ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಂವೀ ಎಂಬ ಕಣ್ಣೋಟಕ್ಕೆ ಸಲಾಂ

ನಮ್ಮ ನಡುವಿನ ಕವಿ, ಕಥೆಗಾರ, ಲೇಖಕ ಕುಂ ವೀ ಅವರಿಗೆ ಈಗ ೬೦ ರ ಸಂಭ್ರಮ.

ಅವರ ನೆಲದ ಕಣ್ಣಿಗೆ, ನೋಟಕ್ಕೆ, ನೋಡಿದ್ದನ್ನು ಕಥೆಯಾಗಿಸುವ ಅವರ ಕಥನಗಾರಿಕೆಗೆ ಅವಧಿಯ ಸಲಾಂ.

ಹುಟ್ಟುಹಬ್ಬದ ಶುಭಾಶಯಗಳು..

ಕುಂವೀ ಎಂಬ ಕಣ್ಣೋಟಕ್ಕೆ ಸಲಾಂ

‘ಕಣ್ಣಿನೊಳಗಡೆ ಕೂತು ನೀರ ದೂಡುವ ಮುಖವೆ/ ನಿನ್ನ ನೆನೆ ನೆನೆದಿಲ್ಲಿ ಹೌಹಾರುತಿರುವೆ / ಒಡಲ ಗುಗ್ಗುಳದೊಳಗೆ ನಿಟ್ಟುಸಿರ ಚೆಲ್ಲುತಲಿ / ಬಿಕ್ಕುತಲಿ ಬೆದರುತಲಿ ಬದುಕುತಿರುವೆ..’ ಎನ್ನುವ ಸಾಲುಗಳನ್ನು ಓದುತ್ತಿದ್ದಂತೆ ನಾನೂ ಸಹಾ ನಿಟ್ಟುಸಿರಾಗಿ ಹೋಗಿದ್ದೆ. ಇದು ಕುಂ ವೀ ಬರೆದ ಕವಿತೆಯ ಸಾಲುಗಳು. ಕನ್ನಡದ ಅಂತಸ್ಸಾಕ್ಷಿ ಎಂದೇ ಹೆಸರಾಗಿದ್ದ ಜಿ ಎಸ್ ಸದಾಶಿವ ಇದನ್ನು ಅತ್ಯಂತ ಮುತುವರ್ಜಿಯಿಂದ ಪ್ರಕಟಿಸಿದ್ದರು. ಆ ಕವಿತೆ ಓದಿದ ನಂತರ ಕುಂ ವೀ ನನ್ನನ್ನು ತೊರೆದು ಹೋಗಲೇ ಇಲ್ಲ. ಆ ಕವಿತೆಯಿಂದ ಆರಂಭಿಸಿ ‘ಹೇಮರೆಡ್ಡಿ ಮಲ್ಲಮ್ಮನ ಕಥೆಯು’ವರೆಗೆ ನಾನು ಅವರನ್ನು ಹಿಂಬಾಲಿಸಿಕೊಂಡೇ ಬಂದಿದ್ದೇನೆ.
ಒಂದೇ ಮಾತಿನಲ್ಲಿ ನನ್ನ ತಲೆಮಾರಿಗೆ ಕುಂ ವೀ ಏನು ಎಂದು ಬಣ್ಣಿಸುವುದಾದರೆ ಅವರು ನಮ್ಮ ಯೌವ್ವನ. ಅವರ ಕಥೆ, ಕಾದಂಬರಿ, ಕವಿತೆ ನಮ್ಮನ್ನು ಅರಳಿಸಿದೆ, ಸಂಭ್ರಮಿಸುವಂತೆ ಮಾಡಿದೆ, ನಿಟ್ಟುಸಿರನ್ನು ಬೆಸುಗೆ ಹಾಕಿದೆ. ಬದುಕಿಗೊಂದು ನೋಟವನ್ನು ಕಟ್ಟಿಕೊಟ್ಟಿದೆ.
ಅವರ ದೋಮ ಮತ್ತಿತರ ಕಥೆಗಳು, ಭಗವತಿ ಕಾಡು, ಕಪ್ಪು, ಬೇಲಿ ಮತ್ತು ಹೊಲ, ಕೆಂಡದ ಮಳೆ, ಕೊಟ್ರ ಹೈಸ್ಕೂಲ್ ಗೆ ಸೇರಿದ್ದು ನನ್ನೊಳಗೆ ಹುಟ್ಟು ಹಾಕಿದ ತಲ್ಲಣಗಳನ್ನು ಮರೆಯಲಾರೆ. ಅವರ ಕಥೆ, ಕಾದಂಬರಿ ನಮ್ಮ ಬದುಕಿಗೊಂದು ನೋಟವನ್ನು ಕಟ್ಟಿಕೊಟ್ಟಿದೆ. ಅವರ ಕವಿತೆಯ ಸಾಲುಗಳಂತೆ ಅವರ ಬರಹದ ಪ್ರಾಕಾರ ಯಾವುದೇ ಇರಲಿ ಅದು ಒಡಲ ಗುಗ್ಗುಳದೊಳಗೆ ನಿಟ್ಟುಸಿರು ಚೆಲ್ಲುವಂತೆ ಮಾಡುತ್ತದೆ.
ಕನ್ನಡ ಸಾಹಿತ್ಯ ಲೋಕ ಕಾಣದ ಒಂದು ಜಗತ್ತು ಕುಂ ವೀ ಬರಹಗಳಲ್ಲಿದೆ. ಕುಂ ವೀ ಅವರು ನನಗೆ ಮುಖ್ಯವಾಗುವುದು ಅವರು ನಮ್ಮ ಮುಂದೆ ಇಡುತ್ತಿರುವ ಭಾರತ ಯಾವುದು ಎನ್ನುವ ಕಾರಣಕ್ಕಾಗಿ ಸಹಾ. ಒಂದು ಅರ್ಥದಲ್ಲಿ ಇವರು ಕನ್ನಡ ಸಾಹಿತ್ಯ ಲೋಕದ ಪಿ ಸಾಯಿನಾಥ್. ಅಧೋ ಜಗತ್ತಿನ ಅಕಾವ್ಯವನ್ನು ಮುಂದಿಡಲು ಪಿ ಸಾಯಿನಾಥ್ ಪತ್ರಿಕೋದ್ಯಮವನ್ನು ಪ್ರವೇಶಿಸಿದರೆ, ಕುಂವೀ ಸಾಹಿತ್ಯವನ್ನು ಆಶ್ರಯಿಸಿದ್ದಾರೆ. ‘ಎಂಟರ್ ದ ಡ್ರ್ಯಾಗನ್’ ನಮ್ಮೊಳಗೆ ಮತ್ತೊಮ್ಮೆ ನಾವು ಕಾಣದ ಜಗತ್ತಿನ ದರ್ಶನ ಮಾಡಿಸುತ್ತಿದೆ. ಕುಂವೀ ಎಂಬ ಕಣ್ಣೋಟಕ್ಕೆ ಸಲಾಂ.

– ಜಿ ಎನ್ ಮೋಹನ್

 

೧) ಒಂದು ಸಾರಿ ಬೇರೆ ಮಕ್ಕಳೆಲ್ಲ ಟೈ, ಷೂ, ಇಸ್ತ್ರಿ ಮಾಡಿದ ಗರಿ ಗರಿ ಬಟ್ಟೆಗಳನ್ನು ಹಾಕಿಕೊಂಡು ಕಾನ್ವೆಂಟ್ ಗೆ ಹೋಗುವುದನ್ನು ನೋಡಿ ನನ್ನನ್ನು ಇಂಗ್ಲೀಷ್ ಮೀಡಿಯಂ ಕಾನ್ವೆಂಟ್ ಗೆ ಸೇರಿಸದೆ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದ್ದಕ್ಕೆ ಅಪ್ಪನ ಮೇಲೆ ಸಿಟ್ಟು ಮಾಡಿಕೊಂಡು ಕೂತಿದ್ದೆ. ಆಗ ಅಪ್ಪ ಹೇಳಿದ್ದು ಒಂದೇ ಮಾತು “ನೋಡು ಮಗಾ ನೀನು ಕಾನ್ವೆಂಟಿಗೆ ಸೇರಿದರೆ ಟಸ್ಸು ಪುಸ್ಸು ಇಂಗ್ಲೀಷ್ ಮಾತಾಡೋದೇನೋ ಕಲೀಬಹುದು ಆದರೆ ನೀನು ಇಂಗ್ಲೀಷು ಕಲಿಯೋದಕ್ಕಿಂತ ಹೆಚ್ಚಾಗಿ ಜೀವನ ಅಂದ್ರೆ ಏನು ಅನ್ನೋದು ಮೊದಲು ಕಲೀಬೇಕು ಅನ್ನೋದು ನನ್ನಾಸೆ. ಜೀವನ ಅರ್ಥ ಆಗೋದು ಮಾತೃಭಾಷೆ ಮೂಲಕ. ಕನ್ನಡ ಮಾಧ್ಯಮದಲ್ಲಿ ಓದುವ ಬಗ್ಗೆ ಕೀಳರಿಮೆ ಮಾತ್ರ ಬೇಡ ಮಗಾ”.
೨) ನನ್ನ ಶಿಕ್ಷಣ ಎಲ್ಲಾ ಮುಗಿದ ಮೇಲೆ ಉದ್ಯೋಗ ಬೇಟೆ ಶುರು ಮಾಡೊಕೆ ಮೊದಲು ಅಪ್ಪ ನನ್ನ ಕೂಡಿಸಿಕೊಂಡು ಹೇಳಿದ್ದು “ಮಗಾ ನಾನು ಸಾಹಿತ್ಯದಲ್ಲಿ ಏನೋ ಒಂಚೂರು ಹೆಸರು ಮಾಡಿರಬಹುದೇ ಹೊರತು ನಿಮಗಾಗಿ ಆಸ್ತಿ ಅಂತ ಏನು ಮಾಡೋಕೆ ಆಗ್ಲಿಲ್ಲ. ನಾನು ಒಬ್ಬ ಶಾಲಾ ಶಿಕ್ಷಕನಾಗಿದ್ದುಕೊಂಡು ನಿಮ್ಮನ್ನು ಇಷ್ಟೆಲ್ಲಾ ಓದಿಸಿದ್ದೇನೆ ಅನ್ನೋದು ಮಾತ್ರ ಮರೆಯಬೇಡ. ಮಕ್ಕಳಿಗಾಗಿ ಆಸ್ತಿ ಮಾಡದಿದ್ದರೂ ಪರವಾಗಿಲ್ಲ ಆದರೆ ನೀವು ಮೂರು ಮಕ್ಕಳನ್ನೇ ಬೆಲೆ ಕಟ್ಟಲಾಗದ ಆಸ್ತಿಯಾಗಿಸಿದ್ದೇನೆ ಅನ್ನೋ ಗರ್ವ ಮಾತ್ರ ಸಿಕ್ಕಾಪಟ್ಟೆ ಇದೆ”
ಈ ಮೇಲಿನ ಎರಡು ಮಾತುಗಳು ಮಾತ್ರ ನಾನು ನನ್ನ ಜೀವನದಲ್ಲೇ ಮರೆಯಲಾರದಂತವು. ಕನ್ನಡ ಮಾಧ್ಯಮದಲ್ಲೇ ನಿಮ್ಮ ಮಕ್ಕಳನ್ನು ಓದಿಸಿ ಅಂತ ಪುಕ್ಕಟೆ ಸಲಹೆ, ಭಾಶಣ ಮಾಡೋ ಮಂದಿಯನ್ನ ನೀವು ನೋಡಿರಬಹುದು. ಆದರೆ ನನ್ನಪ್ಪ ಹೇಳುವ ಮೊದಲು ಕಾರ್ಯರೂಪಕ್ಕೆ ತಂದವರು. ಅವರ ಬಗ್ಗೆ ಹೆಮ್ಮೆಯಂತೂ ಇದ್ದೇ ಇದೆ ಅದರ ಜೊತೆ ಗುರುತರ ಜವಾಬ್ದಾರಿಯೂ ಕೂಡ.
ಇಂತಹ ಅಪ್ಪ ಅಂಬೋ ಅಪ್ಪ ಹುಟ್ಟಿದ ದಿನ ಇಂದು. ನನ್ನ ಅಮ್ಮ ತಮಾಷೆಗೆ ಹೇಳುವಂತೆ ಗಾಂಧಿ ತಾತನಿಗಿಂತಲೂ ಒಂದು ದಿನ ಮುಂಚೆ ಹುಟ್ಟಿದವರು. ಅವರಿಗೆ ಪ್ರೀತಿಯ ಹುಟ್ಟು ಹಬ್ಬದ ಶುಭಾಶಯಗಳು.

– ಪುರೂರವ ಕೊಟ್ಟೂರ್


ಜಾತಿಯನ್ನೇ ಬಂಡವಾಳ ಮಾಡಿಟ್ಟುಕೊಂಡ ವರ್ಗಕ್ಕೆ ಮಾತುಗಳು ತಟ್ಟದೇ ಹೋದಾಗ ಅಸ್ತ್ರವಾದದ್ದು ಬರಹ. ಬರಹವನ್ನೇ ಧ್ಯಾನವನ್ನಾಗಿಸಿಕೊಂಡು, ಧರ್ಮವನ್ನಾಗಿಸಿಕೊಂಡು ಬದುಕುತಿದ್ದಾರೆ. ಬೆಂಗಳೂರಿನಲ್ಲಿದ್ದು ಕಾರ್ಪೋರೇಟ್ ಸಾಹಿತ್ಯ ಜಗತ್ತಿನ ಸೋ ಕಾಲ್ಡ್ ಸಾಹಿತಿಗಳಂತೆ ಬರಹವನ್ನು ಬರಹಕ್ಕಷ್ಟೇ ಸೀಮಿತಗೊಳಿಸದೇ, ಗಡಿನಾಡಿನ ಹಳ್ಳಿಗಳಲ್ಲಿ ಶಿಕ್ಷಕನಾಗಿದ್ದುಕೊಂಡು ಸಾವಿರಾರು ಮಕ್ಕಳಿಗೆ ಪಾಠ ಮಾಡಿದ್ದಾರೆ, ಅವರಲ್ಲಿ ಬಹಳಷ್ಟು ಜನ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ(ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ).

“ನಾನು ಬರೆದ ಈ ಪುಸ್ತಗಳಿಗಿಂತ, ಈ ಜೀವಂತ ಪುಸ್ತಕಗಳ ಹೆಚ್ಚು ಖುಷಿ ಕೊಡ್ತವೆ” ಎನ್ನುತ್ತಲೇ ನಗುವ ನನ್ನಪ್ಪ,
ನನಗಂತೂ ಅಪ್ಪನಾಗಿ, ಗುರುವಾಗಿ, ಗೆಳೆಯನಾಗಿ, ಒಬ್ಬ ಅದ್ಬುತ ಕವಿಯಾಗಿ ಜಾತಿ ಧರ್ಮಗಳನ್ನೂ ಮೀರಿ ನಿಲ್ಲುವ ವಿಶ್ವಮಾನವನಾಗಿ ಕಾಣುತ್ತಾರೆ.
ಅಪ್ಪ, ಹುಟ್ಟು ಹಬ್ಬದ ಶುಭಾಷಯಗಳು

– ಪ್ರವರ ಕೊಟ್ಟೂರ್

‍ಲೇಖಕರು G

3 October, 2013

9 Comments

  1. ಹರಿ

    ಪ್ರೀತಿಯ ಕುಂ.ವೀ.ರವರಿಗೆ ಜನುಮ ದಿನದ ಹಾರ್ದಿಕ ಶುಭಾಶಯಗಳು. ನಿಮ್ಮಿಂದ ಕನ್ನಡ ನಾಡು-ನುಡಿ ಮತ್ತಷ್ಟು ಶ್ರೀಮಂತವಾಗಲಿ.

  2. Kajooru sathish

    ಹುಟ್ಟುಹಬ್ಬದ ಶುಭಾಶಯಗಳು ಸರ್

  3. D.Ravivarma

    “ನಾನು ಬರೆದ ಈ ಪುಸ್ತಗಳಿಗಿಂತ, ಈ ಜೀವಂತ ಪುಸ್ತಕಗಳ ಹೆಚ್ಚು ಖುಷಿ ಕೊಡ್ತವೆ” ಎನ್ನುತ್ತಲೇ ನಗುವ ನನ್ನಪ್ಪ,
    ನನಗಂತೂ ಅಪ್ಪನಾಗಿ, ಗುರುವಾಗಿ, ಗೆಳೆಯನಾಗಿ, ಒಬ್ಬ ಅದ್ಬುತ ಕವಿಯಾಗಿ ಜಾತಿ ಧರ್ಮಗಳನ್ನೂ ಮೀರಿ ನಿಲ್ಲುವ ವಿಶ್ವಮಾನವನಾಗಿ ಕಾಣುತ್ತಾರೆ.
    ಅಪ್ಪ, ಹುಟ್ಟು ಹಬ್ಬದ ಶುಭಾಷಯಗಳು….heart touching….

  4. Aravind

    ಹುಟ್ಟುಹಬ್ಬದ ಶುಭಾಶಯಗಳು..

  5. shobhavenkatesh

    vijayanagarabimba ranga shikshnakendradinda yella ranga vidyartigalu, hagu yella rangashaleya makklindalu thamage janumadina shubhshayagalu.

  6. Raja

    Very many happy returns of the day sir.
    From the heart I believe you deserve the space on that Jnanapitha than many who gave it themselves, including our own male Poonam Pandey!

  7. kum.veerabhadrappa

    ನನಗೆ ಶುಭಹಾರೈಸಿದ ನಿಮ್ಮೆಲ್ಲರಿಗೂ ಧನ್ಯವಾದಗಳು
    ಕುಂವೀ

  8. venkatesh uppara

    ಕುಂ.ವೀ. ಅನ್ನೋದು ನಮ್ಮ ಮುಂದಿನ ಜಗತ್ತು. ಈ ಅನುಭವದ ಜಗತ್ತಿನಲ್ಲಿ ನೋಡಬೇಕಾದದ್ದು, ಕೇಳಬೇಕಾದದ್ದು ಬಹಳ ಬಹಳನೇ ಇದೆ. ಕುಂ.ವೀ.ಎಂಬ ನೈಜ ಜಗತ್ತಿಗೆ ದೊಡ್ಡ ಸಲಾಂ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading