ಜಗದೀಶ್ ಕೊಪ್ಪ
ಇವರು, ನನಗೆ ಅಧ್ಯಯನದ ಶಿಸ್ತು ಕಲಿಸಿದ ಧಾರವಾಡದ ನನ್ನ ಗುರುಗಳು, ಡಾ.ಎಂ.ಎಂ.ಕಲ್ಬುರ್ಗಿ. ಮೂಲತಃ ಅರ್ಥಶಾಸ್ತ್ರದ ವಿದ್ಯಾರ್ಥಿಯಾದ ನನಗೆ ಕುವೆಂಪು- ಬೇಂದ್ರೆ ಯವರ ಕವಿತೆಗಳ ತೌಲನಿಕ ಅಧ್ಯಯನಕ್ಕೆ ಹಚ್ಚಿದವರು. ನನ್ನ ಆ ಕೃತಿಗೆ ಬೇಂದ್ರೆ ಫೆಲೋಶಿಪ್ ಕೊಡಿಸಿದವರು. ಇವೊತ್ತಿಗೂ ನನ್ನ ತಲೆಯೊಳಕ್ಕೆ ಯಾವುದಾದರೂ ಸಂಶಯದ ಹುಳ ಹೊಕ್ಕರೆ ಸಾಕು ಅವರ ಮನೆಗೆ ಹೋಗುತ್ತೇನೆ. ಅವರ ನೆನಪಿನ ಶಕ್ತಿ, ಹಳೆಗನ್ನಡದ ಕಾವ್ಯಗಳ ವರ್ಣನೆ, ಇವುಗಳನ್ನು ಅವರ ಬಾಯಿಂದ ಕೇಳುವುದೇ ಒಂದು ಸೊಗಸು.
ರಾತ್ರಿ ಎಂಟು ಗಂಟೆಗೆ ಮನೆಗೆ ಹೋದರು ಸಹ, ಅಮ್ಮನನ್ನು ( ಅವರ ಪತ್ನಿ) ಕೊಪ್ಪ ಬಂದಿದ್ದಾನೆ, ಉಂಡಿ ಕೊಡು, ಚುರುಮುರಿ ಮಾಡು, ಸಕ್ಕರೆ ಇಲ್ಲದ ಚಹಾ ಮಾಡು ಎಂದು ಆದೇಶ ನೀಡಿ, ನನಗೆ ಪಾಠ ಮಾಡುವ ರೀತಿ ನೆನಪಿಸಿಕೊಳ್ಳುವಾಗ, ನಾನು ಧಾರವಾಡಕ್ಕೆ ಬಂದದ್ದು, ಕಲ್ಬುರ್ಗಿ, ಕಣವಿ, ಗಿರಡ್ಡಿ. ಅಮೂರ್ , ಸಿದ್ದಲಿಂಗಪಟ್ಟಣಶೆಟ್ಟಿ, ವೃಷಭೇಂದ್ರಸ್ವಾಮಿ ಇವರುಗಳ ಜೊತೆ ಒಡನಾಡಿದ್ದು, ಇವೆಲ್ಲವೂ ನನ್ನ ಬದುಕಿನ ಪುಣ್ಯ ಎಂದು ಕೊಳ್ಳುತ್ತೀನಿ. ಎಲ್ಲಿಯ ಮಂಡ್ಯ? ಎಲ್ಲಿಯ ಧಾರವಾಡ? ಅಲ್ಲಮ ಹೇಳುವ ಹಾಗೆ ಎಲ್ಲಿಯ ನೆಲ್ಲಿಯಕಾಯಿ? ಎಲ್ಲಿಯ ಸಮುದ್ರದ ಉಪ್ಪು? ಎನ್ನುವ ಹಾಗಿದೆ ನನ್ನ ಬದುಕು. ಕಲ್ಬುರ್ಗಿ ಬಾಯಲ್ಲಿ ಪಂಪ ಮತ್ತು ರನ್ನನ ಕಾವ್ಯಗಳನ್ನು ಕೇಳುವುದೇ ಒಂದು ಸೊಗಸು. ಅದೇ ರೀತಿ ಕುವೆಂಪು ಅವರ ಮೂವರು ಶಿಷ್ಯರಲ್ಲಿ ( ಇನ್ನಿಬ್ಬರು ಡಾ.ಜಿ.ಎಸ್. ಶಿವರುದ್ರಪ್ಪ, ಡಾ. ಕೆ.ಪ್ರಭುಶಂಕರ)ಒಬ್ಬರರಾದ ಡಾ. ಎಲ್. ವೃಷಭೇಂದ್ರ ಸ್ವಾಮಿಯ ಯವರ ಬಾಯಲ್ಲಿ ನೀವೊಮ್ಮೆ ಪಂಪನ ” ನೀಲಾಂಜನೆಯ ನೃತ್ಯ’ಎಂಬ ಕಾವ್ಯದ ಭಾಗವನ್ನು ಕೇಳಬೇಕು. ಇಂತಹವರ ಕಾಲಘಟ್ಟದಲ್ಲಿ ನಾನು ಬದುಕಿದ್ದೆ ಎಂಬುದು ನನ್ನ ಪಾಲಿಗೆ ಹೆಮ್ಮೆಯ ಸಂಗತಿ.







ನಿಜ. ಜಗದೀಶ್ ಅವರೇ…ಕಲಬುರ್ಗಿ ಸರ್ ನನ್ನ ಗುರುಗಳೂ ಹೌದು. ಅವರು ಪಂಪನನ್ನು ಕಲಿಸಿದ ರೀತಿ,ಪಂಪ ಕರ್ಣನಲ್ಲಿ ಕಂಡ ತ್ಯಾಗ, ಜೋಳದ ಪಾಳಿ, ದುರ್ಯೋಧನನ ಛಲ, ಮನುಷ್ಯ ಕುಲ ತಾನೋಂದೇ ವಲಂ ಎಂದು ಕಲಿಸಿದ ಪಾಠ, ಸೂಳ್ವವಡೆಯಲಪ್ಪುದು ಕಾಣ ಮಹಾಜಿರಂಗದೋಳ್ ಎಂಬ ಭೀಷ್ಮನ ಮಾತು…. ವಚನಕಾರರ ಕಾಯಕ ಪ್ರಜ್ಞೆ ಎಲ್ಲವೂ ಬದುಕಿನಲ್ಲಿ ದಾರಿದೀಪವಾಗಿವೆ. ಡಾ.ಎಂ.ಎಂ.ಕಲಬುರ್ಗಿ ಸರ್ ಅವರನ್ನ ನೆನಪಿಸಿದಕ್ಕೆ ಧನ್ಯವಾದಗಳು.
ನಾನು ಓದುತ್ತಿದ್ದಾಗ ಕಲಬುರ್ಗಿ ಸರ್ ನಮಗೆ ಛಂದಸ್ಸು ಕಲಿಸುತ್ತಿದ್ದರು.ಮುರರಿಪು ಬೊಮ್ಮಂ ಮುರರಿಪು ಬೊಮ್ಮಂ….ಎಂಬ ಅಕ್ಕರಿಕೆಯ ಲಕ್ಷಣ ಇನ್ನೂ ಕಿವಿಯಲ್ಲಿ ಅನುರಣಿಸುತ್ತಿದೆ. ವೃಷಭೇಂದ್ರ ಸ್ವಾಮಿಯವರ ಕಾವ್ಯಮಿಮಾಂಸೆ ಮರೆಯುವುದೆಂತು?
ಜಿ.ಎಸ್.ಶಿವರುದ್ರಪ್ಪ-ಸರಿ. ಆದರೆ ಪ್ರಭುಶಂಕರ್ ಅವರ ಇನಿಷಿಯಲ್ ಹಾಗೂ ವೃಷಭೇಂದ್ರಸ್ವಾಮಿಗಳವರ ಇನಿಷಿಯಲ್ ತಪ್ಪು. ಪ್ರಭುಶಂಕರ್ ಅವರಿಗೆ ಯಾವುದೇ ಇನಿಷಿಯಲ್ ಇರುವಂತೆ ನಾನೆಲ್ಲೂ ನೋಡಿಲ್ಲ. ವೃಷಭೇಂದ್ರಸ್ವಾಮಿಗಳ ಇನಿಷಿಯಲ್ಲ “ಎಲ್” ಅವರ ಇನಿಷಿಯಲ್ “ಎಸ್.ಎಂ.”