‘ನೀರಿನ ನಿಲುತಾಣ’ ವಿಭಿನ್ನ ಅನುಭವ ಕೊಡುವ ನಾಟಕ ಎಂಬುದು ಸತ್ಯ. ಇದಕ್ಕೆ ಅದರ ನಿಧಾನಗತಿ ಒಂದೇ ಕಾರಣವಲ್ಲ.ಸಿನಿಮಾ,ನಾಟಕ,ಸಂಗೀತ,ಚಲನಶಿಲ್ಪ,ಶಬ್ದ ನೃತ್ಯ ಮತ್ತು ಈಚೆಗೆ ಹೆಚ್ಚಾಗಿ ಕೇಳಿಬರುವ ವೀಡಿಯೋ ಇನ್ಸ್ಟಲೇಶನ್ ತಂತ್ರಗಳನ್ನು ಬಳಸುವ ಮೂಲಕ ನಾಟಕದ ಸಾಂಪ್ರದಾಯಿಕ ಶೈಲಿಯ ಚೌಕಟ್ಟನ್ನು ಮುರಿದು ಹೊಸರೀತಿಯ ರಂಗಚೌಕಟ್ಟನ್ನು ಬಳಸಿರುವುದು ಈ ವಿನೂತನ ಶೈಲಿಯಲ್ಲಿ ಕಾಣುತ್ತದೆ.
ಆದರೆ ಪ್ರತಿಮೆ ಮತ್ತು ಸಾಂಕೇತಿಕೆಯಲ್ಲಿ ಮಾತ್ರ ಸಾಂಪ್ರದಾಯಿಕತೆಯನ್ನು ಮೀರಲಾಗಿಲ್ಲ. ದೊಂಬಿ, ವಾಚಾಳಿತನ, ಅತಿಚಟುವಟಿಕೆಗಳಿಂದ ತುಂಬಿರುತ್ತಿದ್ದ ನೀನಾಸಂ ಶೈಲಿಯ ರಂಗಚಿಂತನೆ ಈ ರಂಗಕೃತಿಯಲ್ಲಿ ಬದಲಾಗಿರುವುದು ನೀನಾಸಂಗೇ ಸ್ವಾಗತಾರ್ಹ ಎನಿಸಿರಬೇಕು. ನಿರ್ದೇಶಕರು ಮತ್ತು ನಟರು ಗಾಢವಾಗಿ ತೊಡಗಿಸಿಕೊಂಡು ಸೃಜಿಸಿದ ನಾಟಕ ಇದು.
ಇದನ್ನು ಆರಿಸಿಕೊಂಡಿರುವ ಕಾಲಘಟ್ಟ ಎಡಪಂಥೀಯ ದರ್ಶನ ಹಿಂದೆಸರಿದು, ಸಾಮಾಜಿಕತೆ ದುರ್ಬಲವಾಗಿ ವ್ಯಕ್ತಿಪಾರಮ್ಯತೆಯೇ ಬಲವಾಗುತ್ತಿರುವ ಆಧುನಿಕೋತ್ತರ ಚಿಂತನೆಯ ಕಾರ್ಪೊರೇಟಿಸಂನ ವಿಜೃಂಭಣೆಯ ಕಾಲ. ಫೋರ್ಡ್ ಫೌಂಡೇಶನ್ ಹಣಸಹಾಯ ಪಡೆದು ಗಾಂಧಿಪ್ರಣೀತ ಪಾಸಿಫೈಯರ್ ಪಾತ್ರವನ್ನು ನಿರ್ವಹಿಸುತ್ತಾ ಕರ್ನಾಟಕದಲ್ಲಿ ಎಡಪಂಥೀಯ ಚಿಂತನೆಯನ್ನು, ಚಿಂತಕರನ್ನು ಜತನದಿಂದ ದೂರವಿಟ್ಟಿರುವ ನೀನಾಸಂ, ಜಪಾನಿನ ಕಮ್ಯೂನಿಸ್ಟ ಪಕ್ಷವನ್ನು ಅಸಹನೆಯಿಂದ ನೋಡುವ ನಾಟಕಕಾರನ ಕೃತಿಯನ್ನು ತನ್ನ ಮರುತಿರುಗಾಟಕ್ಕೆ ಆರಿಸಿಕೊಂಡಿರುವುದು ಕೇವಲ ಕಾಕತಾಳೀಯವಲ್ಲ.
ಪ್ರಸಕ್ತ ಜೀವನದ ಬರಡುತನದಿಂದ ರೋಸಿಹೋಗಿ ಹಾಸ್ಯ, ಧಾರ್ಮಿಕತೆ ಮತ್ತು ರಿಚುಅಲ್ ಗಳಿಗೆ ಹಾತೊರೆಯುತ್ತಿರುವ ಮಧ್ಯಮವರ್ಗೀಯರಿಗೆ ಈ ನಾಟಕ ಒಂದು ಆಪ್ಯಾಯಮಾನವಾದ ಬದಲಾವಣೆಯಾಗಿಬಂದಿದೆ. ಪ್ರೇಕ್ಷಕರ ತೀವ್ರ ರೀತಿಯ ಪ್ರತಿಕ್ರಿಯೆಗಳಲ್ಲಿ ಕಾಣಿಸುವುದು ಇದೇ.ಮರೆಸುವ-ತೆರೆಸುವ ಶಕ್ತಿಯನ್ನು ಏಕಕಾಲಕ್ಕೆ ಬಳಸುವ ನಾಟಕ ಏನನ್ನು ಹೇಳುತ್ತಿದೆ ಎನ್ನುವುದು ಎಷ್ಟು ಮುಖ್ಯವೋ ಏನನ್ನು ಮುಚ್ಚಿಡುತ್ತಿದೆ ಎನ್ನುವುದೂ ಅಷ್ಟೇ ಮುಖ್ಯ.ಪಾತ್ರಗಳ ರೂಪ, ದಿರಿಸು,ಚಲನೆಗಳು ಬಿಡಿಬಿಡಿಯಾಗಿವೆ, ವ್ಯಕ್ತಿಗತವಾಗಿವೆ ಹಾಗೂ ಗ್ರಾಮೀಣ ಬದುಕಿನ ಆಚೆಗಿವೆ ಎಂಬುದು ಗಮನಿಸಬೇಕಾದ ಅಂಶ








0 Comments