ಗಿಣಿ – ಕಪಿ
ಎಚ್ಚೆಸ್ಕೆರವರ ಶೈಲಿಯಲ್ಲಿ
ಅಣಕು ಬರಹ ರಚನೆ : ಆನಂದ
ಗೋದಾವರಿ. ಜೀವ ನದಿ.
ತೀರದಲ್ಲೊಂದು ಆಲದ ಮರ. ಅದರಲ್ಲಿ ಗಿಳಿಗಳ ವಾಸ.
ಚೊಕ್ಕನೆ ಗೂಡು. ಮರಿಗಳ ಕಲರವ. ಎಲ್ಲವೂ ಚೆನ್ನಿತ್ತು. ಗಿಳಿಗಳು ಮರಿಗಳೊಂದಿಗೆ ಸುಖವಾಗಿದ್ದವು.
ಕಾರ್ತಿಕ ಮಾಸದ ಒಂದು ದಿನ. ಮಳೆಯೋ ಮಳೆ. ಧಾರಾಕಾರ. ಗಡ ಗಡ ಚಳಿ.
ಸುತ್ತಮುತ್ತಲಿದ್ದ ಕಪಿಗಳಿಗೆ ಚಳಿ ತಡೆಯಲಾಗಲಿಲ್ಲ. ಆಲದ ಮರದ ಬುಡಕ್ಕೆ ಬಂದವು.
ಗೂಡಿನಲ್ಲಿದ್ದ ಗಿಣಿಗಳು ನೋಡಿದವು. ಕಪಿಗಳು ನಡುಗುತ್ತಿವೆ. ಗಿಣಿ ಮರಿಗಳಿಗೆ ಮರುಕ. ಆಶ್ಚರ್ಯ!
ಅರೆ! ನಮ್ಮಂತೆ ಇವುಗಳಿಗೆ ಗೂಡಿನ ಆಶ್ರಯವಿಲ್ಲ! ನಾವೇ ವಾಸಿ. ಬೆಚ್ಚನೆ ಮನೆ. ಕಪಿಗಳಿಗೆ ಕೈ ಕಾಲುಗಳಿವೆ. ಮನೆ ಕಟ್ಟಕೊಂಡು ನಮ್ಮಂತೆ ಸುಖವಾಗಿರಬಾರದೆ?
ಗಿಣಿ ಮರಿ ಉಪದೇಶಿಸಿತು: ಏಕೀ ಬವಣೆ? ನೀವೂ ಮನೆಗಳನ್ನು ಕಟ್ಟಿಕೊಳ್ಳಿ. ಸುಖವಾಗಿರಿ. ನೆನೆಯುವುದು ತಪ್ಪುತ್ತೆ.
ಉಪದೇಶ ಕೆಲಸ ಮಾಡಿತು.
ಎರಡು ಮಿಲಿಯನ್ ವರ್ಷಗಳ ನಂತರ…
ಕಪಿಗಳ ಕೈ ಚಳಕ. ಮರಗಳು ನಾಶವಾದವು. ನದಿ ತೀರ ಬೋಳಾಯಿತು. ಗಿಣಿಗಳು ನೆಲೆಯನ್ನು ಕಳೆದುಕೊಂಡವು. ಇತರ ಪಕ್ಚಿಗಳೂ ಪರದಾಡುವಂತಾಯಿತು.
ಕಪಿಗಳ ಗೇಟೆಡ್ ಕಮ್ಯುನಿಟಿ ತಲೆ ಎತ್ತಿತು. ಸುಖವಾಗಿದ್ದವು.
ನೀತಿ: ಮೂರ್ಖರಿಗೆ ಉಪದೇಶ ಅನರ್ಥಕ್ಕೆ ಕಾರಣ.
0 ಪ್ರತಿಕ್ರಿಯೆಗಳು