ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಶಿವರಾತ್ರಿ, ಯಾಕೋ ಇದೆಲ್ಲ ನೆನಪಾಯಿತು..

ಎಸ್ ಸಿ ದಿನೇಶ್ ಕುಮಾರ್ ಶಿವ ಆದಿವಾಸಿ, ಸ್ಮಶಾನದಲ್ಲಿ ವಾಸ ಮಾಡುತ್ತಿದ್ದವನು. ದಾಕ್ಷಾಯಿಣಿ ಶಿವನನ್ನು ಮೆಚ್ಚಿ ಮದುವೆಯಾದಳು. ಪುರಾಣದಲ್ಲಿ ದಾಖಲಾದ ಮೊದಲ ಇಂಟರ್ ಕ್ಯಾಸ್ಟ್ ಮದುವೆ ಇವರದ್ದೇ ಇರಬೇಕು. ದಕ್ಷಬ್ರಹ್ಮ ನಡೆಸುತ್ತಿದ್ದ ನಿರುಪಯೋಗಿ ಯಾಗಕ್ಕೆ ಶಿವನಿಗೆ ಆಹ್ವಾನ ಹೋಗಲಿಲ್ಲ. ದಾಕ್ಷಾಯಿಣಿ ಹಠ ಮಾಡಿ ಹೋದಳು. ಅಪ್ಪ ಎಲ್ಲರೆದುರು ದಾಕ್ಷಾಯಿಣಿಯನ್ನು ಅಪಮಾನಿಸಿದ, ಶಿವನನ್ನು ಜರಿದ. ಅಪಮಾನ ಸಹಿಸಲಾಗದೆ ದಾಕ್ಷಾಯಿಣಿ ಯಜ್ಞಕುಂಡಕ್ಕೆ ಬಿದ್ದು ಸತ್ತು ಹೋದಳು. ಪುರಾಣದಲ್ಲಿ ದಾಖಲಾದ ಮೊದಲ `ಮರ್ಯಾದಾ ಹತ್ಯೆ’ ಇದೇ ಇರಬಹುದು. ಸುದ್ದಿ ತಿಳಿದ ಶಿವ ವೀರಭದ್ರನನ್ನು ಪ್ರತೀಕಾರಕ್ಕೆ ಕಳುಹಿಸಿದ. ವೀರಭದ್ರ ದಕ್ಷಬ್ರಹ್ಮನ ಯಜ್ಞವನ್ನು ನಾಶಪಡಿಸಿ, ಅವನ ಸೊಕ್ಕು ಮುರಿದ. ಹಳ್ಳಿಹಳ್ಳಿಗಳಲ್ಲಿ ಈಗಲೂ ನಡೆಯುವ ಕೆಂಡಹಾಯುವ ಸಂಪ್ರದಾಯ ಶುರುವಾಗಿದ್ದೇ ಈ ವೀರಭದ್ರನಿಂದಾಗಿ, ಆತ ದಕ್ಷಬ್ರಹ್ಮನ ಯಜ್ಞವನ್ನು ನಾಶಪಡಿಸಿದ ಕುರುಹಿಗಾಗಿ. ಶಿವ ಯಜ್ಞ ವಿರೋಧಿ ಸಂಸ್ಕೃತಿಯ ನೇತಾರ, ಅವೈದಿಕರ ಸಂಸ್ಕೃತಿಗಳ ಜತೆ ಇದ್ದವನು. ಹೀಗಾಗಿಯೇ ರಾಕ್ಷಸರೆಂದು ಪುರಾಣಗಳಲ್ಲಿ ಜರಿಯಲಾದ ಬುಡಕಟ್ಟುನಾಯಕರು, ತುಳಿತಕ್ಕೊಳಗಾದವರೇ ಅವನಿಗೆ ಹೆಚ್ಚು ಪ್ರಿಯ. ಭಾರತದ ಸಾಂಸ್ಕೃತಿಕ ಇತಿಹಾಸವೇ ಈ ಯಜ್ಞಪರವಾದವರ ಮತ್ತು ವಿರುದ್ಧವಾದವರ ಸಂಘರ್ಷದಂತೆ ತೋರುತ್ತದೆ. ಭಾರತದ ಬಹುಸಂಸ್ಕೃತಿಗಳ ಅಸ್ತಿತ್ವವನ್ನು, ಅವುಗಳ ನಡುವಿನ ಸಂಘರ್ಷವನ್ನು ವಿವರಿಸುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಚೋದ್ಯವೆಂದರೆ ಯಜ್ಞವಿರೋಧಿ ಶಿವನ ಪರಂಪರೆಯವರೂ ಹೋಮ ಹವನ ಯಾಗಗಳಲ್ಲಿ ಮುಳುಗಿಹೋಗಿ ನಿಜಶಿವನ್ನು ಮರೆತಿದ್ದಾರೆ. ಶಿವನನ್ನು ಮತಾಂತರಗೊಳಿಸಲಾಗಿದೆ. ಹಾಗೆ ನೋಡಿದರೆ ದೇವರುಗಳನ್ನು ಮತಾಂತರಗೊಳಿಸುವ ಪ್ರಕ್ರಿಯೆಗೆ ಮೊದಲು ಬಲಿಯಾದವನೇ ಶಿವ. ಆನಂತರ ವೀರಭದ್ರ, ಆನಂತರ ಬೇಡರವಳಾದ ಪಾರ್ವತಿಯ ಪುತ್ರ ಗಣಪತಿ, ನಂತರ ಗೊಲ್ಲರ ಕೃಷ್ಣ… ಪಟ್ಟಿ ಮುಂದುವರೆಯುತ್ತದೆ. ಇಂದು ಶಿವರಾತ್ರಿ, ಯಾಕೋ ಇದೆಲ್ಲ ನೆನಪಾಯಿತು. ಎಲ್ಲರಿಗೂ ಮಹಾಶಿವರಾತ್ರಿಯ ಶುಭಾಶಯಗಳು.  ]]>

‍ಲೇಖಕರು G

20 February, 2012

3 Comments

  1. Murthy

    very interesting write up
    Thx

  2. Dinesh Kumar S.C.

    ಇದಕ್ಕೆ ಪೂರಕವಾಗಿ ಬರೆದ ಒಂದು ಕವಿತೆ
    ದಾಕ್ಷಾಯಿಣಿಯ ನೆನೆದು….
    ಮಹಾಕೋಪಕ್ಕೆ ರೂಪಕ ಶಿವ
    ಮೂರನೇ ಕಣ್ಣು ತೆರೆದನೆಂದರೆ ಜಗತ್ತು ಸರ್ವನಾಶ
    ಹಾಗಂತ ನಂಬಿಕೆ
    ಸಿಟ್ಟು ಬಂದಾಗ ತಾಂಡವನೃತ್ಯಗೈಯುವ ಶಿವ
    ನಿಂತ ನೆಲವೇ ಅವನಿಗೆ ದಕ್ಷಬ್ರಹ್ಮನ ಯಜ್ಞಕುಂಡ
    ಕುಣಿಯುವ ಕಾಲಿಗೆ ಪದೇ ಪದೇ ಎಡತಾಕಿದ್ದು
    ಬ್ರಾಹ್ಮಣ್ಯದ ಬೆಂಕಿಗೆ ಸಿಕ್ಕು ಚಿಟಪಟನೆ ಬೆಂದುಹೋದ
    ದಾಕ್ಷಾಯಿಣಿಯ ನೆನಪು
    ನಡುಗುವ ತೊಡೆಗಳಲ್ಲಿ ಅವಳ ಆತ್ಮಸಂಚಾರ
    ಇಕೋ, ಮೂರನೇ ಕಣ್ಣನೂ ತೆರೆದುಬಿಟ್ಟ
    ಆ ಕಣ್ಣೋ ಲಾವಾರಸ ಸುರಿಸುವ ಅಗ್ನಿಕುಂಡ
    ಅಲ್ಲಿ ದಾಕ್ಷಾಯಿಣಿ ಬೆಳಕಾಗಿ ಹರಿಯುತ್ತಾಳೆ
    ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ
    ಪಂಚ ಪತಿವ್ರತೆಯರ ಪಟ್ಟಿಯಲ್ಲಿ ಇಲ್ಲದ ಹೆಸರು ದಾಕ್ಷಾಯಿಣಿ
    ಹೇಗೆ ಸೇರಿಸಿಯಾರು?
    ಅಪ್ಪನ ಗೊಡ್ಡು ಕಂದಾಚಾರ ಮೀರಿ ಅಂತರ್ಜಾತೀಯ ಮದುವೆಯಾದಳು
    ಸ್ಮಶಾನವಾಸಿಯನ್ನು ಕೂಡಿ ಅಪ್ಪನ ಬ್ರಾಹ್ಮಣ್ಯದ ಸೊಕ್ಕನ್ನು ಮುರಿದವಳು
    ಗಂಡನ ಮಾತು ಮೀರಿ ಅಪ್ಪನ ಯಜ್ಞ ನೋಡಲು ಬಂದವಳು
    ಬಂದ ತಪ್ಪಿಗೆ ಅಪಮಾನಿತಳಾಗಿ ಯಜ್ಞ ಕುಂಡದಲ್ಲೇ ಬಿದ್ದು ಸತ್ತವಳು
    ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ!
    ಪುರುಷಾಹಂಕಾರ ಮೆಟ್ಟಿ ನಿಂತ ತಪ್ಪಿಗೆ
    ಧೂರ್ತ ಆಚಾರಗಳನ್ನು ಧಿಕ್ಕರಿಸಿದ ತಪ್ಪಿಗೆ
    ಅವಳಿಗೆ ಪೂಜೆಯಿಲ್ಲ, ಪುರಸ್ಕಾರವಿಲ್ಲ
    ಗಂಗೆ-ಗೌರಿಯರ ಮಧ್ಯೆ ಇವಳಿಗೊಂದು ಜಾಗವೇ ಇಲ್ಲ
    ಶಿವ ಕುಣಿಯುತ್ತಲೇ ಇದ್ದಾನೆ
    ಎದೆಯಲ್ಲಿ ದಾಕ್ಷಾಯಿಣಿಯ ಪೂರ್ಣಾಹುತಿಯ ಬೆಂಕಿ
    ರುದ್ರತಾಂಡವ ನಿಲ್ಲಿಸಲು ತಾಯ್ಗಂಡ ದೇವತೆಗಳು
    ಮೇನಕೆಯರನ್ನು ಬೆತ್ತಲೆ ನಿಲ್ಲಿಸಬಹುದು
    ದೇವತೆಗಳ ವ್ಯಭಿಚಾರದ ನಡುವೆ
    ದಾಕ್ಷಾಯಿಣಿಯ ಮರ್ಯಾದಾ ಹತ್ಯೆಗಳು ನಡೆಯುತ್ತಲೇ ಇರುತ್ತದೆ

  3. D.RAVI VARMA

    you have open the eyes of shivabhaktas, let thetruth should know to the shivabhaktas

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading