
ರಾಜೇಂದ್ರ ಪ್ರಸಾದ್
ನನ್ನ ಅಜ್ಜಿ ಸತ್ತು ಬರುವ ಫೆಬ್ರವರಿಗೆ ಹತ್ತು ವರ್ಷ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಆಕೆ ಹುಲಿಯೂರು ದುರ್ಗದ ಬಳಿಯ ಕುಗ್ರಾಮಕ್ಕೆ ಮದುವೆಯಾಗಿ ಹೊಲಗದ್ದೆ ತೋಟಗಳಲ್ಲಿ ಕೆಲಸ ಮಾಡುತ್ತಾ ಕಡೆಗಾಲದಲ್ಲಿ ಅದೇ ಬೆಂಗಳೂರಿಗೆ ಬಂದು ಕ್ಯಾನ್ಸರ್ ಅವರಿಸಿಕೊಂಡು ಆಪರೇಷನ್ ಮಾತ್ರೆ – ಔಷಧಿ ಅಂತ ಊರಿಗೂ ಬೆಂಗಳೂರಿಗೂ ಆಗಾಗ್ಗೆ ಮಂಡ್ಯಕ್ಕೂ ಅಡ್ಡಾಡುತ್ತಲೇ ಏಳು ಜನ ಮಕ್ಕಳು, ಹದಿನಾರು ಜನ ಮೊಮ್ಮಕ್ಕಳ ದೊಡ್ಡ ಕುಟುಂಬವನ್ನು ಬಿಟ್ಟು ಹೊರಟು ಹೋದಳು.
ನಡವಳಿಕೆಯಲ್ಲಿ ಥೇಟ್ ಗೃಹಭಂಗದ ನಂಜಮ್ಮನನ್ನೇ ನೆನಪಿಸುತ್ತಿದ್ದಾಕೆ ಸತ್ತ ಮೇಲೆ ಮರೆಯದ ಕವಿತೆಯಾಗಿ ನನ್ನ ಅವರಿಸಿಕೊಂಡುಬಿಟ್ಟಳು.
ಎಂ ಎಸ್ ಸುಬ್ಬುಲಕ್ಷ್ಮಿಯವರನ್ನು ನೋಡಿದಾಗಲೆಲ್ಲಾ ಆಕೆಯೇ ನನಗೆ ನೆನಪಿಗೆ ಬರುತ್ತಾಳೆ. ಆಕೆಯ ಒಂದೇ ಒಂದು ಫೋಟೋ ನಮ್ಮ ಬಳಿ ಇಲ್ಲ. ಎಷ್ಟೆಲ್ಲ ಹುಡುಕಿದರೂ ಮಸುಕಾದ ಒಂದೆರಡು ಫೋಟೋ ಮಾತ್ರ ಸಿಕ್ಕವು. ಹಾಗಾಗಿ ಅಜ್ಜಿಯ ನೆನಪು ಬಂದರೆ ಸುಬ್ಬುಲಕ್ಷ್ಮಿಯವರ ವಿಡಿಯೋ ಹಾಕಿಕೊಂಡು ಕೂತು ಬಿಡ್ತೀನಿ.
ಹಣೆಗೆ ದೊಡ್ಡ ಕುಂಕುಮ, ಮೂಗಿನ ಎರಡೂ ಬದಿ ಮಿಂಚುವ ಹರಳಿನ ಮೂಗುತಿ, ತುರುಬು ಕಟ್ಟಿ ದುಂಡನೆ ಮಲ್ಲಿಗೆ ಸುತ್ತಿ ಜೋರು ದನಿಯಲ್ಲಿ ಗದರಿಸುತ್ತಾ ಇದ್ದವಳು ಕಡೆಗಾಲದಲ್ಲಿ ಮಗುವಿನಂತೆ ‘ನನ್ನ ಮಂಡ್ಯಕ್ಕೆ ಕರ್ಕೋಂಡೋಗು’ ಅಂತ ಕೇಳಿದ್ದು ನೆನಪಿಸಿಕೊಂಡ್ರೆ ಅಳು ತಡೆಯಲಾಗದು.





0 Comments