ರಂಗ ಶಂಕರದಲ್ಲಿ ಸಂಕೇತ್ ನಾಟಕ ಮಾರೀ ಕಾಡು.
(ಶೇಕ್ಸ್ ಪಿಯರನ ‘ಮ್ಯಾಕ್ ಬೆತ್’ ಆಧಾರಿತ)
ರಚನೆ: ಡಾ ಚಂದ್ರಶೇಖರ ಕಂಬಾರ
ವಿನ್ಯಾಸ ಮತ್ತು ನಿರ್ದೇಶನ; ಎಸ್ ಸುರೇಂದ್ರನಾಥ್
ಎಪ್ರಿಲ್ 2 ರಿಂದ ಎಪ್ರಿಲ್ 7.
ಪ್ರತಿದಿನ ಸಂಜೆ 7:30ಕ್ಕೆ.
ವಿಲಿಯಂ ಶೇಕ್ಸ್ ಪಿಯರನ ‘ಮ್ಯಾಕ್ ಬೆತ್’ ಕಂಬಾರರ ಕೈಲಿ ಒಂದು ಕನ್ನಡ ಜಾನಪದ ಕಥೆಯಾಗಿಬಿಟ್ಟಿದೆ. ಅಲ್ಲಿನ ಮ್ಯಾಕ್ ಬೆತ್ ಇಲ್ಲಿ ಮದಕರಿಯಾಗುತ್ತಾನೆ. ಅಲ್ಲಿನ ಬರನಂ ಕಾಡು, ಇಲ್ಲಿ ಮಾರೀ ಕಾಡಾಗುತ್ತದೆ. ಕಂಬಾರರ ಮಾರೀ ಕಾಡು ಅಧಿಕಾರಕ್ಕೆ, ಮನುಷ್ಯನ ಅಧಿಕಾರದ ಹಪಾಹಪಿಗೆ ಸವಾಲನ್ನೆಸೆಯುತ್ತದೆ. ಕಾಡಿನ ನಿಗೂಢಗಳನ್ನು ಅರ್ಥ ಮಾಡಿಕೊಳ್ಳದೆ, ಕಾಡಿನ ಜೊತೆ ಸಂವಾದವನ್ನೂ ಸಾಧ್ಯಮಾಡಿಕೊಳ್ಳದೆ ನಾಶಕ್ಕೆ ಗುರಿಯಾದವನ ಕಥೆಇದು. ತನ್ನ ವಿವರಗಳಲ್ಲಿ, ಮೂಡಿಬಂದ ಪಾತ್ರಗಳಲ್ಲಿ ಮಾರೀಕಾಡು ಎಷ್ಟರ ಮಟ್ಟಿಗೆ ದೇಸಿ ನಾಟಕವೇ ಆಗಿಬಿಟ್ಟಿದೆ ಅಂದರೆ ಇದನ್ನು ಕಂಬಾರರ ನಾಟಕ ಎಂದೇ ಕರೆಯಬೇಕು. ಕನ್ನಡದಲ್ಲಿ ಇದುವರೆಗೆ ಇದ್ದ ಕಾಡುಗಳು ಮೂರು.
ಮನುಷ್ಯನಿಗೆ ಸವಾಲಾಗಿದ್ದ ಶಿವರಾಮ ಕಾರಂತರ ಕಾಡು, ಸಮಾನತೆಗೆ ಸಂವಾದಿಯಾಗಿದ್ದ ಕುವೆಂಪು ಕಾಡು, ವಿಸ್ಮಯ ಮತ್ತು ದುಗುಡಕ್ಕೆ ಕಾರಣವಾಗಿದ್ದ ತೇಜಸ್ವಿ ಕಾಡು. ಇದೀಗ ನಾಲ್ಕನೆಯ ಕಾಡು ಕನ್ನಡ ಸಾಹಿತ್ಯಲೋಕದಲ್ಲಿ ಸಮೃದ್ಧವಾಗುತ್ತಿದೆ. ಕಂಪಿಲರಾಯ, ಮದಕರಿನಾಯಕ ಮತ್ತು ಕರಿಭಂಟರೆಂಬ ಶೂರರು, ಅವರ ಸತ್ವವನ್ನು ಅಡಗಿಸುವ ರಾಣಿ, ಇವರೆಲ್ಲರನ್ನೂ ಕಂಗೆಡಿಸಬಲ್ಲ ಮಾರಿ: ಪಿತೂರಿಗಳು, ಷಡ್ಯಂತ್ರಗಳು, ಕೊಲೆಗಳು..ಇದು ಕಂಬಾರರ ಕಾಡು. ಈ ನಾಟಕ ನಮ್ಮನ್ನು ಹೊಸ ಅನುಭವಕ್ಕೆ ತೆರೆದುಕೊಳ್ಳುವಂತೆ ಮಾಡುವುದರ ಜತೆಗೆ ಹಳೆಯದರ ಮರು ಅನ್ವೇಷಣೆಯಲ್ಲೂ ತೊಡಗಿಸುತ್ತಾ ಹೋಗುತ್ತದೆ.







ವಾವ್ಹ್…ಮತ್ತೊಂದು ರಸದೌತಣ 🙂