ಹರೀಶ್ ಕೇರ ಕಾದಂಬರಿ ‘ನಿಲ್ಲು ನಿಲ್ಲೇ ಪತಂಗʼ
‘ಅಂಕಿತ ಪುಸ್ತಕ’ ಈ ಕೃತಿಯನ್ನು ಪ್ರಕಟಿಸಿದೆ.
ಈ ಕಾದಂಬರಿಯ ಕುರಿತು ಬರೆದ ಬಿ ಆರ್ ಲಕ್ಷ್ಮಣರಾವ್ ಅವರ ಅನಿಸಿಕೆ ಇಲ್ಲಿದೆ.
-ಬಿ ಆರ್ ಲಕ್ಷ್ಮಣರಾವ್
ಪ್ರಿಯ ಹರೀಶ್,
ನಿನ್ನ ‘ನಿಲ್ಲು ನಿಲ್ಲೇ ಪತಂಗ’ ಓದಿ ತುಂಬಾ ಖುಷಿಯಾಯಿತು. ಇದನ್ನು ನೀನು ಕಾದಂಬರಿ ಅಂತ ಕರೆದಿದ್ದೀಯ. ನನಗೇನೋ ಇದು ನಿನ್ನ ಅನುಭವ ಕಥನ ಅನ್ನಿಸಿತು. ಇದು ನಿಜಕ್ಕೂ ಒಂದು ಕಾಲ್ಪನಿಕ ಕಾದಂಬರಿಯೇ ಆಗಿದ್ದರೆ ನಿನಗೆ hats off! ಅಷ್ಟೊಂದು ಸಹಜವಾಗಿದೆ, ಲವಲವಿಕೆಯಿಂದ ಕೂಡಿದೆ, ಕಣ್ಣಿಗೆ ಕಟ್ಟುವಂತಿದೆ ಇಲ್ಲಿನ ಕಥಾನಕ.
ತೇಜಸ್ವಿಯವರಿಗೆ ಇದೊಂದು fitting tribute. ನೀನು ಕಾಡು ಸುತ್ತಿದ್ದು ಸಾರ್ಥಕವಾಯಿತು. ಇದು ಕೇವಲ ಒಂದು ಜೀವ ವಿಜ್ಞಾನದ ಅನ್ವೇಷಣೆಯಾಗಿ ಉಳಿಯದೆ ಎಷ್ಟೊಂದು ಮಾನವೀಯ ಸಂಬಂಧಗಳ ಒಳ ಹೆಣಿಗೆಗಳನ್ನು ಸೂಕ್ಷ್ಮವಾಗಿ ಒಳಗೊಂಡಿದೆಯೆಂದರೆ ಪ್ರತಿ ಪಾತ್ರವೂ ಓದುಗನ ಮನದಲ್ಲಿ ಆಪ್ತವಾಗಿ ದಾಖಲಾಗುತ್ತವೆ (ಕಾಳು ಎಂಬ ನಾಯಿಯೂ ಸೇರಿದಂತೆ). ಕಾದಂಬರಿಯು ಕಟ್ಟಿಕೊಡುವ ಜೀವನ ದರ್ಶನವೂ ಸಹ ಪ್ರಕೃತಿಯಷ್ಟೇ ಅಗಾಧ, ಸಂಕೀರ್ಣ ಮತ್ತು ನಿಗೂಢವಾಗಿದೆ.
ಕಾದಂಬರಿಯ ಅಧ್ಯಾಯಗಳಿಗೆ ನೀನು ಕೊಟ್ಟಿರುವ ಆಕರ್ಷಕ ಶೀರ್ಷಿಕೆಗಳು ನಿನ್ನ ಕಾವ್ಯಪ್ರೀತಿಗೆ ದ್ಯೋತಕವಾಗಿವೆ. ಅವುಗಳಲ್ಲಿ ನನ್ನ ಭಾವಗೀತೆಯ ಒಂದು ಸಾಲೂ ಸೇರಿರುವುದು (ಕವಿದಂತೆ ಮಂಜು ಈ ಹಗಲಿಗೆ) ನನಗೆ ಅಭಿಮಾನದ ಸಂಗತಿ. (ಕವಿ ಕೃತಾರ್ಥನಾದ, ಥ್ಯಾಂಕ್ಯು). ತೇಜಸ್ವಿಯವರ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸಬಲ್ಲ ಯುವ ಲೇಖಕ ನೀನೆಂಬುದನ್ನು ಈ ಕಾದಂಬರಿ ನಿಸ್ಸಂದಿಗ್ಧವಾಗಿ ಸಾಬೀತು ಮಾಡಿದೆ. ಹಾರ್ದಿಕ ಅಭಿನಂದನೆಗಳು.






0 Comments