ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಉದಯ್ ಇಟಗಿ ಕಾಲಂ : ಸಹರಾ ಮರಭೂಮಿಯಲ್ಲೊಂದು ಬಹು ಭಾಷಾ ಕವಿಗೋಷ್ಠಿ

ಕಳೆದ ವರ್ಷ ಜೂನ್ ತಿಂಗಳಲ್ಲಿ ನಮ್ಮ ಕಾಲೇಜಿನಲ್ಲೊಂದು ವಿವಿಧ ಭಾಷಾ ಕವಿಗೋಷ್ಠಿ ನಡೆಯಿತು. ಹೆಸರಿಗಷ್ಟೇ ವಿವಿಧ ಭಾಷಾ ಕವಿಗೋಷ್ಠಿ. ಆದರೆ ಆ ಗೋಷ್ಠಿಯಲ್ಲಿ ಬಹಳಷ್ಟು ಜನ ಅರೇಬಿ ಭಾಷೆಯ ಕವಿಗಳೇ ತುಂಬಿಕೊಂಡಿದ್ದರು. ಇನ್ನುಳಿದಂತೆ ಆಫ್ರಿಕಾ ಖಂಡದ ಇತರೆ ಭಾಷೆಗಳಾದ ಹೌಸಾ, ಟರ್ಗಿ, ಫ್ರಾನ್ಸಾ (ಫ್ರೆಂಚ್), ತಿಗರಿ, ಯುರೊಬು, ಇಗ್ಬೊ, ಇಬಿಬೋ, ಭಾಷೆಯ ಕವಿಗಳು ಅಲ್ಲಿದ್ದರು. ಇವರೆಲ್ಲರ ಜೊತೆಗೆಇಟಲಿಯಿಂದ ಕವಯಿತ್ರಿಯೊಬ್ಬಳು ಇಟ್ಯಾಲಿಯನ್ ಭಾಷೆಯನ್ನು ಪ್ರತಿನಿಧಿಸಿ ಬಂದಿದ್ದಳು. ಆಕೆ ಇಡಿ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದಳು. ಮುಖ್ಯ ಆಕರ್ಷಣೆ ಯಾಕೆಂದರೆ ಅಲ್ಲಿದ್ದ ಬಹಳಷ್ಟು ಕಪ್ಪು ಜನರ ಮಧ್ಯ ಇವಳೊಬ್ಬಳು ಬಿಳಿ ಚರ್ಮದವಳಾಗಿದ್ದು ನೋಡಲು ಬಲು ಆಕರ್ಷಕವಾಗಿ ಕಾಣುತ್ತಿದ್ದಳು. ಅದಕ್ಕಿಂತ ಹೆಚ್ಚಾಗಿ ಮೊಣಕಾಲಿನವರೆಗಷ್ಟೇ ಇರುವ ಮಿನಿ ಸ್ಕರ್ಟೊಂದನ್ನು ಧರಿಸಿಕಾಲು ಮೇಲೆ ಕಾಲು ಹಾಕಿಕೊಂಡು ಎಲ್ಲರ ಮುಂದೆ ಬಿಡುಬೀಸಾಗಿ ಕುಳಿತಿದ್ದಳು. ಒಂದರ್ಥದಲ್ಲಿ ಅಲ್ಲಿರುವ ಎಲ್ಲ ’ಮುಚ್ಚಮ್ಮ’ಗಳ ಮಧ್ಯ ಇವಳೊಬ್ಬಳು ಮಾತ್ರ ‘ಅರ್ಧ ಬಿಚ್ಚಮ್ಮ’ಳಾಗಿ ಕಾಣಿಸುತ್ತಿದ್ದಳು.
ಹಾಗಾಗಿಯೋ ಏನೋ ಎಲ್ಲರ ಗಮನ ಅವಳ ಮೇಲೆಯೇ ಇತ್ತು.ಅಷ್ಟೇ ಅಲ್ಲ ತೆಳ್ಳಗೆ, ಬೆಳ್ಳಗೆ ಇರುವ ತನ್ನ ಆಕರ್ಷಕ ಮೈಮಾಟದಿಂದ ತುಸು ಹೆಚ್ಚೇ ಎನಿಸುವಷ್ಟು ‘ಸೆಕ್ಸಿ’ಯಾಗಿ ಕಾಣುತ್ತಿದ್ದಳು. ಎಲ್ಲರೂ ಅವಳನ್ನೇ ಬಿಟ್ಟಗಣ್ಣು ಬಿಟ್ಟು ನೋಡುತ್ತಿದ್ದರು. ತನ್ನ ಸರದಿ ಬಂದಾಗ ಎಲ್ಲರ ಮುಂದೆ ಬಿಡುಬೀಸಾಗಿ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತೇ ತನ್ನ ಇಟ್ಯಾಲಿಯನ್ ಕವನವನ್ನು ಓದಿದಳು. ಓದಿಯಾದ ಮೇಲೆ ವೇದಿಕೆಯ ಪಕ್ಕಕ್ಕೆ ಹೋಗಿ ಎಲ್ಲರಿಗೂ ಕಾಣುವಂತೆ ಸಿಗರೇಟೊಂದನ್ನು ಸೇದಿ ಮತ್ತೆ ವಾಪಾಸ್ ಬಂದು ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತಳು.
ಅಲ್ಲಿದ್ದ ಕೆಲವು ಗಂಡಸರು ಅವಳ ಈ ನಿರ್ಭಿಡೆಯ ವರ್ತನೆಯನ್ನು ಕಂಡು ಇದೇನಿದು ಅರಬ್ಬರ ನಾಡಿನಲ್ಲಿ ಈ ರೀತಿಯ ಬಿಚ್ಚು ಪ್ರದರ್ಶನ? ಎಂದು ಮೂಗು ಮುರಿದರೂ ಯಾರೂ ಅದನ್ನು ಆಕೆಗೆ ಹೇಳುವ ಧೈರ್ಯವನ್ನು ಮಾಡಲಿಲ್ಲ. ತಮಾಷೆಯೆಂದರೆ ಮೊದಲು ಈ ರೀತಿ ಅಸಮಾಧಾನ ವ್ಯಕ್ತಪಡಿಸಿದ ಜನರೇ ಆಮೇಲಾಮೇಲೆ ಅವಳ ಕಾಲುಗಳನ್ನೇ ನೋಡುತ್ತಾ ಅವಳೊಟ್ಟಿಗೆ ರತಿಸುಖ ಅನುಭವಿಸಿದಷ್ಟೇ ಆನಂದಪಡುತ್ತಾ ಕುಳಿತುಬಿಟ್ಟರು. ಕೆಲವು ಪಡ್ಡೆ ಹುಡುಗರಂತೂ ಬೇಕಂತಲೇ ಪೆನ್ನನ್ನೋ, ಮೊಬೈಲನ್ನೋ ಕೆಳಗೆ ಬೀಳಿಸಿ ಅದನ್ನು ಎತ್ತಿಕೊಳ್ಳುವ ನೆಪದಲ್ಲಿ ಅವಳ ಮೊಣಕಾಲುಗಳನ್ನೇ ನೋಡುತ್ತಾ ಅವರವರೇ ಕಣ್ಣಲ್ಲಿಅದೇನೇನೇನೋ ಪೋಲಿಪೋಲಿಯಾಗಿ ಹೇಳಿಕೊಂಡು ಕಿಸಿಕಿಸಿಯೆಂದು ನಕ್ಕರು.
ಆದರೆ ಆಕೆ ಮಾತ್ರ ಇದ್ಯಾವುದಕ್ಕೆ ಕೇರ್ ಮಾಡದೆ ಅಚಲ ಪರ್ವತದಂತೆ ಕುಳಿತುಬಿಟ್ಟಿದ್ದಳು. ಇನ್ನು ಹುಡುಗಿಯರಂತೂ ತಾವು ಕನಸಿನಲ್ಲಿ ಕೂಡ ಈ ರೀತಿಯ ದಿರಿಸನ್ನು ಧರಿಸುವದು ಅಪರಾಧ ಎಂಬಂತೆಕುಳಿತಿದ್ದರು. ಮತ್ತೆ ಕೆಲ ಹುಡುಗಿಯರು ಅವಳಿಗಿರುವ ಸ್ವಾತಂತ್ರ್ಯದ ಕಾಲುಭಾಗದಷ್ಟಾದರೂ ನಮಗೆ ಸಿಕ್ಕಿದ್ದರೆ? ಎಂದು ಅವಳ ಜಾಗದಲ್ಲಿ ತಮ್ಮನ್ನು ಊಹಿಸಿಕೊಳ್ಳುತ್ತಾ ಏನೇನೋ ಕಲ್ಪನೆ ಮಾಡಿಕೊಳ್ಳುತ್ತಿದ್ದರು.
ಸರಿ. ಅಪರೂಪಕ್ಕೆಂಬಂತೆ ನಮ್ಮ ಕಾಲೇಜಿನಲ್ಲಿ ಒಂದು ಒಳ್ಳೆ ಕಾರ್ಯಕ್ರಮ ನಡೆದಿದೆ, ನೆನಪಿಗಿರಲಿ ಎಂದುಕೊಂಡುನಾವೆಲ್ಲಾ ಈ ಕಾರ್ಯಕ್ರಮದ ಫೋಟೊವೊಂದನ್ನು ತೆಗೆದುಕೊಳ್ಳಲು ಕ್ಯಾಮರಾ ಹಿಡಿದು ಹೋದರೆ ಅಲ್ಲಿದ್ದ ಕೆಲವು ಮಡಿವಂತ ಜನ ನಮ್ಮನ್ನು ತಡೆದರು. ಫೋಟೊ ತೆಗೆಯುವದು ಬೇಡ ಎಂದರು. ಕಾರಣ ಕೇಳಿದರೆ ವೇದಿಕೆಯ ಮೇಲೆ ಏಳೆಂಟು ಜನ ಅರೇಬಿ ಹೆಂಗಸರು ಕುಳಿತಿದ್ದಾರೆ ಹಾಗೆಲ್ಲಾ ಅವರ ಫೋಟೊ ತೆಗೆಯುವದು ಚನ್ನಾಗಿರಲ್ಲ ಎಂದು ಹೇಳಿದರು. ಹೋಗಲಿ ಇಟ್ಯಾಲಿಯನ್ ಕವಯತ್ರಿಯದಾದರೂ ಒಂದು ಫೋಟೋ ತೆಗೆದುಕೊಳ್ಳುತ್ತೇವೆ. ಅದಕ್ಕಾದರೂ ಅವಕಾಶ ಮಾಡಿಕೊಡಿ ಎಂದು ಕೇಳಿದೆವು.ಊಹೂಂ, ಅದಕ್ಕೂ ಅಸ್ತು ಎನ್ನಲಿಲ್ಲ.ಅ ಅವಕಾಶ ಇದ್ದಿದ್ದು ಕಾರ್ಯಕ್ರಮದ ಸಂಘಟಿಕರು ಆಯೋಜಿಸಿದ್ದ ಕ್ಯಾಮರಾಮನ್ ಒಬ್ಬನಿಗೆ ಮಾತ್ರ.
ಅವ ಮಾತ್ರ ತನಗೆ ಸಿಕ್ಕ ಈ ಅವಕಾಶ ಮತ್ತು ಸ್ವಾತಂತ್ರ್ಯಗಳೆರೆಡನ್ನು ತುಸು ಹೆಚ್ಚೇ ಬಳಸಿಕೊಂಡ. ಅದೇನು? ಹಿಂದೆಯೆಲ್ಲಾ ನಾವು ನಮ್ಮ ಕಾಲೇಜಿನ ಓಪನ್ ವೀಕ್ ಸೆಲೆಬ್ರೇಶನ್ ಸಮಯದಲ್ಲಿ ಹುಡುಗಿಯರು ಹಾಡು ಹಾಡುತ್ತಿರಬೇಕಾದರೆ, ಇಲ್ಲವೇ ಬೇರೆ ಮನರಂಜನಾ(ನೃತ್ಯವೊಂದನ್ನು ಹೊರತುಪಡಿಸಿ) ಕಾರ್ಯಕ್ರಮ ನೀಡುತ್ತಿರಬೇಕಾದರೆ ಧಾರಾಳವಾಗಿ ಫೋಟೊ ತೆಗೆಯುತ್ತಿದ್ದೆವು. ಆಗ ಯಾರೂ ಏನೂ ಅನ್ನದವರು ಈಗೇನು ಇಷ್ಟೊಂದು ವಿರೋಧ ನಿಮ್ಮದು? ಎಂದು ಕೇಳಿದರೆ ಕಾರ್ಯಕ್ರಮದ ಸಂಘಟಿಕರು ಹೊರಗಿನವರು ಯಾರೋ ಆಗಿದ್ದು ಅಲ್ಲಿ ನಮ್ಮ ಕಾಲೇಜಿನವರು ಕಾರ್ಯಕ್ರಮ ನಡೆಸಲು ಸ್ಥಳ ಮಾತ್ರ ಕೊಟ್ಟಿದ್ದರಿಂದ ಅವರಿಗೆ ಈ ವಿಷಯದಲ್ಲಿ ತಲೆಹಾಕಲು ಹೆಚ್ಚು ಸ್ವಾತಂತ್ರ್ಯವಿರಲಿಲ್ಲ ಎನ್ನುವ ಉತ್ತರ ಬಂತು.

ಸರಿ. ಕವಿಗೋಷ್ಠಿ ಮುಗಿಯಿತು.ಮುಗಿದಾದ ಮೇಲೆ ಎಲ್ಲರೂಕವಿಗಳ ಮತ್ತು ಕವಯಿತ್ರಿಯರ ಕೈ ಕುಲುಕಿದ್ದೇ ಕುಲುಕಿದ್ದು. ಅದರಲ್ಲೂ ಆ ಇಟ್ಯಾಲಿಯನ್ ಕವಯಿತ್ರಿಯ ಕೈಯನ್ನು “ಮಜಬೂತ್, ಮಜಬೂತ್” ಎಂದು ಹೇಳುತ್ತಾ ತುಸು ಹೆಚ್ಚೇ ಕುಲಕಿದರು. ಅವರು ಹಾಗೆ ಕೈ ಕುಲುಕಿ “ಮಜಬೂತ್” (ಚನ್ನಾಗಿತ್ತು) ಎಂದು ಕಾಂಪ್ಲಿಮೆಂಟ್ ಕೊಟ್ಟಿದ್ದು ಅವಳಸೌಂದರ್ಯಕ್ಕೋ? ಅಥವಾ ಕವನಕ್ಕೋ? ಗೊತ್ತಾಗಲಿಲ್ಲ. ಬಹುಶಃ, ಅದು ಅವಳ ಸೌಂದರ್ಯದ ಬಗ್ಗೆಯೇ ಇರಬೇಕು. ಯಾಕೆಂದರೆ ಈ ಲಿಬಿಯನ್ನರಿಗೆ ಅದೂ ಘಾತ್ ಪ್ರಾಂತ್ಯದಲ್ಲಿರುವ ಜನರಿಗೆ ಇಂಗ್ಲೀಷ್, ಅರೇಬಿ, ಫ್ರಾನ್ಸಾ, ಹೌಸಾ, ಟರ್ಗಿ ಬಿಟ್ಟರೆ ಇಟ್ಯಾಲಿಯನ್ ಭಾಷೆಬರುವದು ನಾ ಕಾಣೆ.ಆಕೆ ಹೊರಡೋಣವೆಂದು ಸಭಾಂಗಣವನ್ನು ಬಿಟ್ಟು ಹೊರಗೆ ಬರುತ್ತಿದ್ದಂತೆ ಅವಳೊಟ್ಟಿಗೆ ಒಂದು ಫೋಟೋ ತೆಗೆಸಿಕೊಳ್ಳಬೇಕೆಂದು ಹಾತೊರೆಯುತ್ತಿದ್ದ ಕೆಲವು ಗಂಡಸರು ಹಲ್ಲು ಗಿಂಜುತ್ತಾ “ನಿಮ್ಮೊಂದಿಗೆ ಒಂದು ಫೋಟೋ ಪ್ಲೀಸ್!” ಎಂದು ಆಕೆಯನ್ನು ಮುತ್ತಿದರು. ಆಕೆ ತಕ್ಷಣ “ಅದೇನು, ನಿಮ್ಮ ಹೆಣ್ಣುಮಕ್ಕಳ ಫೋಟೋವನ್ನು ಮಾತ್ರ ಯಾರೂ ತೆಗೆದುಕೊಳ್ಳಬಾರದು? ನೀವು ಮಾತ್ರ ಬೇರೆ ಹೆಣ್ಣುಮಕ್ಕಳ ಫೋಟೋವನ್ನು ತೆಗೆದುಕೊಳ್ಳಬಹುದೇ? ಇದ್ಯಾವ ನ್ಯಾಯ?” ಎಂದು ಇಂಗ್ಲೀಷಿನಲ್ಲಿ ಮುಖಕ್ಕೆ ಹೊಡೆದಹಾಗೆ ಹೇಳಿ ಬಡಬಡನೆ ಕಾರು ಹತ್ತಿ ಹೋಗಿಯೇಬಿಟ್ಟಳು.ಆಕೆ ಕೇಳಿದ ಧಾಟಿ ಹೇಗಿತ್ತೆಂದರೆ ನೀವು ಮಾತ್ರ ಬೇರೆಹೆಣ್ಣುಮಕ್ಕಳೊಂದಿಗೆ ಖುಷಿಯಾಗಿರಬಹುದು.ಆದರೆ ಬೇರೆಯವರ್ಯಾರೂ ನಿಮ್ಮ ಮನೆಯ ಹೆಣ್ಣುಮಕ್ಕಳೊಂದಿಗೆ ಖುಷಿಯಾಗಿರಬಾರದಾ? ಇದ್ಯಾವ ಸೀಮೆಯ ನ್ಯಾಯ? ಎಂದು ಕೇಳಿದಂತಿತ್ತು.
ಅಂದಹಾಗೆ ಕವಿಗೋಷ್ಠಿಯ ವಿಷಯ “ಸ್ವಾತಂತ್ರ್ಯ”. ಲಿಬಿಯಾ ಈಗ ‘ಫ್ರೀ ಲಿಬಿಯಾ’ ಆದ ಹಿನ್ನೆಲೆಯಲ್ಲಿ ಈ ಕವಿಗೋಷ್ಠಿಯನ್ನು ಅಳವಾಡಿಸಲಾಗಿತ್ತೆಂದು ನಮಗೆಆಮೇಲೆ ಗೊತ್ತಾಯಿತು. ಅದೇನೆ ಇರಲಿ. ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟಹಾಗೆ ಅಲ್ಲಿಯ ಕವಿಗಳು ತಂತಮ್ಮ ಭಾಷೆಯಲ್ಲಿ ಕವಿತೆಗಳನ್ನು ಓದಿದರು. ನಾನಂತೂಹೌಸಾ, ಟರ್ಗಿ, ಫ್ರಾನ್ಸಾ, ಅರೇಬಿ ಭಾಷೆಗಳು ಬರುವ ನನ್ನ ವಿದ್ಯಾರ್ಥಿಯೊಬ್ಬನನ್ನು ಪಕ್ಕಕ್ಕೇ ಕುಳಿಸಿಕೊಂಡಿದ್ದೆ ಅನುವಾದದ ಸಹಾಯಕ್ಕಾಗಿ. ಅವರು ಕವನ ಓದಿ ಮುಗಿಸಿದ ತಕ್ಷಣ ಅವ ನನಗೆ ಅದರ ಸಾರಾಂಶವನ್ನಷ್ಟೇ ಬಡಬಡನೆ ಇಂಗ್ಲೀಷಿಗೆ ಅನುವಾದಿಸಿ ನನ್ನ ಕಿವಿಯಲ್ಲಿ ಪಿಸುಗುಡುತ್ತಿದ್ದ. ಒಬ್ಬ ಅರೇಬಿ ಕವಿ “ನಾವು ಸ್ವಾತಂತ್ರ್ಯ ಬಂದಿದೆ ಎಂದು ಹೆಳುತ್ತಿದ್ದೇವಲ್ಲವೆ? ಆದರೆ ನಾವು ನಿಜಕ್ಕೂ ಸ್ವತಂತ್ರರಾಗಿದ್ದೇವೆಯೇ?” ಎಂದು ಕೇಳಿದ.
ಇನ್ನೊಬ್ಬ ಕವಿ “ಸ್ವಾತಂತ್ರ್ಯ ಸಿಕ್ಕಿತೆಂದು ನಾವು ಸಂಭ್ರಮಪಡುವ ಖುಷಿಯಲ್ಲಿ ನಿಧಾನವಾಗಿ ನಮಗೆ ಗೊತ್ತಿಲ್ಲದಂತೆ ಬೇರೆ ಇನ್ಯಾರಿಗೋ ಗುಲಾಮರಾಗಿ ಕೆಲಸ ಮಾಡುವಂತಾಗಬಾರದು” ಎಂದು ಕರೆ ಕೊಟ್ಟ.ಮತ್ತೊಬ್ಬ ಕವಿ “ಒಬ್ಬ ಮನುಷ್ಯನಿಗೆ ನಿಜವಾಗಿಯೂ ಸ್ವಾತಂತ್ರ್ಯ ಅನ್ನುವದು ಇದೆಯಾ? ಅದೇನಿದ್ದರೂ ಭ್ರಮೆ ಅಷ್ಟೆ. ಯಾಕೆಂದರೆ ಹುಟ್ಟುವಾಗಷ್ಟೆ ಅವನು ಸ್ವತಂತ್ರ. ಆಮೇಲೇನಿದ್ದರೂ ಅವನು ಒಂದಲ್ಲ ಒಂದು ಕಡೆ ಬಂಧಿಯಾಗಿರುತ್ತಾನೆ” ಎಂದು ಹೇಳಿದ. ಇದು ನನಗೆ ಪ್ರಖ್ಯಾತ ಫ್ರೆಂಚ್ ರಾಜಕೀಯ ತಜ್ಞ ರೂಸೋಹೇಳಿದ “A man is born to free. But everywhereelse he is in chains” ಎನ್ನುವ ಮಾತನ್ನು ನೆನಪಿಸಿತು. ಟರ್ಗಿ ಕವಿಯೊಬ್ಬ “ಪ್ರಕೃತಿಯಲ್ಲಿನ ಹೂ, ಹಕ್ಕಿಗಳಿರುವಷ್ಟು ಸ್ವಾತಂತ್ರ್ಯ ನಮಗೇಕಿಲ್ಲ?” ಎಂದು ಪ್ರಶ್ನೆಸಿದ.
ಫ್ರೆಂಚ್ ಭಾಷೆಯಲ್ಲಿ ಕವನ ಓದಿದ ಸ್ಥಳೀಯ ಕವಿಯೊಬ್ಬ “ನಮ್ಮೊಳಗೆ ನಾವೇ ಗುಲಾಮರಾಗಿರುವಾಗ ಹೊರಗಿನ ಸ್ವಾತಂತ್ರ್ಯ ತಗೊಂಡು ಏನ್ಮಾಡೋದು?” ಎಂದು ಪ್ರಶ್ನಿಸಿದ. ಇವರೆಲ್ಲರಿಗಿಂತ “ಹೌಸಾ” ಭಾಷೆಯಲ್ಲಿ ಓದಿದ ಕವಯಿತ್ರಿಯ ಕವನವೊಂದುಮಾತ್ರ ಅಲ್ಲಿದ್ದ ಎಲ್ಲರ ಗಮನವನ್ನು ಸೆಳೆಯುವಲ್ಲಿ ಅತ್ಯಂತ ಯಶಸ್ವಿಯಾಯಿತು. ಆಕೆ “ಇವತ್ತು ನಾವು ಹೆಣ್ಣುಮಕ್ಕಳು ಸ್ವಾಂತಂತ್ರ್ಯದ ಹೆಸರಿನಲ್ಲಿ ಕುಟಂಬವನ್ನು ಕಡೆಗಣಿಸುತ್ತಾ ವಿಚ್ಛೇಧನಕ್ಕೆ ಮೊರೆಹೋಗುತ್ತಿದ್ದೇವೆ. ಗಂಡನನ್ನು ಬಿಟ್ಟರೆ ಸ್ವಾತಂತ್ರ್ಯ ಎಂದುಕೊಂಡಿದ್ದೇವೆ. ಆದರೆ ಗಂಡ ಇರುವದರಿಂದಲೇ ನಮಗೆ ಸಮಾಜದಲ್ಲಿ ಹೆಚ್ಚಿನ ಸ್ವಾತಂತ್ರ್ಯವಿದೆ, ಗೌರವವಿದೆ ಎನ್ನುವ ಸತ್ಯವನ್ನು ಅರಿಯುವಲ್ಲಿ ಸೋಲುತ್ತಿದ್ದೇವೆ.” ಎಂದು ಇವತ್ತು ಆಫ್ರಿಕಾದಂಥ ದೇಶಗಳಲ್ಲಿಯೂಸಹ ಹೆಚ್ಚುತ್ತಿರುವ ವಿಚ್ಛೇಧನಗಳ ಹಿನ್ನೆಲೆಯಲ್ಲಿ ಅಲ್ಲಿರುವ ಹೆಣ್ಣುಮಕ್ಕಳಿಗೆ ಕಿವಿಮಾತು ಹೇಳಿದ್ದಳು. ಈ ಮಾತಿಗೆ (ಕವನಕ್ಕೆ) ಅಲ್ಲಿದ್ದ ಗಂಡಸರಿಗಿಂತ ಹೆಚ್ಚಾಗಿ ಹೆಂಗಸರೇ ಚಪ್ಪಾಳೆ ಹೊಡೆದಿದ್ದು ಮಾತ್ರ ವಿಶೇಷವಾಗಿ ಕಾಣಿಸಿತು.
ಇನ್ನುಳಿದವರು ಅದೇನು ಹೇಳಿದರೆಂದು ನನಗೆ ಮಾತ್ರ ಅಲ್ಲ ಅಲ್ಲಿದ್ದ ಬೇರೆಯವರಿಗೂ ಅರ್ಥವಾಗಲಿಲ್ಲ. ಏಕೆಂದರೆ ಅವರಿಗೆ ಆ ಭಾಷೆಗಳು ಅರ್ಥವಾದರೆ ತಾನೆ ಏನು ಹೇಳಿದರೆಂದು ಗೊತ್ತಾಗುವದು? ಈ ತೆರದ ವಿವಿಧ ಭಾಷಾ ಕವಿಗೋಷ್ಠಿಯನ್ನು ಯಾಕಾದರು ಹಮ್ಮಿಕೊಳ್ಳುತ್ತಾರೋ? ಹಮ್ಮಿಕೊಂಡರೂ ಅಲ್ಲಿ ಓದುವ ವಿವಿಧ ಭಾಷೆಯ ಕವನಗಳನ್ನು ಮೊದಲೇ ಇಂಗ್ಲೀಷಿಗೋ ಅಥವಾ ಸ್ಥಳೀಯ ಭಾಷೆಗೋ ಅನುವಾದಿಸಿ ಮೂಲ ಭಾಷೆಯ ಕವಿಗಳು ಓದಿದ ನಂತರ ಅದರ ಅನುವಾದವನ್ನು ಸ್ಥಳೀಯ ಭಾಷೆಯಲ್ಲಿ ಇಲ್ಲವೇ ಇಂಗ್ಲೀಷಿನಲ್ಲಿ ಓದಿದರೆ ಆ ಕಾರ್ಯಕ್ರಮಕ್ಕೊಂದು ಅರ್ಥವಾದರೂ ಬರುತ್ತದೆ, ಅದರ ಮೂಲ ಉದ್ದೇಶವಾದರೂ ಈಡೇರುತ್ತದೆ. ಅದು ಬಿಟ್ಟು ಬರೀ ಅವರವರದೇ ಭಾಷೆಯಲ್ಲಿ ಓದಿಸಿದರೆ ಅವು ಬೇರೆಯವರಿಗೆ ಅರ್ಥವಾಗುವದಾದರೂ ಹೇಗೆ ಮತ್ತು ಅದರ ಉದ್ದೇಶ ಈಡೇರುವದಾದರೂ ಹೇಗೆ?
ಅಂದಹಾಗೆ ಈ ಕವಿಗೋಷ್ಠಿಯನ್ನು ಹೋಗಿ ಹೋಗಿ ಇಂಥ ಸಣ್ಣ ಹಳ್ಳಿಯಲ್ಲಿ ಯಾಕಿಟ್ಟರು? ಟ್ರಿಪೋಲಿಯಲ್ಲೋ, ಬೆಂಗಾಜಿಯಲ್ಲೋ, ಸೆಭಾದಲ್ಲೋ ಏರ್ಪಡಿಸಿದ್ದರೆ ಚನ್ನಾಗಿತ್ತು ಎಂದು ಕೆಲವರು ಲೊಚಗುಟ್ಟಿದರು. ಇನ್ನು ಕೆಲವರು ಇವತ್ತು ಸಾಹಿತ್ಯ ಪ್ರಜ್ಞೆ ಎನ್ನುವದು ಏನಾದರು ಉಳಿದಿದ್ದರೆ ಅದು ಹಳ್ಳಿಗಳಲ್ಲಿ ಮಾತ್ರ. ಹೀಗಾಗಿ ಇಲ್ಲಿ ನಡೆಸಿದ್ದೇ ಚೆನ್ನ ಆಯ್ತು ಎಂದರು.ವಿಪರ್ಯಾಸವೆಂದರೆ ಅಲ್ಲಿಗೆ ಬಂದಿದ್ದ ಮುಕ್ಕಾಲುಪಾಲು ಕವಿಗಳು ನಗರದವರೇ ಆಗಿದ್ದರು.
 

‍ಲೇಖಕರು avadhi

28 May, 2013

3 Comments

  1. mmshaik

    kavigostiya saarvannu namondige hanchikondiddakke dhanyavaadagaLu..sir.

  2. KrishnaB

    Very nice sir. Enjoyed it. I think it is same in India too..

  3. Anonymous

    happy to read.I rememberd. pulsar bike n Seagram t v advertisements. men r men.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading