾಗಿದ್ದಾಳೆ. ಅದನ್ನು ಸಹಿಸಿಕೊಂಡು ಬದುಕುವುದೇ ʻಹೆಣ್ತನʼ ಎಂಬ ಸಾಮಾಜಿಕ ವಿನ್ಯಾಸಕ್ಕೆ ತಮ್ಮನ್ನು ಅರ್ಪಿಸಿಕೊಂಡು ಆಗಿದೆ. ಇದರಿಂದಾಗಿ ಬಹುತೇಕ ಕುಟುಂಬ ಮಹಿಳೆಯರು ಈ ಹಿಂಸೆಗೆ ಯಾವ ಪ್ರತಿರೋಧವಿಲ್ಲದೆ ಬದುಕುವುದು.
ಕಥನದಲ್ಲಿ ಅವರಮ್ಮನ ಚಿತ್ರಣ ಹೀಗಿದೆ ʻಅಮ್ಮ ಸುಕೋಮಲೆ. ಸಪೂರ ನಿಲುವು, ತುಸು ನೀಳವೆನ್ನಿಸುವ ಕತ್ತು, ಸೌಮ್ಯತೆಯೇ ಒಂದು ಮುದ್ದೆಯಾಗಿ ಎದ್ದು ಬರುವಂತಿದ್ದಳು. ಆದರೆ ನನ್ನ ಅಪ್ಪನಿಗೆ ಅದಾವುದನ್ನೂ ನೋಡುವ ಮನಸ್ಸಿರಲಿಲ್ಲ. ಒಂದಿಷ್ಟೂ ಲಕ್ಷಿಸಲಿಲ್ಲ. ಅಮ್ಮ ನರಳದ, ಕಣ್ಣೀರಿಡದ ದಿನಗಳೇ ಇಲ್ಲವೇನೋ! ವಯೋಧರ್ಮ ಅಕಸ್ಮಾತಾಗಿ ಅಪ್ಪ ಅಮ್ಮನತ್ತ ಒಲವು ತೋರಿದರೂ ಇತರರಿಗೆ ಸಹನೆಯಾಗುತ್ತಿರಲಿಲ್ಲ. ಅಪ್ಪನಿಗೆ ಅನ್ಯತ್ರ ಆಸಕ್ತಿ ಹುಟ್ಟಿಯಾಗಿತ್ತು. ಮನೆಗೆ ಸಮೀಪವೇ ಇದ್ದ ಸಾನಿಯೊಬ್ಬರ ಮನೆಗೆ ಹೋಗಿ ಬರುವ ಅಭ್ಯಾಸವಾಯಿತು. ಹಣ ಇಲ್ಲದಾಗ ಪದಾರ್ಥಗಳು ಮಾಯವಾಗತೊಡಗಿದವು. ಕಡೆಗೆ ಅವರ ಹೆತ್ತವ್ವನೇ ಬೆಲೆ ಬಾಳುವ ದಾವಣಗೆರೆ ಕಂಬಳಿಗಳನ್ನೇ ಕೊಟ್ಟು ಮಾರಿ ಹಣ ಸಂಗ್ರಹಿಸಿಕೋ ಎಂದು ಆ ದುಷ್ಟ ಚಟವನ್ನು ಪ್ರೋತ್ಸಾಹಿಸಿದರಂತೆ! ಸಹಜವಾಗೇ ಹುಡುಗನಿಗೆ ಇಸ್ಪೀಟು, ಬೀಡಿಯ ಚಟಗಳೂ ಸೇರಿಕೊಂಡವು. ಮನೆಯ ಹಿರಿಮಗ ಮುಂದೆ ಹೇಗೆ ಮನೆವಾಳೆ ನಡೆಸಿರ ಬಹುದೆಂದು ಕಲ್ಪಿಸಿಕೊಳ್ಳಬಹುದು. ಈಕೆಯ (ಅಪ್ಪ ಹೋಗುತ್ತಿದ್ದ ವೇಶ್ಯೆ) ಹೆಸರು ಸೀತೆ ಎಂತ ನೆನಪು. ಆಕೆಯ ನೀಳಕಾಯ, ನಗುಮುಖ, ನಮ್ಮ ಮನೆಯವರೊಂದಿಗಿದ್ದ ಸ್ನೇಹ ಸಂಬಂಧ ನೆನಪಾಗುತ್ತದೆ. ಅದೆಲ್ಲ ಆ ದಿನಗಳಲ್ಲಿ ಹೇಗೆ ಸಾಧ್ಯವಾಯಿತೋ! ನಮ್ಮ ಮನೆಗಳಲ್ಲಿ ವಿವಾಹ ಸಮಾರಂಭದಲ್ಲಿ ಸಾನಿ (ಸೂಳೆ)ಯೇ ಬಂದು ಮಾಂಗಲ್ಯ ಪೋಣಿಸಿಕೊಡಬೇಕು. ಅದು ಪದ್ಧತಿ. ನನ್ನ ಮದುವೆಗೂ ಆಕೆ ಮಾಂಗಲ್ಯ ಸಿದ್ಧಪಡಿಸಿದ್ದಳು. ದೂರದಲ್ಲಿ ಮುಪ್ಪಿನ ಮುತ್ತೈದೆಯಂತೆ ಕುಳಿತು ನೋಡಿದ್ದಳು!
ಹಾಗೂ ಅಮ್ಮ ಗರ್ಭಿಣಿಯಾದಳಂತೆ. ಅದನ್ನೂ ಸಹಿಸದ ಮನೆಯವರ ಉಪಟಳ ಹೆಚ್ಚಿತು. ಯಾವ ದೈವ ದಾರಿ ತೋರಿತೋ ಅಪ್ಪ ಬೇರೆ ಮನೆ ಮಾಡಿ ಅಮ್ಮನನ್ನಿಟ್ಟರು. ಎಲ್ಲ ನಾಲ್ಕು ದಿನದ ಮುಚ್ಚಟೆ. ಅಮ್ಮನ ಮೇಲೆ ಸಂಶಯ ಬರುವ ಹಾಗೆ ಮನೆಯವರು ಮಾತಾಡಿದ್ದರ ಪರಿಣಾಮ ಅಮ್ಮ ಒಳಗೆ, ಬಾಗಿಲಿಗೆ ಕೀಲಿ, ಅಪ್ಪ ವಾರಗಟ್ಟಲೆ ಮನೆಗೆ ಬರುತ್ತಿರಲಿಲ್ಲ.
ತಂಗಿಯನ್ನು ನೋಡಲು ಆಕೆಯ ಅಕ್ಕ ರತ್ನ (ನನ್ನ ದೊಡ್ಡಮ್ಮ) ಬಂದರು. ಬಾಗಿಲು ಬೀಗ ನೋಡಿಹೋದರು. ಮತ್ತೆ ಬಂದರು; ಹೋದರು; ಬಂದರು. ಏಕೋ ಸಂದೇಹವಾಗಿ ಕಿಟಕಿ ಬಾಗಿಲು ಸರಿಸಿ ನೋಡಿದರೆ ಪ್ರಜ್ಞೆ ತಪ್ಪಿ ಬಿದ್ದ ತುಂಬು ಗರ್ಭಿಣಿ ಸರೋಜ ಕಂಡಳು. ಬೀಗ ಒಡೆದು ಒಳಗೆ ಬಂದು ಸಾವು ಬದುಕಿನ ಜೊತೆ ಹೋರಾಡುತ್ತಿದ್ದ ತಂಗಿಗೆ ಉಸಿರು ತುಂಬಿದರು. ಹೆರಿಗೆ ನೋವು ಬಂದಾಗ ಆಸ್ಪತ್ರೆಗೆ ಕರೆದೊಯ್ದರು. ನನ್ನಂಥ ನಾನು ಹುಟ್ಟಿದ್ದೆ!ʼ (ಪು. ೧೩). ಇಂತಹ ತಂದೆ ತಾಯಿಯ ಸಾನಿದ್ಯದಲ್ಲಿ ಈ ಜೀವ ಬೆಳೆಯುತ್ತದೆ.
ವಿಜಯಮ್ಮನ ತಾಯಿಯನ್ನು ಗಂಡನಾದವನು ಒಂದು ಕ್ಷಣವೂ ಪ್ರೀತಿಯಿಂದ ಕಾಣುವುದಿಲ್ಲ. ಆಕೆಯನ್ನು ನಿರಂತರ ಹಿಂಸೆಗೆ ಒಳಪಡಿಸುತ್ತಲೇ ಬರುತ್ತಾನೆ. ಈ ಪುರುಷರು ಮದುವೆಯಾದ ಪತ್ನಿಯರನ್ನು ವಸ್ತುವಿಗಿಂತಲೂ ಕಡೆಯಾಗಿ ಕಾಣುವುದನ್ನು ನೋಡುತ್ತೇವೆ. ಮಹಿಳೆಯೆಂದರೆ ʻಜೀವ ಹಿಂಡುವʼ ಪುರುಷನ ಮನೋಭಾವ ಅತ್ಯಂತ ಕ್ರೂರತೆಯಿಂದ ಕೂಡಿದ್ದು. ವಿಜಯಮ್ಮನ ತಾಯಿಯನ್ನು ನಡಸಿಕೊಳ್ಳುವ ರೀತಿ ಎದೆ ನಡಗಿಸುತ್ತದೆ. ʻ ಅಪ್ಪ ಒಮ್ಮೆ ಒದೆ ಸೇವೆ. ಬರೆಗಳ ಸೇವೆ ಮಾಡಿದರೆ 8-10 ದಿನ ಮಾಯದ ಗಾಯಗಳಿಂದ ನರಳುತ್ತ. ಕೆಲಸ ಮಾಡದಿದ್ದರೆ ಆಕ್ಷೇಪಿಸುವ ಮನೆಯವರಿಗೆ ಹೇದು ಗಾಣದೆತ್ತಿನಂತೆ ದುಡಿಯುತ್ತ ದಿನ ದೂಡುತ್ತಿದ್ದರು ನನ್ನಮ್ಮ.ʼ (ಪು.೧೫) ‘ಬಿದ್ದಿರೇ ಮುಂಡೆ…’ ಅಂತ ಇನ್ನೂ ಏನೇನೂ ಬೈಯುತ್ತ ಅಪ್ಪ ಅಮ್ಮನಿಗೆ ಕಾಲಲ್ಲಿ ಝೂಡಿಸಿದರು. ಸರಿಯಾಗಿ ಹೊಟ್ಟೆಗೆ ಬಿತ್ತು, ಕಿರಿಚಿದರು. ಹೊಟ್ಟೆ ಹಿಡಿದುಕೊಂಡೇ ಕೆಳಗೆ ಬಿದ್ದರು. ನನ್ನ ಮೇಲಿದ್ದ ದೆವ್ವ ಓಡಿ ಹೋಗಿರಬೇಕು! ನಾನು ಅಳುತ್ತಾ ‘ಅಮ್ಮ… ಅಮ್ಮ..ʼ ಎಂದು ಅಪ್ಪನ ಹೆಗಲಿಂದ ಜಾರತೊಡಗಿದೆ. ಅಪ್ಪ ಇದಾವುದನ್ನೂ ಲೆಕ್ಕಿಸದೆ ನನ್ನನ್ನು ಎತ್ತಿಕೊಂಡು ಹೊರ ನಡೆದಿದ್ದರು. ಆ ರಾತ್ರಿ ಇಡೀ ಅಮ್ಮ ನನ್ನನ್ನು ತೊಡೆ ಮೇಲೆ ಮಲಗಿಸಿ ಕೊಂಡು ದೇವರಗೂಡಿನ ಮುಂದೆ ಕೂತಿದ್ದರು. ಅಳುತ್ತಿದ್ದಿರಬೇಕು. ಅಪ್ಪ ಹೊಟ್ಟೆಗೆ ಒದ್ದಿದ್ದರು, ಆಗಾಗ ಮುಖ ಹಿಂಡುತ್ತ ನೋವು ನುಂಗುತ್ತಿದ್ದರು. ಕಡೆಗೂ ಅಮ್ಮನಿಗೆ ಹೆರಿಗೆ ನೋವು ಕಾಣಿಸಿಕೊಂಡಿರಬೇಕು. ಯಾವಾಗಲೂ ಅಮ್ಮನ ಹೆರಿಗೆ ಹೊತ್ತಿಗೆ ಅವರ ಅಕ್ಕ ನನ್ನ ದೊಡ್ಡಮ್ಮ ರತ್ನಮ್ಮ ಬರುತ್ತಿದ್ದರಂತೆ. ಈ ಸಲ ಅವರಿರಲಿಲ್ಲ, ಅಮ್ಮನಿಗೆ ಸೂಲಗಿತ್ತಿ ಬಂದು ಮನೇಲೆ ಹೆರಿಗೆ ಮಾಡಿಸಿರಬೇಕು. ಈ ಸಲ ಒಂದು ಗಂಡು ಮಗು ಆಗಿತ್ತು. ಆ ಮಟ್ಟಿಗೆ ನನ್ನ ತಂದೆಗೆ ಮನೆಯವರಿಗೆ ಭಾರೀ ಖುಷಿ ಆಗಿತ್ತು.ʼ (ಪು. ೨೬) ಇಂತಹ ಸಂದರ್ಭಗಳನ್ನು ಗಂಡನಿಂದ ಅವರ ತಾಯಿ ಅನುಭವಿಸತ್ತಲೇ ಇದ್ದಳು. ಗರ್ಭಿಣಿ ಎಂಬುದನ್ನು ನೋಡದೆ ಹಿಂಸೆ ಕೊಡುವ ತಂದೆಯ ಕ್ರೌರ್ಯ ಮಾನವೀತೆಗೆ ಒಡ್ಡುವ ಸವಾಲು. ಇಂತದ್ದನ್ನೆಲ್ಲ ಸಹಿಸಿಕೊಂಡು ಬದುಕುವ ಮಹಿಳೆ ಸತಿ ಸಾವಿತ್ರಿಯ ಪರದೆಯಲ್ಲಿ ನರಳುವುದು ಸಹಜವಾದುದು ಎಂಬಂತೆ ನಮ್ಮ ಸಮಾಜ ಮಾನ್ಯ ಮಾಡುತ್ತಾ ಬಂದಿದೆ.
ಇಂತಹ ಮನಸ್ಸುಗಳ ನಡುವೆ ಬದುಕಿದ ವಿಜಯಮ್ಮನ ಬದುಕಿನಲ್ಲಿ ಸುಂದರವಾದ ಭಾವಗಳೇ ಇಲ್ಲ. ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ಇನ್ನೊಬ್ಬರ ಆಧೀನದಲ್ಲಿ ಬದುಕುವಾಗ ಅನಿವಾರ್ಯವಾಗಿ ಕತ್ತೆಯಂತೆ ದುಡಿಯುವ ಪರಸ್ಥಿತಿ ಬಂದಿತು. ಮನೆ ಕೆಲಸ, ಅಡಿಗೆಯ ಕೆಲಸ, ಸಂಬಂಧಿಕರನ್ನು ಸಂಭಾಳಿಸುವ ಬಗೆ ಎಲ್ಲವನ್ನು ಇನ್ನೂ ಬಾಲ್ಯಾವಸ್ಥೆಯಲ್ಲೆ ಕಲಿಯಬೇಕಾಗುತ್ತದೆ. ಅಮ್ಮನ ಮಮತೆ ಮಾರ್ಗದರ್ಶನ ಇಲ್ಲದಿರುವುದರಿಂದ ದೇಹದ ಎಲ್ಲಾ ಬದಲಾವಣೆಯನ್ನು ಸ್ವಂತವಾಗಿಯೇ ನಿಭಾಯಿಸಿಕೊಳ್ಳಬೇಕಾಗುತ್ತದೆ. ತನಗಾದ ದುಃಖದ ಗಾಯಗಳನ್ನು ಹೇಳಿಕೊಳ್ಳಲು ಆಕೆಯ ಬದುಕಿನಲ್ಲಿ ಒಂದು ಜೀವ ಇಲ್ಲದಂತಾಗುತ್ತದೆ.
ಮದುವೆ ಸಂದರ್ಭದಲ್ಲಿ ಯಾರು ಮಾರ್ಗದರ್ಶನ ಮಾಡುವವರು ಇರುವುದಿಲ್ಲ. ಹೀಗಾಗಿ ಆಕೆಯ ರಾತ್ರಿಗಳೆಲ್ಲ ನರಕವಾಗುತ್ತವೆ. ಗಂಡನೆಂಬ ರಣಹದ್ದಿಗೆ ಹಸಿಮಾಂಸ ಸಿಕ್ಕಂತಾಗುತ್ತದೆ ಈಕೆಯ ದೇಹ. ಪ್ರಥಮ ರಾತ್ರಿಯ ಅನುಭವ ಅತ್ಯಂತ ಭೀಕರವಾದುದು. ಇಡೀ ದೇಹವನ್ನು ನಾಯಿಗಳು ಹರಿದುಕೊಂಡು ತಿಂದಂತೆ ತಿಂದಿರುತ್ತಾನೆ ಗಂಡ ಮಹಾಶಯ. ರಾತ್ರಿಗಳ ಯಾತನೆಯನ್ನು ಹೇಗೆ ತಾಳಿಕೊಂಡು ಜೀವ ಸಾಗಿಸಿದಳೋ ಆಶ್ಚರ್ಯವಾಗುತ್ತದೆ. “ನಿಮಗೆ ಮನೆಕೆಲಸ ಚೆನ್ನಾಗಿ ಮಾಡ್ತಾಳೆ, ಬೇಕು. ಈ ಭಾವಂಗೆ ಮಕ್ಳುನ್ನ ಚೆನ್ನಾಗಿ ನೋಡ್ಕಂತಳೇ ಬೇಕು. ಬೇಕಾದ್ದು ಅವಳಿಂದ ಸಿಗುತೆ. ಕಡೆಗೆ ಆ ನನ್ನ ತಮ್ಮನೂ ಇವಳಿಗಾಗಿ ದೂರದಿಂದ ಬಸ್ ಛಾರ್ಜ್ ಇಟ್ಟುಕೊಂಡು ಬರ್ತಾನೆ! ನಾನು…. ನಾನೇನು ಮಾಡಲಿ? ನನಗೆ ಇವಳಿಂದ ಯಾವ ಸುಖವೂ ಇಲ್ಲ. ದಿನೇ ದಿನೇ ಸಿಟ್ಟು ಏರಿದೆ. ನನ್ನ ಕೈಲಾಗಲ್ಲ… ಬಿಡಿ,ಮ ನಾನು ಮನೆ ಬಿಟ್ಟು ಹೋಗ್ತಿನಿ. ನೀವೇ ಅವಳನ್ನು ಮುದ್ದು ಮಾಡಿಕೊಂಡಿರಿ… ಆಯ್ತಾ ತೃಪ್ತಿ ತಾನೆ?” ಈ ಎಲ್ಲ ಮಾತು ತೆಲುಗಿನಲ್ಲಿ ತುಸು ಕಠಿಣವಾದ ಕೆಲವೊಮ್ಮೆ ಸೊಂಟದ ಕೆಳಗಿನ ಮಾತುಗಳಿಂದ ಖಾರವಾಗಿ ಉದುರಿದ್ದವು. ಒಳಗಿದ್ದ ನನ್ನ ಕಿವಿಗೂ ಬಿದ್ದವು. ನನಗೆ ಕೂತು ಅಳಲೋ-ನಗಲೋ ಯೋಚಿಸಲೋ ಖಾಸಗಿ ಮೂಲೆಯೂ ಇರಲಿಲ್ಲ ಆ ಮನೆಯಲ್ಲಿ. ದೇವರ ಮನೆಯಲ್ಲಿ, ನೀರು ತುಂಬಿದ ಪಾತ್ರೆಗಳ ನಡುವೆ ತುಸು ಜಾಗ ಮಾಡಿಕೊಂಡು ಮಂಡಿ ಮೇಲೆ ತಲೆಯನ್ನು ಇಟ್ಟು ಸದ್ದು ಕೇಳದ ಹಾಗೆ ಅಳತೊಡಗಿದೆ. ಏನಾದರೂ ಹೆಚ್ಚು ಕಡಿಮೆಯಾಗಿ ನನ್ನ ವಾಪಸ್ ಕಳಿಸಿಬಿಟ್ಟರೆ… ಎಂಬ ಭಯ. ತವರಿನಲ್ಲಿ ನನಗೆ ಯಾವ ಆಶ್ರಯ-ಆಸಕ್ತಿಯೂ ಇರಲಿಲ್ಲ.ʼʼ (ಪು. ೧೫೦) ಇಂತಹ ಅತಂತ್ರ ಸ್ಥಿತಿಯಲ್ಲಿ ಬದುಕುವ ಈಕೆಯ ಬವಣೆಗಳು ಮನ ಹಿಂಡುತ್ತವೆ.
ಇಂತಹ ಜೀವನದಿಂದ ಬೇಸತ್ತು ಕೆಲವು ಸಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾಳೆ. ಇಲಿ ಪಾಶಾಣ, ಸೀಮೆ ಎಣ್ಣೆ, ಪಾದರಸ ಕುಡಿಯುತ್ತಾಳೆ. ಆದರೂ ಜೀವ ಬದುಕಿ ಉಳಿಯುತ್ತದೆ. ಎರಡು ಗರ್ಭಗಳನ್ನು ಗಂಡನೇ ಹೊಟ್ಟೆ ಹಿಸುಕಿ ತೆಗೆದುಬಿಡುತ್ತಾನೆ. ಅದರ ವಿವರಗಳಂತೂ ಓದುಗನ ಮನವನ್ನು ಕಲಕುತ್ತದೆ. ಅದನ್ನು ಈ ಮಹಿಳೆ ಹೇಗೆ ಸಹಿಸಿಕೊಂಡು ಬದುಕು ಸಾಗಿಸಿದಳೋ? ಆಕೆಯ ಬದುಕುವ ಇಚ್ಚಾಶಕ್ತಿ ಅಗಾಧವಾದುದು.
ʻಸಿಟ್ಟು ಬಂದರೆ ಹೊಡೆದು ಸಾಯಿಸ ಬೇಕೂಂತ. ಸಿಟ್ಟಿಗೆ ಅದು ಹೇಗೆ ಪರಿಹಾರ ಆಗುತ್ತೆ ಅಂತ? ಮತ್ತೊಂದು ದಿನ ರಾತ್ರೆ ಊಟಕ್ಕೆ ಬಡಿಸುವಾಗ ಸಾರಿನಲ್ಲಿದ್ದ ಕರಿಬೇವಿನ ಎಸಳು ತಮ್ಮ ವೆಂಕಟೇಶನ ತಟ್ಟೆಗೆ ಬಿತ್ತು. ಅವನಿಗೆ ಹೀಗೆ ಕರಿಬೇವು ಬಿದ್ದರೆ ಇಷ್ಟ ಆಗಲ್ಲ ಅಂತ ಎಂದೋ ಹೇಳಿದ್ದ. ಇವತ್ತು ಅವನು ಸುಮ್ಮನಿದ್ದರೂ ಇವರು ಕಾಲೆರೆದು ಜಗಳ ತೆಗೆದರು. ಅಂತಿಮವಾಗಿ ನನ್ನ ಮೈ ಹಣ್ಣಾಗಿದ್ದು, ಅಳುತ್ತ ಮೂಲೆ ಸೇರಿದ್ದು, ಒಂದು ಹೊತ್ತಿನಲ್ಲಿ ವೆಂಕಟೇಶ ಬಂದು ಸಮಾಧಾನ ಮಾಡಿ ಮೆಲ್ಲಗೆ ಎಬ್ಬಿಸಿ ಹಾಸಿಗೆ ಮೇಲೆ ಮಲಗಿಸಿದ್ದು ಆಯ್ತು. ಇವೆಲ್ಲ ಈಗ ಹೇಳುತ್ತಿರುವಷ್ಟು ಸರಳ, ಸಾಮಾನ್ಯ ಆಗಿರಲಿಲ್ಲ. ಅವತ್ತು. ಕ್ಷಣ ಕ್ಷಣಕ್ಕೂ ಅವಮಾನ, ನೋವು ನನ್ನನ್ನು ಕೊಲ್ಲುತ್ತಿದ್ದವು. ಮನೆಯಲ್ಲಿ ಎಳೆಯ ಮಕ್ಕಳು, ನನ್ನ ಸಮವಯಸ್ಕರಾದ ಆ ಇಬ್ಬರು ಬಂಧುಗಳು, ಇವರೆದುರು ನಿತ್ಯ ಅಪಮಾನ, ಕೆಟ್ಟ ಬೈಯ್ಗಳು, ದೈಹಿಕ ಹಿಂಸೆ ನನ್ನನ್ನು ಕುಗ್ಗಿಹೋಗುವಂತೆ ಮಾಡಿದ್ದವು. ಹಾಗೆ ನೋಡಿದರೆ ನಾನು ಮಾವನವರ ಮನೆಯಲ್ಲಿದ್ದಾಗ ಹೀಗೆ ಎಲ್ಲರೆದುರಿಗೆ ಹೊಡೆಸಿಕೊಂಡದ್ದಿಲ್ಲ. ಆ ಧೈರ್ಯ ಮಾಡಿರಲಿಲ್ಲ ಪುಣ್ಯಾತ್ಮ. ಈಗ ನಾನು ಆತನ ಆಟಿಗೆಯ ಬೊಂಬೆಯಾಗಿದ್ದೆ. ಸಿಟ್ಟು, ಅಸಹಾಯಕತೆ ಎಲ್ಲಕ್ಕೂ ನಾನೇ ಗುರಿ. ಸುಲಭವಾಗಿ ಸಿಗುತ್ತಿದ್ದೆ.ʼ (ಪು. ೨೪೫)
ಪ್ರತಿ ನಿತ್ಯ ಇಂತಹ ಹಿಂಸೆಗಳಿಗೆ ಒಳಗಾಗುತ್ತಲೇ ಇರುವ ಬದುಕು ಈಕೆಯಿದು. ಗಂಡನಿಂದ ಬಿಡಿಸಿಕೊಂಡು ಸ್ವಂತ ಮನೆ ಮಾಡಿಕೊಂಡು ಪತ್ರೆಕರ್ತೆಯಾಗಿ ಉದ್ಯೋಗಕ್ಕೆ ಸೇರಿದ ಮೇಲೆ ಸ್ವಲ್ಪ ಬಿಡುಗಡೆ ಸಿಗುತ್ತದೆ. ಒಳ್ಳೆಯ ಬರಹಗಾರ್ತಿಯಾಗಿ ಗುರುತಿಸಿಕೊಳ್ಳುತ್ತಾ ಬೆಳೆಯುತ್ತಾಳೆ. ಅನೇಕ ಸಜ್ಜನ ಸ್ನೇಹಿತರು ಆಕೆಯ ಬೆನ್ನಿಗೆ ನಿಲ್ಲುತ್ತಾರೆ. ಮಕ್ಕಳನ್ನು ನೋಡಿಕೊಂಡು ತನ್ನ ಸ್ವಂತ ಕಾಲ ಮೇಲೆ ನಿಲ್ಲುವ ಪ್ರಯತ್ನ ಮಾಡುತ್ತಾಳೆ. ಬಡವರು, ಅಸಹಾಯಕರು, ನಿರ್ಗತಿಕರು, ಅನ್ಯಾಯಕ್ಕೊಳಗಾದವರ ಪರವಾಗಿ ಹೋರಾಟದಲ್ಲಿ ನಿರತಳಾಗುತ್ತಾಳೆ.
ಅತ್ಯಂತ ಖಾಸಗಿಯಾದ ಸಂಗತಿಗಳನ್ನು ಈ ಆತ್ಮಕಥೆ ಪ್ರಮಾಣಿಕವಾಗಿ ನಿರೂಪಿಸುತ್ತದೆ. ಯಾವ ಆತ್ಮ ಚರಿತ್ರೆಗಳು ಇಷ್ಟೂ ಪ್ರಮಾಣಿಕವಾಗಿ ಕಾಸಗಿ ವಿಷಯಗಳನ್ನು ನಿರೂಪಿಸಿಲ್ಲ. ಕುಟುಂಬದ ಘನತೆ, ವ್ಯಕ್ತಿತ್ವದ ಘನತೆಯನ್ನು ಮನಸ್ಸಿಲ್ಲಿಟ್ಟುಕೊಂಡು ಆತ್ಮಕಥೆಯನ್ನು ಬರೆಯುತ್ತಾರೆ. ಆದರೆ ಈ ಆತ್ಮಕಥೆ ಅದನ್ನು ಮೀರಿದೆ. ಆಕೆಯ ಕೆಲವು ಮಾತುಗಳು ”ಬದುಕಿನಲ್ಲಿ ಎದುರಾದ, ದಕ್ಕಿದ ಯಾವ ಸಂಗತಿಯನ್ನೂ ಬಂದಂತೆ ಸ್ವೀಕರಿಸಿಕೊಂಡು ಹೋದೆನಾಗಲೀ, ಇದು ನನ್ನದೇ ಎಂದು ಅನುಭವಿಸಿದೆನೇ ಎಂದು ಯೋಚಿಸುತ್ತಲೇ ಇದ್ದೇನೆ. ಇಲ್ಲಿ ಆತ್ಮಸಾಕ್ಷಿ ಪ್ರಾಮಾಣಿಕವಾಗಿ ತೆರೆದುಕೊಂಡಿದೆ ಎಂದು ಮಾತ್ರ ವಿನಯದಿಂದ ಹೇಳಬಯಸುತ್ತೇನೆ. ಇಲ್ಲಿ ತುಡಿದ ಜೀವಕ್ಕಿಂತ ನೂರುಪಟ್ಟು ಹೆಚ್ಚು ಬೇಯುತ್ತಿರುವ ಅದೆಷ್ಟೋ ಜೀವಿಗಳು ಮೂಕಪಕ್ಷಿಗಳಂತೆ ಬದುಕುತ್ತಿವೆ ಎಂದು ನನಗೂ ಗೊತ್ತು. ಇದೇ ದೊಡ್ಡದು, ಅಪರೂಪದ್ದು, ಅನನ್ಯ ಖಂಡಿತಾ ಅಲ್ಲ”(ಮುನ್ನುಡಿಯಲ್ಲಿ). ”ಇಷ್ಟಾದರೂ ನನಗೆ ಯಾರನ್ನಾದರೂ ಬೈಯಬೇಕೆನಿಸಲಿಲ್ಲ. ನನಗೆ ಸಿಟ್ಟು ಬರುವುದಿಲ್ಲ. ಯಾರ ಬಗೆಗಾದರೂ ಹೋಗಲಿ ನನ್ನ ಗಂಡನ ಬಗ್ಗೆಯೇ ನನಗೆ ಸಿಟ್ಟು ಬರುವುದಿಲ್ಲ” (ಪುಟ 30). ”ನನಗೆ ಗೊತ್ತು ನಾನು ಕೆಲವು ಸಂಗತಿಗಳನ್ನು ಹೇಳುವಾಗ ನನ್ನ ಗಂಡನನ್ನು ಒಬ್ಬ ಕ್ರೂರಿ ಎಂಬಂತೆ ಚಿತ್ರಿಸಿದ್ದೇನೆಂಬುದು. ತಪ್ಪು. ಅದು ಹಾಗಾಗಬಾರದು ಎನಿಸುತ್ತದೆ. ಆದರೆ ಏನು ಮಾಡಲಿ? ಅಂಥದೊಂದು ಘಟನೆ ವಿವರಿಸುವಾಗ ನಾನು ಮತ್ತೊಮ್ಮೆ ಆ ಸಂಕಟವನ್ನು ಅನುಭವಿಸುತ್ತಿರುತ್ತೇನೆ. ಮತ್ತು ಆ ಅನುಭವ ಇವತ್ತಿನ ಪಕ್ವ ಮನಸ್ಥಿತಿಯೂ ಸ್ವೀಕರಿಸಲಾಗದೇ, ಆ ಘಟನೆ ನಡೆದ ಕ್ಷಣದಲ್ಲಿ ಇದ್ದ ಮುಗ್ಧತೆಯನ್ನು ಕಳೆದುಕೊಂಡಿರುತ್ತದೆ. ಹೀಗಾಗಿ ಮಾತುಗಳಿಗೆ ಚಿತ್ರಕ ಶಕ್ತಿ ಲಭ್ಯವಾಗಿಬಿಡಬಹುದು ಮತ್ತು ಅದು ಆ ಮುಗ್ಧ ವ್ಯಕ್ತಿತ್ವ ಕಂಡ ಕ್ರೂರತೆಯನ್ನೇ ಕಂಡರಿಸಬಹುದು. ಇವೆಲ್ಲ ಮಿತಿಗಳಿರಬಹುದು. ಆ ಮಟ್ಟಿಗೆ ನಾನು ಅಸಹಾಯಕಳೇನೋ”( ಪು.21). ”ಇದೆಲ್ಲ ಯಾರಿಗೂ ಆಗದ ಅನುಭವವಲ್ಲ. ಅನನುಭವಿಗಳು, ಅರಿವಿಲ್ಲದವರು, ಎಲ್ಲರಿಗೂ ಇಂಥದೇ ಆಗಿರುತ್ತದೆ. ಆದ್ರೆ ಆಮೇಲಾದರೂ ಸರಿ ಹೋಗುತ್ತಾರೆ. ಆದರೆ ನನಗೆ ಒಂದೇ ಒಂದು ಅಂಥ ರಾತ್ರಿಯೂ ಬರಲಿಲ್ಲ. ಆದರೆ ರಾತ್ರಿಗಳು ಆತನಿಗೂ ಅಂಥವೇ ಆಗಿರಬೇಕು. ನಾವೇ ಮಾಡಿಕೊಂಡ ತಪ್ಪುಗಳಾ? ಸರಿಪಡಿಸಿಕೊಳ್ಳಬಹುದಿತ್ತಾ? ಆದರೆ ದಾರಿ ಬಹಳ ದೂರ ಸವೆದಾಯ್ತು. ಕಾಲ ಹಿಂತಿರುಗುವುದಿಲ್ಲ” (ಪುಟ 162). ಹೀಗೆ ತನ್ನ ಅನುಭವಗಳನ್ನು ಅತ್ಯಂತ ಪಾರದರ್ಶಕವಾಗಿ ಜೀವಪರ ಕಾಳಜಿಯಿಂದ ಅಭಿವ್ಯಕ್ತಿ ಮಾಡಿದ್ದಾಳೆ. ಈ ಮಾತುಗಳಲ್ಲಿ ಲೇಖಕಿಯ ಜೀವನ ದೃಷ್ಟಿಯನ್ನು ಅರ್ಥಮಾಡಿಕೊಳ್ಳಬಹುದು. ಅನೇಕ ಕುಟುಂಬಗಳು ಈ ರೀತಿಯ ಹಿಂಸೆಗೆ ಒಳಗಾಗಿರುತ್ತವೆ. ಅವರಿಗೆಲ್ಲ ಈ ಆತ್ಮ ಕಥೆ ಕಣ್ಣು ತೆರೆಸುತ್ತದೆ.
ತನ್ನ ಬದುಕಿನ ಜೊತೆಗೆ ತನ್ನ ಕುಟುಂಬ ಬಂಧುಗಳ ವಿವರವನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ. ಅವರೆಲ್ಲರನ್ನೂ ಅತ್ಯಂತ ಔದಾರ್ಯದಿಂದ ಕಾಣಲಾಗಿದೆ. ಯಾರಲ್ಲೂ ಕೇಡನ್ನು ಕಾಣದ ಆದ್ಯಾತ್ಮಿಕ ಗುಣ ಕೃತಿಯಲ್ಲಿ ಅಂತರ್ ವಾಹಿನಿಯಾಗಿ ಹರಿಯುತ್ತದೆ. ಯಾಕೆಂದರೆ ವಿಜಯಮ್ಮ ತಮ್ಮನ್ನು ತಾವು ತಾತ್ವಿಕ ಚಿಂತನೆಗೆ ಒಳಪಡಿಸಿಕೊಳ್ಳುತ್ತಾ ತತ್ವಜ್ಞಾನಿಯಂತೆ ತಮ್ಮ ಅನುಭವಗಳನ್ನು ಕಟ್ಟಿದ್ದಾರೆ.
ಈ ಆತ್ಮಕಥೆಗೆ ಓದುಗರ ಭಾಕೋಶವನ್ನು ತಟ್ಟುವ ಗುಣವಿದೆ. ಕುಟುಂಬದಲ್ಲಿ ಬದುಕುವ ಮಹಿಳೆ ಅತ್ಯಂತ ಸೂಕ್ಷ್ಮ ಮತ್ತು ಅತಂತ್ರಳಾಗಿದ್ದಾಗ ಇನ್ನಷ್ಟೂ ಕ್ರೂರವಾದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮದ್ಯಮ ವರ್ಗದ ಕುಟುಂಬದ ಬವಣೆಗಳು ಸಾಂಸ್ಕೃತಿಕ ಬಿಕ್ಕಟ್ಟಿನಿಂದ ಕೂಡಿರುತ್ತವೆ. ಈ ಬವಣೆಗಳನ್ನು ಸಹ್ಯವಾಗಿ ಕೃತಿ ನಿರೂಪಿಸುತ್ತದೆ.






0 Comments