ಈ ಕಥೆ ಪ್ರಪಂಚದ ಪ್ರಸಿದ್ಧ ಕಥೆಗಾರ, ಕಾದಂಬರಿಕಾರ, ದಾರ್ಶನಿಕ ಟಾಲ್ಸ್ತಾಯ್ ರಶ್ಯನ್ ಭಾಷೆಯಲ್ಲಿ ಬರದದ್ದು. ಅವನು ರೈತಾಪಿ ಮಕ್ಕಳಿಗಾಗಿ ಒಂದು ಶಾಲೆಯನ್ನು ತೆರೆದಿದ್ದ. ಅಲ್ಲಿ ಅವರು ಓದಲು, ಬರೆಯಲು, ಚಿತ್ರ ಬರೆಯಲು, ಆಡಲು ಸಂಭ್ರಮಿಸಲು ಎಲ್ಲ ಅವಕಾಶಗಳೂ ಇದ್ದವು. ಮಕ್ಕಳಿಗೆ ಕಥೆಗಳನ್ನು ಹೇಳುತ್ತಿದ್ದ ಟಾಲ್ಸ್ತಾಯ್ಗೆ, ಹೆಚ್ಚು ಕಥೆಗಳೇ ನಮ್ಮ ಜಾನಪದಲ್ಲಿ ಇಲ್ಲವಲ್ಲಾ ಎಂದು ಮನಗಂಡು ಸ್ವತಃ ತಾನೇ ಮಕ್ಕಳಿಗಾಗಿ ಕಥೆಗಳನ್ನು ಬರೆಯಲು ಪ್ರಾರಂಭಿಸಿದ. ಹಾಗೆ ಬರೆದ ಕಥೆಗಳಲ್ಲಿ ಒಂದು ಈ ಮೇಲಿನ ಸಿಂಹ ಮತ್ತು ಪುಟ್ಟು ನಾಯಿಮರಿ ಎಂಬ ಪ್ರಸಿದ್ಧ ಕಥೆ.
ಸಿಂಹ ಮತ್ತು ಪುಟ್ಟ ನಾಯಿಮರಿ
– ಕೌಂಟ್ ಲಿಯೋ ಟಾಲ್ಸ ಟಾಯ್
ಇಂಗ್ಲಿಷ್ನಿಂದ ಕನ್ನಡಕ್ಕೆ : ನಟರಾಜ ಹೊನ್ನವಳ್ಳಿ
ಬಹಳ ವರ್ಷಗಳ ಹಿಂದೆ ಲಂಡನ್ನಿನಲ್ಲಿ ಒಂದು ಮೃಗಾಲಯವಿತ್ತು. ಅಲ್ಲಿದ್ದ ಕ್ರೂರ ಪ್ರಾಣಿಗಳಿಗೆ ಆಹಾರವಾಗಿ ನಾಯಿ ಬೆಕ್ಕುಗಳನ್ನು ಹಿಡಿದು ಹಾಕಲಾಗುತ್ತಿತ್ತು. ಒಂದು ದಿನ ಆ ಮೃಗಾಲಯ ನೋಡಲು ಒಬ್ಬ ಬಂದ. ಅವನ ಜೊತೆ ಒಂದು ಪುಟ್ಟ ನಾಯಿಮರಿ ಇತ್ತು. ಅದು ಅವನು ಬರುವಾಗ ಬೀದಿ ಬದಿಯಲ್ಲಿ ಸಿಕ್ಕಿದ ಒಂದು ಪುಟ್ಟ ನಾಯಿಮರಿ. ಆ ನಾಯಿಮರಿಯನ್ನು ಮೃಗಾಲಯದ ಬಾಗಿಲ ಬಳಿಯಿದ್ದ ಸೇವಕನ ಕೈಗೆ ಕೊಟ್ಟು, ‘ನಾನು ಇಡೀ ಮೃಗಾಲಯವನ್ನು ನೋಡಿಕೊಂಡು ಬರುವವರೆಗೆ ಇದನ್ನು ನೋಡಿಕೋ’ ಎಂದು ಹೇಳಿ ನಾಯಿಮರಿಯನ್ನು ಅವನ ಬಳಿ ಬಿಟ್ಟು ಹೋದ. ಆದರೆ ಆ ಸೇವಕ ಬಡ ನಾಯಿಮರಿಯನ್ನು ದೈತ್ಯಾಕಾರದ ಸಿಂಹದ ಪಂಜರದೊಳಗೆ ಎಸದುಬಿಟ್ಟ. ಆದರೆ ನಾಯಿಮರಿಯನ್ನು ಮೃಗಾಲಯಕ್ಕೆ ತಂದವನು ಮರಳಿ ಹೋಗುವಾಗ ಅದನ್ನು ಮರೆತೇ ಹೋದ. ಅದೊಂದು ಬಡ ಪುಟ್ಟ ನಾಯಿಮರಿ. ತನ್ನ ಬಾಲವನ್ನು ಎರಡೂ ಕಾಲಿನ ಮಧ್ಯ ತೂರಿಸಿ, ತನ್ನ ಮೈಯನ್ನು ಆದಷ್ಟೂ ಕುಗ್ಗಿಸಿಕೊಂಡು ಪಂಜರದ ಮೂಲೆಯಲ್ಲಿ ಮುದುರಿ ಕೂತುಕೊಂಡಿತು. ಆ ದೈತ್ಯಾಕಾರದ ಸಿಂಹ ಈ ಪುಟ್ಟ ನಾಯಿಮರಿಯನ್ನು ನೋಡಿತು. ಅದರ ಹತ್ತಿರ ಹತ್ತಿರ ಬಂದಿತು. ಇನ್ನೇನು ಬಾಯಿಹಾಕಿ ತಿನ್ನಬೇಕು ಎಂದುಕೊಂಡ ಸಿಂಹಕ್ಕೆ ಏನಾಯ್ತೋ ಏನೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ತನಗೆ ಆಹಾರವಾಗಿ ಬಂದ ಆ ಪುಟ್ಟ ನಾಯಿಮರಿಯನ್ನು ಪ್ರೀತಿಯಿಂದ ಮೂಸಲು, ನೆಕ್ಕಲು ಶುರುಮಾಡಿತು. ಯಾವಾಗ ಸಿಂಹದ ಮೀಸೆಗಳು ನಾಯಿಮರಿಯ ಮೈಗೆ ಪ್ರೀತಿಯಿಂದ ಸ್ಪಷರ್ಿಸಿತೋ ಆಗ ಆ ನಾಯಿಮರಿ ಗೆಲುವಾಯಿತು. ಅದು ತನ್ನ ಮೈಯನ್ನು ನೆಲದ ಮೇಲೆಲ್ಲಾ ಉರುಳಿಸಿ, ಸಂತೋಷದಿಂದ ತನ್ನ ಬಾಲವಾಡಿಸಿತು. ದೈತ್ಯ ಸಿಂಹ ಮತ್ತು ನಾಯಿಮರಿ ಚಿನ್ನಾಟ ಆಡಲು ಪ್ರಾರಂಭಿಸಿದವು. ಸಿಂಹ ತನ್ನ ಪಂಜದಿಂದ ನಾಯಿಮರಿಯನ್ನು ಹಗುರವಾಗಿ ತಳ್ಳುವುದು, ಆ ನಾಯಿಮರಿ ಸಿಂಹದ ಮೀಸೆಯನ್ನು ಬಾಯಿಂದ ಹಿಡಿದು ಎಳೆಯುವುದು, ಈ ಪುಟ್ಟ ನಾಯಿಮರಿ ಗುಡ್ಡದಂತಹ ಸಿಂಹದ ಮೇಲೆ ನೆಗೆಯುವುದು, ಮೀಸಿ ಎಳೆಯುವುದು, ಹಿತವಾಗಿ ಕಚ್ಚುವುದು ಹೀಗೆ. ಈರೀತಿ ನಾನಾ ಬಗೆಯಾಗಿ ಆಡುವ ಈ ನಾಯಿಮರಿಯನ್ನು ಸಿಂಹ ದುರುಗುಟ್ಟಿ ನೋಡಿತು. ಏನೂ ಮಾಡಲು ತಿಳಿಯದ ಸಿಂಹ ತನ್ನ ದೈತ್ಯ ತಲೆಯನ್ನು ಅತ್ತಿಂದ ಇತ್ತ, ಇತ್ತಿಂದ ಅತ್ತ ಆಡಿಸುತ್ತಾ ಇರಲಿ ಬಿಡು ಎಂದುಕೊಂಡು ಸುಮ್ಮನಾಯಿತು. ಹೀಗೆ ನಾಯಿಮರಿ ಮತ್ತು ಸಿಂಹ ಪಂಜರದಲ್ಲಿ ಆಟವಾಡುತ್ತಲಿದ್ದವು.
ಪ್ರಾಣಿಗಳಿಗೆ ಊಟ ಕೊಡುವ ಸೇವಕ, ಊಟದ ಸಮಯದಲ್ಲಿ ಮಾಂಸದ ತುಂಡೊಂದನ್ನು ಸಿಂಹದ ಪಂಜರದೊಳಕ್ಕೆ ಎಸೆದುಹೋಗುವನು. ಸಿಂಹ ಆ ಮಾಂಸವನ್ನು ತುಂಡು ಮಾಡಿ, ಒಂದು ತುಂಡನ್ನು ನಾಯಿಮರಿಗೆ ಕೊಡುತ್ತಿತ್ತು. ಸೂರ್ಯಮುಳುಗಿದ ಮೇಲೆ ಸಿಂಹ ನೆಲೆದ ಮೇಲೆ ಮಲಗಿ ನಿದ್ರೆ ಮಾಡುತ್ತಿತ್ತು. ಅದರ ಪಕ್ಕದಲ್ಲಿಯೇ ನಾಯಿಮರಿ ತನ್ನ ಪುಟ್ಟ ತಲೆಯನ್ನು ಸಿಂಹದ ಅಗಲವಾದ ಪಂಜದ ಮೇಲಿಟ್ಟು ನಿದ್ರೆ ಮಾಡುತ್ತಿತ್ತು.
ಆ ದಿನದಿಂದ ಸಿಂಹ ಮತ್ತು ನಾಯಿಮರಿಯು ಆ ಪಂಜರದಲ್ಲಿ ಒಟ್ಟಿಗೇ ವಾಸಿಸಲು ಪ್ರಾರಂಭಿಸಿದವು. ಸಿಂಹ ತನ್ನ ಪಾಲಿನ ಆಹಾರದಲ್ಲಿ ಸ್ವಲ್ಪ ಪಾಲನ್ನು ಕೊಡುತ್ತಾ, ಅದಕ್ಕೆ ಏನೂ ತೊಂದರೆ ಮಾಡದೆ, ಜೊತೆಯಲ್ಲೇ ಮಲಗುತ್ತಾ, ಆಗಾಗ್ಗೆ ಆಟವಾಡುತ್ತಾ ಇರಲು ಪ್ರಾರಂಭಿಸಿತು. ಹೀಗೆ ನಾಯಿಮರಿ ಮತ್ತು ಸಿಂಹ ಪಂಜರದಲ್ಲಿ ಆಟವಾಡುತ್ತ ಸಂತೋಷದಿಂದ ಕಾಲ ಕಳೆಯುತ್ತಲಿದ್ದವು.
ಒಂದು ದಿನ ಆ ನಾಯಿಮರಿಯನ್ನು ತಂದು ಇಲ್ಲಿ ಬಿಟ್ಟು ಹೋದವ ಮತ್ತೆ ಮೃಗಾಲಯಕ್ಕೆ ಬಂದ. ಪಂಜರದಲ್ಲಿದ್ದ ತನ್ನ ನಾಯಿಮರಿಯನ್ನು ಗುರುತಿಸಿದ. ಅದನ್ನು ತನಗೆ ವಾಪಸ್ಸು ಕೊಡುವಂತೆ ಸೇವಕನನ್ನು ಒತ್ತಾಯಿಸಿದ. ಸೇವಕ ಆ ನಾಯಿಮರಿಯನ್ನು ಆ ಪಂಜರದಿಂದ ಹೊರತರಲು ಪ್ರಯತ್ನಿಸಿದ. ಅದು ಸಾಧ್ಯವಾಗಲಿಲ್ಲ. ಏಕೆಂದರೆ ಸಿಂಹ ಅದನ್ನು ಬಿಟ್ಟುಕೊಡಲು ತಯಾರಿರಲಿಲ್ಲ. ಸಿಂಹ ಭಯಂಕರವಾಗಿ ಘಜರ್ಿಸಿ ತನ್ನ ಅಸಮಾಧಾನ ಮತ್ತು ಸಿಟ್ಟನ್ನು ತೋರಿಸಿತು. ಅವನು ಉಪಾಯಕಾಣದೇ ಆ ನಾಯಿಮರಿಯನ್ನು ಅಲ್ಲೇ ಬಿಟ್ಟು ಬರಿಗೈಯಲ್ಲಿ ವಾಪಸ್ಸಾದ.
ಹೀಗೆ, ಸಿಂಹ ಮತ್ತು ನಾಯಿಮರಿಯ ಪಂಜರದ ಜೀವನಕ್ಕೆ ಒಂದು ವರ್ಷ ತುಂಬಿತು. ಹೀಗಿರಲು ನಾಯಿಮರಿಗೆ ಹುಶಾರು ತಪ್ಪಿತು. ಕೆಲ ದಿನಗಳ ನಂತರ ಸತ್ತುಹೋಯಿತು.
ಇಲ್ಲಿಂದ ಮುಂದೆ ಸಿಂಹ ಊಹೆಗೂ ಮೀರಿ ವತರ್ಿಸಲು ಪ್ರಾರಂಭಿಸಿತು. ಅದು ಆಶ್ಚರ್ಯಕರ ರೀತಿಯಲ್ಲಿ ಬದಲಾಯಿತು. ತನ್ನ ಸ್ನೇಹಿತನನ್ನ ನೆಕ್ಕಲು, ಮೂಸಲು ಪ್ರಾರಂಭಿಸಿತು. ತನ್ನ ಪಂಜದಿಂದ ಸತ್ತ ನಾಯಿಮರಿಯನ್ನು ಎಬ್ಬಿಸಲು ನೋಡಿತು. ಹೀಗೆ ಬಹಳ ಹೊತ್ತು ಮಾಡಿತು. ಆದರೆ ನಾಯಿಮರಿ ಏಳಬೇಕಲ್ಲ! ಕಡೆಗೆ ಅದು ಸತ್ತು ಹೋಗಿದೆ ಎಂದು ಮನದಟ್ಟಾದ ಕೂಡಲೇ ದುಃಖದಿಂದ ಎದ್ದುನಿಂತಿತು, ಕತ್ತಸುತ್ತಲಿನ ಕೂದಲುಗಳು ನೆಟ್ಟಗೆ ನಿಂತು ದುಃಖ ಸಿಟ್ಟಿನಿಂದ ತೊನೆಯ ಹತ್ತಿತು. ತನ್ನ ಬಾಲವನ್ನು ಅತ್ತಿಂದಿತ್ತ ತೂಯ್ಯುತ್ತಾ ಇಡೀ ಪಂಜರವನ್ನು ನಿಃಶಬ್ಧವಾಗಿ ಸುತ್ತತೊಡಗಿತು. ಪಂಜರದ ಕಬ್ಬಿಣದ ಸರಳುಗಳಿಗೆ ತನ್ನ ದೇಹವನ್ನೇ ಘಟ್ಟಿಸಿಕೊಳ್ಳಲು ಶುರುಮಾಡಿತು. ತನ್ನ ಕಾಲ ಉಗುರುಗಳಿಂದ ಪಂಜರದ ಮರದ ನೆಲಹಾಸನ್ನು ಬಿರುಸಿನಿಂದ ಕೆರಯಲು, ಗೀರಲು ಶುರುಮಾಡಿತು.
ಇಡೀ ದಿವಸ ದುಃಖದಿಂದ ಘಜರ್ಿಸುತ್ತಿದ್ದ ಸಿಂಹ ಕಡೆಗೆ ಸತ್ತ ತನ್ನ ಸ್ನೇಹಿತನ ಪಕ್ಕ ಕುಸಿಯಿತು. ಅಲ್ಲಿಂದ ಮುಂದೆ ಮೌನಕ್ಕೆ ಶರಣಾಯಿತು.
ಸತ್ತ ನಾಯಿಮರಿಯನ್ನು ಪಂಜರದಿಂದ ಹೊರತೆಗೆಯಲು ಪ್ರಯತ್ನಿಸಿದ ಸೇವಕನನ್ನು ಸಿಟ್ಟಿನಿಂದ ಗುರುಗುಟ್ಟಿತು. ಹತ್ತಿರ ಬರಲು ಬಿಡಲಿಲ್ಲ. ಸೇವಕ ಉಪಾಯಮಾಡಿದ. ‘ಇನ್ನೊಂದು ನಾಯಿಮರಿಯನ್ನು ಪಂಜರದೊಳಕ್ಕೆ ಬಿಟ್ಟರೆ ಸಿಂಹ ದುಃಖ ಮರೆತು ಮೊದಲಿನ ಹಾಗೆ ಆಗಬಹುದು. ಈ ನಾಯಿಮರಿಯನ್ನೇ ಸತ್ತುಹೋದ ನಾಯಿಮರಿ ಎಂದು ನಂಬುತ್ತದೆ’ ಎಂದುಕೊಂಡು ಇನ್ನೊಂದು ನಾಯಿಮರಿಯನ್ನು ಆ ಪಂಜರದೊಳಕ್ಕೆ ಬಿಟ್ಟ. ಆದರೆ ಸಿಂಹ ಅದರ ಕಡೆ ನೋಡದೆ ಉಪೇಕ್ಷಿಸಿತು.
ನಂತರ ಸಿಂಹ ತನ್ನ ಪಂಜದಿಂದ ತನ್ನ ತಣ್ಣಗಾಗಿದ್ದ ತನ್ನ ಸ್ನೇಹಿತನನ್ನು ದುಃಖದಿಂದ ತಬ್ಬಿ ಮಲಗಿತು. ಇಡೀ ಐದು ದಿನ ಹಾಗೇ ಇತ್ತು: ಏನೂ ತಿನ್ನದೇ ಕುಡಿಯದೇ!
ಆರನೆಯ ದಿನ ಸಿಂಹ ಸತ್ತುಹೋಯಿತು!
]]>







ನಟರಾಜ್ ಕಥೆ ತುಂಬಾ ಚೆನ್ನಾಗಿದೆ, ಬಹಳ ದಿನಗಳ ನಂತರ ಒಂದು ಒಳ್ಳೆ ಕಥೆ ಓದಿದೆ ಮಕ್ಕಳಿಗೆ ಹೇಳಲು ಒಂದು ಒಳ್ಳೆ ಕಥೆ ಹೇಳಿದಿರಿ , ಆ ಮಹಾ ಜೀವಿಗೊಂದು ಟಾಲ್ ಸ್ಟಾಯ್ ಅವರಿಗೊಂದು ಗೌರವದ ವಂದನೆ
ರವಿ ವರ್ಮ ಹೊಸಪೇಟೆ
ಓದಿದ ಕೂಡಲೇ ಬರೆಯುತ್ತಿದ್ದೇನೆ..
“ಸಂಬಂಜಾ ಅನ್ನೋದು ದೊಡ್ಡದು ಕನಾ” ಅನ್ನೋದು ನೆನಪಾಗುತ್ತಿದೆ..
ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಕಾದಂಬರಿಯ ಕೊನೆಯ ಮಾತು..
ಅದೇ ಕಾದಂಬರಿಯ ಮೊದಲ ಪುಟದಲ್ಲಿ ಅಲ್ಲಮನ “ಎತ್ತಣ ಮಾಮರ..? ಎತ್ತಣ ಕೋಗಿಲೆ..” ವಚನವೂ ಇದೆ..
ಯಾಕೆ ಒಂದು ಜೀವ ಇನ್ನೊಂದು ಜೀವಕ್ಕೆ ಇಷ್ಟವಾಗುತ್ತದೆ..?
ಯಾಕೆ ಒಂದು ಜೀವ ಇನ್ನೊಂದು ಜೀವಕ್ಕೆ ಅಂಟಿಕೊಳ್ಳುತ್ತದೆ..?
ಇದು ನಿಗೂಢ..
ಅದರಲ್ಲೂ ತಾನು ನಿರಾಯಾಸವಾಗಿ ತಿನ್ನಬಹುದಾದ ನಾಯಿಮರಿಗಾಗಿ ತನ್ನ ಪ್ರಾಣವನ್ನು ತ್ಯಜಿಸಿಬಿಡುವ ಸಿಂಹ..
ಅವಮಾನವೆಂದು ಕರೆಯಬಹುದಾದ ಮೀಸೆಯನ್ನು ಜಗ್ಗಿಸಿಕೊಂಡು ಮುದಗೊಳ್ಳುವುದು..
ತಾಯಿಯಂತೆ ತನ್ನ ತೋಳ ಮೇಲೆ ಮಲಗಿಸಿಕೊಳ್ಳುವುದು..
ಇದನ್ನೇನೆಂದು ಕರೆಯುವುದು..? ದುಃಖವೇ..? ವೈರಾಗ್ಯವೇ..? ಬದುಕಿನ ನಶ್ವರತೆಯ ಶಾಶ್ವತ ಸತ್ಯದ ಅರಿವೇ..?
ಕತೆ ಅದ್ಭುತವಾಗಿದೆ.. ಟಾಲ್ಸ್ಟಾಯ್ ಗೂ ನಟರಾಜ್ ಹೊನ್ನವಳ್ಳಿಯವರೇ, ನಿಮಗೂ ಧನ್ಯವಾದಗಳು.. ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ತಂದಿದ್ದೀರಿ.. ಧನ್ಯವಾದಗಳು..
ಶ್ರೇಷ್ಙ ಕಲೆ ಮತ್ತು ಶ್ರೇಷ್ಠ ಸಾಹಿತ್ಯ ಮಾಡುವ ಪರಿಣಾಮ ಒಂದೇ ರೀತಿಯದು..
ಅದು ಓದುಗನನ್ನು, ನೋಡುಗನನ್ನು ಅಥವಾ ಪ್ರೇಕ್ಷಕನನ್ನು ಮೂಕನನ್ನಾಗಿಸುತ್ತದೆ..
ಇನ್ನೂ ಕರಾರುವಕ್ಕಾಗಿ ಹೇಳಬಹುದಾದರೆ.. ಮಾತುಗಳು ಹೊಳೆಯದಂತಹ ಸ್ಥಿತಿಗೆ ತಳ್ಳುತ್ತದೆ..
ಮಾತಿಗೂ ಮೀರಿದಂಥ ನಿರ್ವಾಣ ಶ್ರೇಣಿಯಲ್ಲಿ ಅರ್ಥಗಳ ದರ್ಶನ ಮಾಡತೊಡಗುತ್ತದೆ..
ಇಲ್ಲಿನ ಸಿಂಹ ಮತ್ತು ನಾಯಿಗಳು ತಮ್ಮ ಪ್ರಾಣಿತನದ ಮಾಂಸದ ಮೂರ್ತತೆಯನ್ನು ಮೀರಿ ಅಮೂರ್ತಗಳಾಗುತ್ತವೆ..
ಪ್ರಾಯಶಃ ಸಂಕೇತಗಳು ಸಿದ್ಧಿಸುವ ಪರಿ ಇದೇ ಇರಬೇಕು..
ನಾನು ನಾಟಕದವನು.. ನಟ..
ಇದನ್ನು ಅದ್ಭುತ ನಾಟಕ ಮಾಡಬಹುದು ಅನ್ನಿಸುತ್ತಿದೆ.
ನಾಟಕವೂ ಹಾಗೇಯೇ..
ಸಿಂಹ ನಾಯಿಯನ್ನು ತಿಂದುಬಿಟ್ಟಿದ್ದರೆ ಅದು ನಾಟಕವಾಗುತ್ತಿರಲಿಲ್ಲ..
ತಿನ್ನದೇ ಇರುವುದಷ್ಟೆ ಅಲ್ಲ.. ನಾಯಿ ಸತ್ತಾಗ ಆ ದುಃಖದಲ್ಲಿ ತಾನೂ ಉಪವಾಸ ಮಾಡಿ ಕೊನೆ ಕಾಣುವುದು ಅದ್ಭುತ ನಾಟಕ..
ಕೊನೆಗೂ ನಾಟಕವೆಂದರೆ ನಿಜದ ಹುಡುಕಾಟ ತಾನೇ..
ತುಂಬಾ ಚೆನ್ನಾಗಿದೆ..
ತುಂಬು ಹೃದಯದ ಧನ್ಯವಾದಗಳೊಂದಿಗೆ,
ಪ್ರಶಾಂತ್ ಹಿರೇಮಠ,
ಕಲಾವಿದ,
ರಂಗಾಯಣ,
ಮೈಸೂರು
ಚಿಕ್ಕವನಿದ್ದಾಗ ಈ ಕತೆಯನ್ನು ಇಂಗ್ಲಿಷಿನಲ್ಲಿ ಓದಿದ್ದೆ. ಈ ಕತೆ ಮತ್ತು ಈ ಪುಸ್ತಕದ ಸಿಂಹ ಮಾತು ನಾಯಿಯ ಮುಖಪುಟದ ಚಿತ್ರ ನನ್ನನ್ನು ತುಂಬಾ ಕಾಡಿಸಿದ್ದವು. ಈ ಕತೆಯನ್ನ ತೀರಾ ಕಲ್ಪನೆಯೆಂದೂ ಹೇಳುವ ಹಾಗಿಲ್ಲ. ಚಿರತೆಯೊಂದು ಅದಕ್ಕೆ ಗೊತ್ತಿಲ್ಲದೇ ಮರಿಯಿದ್ದ ಒಂದು ಮಂಗವನ್ನ ಬೇಟೆ ಆಡಿದ ನಂತರ, ಆ ಮಂಗದ ಮರಿಯನ್ನ ತನ್ನದೇ ಮರಿಯಂತೆ ಸಾಕಿದ ವೀಡಿಯೋ, ಮತ್ತೊಂದು ಚಿರತೆ ಜಿಂಕೆಮರಿಯೊಂದನ್ನ ಗೆಳೆಯನನ್ನಾಗಿ ಮಾಡಿಕೊಂಡು ಅದನ್ನು ಬೇರೆ ಮಾಂಸಾಹಾರಿ ಪ್ರಾಣಿಗಳಿಂದಲೂ ರಕ್ಷಿಸುವ ವೀಡಿಯೋ ಮುಂತಾದವು ಯೂಟ್ಯೂಬ್ ನಲ್ಲಿ ಇವೆ. ಇವೆಲ್ಲಾ ನಿಸರ್ಗದ ಕಡೆಗೆ ಒಂದು ಬೆರಗು ಮೂಡಿಸುತ್ತವೆ. ಉತ್ತಮ ಅನುವಾದ, ಧನ್ಯವಾದಗಳು.