
ಇವರು ರಂಗ ‘ಕಿರಣ’-
ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!.
ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು ‘ರಂಗ ಕೈರಳಿ’ ಹಿಡಿದು ಬಂದರು. ಆ ರಂಗ ಕೈರಳಿ ಎಲ್ಲರೂ ಕೇರಳದ ರಂಗಭೂಮಿಯ ಕುರಿತ ದಾಖಲೆ ಎಂದುಕೊಂಡಿದ್ದರೆ. ಅದು ನಿಜವೇ ಹೌದಾದರೂ ಅದು ಅದಕ್ಕಿಂತ ಹೆಚ್ಚಾಗಿ ಕಿರಣ್ ಭಟ್ ಅವರ ರಂಗ ಪ್ರೀತಿಯ ಬಗೆಗಿನ ದಾಖಲೆ.
ನಾನು ಕಿರಣ ಭಟ್ ಅವರ ಹೆಸರು ಕೇಳಿದ್ದು ರಂಗಭೂಮಿಗೆ ಥಳಕು ಹಾಕಿಕೊಂಡೇ. ಅಷ್ಟರ ಮಟ್ಟಿಗೆ ಕಿರಣ್ ಹಾಗೂ ರಂಗಭೂಮಿ ಒಂದೇ ನಾಣ್ಯದ ಎರಡು ಮುಖಗಳು.
ಮಕ್ಕಳ ಅಂತೆಯೇ ಹಿರಿಯರ ರಂಗಭೂಮಿಯಲ್ಲಿ ಅಪಾರ ಅನುಭವವಿದೆ. ಇಷ್ಟೇ ಆಗಿದ್ದರೆ ಕಿರಣ್ ಬಗ್ಗೆ ರಂಗ ಪ್ರಿಯರು ಮಾತನಾಡುತ್ತಿರಲಿಲವೇನೋ. ಅವರು ಪ್ರತೀ ರಂಗ ಉತ್ಸಾಹಿಗೂ ಕೊಟ್ಟ ಬೆಂಬಲ, ತಮ್ಮ ಜಿಲ್ಲೆಯಲ್ಲಿ, ಹೋದೆಡೆಯಲ್ಲಿ ಕಟ್ಟಿಕೊಂಡ ರಂಗ ಆವರಣ, ಪ್ರಯೋಗಗಳಿಗೆ ಕೊಟ್ಟ ಹೊಸ ಧಿಕ್ಕು ಎಲ್ಲವೂ ಕಿರಣರನ್ನು ‘ರಂಗ ಕಿರಣ’ವಾಗಿಸಿದೆ.
ಇವರ ಬೆನ್ನು ಬಿದ್ದು, ದಮ್ಮಯ್ಯಗುಡ್ಡೆ ಹಾಕಿ ಇವರ ಕೈಗೆ ಪೆನ್ನು ಹಿಡಿಸಿದ ಒಂದೇ ಕಾರಣಕ್ಕೆ ಇವರ ಏಕೈಕ ಕೃತಿ ರಂಗ ಕೈರಳಿ ಹೊರಬಂದಿತು. ಅದು ಅವರಿಗೆ ಹೆಸರು ತಂದುಕೊಟ್ಟಂತೆ ಕೇರಳದ ರಂಗಭೂಮಿಯನ್ನೂ ಕರ್ನಾಟಕದಲ್ಲಿ ಇನ್ನಿಲ್ಲದಂತೆ ಪ್ರಚುರಪಡಿಸಿತು.
ಈ ಕೃತಿಯ ನಿರೂಪಣಾ ಶೈಲಿ, ಅನುಭವ ಎಲ್ಲವೂ ಕನ್ನಡದ ಓದುಗರ ಕುತೂಹಲ ಕೆರಳಿಸಿದೆ. ಇವರ ಈ ಕೃತಿ ಪ್ರಕಟಿಸಲು ಕೈ ಹಚ್ಚಿದ ಕಾರಣಕ್ಕೆ ನಾನು ಅವರ ಜೊತೆಯಾಗಿ ಕೇರಳದ ಅಂತಾರಾಷ್ಟ್ರೀಯ ರಂಗ ಉತ್ಸವಕ್ಕೂ ಹೋಗಿ ಬಂದೆ. ಅಲ್ಲಿ ನಾವಿಬ್ಬರೂ ನೋಡಿದ, ನನಗೆ ನೋಡಲು ಕೊಡದೆ ತಾವೊಬ್ಬರೇ ಕೂತು ನೋಡಿದ ನಾಟಕಗಳ ಸರಣಿಯೇ ಈ ಬರಹ ಗುಚ್ಛ.
ಕೇರಳದ ಬೀದಿಗಳಲ್ಲಿ ಸುತ್ತುತ್ತಾ, ಅಲ್ಲಿನ ಗೊತ್ತಿಲ್ಲದ ಭಾಷೆಗೆ ಕಣ್ಣು ಬಿಡುತ್ತಾ, ಭಾಷೆ ಗೊತ್ತಿಲ್ಲದಿದ್ದರೂ ನಾಟಕದ ಒಳಮಿಡಿತಗಳನ್ನು ಅರ್ಥ ಮಾಡಿಕೊಂಡ, ಅಲ್ಲಿನ ರಂಗ ಉತ್ಸಾಹದ ಜೊತೆಗೆ ಸೇರಿ ಹೋದ ಎಲ್ಲದರ ನೋಟ ಇಲ್ಲಿದೆ.
ಕಿರಣ ಭಟ್ ತಮ್ಮ ಇಂದಿನ ಶೈಲಿಯಲ್ಲಿ ಬರೆದಿದ್ದಾರೆ. ಓದಿ
-ಜಿ ಎನ್ ಮೋಹನ್
‘ರಂಗ ಕೈರಳಿ‘ ಕೃತಿಯನ್ನು ಕೊಳ್ಳಲು –https://bit.ly/3zioQ5f ಈ ಲಿಂಕ್ ಕ್ಲಿಕ್ ಮಾಡಿ
ಅಥವಾ 70191 82729ಗೆ ಸಂಪರ್ಕಿಸಿ
5
Production: Kalakshetra Manipur
Director: Heisnam Tomba Singh
ಇಟ್ಫಾಕ್ ನ ಆವಾರದಲ್ಲಿ ಅದ್ಯಾವ ಮಾಯೆಯಲ್ಲಿ Acting space ಗಳು ದಿನ ಬೆಳಗಾಗೋದ್ರಲ್ಲಿ ಹಟ್ಟಿಕೊಳ್ತಾವೆ ಅನ್ನೋದೇ ಅಚ್ಚರಿ. ಇಂಥ ಹಲವನ್ನು ನಾನು ಆಗಾಗ ಕಂಡಿದ್ದೇನೆ. ಹಿಂದೆ ಹದಿನೈದಿಪ್ಪತ್ತು ಪ್ರೇಕ್ಷಕರನ್ನ ಬೇರೆ ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗಿ ನಾಟಕ ತೋರಿಸುವ ಲೆಬನಾನ್ ನ ನಾಟಕವೊಂದಕ್ಕಾಗಿ ಹಿಂದಿರುವ ಹಳೆಯ ಕಟ್ಟಡವೊಂದರ ಹೊರಾಂಗಣ, ಒಳಾಂಗಣದಲ್ಲಿ ಸುಮಾರು ಹತ್ತು ಂಛಿಣಟಿರ ಠಿಚಿಛಿಜ ಗಳನ್ನ ನಿರ್ಮಾಣ ಮಾಡಿದ್ದರು. ಇನ್ನು ‘ಬೇಗಮ್ ಪಣಿಕ್ಕರ್’ ಮಲಯಾಳಮ್ ನಾಟಕಕ್ಕಾಗಿ ಅದೇ ಬಿಲ್ಡಿಂಗಿನ ಕಮಾನುಗಳನ್ನ ಹಿನ್ನೆಲೆಯಾಗಿಟ್ಕೊಂಡು ಮರಗಳ ಅಡಿಗೆ ರಂಗಸ್ಥಳವನ್ನ ಕಟ್ಟಿದ್ರು. ಈ ಬಾರಿ ‘ಪೀ ಥೋಡೈ’ ನಾಟ್ಕದವರು ‘ಮರವನ್ನೇ ಒಳಗೊಂಡಂಥ ರಂಗ ಬೇಕು ಅಂದಿದ್ರಂತೆ. ಹಾಗಾಗಿಯೇ ದೊಡ್ಡ ಮರವನ್ನೇ ಒಡಲಲ್ಲಿಟ್ಕೊಂಡ ರಂಗ ಸ್ಥಳ ಸಜ್ಜಾಗಿತ್ತು. ರಾತ್ರಿ ಹೊತ್ತು. ಮಸು ಮಸುಕಾಕಿ ಕಾಣುವ ಮರಗಳು. ಮೇಲೆ ಹೊಳೆಯುವ ಚಂದ್ರ. ನಗುವ ನಕ್ಷತ್ರಗಳು. ಕೂರಲು ಅಟ್ಟಣಿಗೆ. ರಂದ ಮೇಲೆ ಪರಿಸರ ಪ್ರೀತಿಯ ನಾಟ್ಕ.
ಈ ಪ್ರಯೋಗ ‘ ಕಲಾಕ್ಷೇತ್ರ ಮಣಿಪುರ’ ದ್ದು. ಜನಪರ ನಾಟ್ಕಗಳನ್ನೇ ಆಡುತ್ತ ಬಂದ, ಕನೈಯಾಲಾಲ್, ಸಾವಿತ್ರಿ ಯವರ ಈ ನಾಟಕ ತಂಡ ಪರಿಸರ ಪ್ರೀತಿಯ ವಸ್ತುವಿನ ನಾಟ್ಕದೊಂದಿಗೆ ಈ ಬಾರಿ ಬಂದಿತ್ತು.
ಮಣಿಪುರದಲ್ಲಿ ಹಿರಿಯರು ಮಕ್ಕಳಿಗೆ ಹೇಳ್ತಿದ್ದ ಒಂದು ಕಥೆ ಹೀಗಿದೆ..

ತಾಯಿ ಮರ ಮಗನಿಗೆ ಯಾವಾಗಲೂ ಹೇಳ್ತಿತ್ತಂತೆ. ನೀನು ಎಂದೂ ದೊಡ್ಡವನಾಗಿ, ಎತ್ತರ ಬೆಳೀಬೇಡ. ಮಗ ಕೇಳಲಿಲ್ಲ. ದೊಡ್ಡ ದೊಡ್ಡದಾಗೇ ಬೆಳೆದ. ಆಗ ಬಂದ್ರು ರಾಜನ ಜನ. ಮರದ ಭಾಗವನ್ನ ಕತ್ತರಿಸಿದ್ರು. ಅದರಿಂದ ‘ರಾಜದೋಣಿ’ ಯನ್ನ ಮಾಡಿದ್ರು. ಮರದ ಆ ಭಾಗಕ್ಕೋ ದೋಣಿಯಾಗಿರುವದಕ್ಕೆ ಇಷ್ಟವಿಲ್ಲ. ಕಾಡಲ್ಲೇ ಬೆಳೆಯೋ ಆಸೆ. ‘ ನನ್ನ ಚೈತನ್ಯವನ್ನ ತಗೊಂಡೋಗಿ ಕಾಡಿನ ಮರವನ್ನಾಗಿ ಮಾಡ್ರೋ’ ಅಂತ ಅದರ ಆತ್ಮ ಕೂಗ್ತಿತ್ತಂತೆ.
ಇದೇ ಕಥೆಯನ್ನಾಧರಿಸಿದ ನಾಟ್ಕ ಇದು. ‘ಹಿಯಾಂಗ್ ಹಿರೇಲ್’ ಎನ್ನೋ ಅಲಂಕೃತ ದೋಣ,ಿ ತನ್ನ ಇನ್ನೊಂದು ಭಾಗವನ್ನ ನೆನಪಿಸಿಕೊಂಡು ಅಳ್ತದೆ. ತನ್ನ ಇನ್ನೊಂದು ಭಾಗವನ್ನ ಸೇರಿಕೊಳ್ಳೋ ಆಸೆ ಅದಕ್ಕೆ. ಬೇರುಗಳ ನೆನಪು. ತನ್ನ ಗೆಳತಿ ಹಕ್ಕಿ ‘ ಪೀ ಥೋಡೈ’ ನ ಕೇಳಬೇಕು. ‘ಹೇಗಾದ್ರೂ ನನ್ನ ಚೈತನ್ಯವನ್ನು ಆಲ್ಲಿಗೆ ಕೊಂಡು ಓಗಿ ಸೇರಿಸು ಅಂತ
ಆ ಹಕ್ಕಿಯೋ, ಹಸಿರೆಲೆಯನ್ನ ಕೊಕ್ಕಲ್ಲಿ ಸಿಕ್ಕಿಸಿಕೊಂಡು ಎಲ್ಲೆಲ್ಲೂ ಅಲೆಯುತ್ತ ‘ ಪೀ ಪೀ’ ಅನ್ನುತ್ತ ಪ್ರೀತಿ, ಶಾಂತಿಯ ಸಂದೇಶವನ್ನು ಸಾರುತ್ತಿದೆ.
‘ಕನ್ಹೈಯಾಲಾಲ್ ಅಭಿನಯ ಮಾದರಿ’ಯ ಛಾಯೆ ಇಲ್ಲಿಯೂ ಮುಂದುವರಿದಂತೆ ಕಂಡರೂ ನಿರ್ದೇಶಕ Heisnam Tomba singh
ನಾಟಕ ಕಟ್ಟುವ ರೀತಿ ವಿಭಿನ್ನ. ರಂಗದ ಮೇಲೆ, ಮಣಿಪುರದ ಜಾನಪದ ಆಚರಣೆಗಳೊಂದಿಗೇ ನಾಟಕವೂ ಬೆಳೆಯುತ್ತ ಹೋಗುತ್ತದೆ. ಹಾಗಾಗಿ ನಾಟಕದುದ್ದಕ್ಕೂ ಜಾನಪದದ ಕಸುವಿದೆ. ನಟ ನಟಿಯರೂ ಹಾಗೆ. ಹದಿ ಹರೆಯದ ಈ ಮಕ್ಕಳು ಬೇಕು ಬೇಕಾದಂತೆ ಶರೀರವನ್ನು ‘ಮಣಿ’ ಸುತ್ತ ಚಂದದ ಆಕಾರ ನೀಡುತ್ತಾರೆ.
ಮಣಿಪುರದಲ್ಲಿ ಈಗೀಗ ಮರಗಳು ಕಾಣೆಯಾಗ್ತಿವೆ. ಅವುಗಳ ಜಾಗದಲ್ಲಿ ಗಸಗಸೆಯ ತೋಟಗಳನ್ನ ಬೆಳೀತಿದ್ದಾರೆ. ನಮ್ಮ ಹುಡುಗರು ಡ್ರಗ್ಸ್ ವ್ಯಸನಿಗಳಾಗುತ್ತಿದ್ದಾರೆ’ ಅದಕ್ಕಾಗಿ ಯುವ ಜನರ ನಡುವೆ ಈ ನಾಟ್ಕ ಒಯ್ಯುತ್ತಿದ್ದೇವೆ ಅಂತಾರೆ ನಿರ್ದೇಶಕ Heisnam Tomba singh
| ನಾಳೆ ಇನ್ನೊಂದು ನಾಟಕ |


















0 Comments