
ಕೀರ್ತಿ ಕೋಲ್ಗಾರ್
ಆಗೊಮ್ಮೆ ಕುವೆಂಪು ಅವರ ಮೈಸೂರಿನ ಮನೆಯಲ್ಲಿ ಸಣ್ಣ ಕಳ್ಳತನವಾಯ್ತು. ಎರಡು ದಿನದ ನಂತರ ಆ ಕಳ್ಳನನ್ನು ಪೊಲೀಸರು ಕುವೆಂಪು ಅವರ ಮನೆಗೆ ಎಳೆದು ತಂದು, ಎಲ್ಲೆಲ್ಲಿ ಏನೇನ್ ಕದ್ದೆ? ಆ ರೂಮಿಗೆ ಹೋಗಿದ್ಯಾ, ಈ ರೂಮಿಗೆ ಬಂದಿದ್ಯಾ? ಅಂತೆಲ್ಲ ಕೇಳುತ್ತಿದ್ದರು.
ಆದರೆ ಕಳ್ಳ ಮಾತ್ರ ಕುವೆಂಪು ಅವರನ್ನು ಚಕಿತ ದೃಷ್ಟಿಯಲ್ಲಿ ನೋಡುತ್ತಲೇ ಇದ್ದ. ಅವನಿಗೆ ಈ ಗುಂಗುರು ಕೂದಲಿನ ಮನುಷ್ಯ ಯಾರೆಂದೇ ಗೊತ್ತಿಲ್ಲ. ಕುವೆಂಪು ಅವರತ್ತ ಬೊಟ್ಟು ಮಾಡಿ ಹೇಳಿದ, “ನಾನು ಕಳ್ಳತನ ಮಾಡುವಾಗ ಇವರು ಇಲ್ಲೇ ಓದುತ್ತಾ ಕೂತಿದ್ದರು. ಏನೂ ಹೇಳಲೇ ಇಲ್ಲ. ಪುಟ ತಿರುವಿ ಹಾಕುತ್ತಿದ್ದರು”!
ಇವತ್ತೂ ಕುವೆಂಪು ಕವಿಶೈಲದಲ್ಲಿ ಓದುತ್ತಲೇ ಕುಳಿತಿದ್ದಾರೆ. ಅವತ್ತಿಗಿಂತ ಸ್ವಲ್ಪ ಮುಂದುವರಿದ ಕಳ್ಳ ಇವನಿರಬಹುದು. ಪೊಲೀಸರು ಮತ್ತೆ ಕರೆತರಬಹುದು. ಹಾಗೆ ಕರೆತಂದ ಮೇಲೂ ಕಳ್ಳನಿಗೆ ಕುವೆಂಪು ಏನೂ ಹೇಳುವುದಿಲ್ಲ….
ನಮ್ಮೂರಲ್ಲಿ ಯಾರು ಎಲ್ಲಿಗೆ ಹೋಗುವುದಾದರೂ ಮನೆಗೆ ಬೀಗ ಹಾಕಿ ಹೋಗುವುದಿಲ್ಲ. ಪಕ್ಕದ ಮನೆಗೆ ಹೇಳಿ ಹೋಗುತ್ತಾರೆ. ಆದರೆ, ಮೊದಲ ಬಾರಿಗೆ ಮುಚ್ಚಿದ ಕವಿಮನೆಯನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ. ಕಾವಲುಗಾರ ಮಾನಪ್ಪ ತನ್ನ ಮನೆಗಿಂತ ಹೆಚ್ಚು ಆಸ್ಥೆಯಲ್ಲಿ ಕಾವಲು ಕಾಯುವಾಗ ಕುವೆಂಪು ಸದಾ ನಿಶ್ಚಿಂತೆಯಿಂದಲೇ ಇರುತ್ತಾರೆ…






0 Comments