ಚೇತನಾ ತೀರ್ಥಹಳ್ಳಿ
ಹಣೆಯಲ್ಲಿ ಅಮಾವಾಸ್ಯೆ
ನಸೀಬು ಸುತ್ತುತ್ತ, ಮತ್ತೆ ಚಂದಿರ ಮೂಡಲು ನಾಲ್ಕು ವರ್ಷ ಬೇಕಾದವು.
ಹೊಸ ನೀರು ಹಳತನ್ನ ಕೊಚ್ಚಿಕೊಂಡು ಹರಿಯುತ್ತಿತ್ತು
ಹುಣ್ಣಿಮೆ ಕನಸು ತೆರೆದಿತ್ತು.
* * *
“ನಿನ್ನ ಮೇಲಿನ ಪ್ರೀತಿ ಅನುಕಂಪವಲ್ಲ” ಅಂವ ಮಲ್ಲಿಗೆ ಮುಡಿಸಿದ.
ಜೋಡಿಯಾದರು. ಸಹಿ ಹಾಕಿದ ಗೆಳೆಯರೇ ಸಿಹಿ ಹಂಚಿದರು.
“ಓಪನರ್ ಬೇಕಿಲ್ಲಮ್ಮಾ… ಆಲ್ ರೆಡಿ ಸೀಲ್ ಓಪನ್ಡ್!”
ವ್ಹಿಸ್ಕಿ ಹೆಚ್ಚಾದವನೊಬ್ಬ ತೊದಲಿ ತೂರಾಡಿದ
ಯಾಕೋ… ಹಿಡಿದ ಕೈ ಮೆಲ್ಲನೆ ಜಾರಿತ್ತು.
* * *

ಕಾಲಕ್ಕೆ ಕೀ ಕೊಟ್ಟು ಮರೆತವರು ಯಾರೋ?
ಅದೊಂದು ತಾರೀಖಿನ ದಿನ, ಮತ್ತೆ ಹಾಜರು
ಅವಳ ನೆನಪಿಗೋ, ಸಕ್ಕರೆ ಖಾಯಿಲೆ. ಮಾಯುವುದೇ ಇಲ್ಲ ಗಾಯ.
ಅದು, ಆ ಮೊದಲನೆಯವ ಇಲ್ಲವಾಗಿದ್ದ ದಿನ.
ಕಣ್ಣಂಚಲ್ಲಿ ನೆನಪಿನ ಹನಿ. ಕೈಯ್ಯಲ್ಲಿ ಅವನ ಮುಗುಳುನಗು.
* * *
“ಅವನನ್ನ ತುಂಬಾ ಪ್ರೀತಿಸ್ತಿದ್ಯಾ?”
“ಹೂಂ”
“ನನ್ನನ್ನ?”
“ನೀವು ಪ್ರಾಣಕ್ಕಿಂತ ಹೆಚ್ಚು ನಂಗೆ”
“ನಾನು ಮೈಗೆ, ಆ “ಸತ್ತ”ವ ಮನಸ್ಸಿಗಾ?”
ಇಶ್ಶೀ… ಅವನ ಬಾಯಲ್ಲಿ ಹಾದರದ ಮಾತು!
* * *
ಈಗ,
ಚಂದಿರನೇನೋ ಇದ್ದಾನೆ.
ತುಂಬುತ್ತ, ಕರಗುವೆನೆಂದು ಧಮಕಿ ಹಾಕುತ್ತ…
ಹುಣ್ಣಿಮೆ ಕನಸಿಗೆ ಮಾತ್ರ,
ಮತ್ತೆಂದೂ ಬಿಡದ ಗ್ರಹಣ ಹಿಡಿದಿದೆ!


ಚೇತನಾ,
ಹಣೆಯಲ್ಲಿನ ಕತ್ತಲೆಯನ್ನು ಒದ್ದು ಚಂದ್ರರಿಬ್ಬರು ಬಂದರೂ ಅಮವಾಸ್ಯೆ, ಗ್ರಹಣವಂತೂ ತಪ್ಪಲಿಲ್ಲ!
ಕೀ ಕೊಟ್ಟ ಮರೆಯಲ್ಪಟ್ಟ ಕಾಲ, ಸಕ್ಕರೆ ಖಾಯಿಲೆಯ ನೆನಪು, ಕೆನ್ನಗಿಳಿಯಲಿರುವ ನೆನಪಿನ ಬಿಸಿ ಹನಿ, ಕೈಯೊಳಗಿನ ತಂಪು ತಂಪು ಮುಗಳ್ನಗು… ಏನಿದೆ ಏನಿಲ್ಲ ಕೊರೆದಿಡಲು ಮನಸ್ಸನ್ನು!!
Good one Dear Chetana T.
‘ನಾನು ಮೈಗೆ ಅವನು(ಸತ್ತವ) ಮನಸ್ಸಿಗೆ’….ಈ ಸಾಲುಗಳನ್ನು ಓದಿದಾಗ ಎದೇ ಹಿಂಡಿದಂತಾ ನೋವು. But then what is LOVE? “ಓಪನರ್ ಬೇಕಿಲ್ಲಮ್ಮಾ… ಆಲ್ ರೆಡಿ ಸೀಲ್ ಓಪನ್ಡ್!”people never let things forget; sort of scratching the wound which is trying to heal. some people cannot stand their fellow beings’ happiness.
ಮಾಲತಿ ಎಸ್.
ಜಗತ್ತಿಗೆ ಆದರ್ಶವಾದಿಯಾದವ ಮನಸ್ಸಿಂದ ದೊಡ್ಡವನಾಗಲಿಲ್ಲ….
ಚಂದಿರ ಆಗಾಗ ಮೂಡಿ ಮರೆಯಾಗಿ ಆಸೆಗಳೊಂದಿಗೆ ಕಣ್ಣಾಮುಚ್ಚಾಲೆಯಾಡುವ ಬದಲು ಅಮವಾಸ್ಯೆಯೇ ಚೆನ್ನಿತ್ತಲ್ಲ……
ಮನ ಕಲಕುವ ಷಟ್ಪದಿ
ಪ್ರಿಯ ಚೇತನಾ,
ಗ್ರಹಣದ ಕತ್ತಲೆಯಲ್ಲಿ ಹೊಳೆಯುವ ನಕ್ಷತ್ರದಂತೆ – ಮಿಂಚುವ ನಿಮ್ಮ ನೆನಪಿನ ಹನಿಗಳು.. ಓದಿ ಮಳೆ ಸುರಿಯುತ್ತಿದೆ ಒಳಗೆ, ಹೊರಗೆ ಸುತ್ತೆಲ್ಲ ಮೋಡ ಮೋಡ.
ಮರೆಯದೆ ಹಾಜರಾಗುವ ಅದೊಂದು ತಾರೀಖಿಗೆ, ಆ ಮಾಗದ ಗಾಯಕ್ಕೆ ನನ್ನೆರಡು ಕಣ್ಣ ಹನಿ, ಇಲ್ಲ ಉಪ್ಪಿಲ್ಲ.. ತುಂಬಿರುವುದು ಬರಿಯ ಪ್ರೀತಿ ಮತ್ತು ನೆನಪು.. ಮುಗುಳುನಗು ಕಳಿಸಬೇಕೆಂದಿತ್ತು.. ಆದರೆ ಆಗುತ್ತಿಲ್ಲ, ಕಣ್ಣು ತುಂಬಿದೆ 🙁
ಪ್ರೀತಿಯಿರಲಿ,
ಸಿಂಧು
ಚೇತನಕ್ಕಾ,
ಇದು ಮನ ಕಲಕುವ ಭಾವಷಟ್ಪದಿ.
ದೇಹಕ್ಕೊಬ್ಬ, ಮನಸ್ಸಿಗೆ ಸತ್ತ ಾ ಇನ್ನೊಬ್ಬ. ನಿಜ.
ಇಂದಿನ ಲವ್ ಗೆ ಮದುವೆಯ ಬಂಧ ಬೇಕಿಲ್ಲ. ಆದರೆ ಮದುವೆಯಲ್ಲಿ ಆರಂಭವಾಗಬೇಕಾದ ಪ್ರೀತಿ
ಮದುವೆಯ ಮಂಟಪಕ್ಕೆ ಬರುವಾಗ ಪಕ್ಕಾ ವಾಸ್ತವದ ವ್ಯವಹಾರವಾಗಿದ್ದರೆ…..
ನೀವಂದಂತೆ “ಸತ್ತ”ವನೇ ಆಗುತ್ತಾನೆ ಮನಸ್ಸಿಗೆ.
ಆದರೂ ಬದುಕಿದು. ಯಾಕೆಂದರೆ ಬಂದಂತೆ ಸ್ವೀಕರಿಸಲೇಬೇಕಲ್ಲ.
ಕವನಗಳು ತುಂಬಾ ಚೆನ್ನಾಗಿ ಬಂದಿವೆ.
ನಿಮ್ಮ. ಪ್ರಿಯಾ.