ಜೋಗಿ ಅಂದ್ರೇ ಹಾಗೆ. ಆ ಕ್ಷಣಕ್ಕೆ ತಟಕ್ಕನೆ ಬೇಕಾಗಿದ್ದೇ ಹೊಳೆಯುತ್ತದಲ್ಲಾ ಅದು yes, ಜೋಗಿಗೆ ಮಾತ್ರ ಸಾಧ್ಯ. ಅವರೊಳಗೊಬ್ಬ ಅಸಾಧ್ಯ ತುಂಟನಿದ್ದಾನೆ. ಅವರ ಅಮ್ಮನ ಬಗ್ಗೆ ನಮಗೆಲ್ಲಾ ಕರುಣೆ. ಹೇಗೆ ಸುಧಾರಿಸಿದರೋ ಆ ತಾಯಿ.
ಉಪ್ಪಿನಂಗಡಿಯಿಂದ ಬೆಂಗಳೂರಿಗೆ ಬಂದೆ ಎನ್ನುತ್ತಾರೆ ಜೋಗಿ. ನಮಗ್ಯಾಕೋ ಡೌಟು, ಉಪ್ಪಿನಂಗಡಿಯೇ ಇವರನ್ನು ತಾಳಲಾಗದೆ ಹೊರ ದಬ್ಬಿತೇನೋ ಎಂದು. ಇವರಿಗೆ ಪುತ್ತೂರಲ್ಲೊಬ್ಬ ಗೆಳೆಯ ಕುಂಟಿನಿ. ಜೋಗಿಯಷ್ಟೇ ಕಿಲಾಡಿ.
ಸಾಹಿತ್ಯ ಸಮಾರಂಭಕ್ಕೆ ಬಳಸುವ ಕ್ಲೀಷೆಗಳನ್ನೆಲ್ಲಾ ಓದಿ ಓದಿ ಸುಸ್ತಾದವರಿಗೆ ಜೋಗಿಯ ವಿಟ್ ಇಲ್ಲಿದೆ. ಸಮಾರಂಭವನ್ನು ಸಭ್ಯ ದನಿಯಲ್ಲಿ ಕೀಟಲೆ ಮಾಡುತ್ತಲೇ ತಮ್ಮ ತುಂಟ ಕಣ್ಣುಗಳಿಂದ ನೋಡಿದ್ದನ್ನು ಜೋಗಿ ಇನ್ನು ಮುಂದೆ ನಮ್ಮ ಮುಂದಿಡುತ್ತಾರೆ.
ಮಾಲತಿ ಶೆಣೈ ಪತ್ರ ಬರೆದರು- ‘ತೇರೇ ದ್ವಾರ್ ಖಡಾ ಏಕ್ ಜೋಗಿ ’ ಅಂತ. ಮಾತು ತಪ್ಪಿಸುವ ಈ ಜೋಗಿಯನ್ನು ಎಳೆ ತಂದು ಪ್ರತೀ ಮನೆಯ ಬಾಗಿಲಲ್ಲಿ ನಿಲ್ಲಿಸಿದ್ದೇವೆ, ಒಪ್ಪಿಸಿಕೊಳ್ಳಿ-
ಜೋಗಿ ಡೈರಿ -2

ಸದಾಶಿವನ ಧ್ಯಾನ
ಕತೆಗಾರ ಕೆ ಸದಾಶಿವ ನೆನಪಲ್ಲೊಂದು ಹತ್ತೂವರೆಯ ಪೂರ್ವಾಹ್ನ. ಜಿ ಎಸ್ ಸದಾಶಿವ ಮತ್ತು ಕೆ ಸದಾಶಿವರನ್ನು ಬಿಳಿ ಸದಾಶಿವ ಮತ್ತು ಕರಿ ಸದಾಶಿವ ಅಂತ ಅನಂತಮೂರ್ತಿ ಮತ್ತು ಗೆಳೆಯರು ಕರೆಯುತ್ತಿದ್ದರಂತೆ. ಕನ್ನಡದ ಈ ಇಬ್ಬರು ಕತೆಗಾರ ಸದಾಶಿವರೂ ಈಗಿಲ್ಲ. ಮತ್ತೊಬ್ಬರು ಕವಿ ಸದಾಶಿವ, ಪೇಜಾವರ ಸದಾಶಿವ ರಾಯ. ಅವರೂ ಇಲ್ಲ. ಮೂವರನ್ನೂ ನಾವೆಲ್ಲ ಯಶಸ್ವಿಯಾಗಿ ಮರೆತುಬಿಟ್ಟಿದ್ದೇವೆ, ಕಾರ್ನಾಡರು ಕನ್ನಡವನ್ನು ಮರೆತ ಹಾಗೆ.
ಸದಾಶಿವ್ ಮಗ ಶರತ್ ಏರ್ಪಡಿಸಿದ್ದ ಕಾರ್ಯಕ್ರಮ ಅದು. ಆವತ್ತು ಸದಾಶಿವ್ ಕತೆಗಳ ಕುರಿತು ವಸುಧೇಂದ್ರ ಮಾತಾಡುವುದಿತ್ತು. ಸದಾಶಿವ ಜೊತೆಗಿನ ಒಡನಾಟದ ಬಗ್ಗೆ ಜಿಕೆ ಗೋವಿಂದರಾವ್, ಜಿಎನ್ ರಂಗನಾಥ ರಾವ್ ಮಾತಾಡುವವರಿದ್ದರು. ನಾನು ಅಡಿಗರು ಬರೆದ ನಮ್ಮ ಸದಾಶಿವ ಪದ್ಯ ಓದಬೇಕಾಗಿತ್ತು.
ಹತ್ತೂವರೆಯಾದರೂ ಅಲ್ಲಿದ್ದದ್ದು ನಾವು ಐದೇ ಮಂದಿ. ಜಿಕೆಜಿ ಯಾರೂ ಬರೋಲ್ಲಾರೀ, ಜನ ಮರೆತುಬಿಟ್ಟಿದ್ದಾರೆ ಅಂತ ತಮ್ಮ ಎಂದಿನ ಶೈಲಿಯಲ್ಲಿ ಗೊಣಗಿಕೊಂಡರು. ಜಿ ಎಸ್ ಸದಾಶಿವರನ್ನೇ ಮರೆತಾಗಿದೆ, ಇನ್ನು ಕೆ ಸದಾಶಿವ ನೆನಪಿರುತ್ತಾರಾ ಅಂತ ನಾನೆಂದೆ.
ಹತ್ತೂವರೆ ಕಳೆದರೂ ಜನ ಬರುವ ಲಕ್ಷಣ ಕಾಣಲಿಲ್ಲ. ಮೂವರ ಭಾಷಣವನ್ನು ನಾನೊಬ್ಬನೇ ಕೇಳಬೇಕಾಗುತ್ತಲ್ಲ ಅಂತ ಹೆದರಿ ಅಲ್ಲಿಗೆ ಬಂದಿದ್ದ ಸಚ್ಚಿದಾನಂದ ಹೆಗಡೆ ಜೊತೆ ನಾನು ಪರಾರಿಯಾದೆ. ವಸುಧೇಂದ್ರ ರಾತ್ರಿ ಹಗಲು ಸದಾಶಿವ್ ಕತೆಗಳನ್ನು ಓದಿ, ಅವರ ಕುರಿತ ಟಿಪ್ಪಣಿಗಳನ್ನು ಓದಿ ಉತ್ಸಾಹದಿಂದ ಮಾತಾಡಲು ಸಿದ್ಧರಾಗಿ ಬಂದಿದ್ದರು.
ಸದಾಶಿವ ತೀರಿಕೊಂಡಾಗ ಅಡಿಗರು ಬರೆದ ಸಾಲು ಹೀಗಿದೆ-
ಕತೆ ಬರೆದನಂತೆ- ಕತೆಯೇನು ಮಣ್ಣು- ತನ್ನೆದೆಯ
ಖಂಡ ಖಂಡ ಕತ್ತರಿಸಿ ಕಿತ್ತು ಹಿಡಿದು ಹಿಂಡಿಹಿಂಡಿ
ಭಟ್ಟಿಯಿಳಿಸಿದ ತೊಟ್ಟು ತೊಟ್ಟು
ನಾಗಾಲೋಟದಲ್ಲು ಅಲ್ಲಲ್ಲಿ ತಡೆತಡೆದು ಕೆತ್ತಿರುವ ತಳದ ಗುಟ್ಟು.
ಆಮೇಲೆ ಸದಾಶಿವನ ಸಾವಿಗೆ ಮರುಗಲೇ ಬೇಡವೇ ಎಂಬ ಜಿಜ್ಞಾಸೆಯಲ್ಲಿ ಅಡಿಗರು ಒಂದು ಸಾಲು ಸೇರಿಸುತ್ತಾರೆ- ಸಹಾನುಭೂತಿಯ ಬಡಿಯ..
ಎಷ್ಟು ಒಳ್ಳೆಯ ಕತೆಗಾರ. ನವ್ಯದ ಶೈಲಿಯ ಕತೆಗಾರ ಅನ್ನೋದರಲ್ಲಿ ಅನುಮಾನವೇ ಇಲ್ಲ. ಆದರೂ ಎಷ್ಟು ಬೇಗ ಜನ ಮರೆತುಬಿಟ್ಟರು. ಬರಹಗಾರರೂ ಮರೆತುಬಿಟ್ಟಿದ್ದೇವೆ ಎಂದು ವಸುಧೇಂದ್ರ ತಮ್ಮ ಮಾರ್ದವ ಶೈಲಿಯಲ್ಲಿ ಕೊಂಚ ಮರುಗಿದರು. ಅದರಲ್ಲಿ ಅಪ್ಪಟ ಪ್ರಾಮಾಣಿಕತೆಯಿತ್ತು.
ನಾನು ಅಮ್ಮನ ದಿನದಂದು ನಮ್ಮಮ್ಮ ಅಂದ್ರೆ ನಂಗಿಷ್ಟ ಬರೆದ ವಸುಧೇಂದ್ರ ಜೊತೆಗಿರುವ ಸಂತೋಷವನ್ನೂ ಅಪ್ಪನ ನೆನಪಿಗಾಗಿ ಕಾರ್ಯಕ್ರಮ ಮಾಡುತ್ತಿರುವ ಶರತ್ ಉತ್ಸಾಹ ಮತ್ತು ಪ್ರೀತಿಯನ್ನೂ ಸವಿಯುತ್ತಾ ತುಂಬ ಹೊತ್ತು ನಿಂತಿದ್ದೆ. ಕೆ ಸದಾಶಿವ ಎಷ್ಟೊಳ್ಳೇ ಕತೆಗಾರ, ಅವನನ್ನು ಮರೆತೇಬಿಟ್ಟಿದ್ದೀವಿ ಮಾರಾಯ. ಯಾರಾದ್ರೂ ಅವನ ಬಗ್ಗೆ ಒಂದು ಕಾರ್ಯಕ್ರಮ ಮಾಡಬೇಕು ಅಂತ ಪದೇ ಪದೇ ಹೇಳುತ್ತಿದ್ದ ಅನಂತಮೂರ್ತಿಯವರು ಲಂಡನ್ನಿನಲ್ಲಿದ್ದರು. ಸದಾಶಿವ ಬಗ್ಗೆ ಪೇಪರಲ್ಲಿ ಏನಾದ್ರೂ ಮಾಡ್ರೀ ಅಂತ ಫೋನ್ ಮಾಡಿ ಪ್ರೀತಿಯಿಂದ ಹೇಳಿದ ಜಯಂತ್ ಕಾಯ್ಕಿಣಿ ಕಾರ್ಯಕ್ರಮಕ್ಕೆ ಬಂದಿರಲಿಲ್ಲ.
ಮತ್ತೆ ಮಳೆ ಹೊಯ್ಯುತಿದೆ, ಎಲ್ಲ ನೆನಪಾಗುತಿದೆ ಅಂತ ಕತೆಬರೆದವರು ಸದಾಶಿವ. ಆವತ್ತು ಬೆಳಗ್ಗೆ ಮಾತ್ರ ಯಾವ ನೆನಪಿನ ಮಳೆಯೂ ಹೊಯ್ದಂತಿರಲಿಲ್ಲ.
ನಾನು ತಪ್ಪಿಸಿಕೊಂಡು ಬಂದ ಬಗ್ಗೆ ಈಗ ಬೇಸರವಾಗುತ್ತಿದೆ. ಅಲ್ಲಿದ್ದು ಭಾಷಣ ಕೇಳಿದ್ದರೆ ಇನ್ನಷ್ಟು ಬೇಸರವಾಗುತ್ತಿತ್ತು ಅಂತ ಗೊತ್ತಿದ್ದೂ..
ಕಾರ್ನಾಡರು ಕನ್ನಡವನ್ನು ಮರೆತ ಹಾಗೆ…
ನಿಮಗೆ ಇವೂ ಇಷ್ಟವಾಗಬಹುದು…




ಕಣ್ದುಂಬಿಕೊಂಡು ನಗಬೇಕು, ಹಾಗೆ ಬರೆದಿದ್ದೀರಿ.
“ನಾನು ತಪ್ಪಿಸಿಕೊಂಡು ಬಂದ ಬಗ್ಗೆ ಈಗ ಬೇಸರವಾಗುತ್ತಿದೆ. ಅಲ್ಲಿದ್ದು ಭಾಷಣ ಕೇಳಿದ್ದರೆ ಇನ್ನಷ್ಟು ಬೇಸರವಾಗುತ್ತಿತ್ತು ಅಂತ ಗೊತ್ತಿದ್ದೂ..”
ತುಂಬಾ ಚೆನ್ನಾದ ಮಾತು.