ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಸ್ಕರ್ ಪ್ರಶಸ್ತಿ ಎತ್ತಿ ಹಿಡಿಯುವಂತಾಗಬೇಕು

**

ದಿಲಾವರ್ ರಾಮದುರ್ಗ

**

ಕಾನ್ ಫಿಲಂ ಫೆಸ್ಟಿವಲ್ ನ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಪ್ರದರ್ಶನ ಕಾಣುತ್ತಿರುವ ಕನ್ನಡದ ಮೊದಲ ಕಿರುಚಿತ್ರ ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು’.

ಇದರ ಕುರಿತು ಸಾಹಿತಿ ದಿಲಾವರ್ ರಾಮದುರ್ಗ ಅವರು ಬರೆದ ಬರಹ.

**

ಮೈಸೂರಿನ ಡಾ. ಚಿದಾನಂದ ನಾಯಕ್ ಎನ್ನುವ ಎಂಬಿಬಿಎಸ್ ಓದಿದ ಲಂಬಾಣಿ ಜನಾಂಗದ ಯುವಕ ನಿರ್ದೇಶಿಸಿದ ಮತ್ತು ಕನ್ನಡದ ಹೆಮ್ಮೆಯ ನಟ ಜಹಾಂಗೀರ್ ಅಭಿನಯದ “ಸೂರ್ಯ ಕಾಂತಿಗಳು ಮೊದಲು ತಿಳಿದಿದ್ದವು” ಕಿರುಚಿತ್ರ ಪ್ರತಿಷ್ಠಿತ”ಕಾನ್ ಫಿಲಂ ಫೆಸ್ಟಿವಲ್”ನಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಕಾನ್ ಫಿಲಂ ಫೆಸ್ಟಿವಲ್ ನ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಪ್ರದರ್ಶನ ಕಾಣುತ್ತಿರುವ ಕನ್ನಡದ ಮೊದಲ ಕಿರುಚಿತ್ರ ಇದಾಗಿದೆ.

ರಂಗನಟ ಜಹಾಂಗೀರ್ “ಚೋರ ಚರಣದಾಸ್ ” ನಾಟಕದ ಅಭಿನಯದಿಂದ ತುಂಬ ಗಮನ ಸೆಳೆದ ನಟ. ನೀನಾಸಂ ನಂಟಿನ ಈ ನಟ ಕನ್ನಡದ ಕಿರುತೆರೆಯಲ್ಲಿ ತುಂಬ ದೊಡ್ಡ ಹೆಸರು ಮಾಡಿದ. “ಪಾಪ ಪಾಂಡು” ಎಂದಾಗ ನೆನಪಾಗುವ ಮುಖವೇ ಜಹಾಂಗೀರ್.

ಇದನ್ನು ಒಂದು ಜನಪ್ರಿಯ ಮಾಧ್ಯಮದ ಸಣ್ಣ ಸಾಧನೆ ಎಂದೇ ನಾನು ಭಾವಿಸುತ್ತೇನೆ. ಇದನ್ನು ಮೀರಿ ಬಹು ಎತ್ತರಕ್ಕೆ ಬೆಳೆಯಬಹುದಾದ ನಟ ಜಹಾಂಗೀರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಾಂಸ್ಕೃತಿಕ ರಾಜಕಾರಣ ಇಂಥ ಪ್ರತಿಭೆಗಳನ್ನು ಅಷ್ಟು ಸುಲಭಕ್ಕೆ ಸಹಿಸಿಕೊಳ್ಳುವುದಿಲ್ಲ. ಬಾಲಿವುಡ್ ಎಂಟ್ರಿ ಸಿಕ್ಕಿದ್ದಿದ್ದರೆ ಜಹಾಂಗೀರ್ ಇಂದಿನ ನವಾಜುದ್ದೀನ್ ಸಿದ್ದಿಕಿ ಜಾಗದಲ್ಲಿ ಇರುತ್ತಿದ್ದ. ಸಿದ್ದಿಕಿಗೆ ಸಿಕ್ಕ ಅವಕಾಶ ಕನ್ನಡದಲ್ಲಿ ಜಹಾಂಗೀರ್ ಗೆ ಸಿಗದೇ ಇರುವುದಕ್ಕೆ ಕಾರಣಗಳಿವೆ. ಇದರ ಹೊರತಾಗಿಯೂ ಜಹಾಂಗೀರ್ ಕನ್ನಡದ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ.

ಇತ್ತೀಚಿನ “ಫೊಟೋ” ಮತ್ತಿತರ ಚಿತ್ರಗಳಲ್ಲಿ ಜಹಾಂಗೀರ್ ಅಭಿನಯ ಯಾರಾದರೂ ಗಮನಿಸಿರಬಹುದು. ಜಹಾಂಗೀರ್ ನಟ ಅಷ್ಟೇ ಅಲ್ಲ, ಒಳ್ಳೆಯ ಕವಿ, ಚಿಂತಕ. ಸಾಂಸ್ಕೃತಿಕ ಜಗತ್ತನ್ನು ನೋಡುವ ಅವರ ದೃಷ್ಟಿಕೋನ ತುಂಬ ಭಿನ್ನವಾಗಿದೆ. ನಟನೆ ಅಥವಾ ರಂಗಚಟುವಟಿಕೆಯನ್ನು ಕೇವಲ ಸಾಧನೆಯ ವೇದಿಕೆ ಆಗಿ ತಾನು ಎಂದೂ ಭಾವಿಸಲಿಲ್ಲ ಎನ್ನುವ ಜಹಾಂಗೀರ್, ಒಂದು ಅರ್ಥಪೂರ್ಣ ಜರ್ನಿ ಎಂದು ಪರಿಭಾವಿಸಿದ್ದಾಗಿ ವಿನಯವಂತಿಕೆಯಿಂದ ಹೇಳುತ್ತಾರೆ. ಆದರೆ, ಜಹಾಂಗೀರ್ ಚಿಂತನೆಗೆ ಪೂರಕವಾದ ವೇದಿಕೆ, ಅವಕಾಶವನ್ನು ಸಾಂಸ್ಕೃತಿಕ ರಂಗ ಅತ್ಯಂತ ಜವಾಬ್ದಾರಿಯಿಂದ ಒದಗಿಸಬೇಕಿತ್ತು. ಆದರೆ ಅದು ಈತನಕ ಸಾಧ್ಯವಾಗಿಲ್ಲ ಎನ್ನುವುದೇ ನೋವಿನ ಸಂಗತಿ. ಇನ್ನು ಮುಂದಾದರೂ ಅದು ಸಾಧ್ಯವಾಗಬೇಕಿದೆ.

ಇಂಥ ನಟನನ್ನು ಇಟ್ಟುಕೊಂಡು “ಸೂರ್ಯಕಾಂತಿ ‘ಹೂ’ ಗೆ ಮೊದಲು ಗೊತ್ತಾಗಿದ್ದು” ಕಿರುಚಿತ್ರ ರೂಪಿಸಿದ ಯುವ ನಿರ್ದೇಶಕ ಡಾ. ಚಿದಾನಂದ ನಾಯಕ್ ಕೂಡ ಅದ್ಭುತ ಪ್ರತಿಭೆ. ಎಂಬಿಬಿಎಸ್ ಓದಿ ಪೂನಾ ಫಿಲಂ ಇನ್ಸ್ಟಿಟ್ಯೂಟ್ ಸೇರಿ ಅದೇ ಸಂಸ್ಥೆಗೆ ರೂಪಿಸಿದ ಈ ಪ್ರಾಯೋಗಿಕ ಕಿರುಚಿತ್ರ ಇಂದು ವಿಶ್ವದ ಪ್ರತಿಷ್ಠಿತ ಕಾನ್ ಫಿಲಂ ಫೆಸ್ಟಿವಲ್ ನಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಕನ್ನಡಕ್ಕೆ ಹೆಮ್ಮೆಯ ಗರಿ ಮೂಡಿಸುವ ಸಾಧನೆ ಇದಾಗಿದೆ. ಇಂಥ ಪ್ರತಿಭೆಗಳಿಗೆ ಕನ್ನಡ ಚಲನಚಿತ್ರ ರಂಗ ದೊಡ್ಡ ಅವಕಾಶಗಳನ್ನು ನೀಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅರ್ಥಪೂರ್ಣ ಕನ್ನಡ ಸಿನಿಮಾಗಳನ್ನು ರೂಪಿಸಿ ಆಸ್ಕರ್ ನಂಥ ಪ್ರಶಸ್ತಿ ಎತ್ತಿ ಹಿಡಿಯುವಂತಾಗಬೆಕು. ಈ ಪ್ರತಿಭೆಗಳು ಈಗ ಮಾಡಿದ ಸಾಧನೆ ಕಡಿಮೆ ಏನಲ್ಲ. ಇಂಥ ಹಲವು ಯಶಸ್ಸ ಗಳು ಇವರಿಂದ ಸಾಧ್ಯವಾಗಲಿ. ಯುವ ನಿರ್ದೇಶಕ ಡಾ. ಚಿದಾನಂದ ನಾಯಕ್ ಮತ್ತು ಹೆಮ್ಮೆಯ ನಟ ಜಹಾಂಗೀರ್ ಅವರಿಗೆ ದಿಲ್ ಪೂರ್ವಕ ಅಭಿನಂದನೆಗಳು. ಆಲ್ ದಿ ಬೆಸ್ಟ್.

‍ಲೇಖಕರು Admin MM

27 April, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading