-ಎಂ.ಎಸ್.ಆಶಾದೇವಿ
ಇಷ್ಟಕ್ಕೂ ಗುರುಗಳೆಂದರೆ ನಿತ್ಯ ವರ್ತಮಾನ ತಾನೆ. ತಾನು ವಿದ್ಯಾರ್ಥಿಯಾಗಿದ್ದೆ ಎನ್ನುವುದು ನಿಜವಾದ ಗುರುಶಿಷ್ಯರ ಸಂಬಂಧದ ಮಟ್ಟಿಗೆ ಎಂದಿಗೂ ನಿಜವಲ್ಲವಲ್ಲ. ಕಲಿಯುವುದರ ನಿರಂತರತೆಯನ್ನು ಕಲಿಸುವವರೇ ಗುರುಗಳು ತಾನೆ. ಕಾವ್ಯದ ರುಚಿ ಹುಟ್ಟಿಸಿದವರು, ಕಾವ್ಯದ ಮಾಂತ್ರಿಕ ಘಳಿಗೆಗಳನ್ನು ಹಿಡಿದುಕೊಟ್ಟವರು, ಹಲವು ಕ್ಷೇತ್ರಗಳಲ್ಲಿ ಯಾವುದು ನನ್ನದೆಂದು ಗೊಂದಲಿಸಿದಾಗ ಇದೇ ನಿನ್ನದು ಎಂದು ಕಣ್ಣೆದುರಿಗೆ ನಿಲ್ಲಿಸಿದವರು, ಲೋಕಾರ್ಥದಲ್ಲಿ ಕಲಿಸದೇ ಕಲಿಸುತ್ತಿರುವವರು ಇವರಲ್ಲಿ ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ? (ಕೋರಿ ಮೇಡಂ, ಭಾಗ್ಯಲಕ್ಷ್ಮಿ, ಗೀತಾ ಸತ್ಯವತಿ, ಎಂ.ಸಿ. ಪ್ರಕಾಶ್, ಗುರುರಾಜ ಕರ್ಜಗಿ, ಸೌಮಿತ್ರಾ ಚಕ್ರವರ್ತಿ, ಕೆ.ವಿ.ಎನ್, ಕೀ ರಂ, ಲಕ್ಷ್ಮಿನಾರಾಯಣ ಭಟ್ಟ, ಚಿದಾನಂದ ಮೂರ್ತಿ, ಡಿ. ಆರ್. ಎನ್, ಅನಂತಮೂರ್ತಿ, ಟಿ.ಪಿ.ಅಶೋಕ್, ಕೆ.ವಿ.ಸುಬ್ಬಣ್ಣ, ವೈದೇಹಿ… ಎನಿತು ಜೀವಗಳಿಗೆ ಎಷ್ಟು ಋಣಿಯೋ ನಾನು)
ಇಂಥ ನನ್ನ ಪುಣ್ಯ ವಿಶೇಷಗಳಲ್ಲಿ ಒಬ್ಬರ ಬಗೆಗೆ ಒಂದು ಮಾತು ಹೇಳಬಹುದಾದರೆ…

ಒಂದು ಒಳ್ಳೆಯ ಪದ್ಯ ಓದಿದ ತಕ್ಷಣ ನನಗೆ ಕಿ.ರಂ ಈ ಪದ್ಯದ ಬಗ್ಗೆ ಏನು ಹೇಳಬಹುದು ಎನ್ನುವ ಪ್ರಶ್ನೆ ಆಯಾಚಿತವಾಗಿ ಬರುತ್ತದೆ. ಮೇಷ್ಟ್ರು ಈ ಪದ್ಯವನ್ನು ಬೇರೆ ತರಹ ನೋಡ್ತಾರೇನೋ ಎನ್ನುವ ಕುತೂಹಲ ಮೂಡುತ್ತದೆ. ಈ ಕುತೂಹಲದ ಜೊತೆಯಲ್ಲೇ ಅವರು ಹೀಗೆ ಓದಬಹುದು ಅನ್ನೋದನ್ನ ನಾನೇ ಹುಡುಕಿ ಕಟ್ಟಬೇಕು ಅನ್ನುವ ಆಸೆಯೂ, ಹಠವೂ ಹುಟ್ಟುತ್ತದೆ. ಕಿ.ರಂ ಅವರ ಶಿಷ್ಯರಿಗೆಲ್ಲ ನಿತ್ಯ ಗುರುವಾಗಿರುವುದು ಹೀಗೆ. ಕೆಟ್ಟ ಪದ್ಯ ಓದಿದಾಗಲೆಲ್ಲ ಕಿ.ರಂ ಹೇಳುವ ಮಾತು ಒಬ್ಬ ಕಾವ್ಯಜೀವಿ ಸಹಜವಾಗಿ ಹೇಳುವಂಥದ್ದು, `ಸರಿ, ಆದರೆ ನನಗೆ ಬೇಕಾಗಿರೋದು ಕಾವ್ಯರೀ… ಕಾವ್ಯದ ಬಗ್ಗೆ ಮಾತಾಡೋಕೆ ಮಾತ್ರ ನಾನು ತಯಾರು… ಸುಮ್ಮನೇ ನನ್ನ ಟೈಮ್ ವೇಸ್ಟ್ ಮಾಡ್ಬೇಡಿ…’
ಎಷ್ಟು ಹೊತ್ತಿಗೋ ಫೋನ್ ಮಾಡಿದಾಗ ಮೇಷ್ಟ್ರು ಮೊದಲ ಪ್ರಶ್ನೆಯಾಗಿ ಏನು ಓದ್ತಾ ಇದ್ದೀಯಾ… ಅಂತ ಕೇಳಿದರೆ ಆವತ್ತು ಅದೃಷ್ಟ ಖುಲಾಯಿಸಿದೆ ಅಂತಲೇ ಅರ್ಥ. ನೆನ್ನೆ ಅಕ್ಕಮಹಾದೇವಿ ಜೊತೆ ವಾಕಿಂಗ್ ಹೋಗಿದ್ದೆ ಅಂತಲೋ, ಕುಮಾರವ್ಯಾಸ ನೆನ್ನೆ ರಾತ್ರಿ ನಮ್ಮ ಮನೆಗೆ ಊಟಕ್ಕೆ ಬಂದಿದ್ದ ಅಂತಲೋ ಶುರು ಮಾಡಿ ಅವರ ಕಾವ್ಯ, ಆ ಕಾವ್ಯದ ಬಗೆಗೆ ಇಲ್ಲಿಯ ತನಕ ಬಂದಿರುವ ವಿಮರ್ಶೆಯ ಸಾದ್ಯಂತ ಓದು… ಈ ಎಲ್ಲವನ್ನೂ ಕಣ್ಣೆದುರಿಗೆ ಇಟ್ಟುಕೊಂಡು … ಆ ಕಾವ್ಯ ತನ್ನೊಳಗೆ ಅಡಗಿಸಿಕೊಂಡಿರುವ ಇನ್ನೊಂದು ಸಾಧ್ಯತೆಯನ್ನು ಜಾದೂಗಾರ ಒಳಗಿನಿಂದ ತೆಗೆದು ತೋರಿಸುವ ಹಾಗೆ ತೆರೆದು ತೋರಿಸುತ್ತಾರೆ. ಕಾವ್ಯದ ಬಗೆಗಿನ ಮುಕ್ಕಾಗದ ಪ್ರೀತಿಯನ್ನು ಪರಿಮಳದ ಹಾಗೆ ಕಿರಂ ಹರಡುವುದು ಹೀಗೆ.



0 Comments