ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಆದಿಮ’ದಲ್ಲಿ ಚುಕ್ಕಿಮೇಳ

– ಸಿ.ವಿ.ನಾಗರಾಜ್

ಅದು ‘ಆದಿಮ’ದ ಚುಕ್ಕಿಮೇಳ-2011 ಹಾಗೂ 61ನೆ ಹುಣ್ಣಿಮೆ ಹಾಡಿನ ಸಂಭ್ರಮ. ಬುದ್ಧನಂತೆ ಹಸನ್ಮುಖಿಯಾಗಿದ್ದ ತುಂಬು ಚಂದ್ರ, ಸರಿ ಸುಮಾರು 1,500ಕ್ಕೂ ಹೆಚ್ಚು ಪ್ರೇಕ್ಷಕರು. ಮೇಕಪ್ ಮಾಡಿಕೊಂಡು ತಾವು 17 ದಿನಗಳ ಚುಕ್ಕಿ ಮೇಳದಲ್ಲಿ ಕಲಿತಿದ್ದ ಡೊಳ್ಳು ಕುಣಿತ-ಪಟ್ಟದ ಕುಣಿತ, ನಾಟಕ. ಎಲ್ಲವನ್ನೂ ತೋರಿಸುವ ಕಾತುರದಿಂದ ಕಾಯುತ್ತಿದ್ದ ಮಕ್ಕಳು ಡೊಳ್ಳನ್ನು ಹೊತ್ತು ರಂಗ ವೇದಿಕೆಗೆ ಹತ್ತುತ್ತಿದ್ದಂತೆ ಪೋಷಕರ ಕುತೂಹಲದ ಪಿಸುಪಿಸು ಕಲರವ.. ವೀಕ್ಷಕರಿಗೆ ಹೊಸ ಲೋಕಕ್ಕೆ ಬಂದಂತಹ ಅನುಭವ.. ಇಲ್ಲಿನ ತೇರಹಳ್ಳಿ ಬೆಟ್ಟದ ಮೇಲಿರುವ ಶಿವಗಂಗೆ ಗ್ರಾಮದ ಆದಿಮ ಕಲಾ ಗ್ರಾಮದಲ್ಲಿ 61ನೇ ಹುಣ್ಣಿಮೆ ಹಾಡು ಹಾಗೂ ಚುಕ್ಕಿ ಮೇಳ-2011ರ ಸಮಾರೋಪ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದಿದ್ದು ತಮಟೆ ಕಲಾವಿದ ನಾಡೋಜ ಪಿಂಡಪಾಪನಹಳ್ಳಿ ಮುನಿವೆಂಕಟಪ್ಪ ಮತ್ತು ತಂಡ.

ಅವರ ತಮಟೆ ನಾದದ ಜುಗಲ್‌ಬಂದಿ ಸುಮಾರು 20 ನಿಮಿಷಗಳ ಕಾಲ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದವು. ಆದಿಮದ ಮಕ್ಕಳು ತಾವೇನು ಕಡಿಮೆಯಿಲ್ಲ ವೆಂಬಂತೆ ಡೊಳ್ಳು ಕುಣಿತದ ಮೂಲಕ ಕಲಾಪ್ರೇಮಿ ಗಳ ಮನಸೂರೆಗೊಳಿಸಿದರು. ಜಾನಪದದ ವಿವಿಧ ಕಲಾಪ್ರಕಾರಗಳಾದ ಪೂಜಾ ಕುಣಿತಗಳು ‘ಆದಿಮ’ದ ನಡಿಗೆಯ ಪ್ರತಿಬಿಂಬದಂತೆ ಕಾರ್ಯ ಕ್ರಮಕ್ಕೆ ಮತ್ತಷ್ಟು ಮೆರಗು ತಂದವು.ಕಾರ್ಯಕ್ರಮದ ಸಂದರ್ಭದಲ್ಲಿ ‘ಆದಿಮ’ ಜೀವಕಲಾ ಶಾಲೆಯ ‘ಕಲಾಸಂಪದ’ ಪತ್ರಿಕೆಯನ್ನು ಸಿ.ಟಿ.ಒ ದೇವರಾಜ್ ಬಿಡುಗಡೆಗೊಳಿಸಿದರು. ಪತ್ರಿಕೆಯ ಕುರಿತು ಮಾತನಾಡಿದ ಡಾ.ಡಿ. ಡೊಮಿನಿಕ್ ‘ಇಂದಿನ ವೈಜ್ಞಾನಿಕ ಯುಗದಲ್ಲಿ ಮನುಷ್ಯ ಮಣ್ಣಿನ ಸ್ಪರ್ಶದಿಂದ ದೂರವಾಗುತ್ತಿದ್ದಾನೆ. ಮಣ್ಣು ಬದುಕಿನ ಮೂಲ ಆಧಾರ ಎಂಬ ಜ್ಞಾನವನ್ನು ಅರಿತಿರುವ ನಾವು ಕಾಣದ ಬೇರೊಂದು ಮಾಯಾಜಿಂಕೆಯನ್ನು ಬೆನ್ನತ್ತಿದ್ದೇವೆ. ಅದೇ ನಮ್ಮ ಶಿಕ್ಷಣ ಮತ್ತು ಜ್ಞಾನವೆಂಬ ತಪ್ಪು ಕಲ್ಪನೆಯಲ್ಲಿ ಮುಳುಗಿ ಮಣ್ಣಿನಿಂದ ದೂರವಾಗುತ್ತಿದ್ದೇವೆ’ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯೂನಿವರ್ಸಿಟಿ ಆಫ್ ಹೈದರಾಬಾದ್‌ನ ಪ್ರೊ. ಸತ್ಯವ್ರತ್ ರೌವತ್, ‘ಆದಿಮ’ದ ಹೆಜ್ಜೆಗುರುತು ಗಳನ್ನು ಕೊಲಂಬಿಯಾ ದೇಶ ಗುರುತಿಸಿದ್ದನ್ನು ವಿವರಿಸಿದರು. ‘ಆದಿಮ’ದ ನಡಿಗೆಗಳಿಂದ ಸ್ಫೂರ್ತಿ ಗೊಂಡು ‘ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಬಯೋಡ್ರಾಮ’ ತನ್ನ ಶಾಲೆಯಲ್ಲಿ ‘ಆದಿಮ’ ಸಂಸ್ಥೆಯ ಒಂದು ನಾಟಕವನ್ನು ಪ್ರಸ್ತುತಪಡಿಸಲು ಆಹ್ವಾನಿಸಿದೆ ಎಂದು ತಿಳಿಸಿದ ಅವರು, ಭಾರತದ ಜಾತಿ-ವರ್ಗ ವ್ಯವಸ್ಥೆಯ ಬಲಿಪಶುವಾದ ‘ಏಕಲವ್ಯ’ನ ಜೀವಂತ ಕಥೆಗಳಿಂದ ಅದೇ ಹೆಸರಿನ ನಾಟಕವನ್ನು ಜುಲೈ ತಿಂಗಳಲ್ಲಿ ಆದಿಮ ರಂಗತಂಡ ಕೊಲಂಬಿಯಾದಲ್ಲಿ ಪ್ರಸ್ತುತ ಪಡಿಸಲಿದೆ ಎಂದರು.

ರಾಮಕೃಷ್ಣ ಬೆಳ್ತೂರುರ ನಿರ್ದೇಶನದ ‘ಭೀಮಾ ದಿ ವೋಲ್ವೋ ಬಸ್’ ನಾಟಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮಹಾಭಾರತದ ಎಳೆಯಿಂದ ಪ್ರಭಾವಿತವಾದ ಸಾಮಾಜಿಕ ನ್ಯಾಯದ ನಾಟಕ ‘ಭೀಮಾ ದಿ ವೋಲ್ವೋ ಬಸ್’ನ್ನು ಮಕ್ಕಳು ಮನೋಜ್ಞವಾಗಿ ಅಭಿನಯಿಸಿದರು. ಸಂಗೀತವೂ ಸೇರಿದಂತೆ ನಾಟಕ ಹಲವು ವಿನೂತನ ಪ್ರಯೋಗಗಳಿಗೆ ಸಾಕ್ಷಿಯಾಯಿತು. ವೆಸ್ಟರ್ನ್ ಶೈಲಿಯಲ್ಲಿದ್ದ ಇಂಗ್ಲಿಷ್ ಮಿಶ್ರಿತ ಹಾಡುಗಳು ಕೇಳುಗರಿಗೆ ಹೊಸ ಅನುಭವನ್ನೀಯುತ್ತಾ ನಾಟಕಕ್ಕೆ ಮತ್ತಷ್ಟು ಕಳೆಕಟ್ಟಿದವು. ನಾಟಕದ ಹಲವಾರು ಅಂಶಗಳು ‘ಹುಣ್ಣಿಮೆ ಹಾಡಿ’ನಲ್ಲಿ ನೆರೆದಿದ್ದವರೆಲ್ಲರಿಗೂ ತಮ್ಮ ತಪ್ಪುಗಳ ಮನನಕ್ಕೆ ಎಡೆಮಾಡಿಕೊಟ್ಟವು. ಪ್ರಸ್ತುತ ಸಂದರ್ಭದಲ್ಲಿ ಸ್ವಾರ್ಥಿಯಾ ಗುತ್ತಿರುವ ಮನುಕುಲಕ್ಕೆ ಈ ನೀತಿ ನಾಟಕದ ಅಂಶಗಳು ಆತ್ಮಾವಾಲೋಕನಕ್ಕೆ ಎಡೆಮಾಡಿಕೊಡುವುದರಲ್ಲಿ ಯಶಸ್ವಿಯಾಯಿತು.

ಕ್ಲೇಷೆಗಳಿಂದ ಕೂಡಿದ ಚರಿತ್ರೆಯ ಪಾಠಗಳ ಬದಲು ಸ್ಥಳೀಯ ಚರಿತ್ರೆಯನ್ನು ಮಕ್ಕಳೇ ರಚಿಸು ವಂತೆ ‘ಲಿವಿಂಗ್ ಲೆಸೆನ್ಸ್’ನ್ನು ರೂಪಿಸಿರುವುದು ಈ ಬಾರಿಯ ಚುಕ್ಕಿಮೇಳದ ಒಂದು ವಿಶೇಷವಾಗಿತ್ತು. ಅಂತೆಯೇ, ಈ ಲಿವಿಂಗ್ ಲೆಸೆನ್ಸ್‌ಗಳನ್ನು ಬರೆಯುವ ಸಲುವಾಗಿ ಮಕ್ಕಳು ಸಮೀಪದ ಪಾಪರಾಜನಹಳ್ಳಿಯ ಜಾತ್ರೆಗೆ ಹಾಗೂ ದರ್ಗಾಗೆ ಭೇಟಿ ನೀಡಿ, ಅಲ್ಲಿ ಮಕ್ಕಳು ಪರಿಭಾವಿಸಿದ್ದನ್ನು ತಮ್ಮದೇ ಸರಳ ಭಾಷೆಯಲ್ಲಿ ನಿರೂಪಿಸಿದ್ದರು. ಈ ಪಠ್ಯಗಳನ್ನು ಕಲಾಸಂಪದ ಪತ್ರಿಕೆಯಲ್ಲಿ ಲಿವಿಂಗ್ ಲೆಸೆನ್ಸ್ ಮಾದರಿಗಳಾಗಿ ನೀಡಲಾಗಿದೆ.

‘ನಾಟಕ ನೋಡುವುದರಿಂದ ಮನಸ್ಸುಗಳು ಅರಳಬಹುದೆಂದು’ ಸೇರಿರುವ ಎಲ್ಲರಿಗೂ ವಂದನೆಗಳನ್ನು ತಿಳಿಸುತ್ತಾ ಮಾತನಾಡಿದ ‘ಭೀಮಾ ದಿ ವೋಲ್ವೋ ಬಸ್’ ನಾಟಕದ ರಚನಾಕಾರರಾದ ಕೋಟಿಗಾನಹಳ್ಳಿ ರಾಮಯ್ಯ, ಪ್ರಸ್ತುತ ಶಿಕ್ಷಣ ವ್ಯವಸ್ಥೆ ದಿಕ್ಕೆಟ್ಟು ಹೋಗುತ್ತಿರುವ ಸಂದರ್ಭದಲ್ಲಿ ಮಕ್ಕಳಿಂದ ಕಲಿಯಬಹುದಾದ ಪಾಠಗಳನ್ನು ಗೌಣ ಮಾಡುತ್ತಾ ತಮಗೆ ಬೇಕಾದಂತೆ ಮಕ್ಕಳನ್ನು ತಯಾರಿಸಲಾಗುತ್ತಿದೆ. ಇಂತಹ ಸಂದರ್ಭ ದಲ್ಲಿ ಮಕ್ಕಳೇ ಸ್ವಯಂ ಕಲಿಕೆಯಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಕಲಿಸುವುದೇ ಈ ಚುಕ್ಕಿ ಮೇಳದ ಉದ್ದೇಶವಾಗಿತ್ತು.

ಯಾರ ಬಳಿಯೂ ಬೇಡದೇ ಇರುವ ಸಂಪನ್ಮೂಲಗಳಿಂದಲೇ ಈ ಬರೀ ಈ ಬಾರಿ ಶಿಬಿರ ನಡೆದಿದೆ. ಏನೂ ಇಲ್ಲದಾಗಲೂ ಬದುಕಬಹುದೆಂಬ ಬದುಕಿನ ಹಲವಾರು ಪಾಠಗಳನ್ನು ಈ ಬಾರಿಯ ಶಿಬಿರವು ಕಲಿಸಿದೆ ಎಂದರು. ಆದಿಮದ ಹಿತೈಷಿಗಳೆಲ್ಲರೂ ಒಂದು ಕೆ.ಜಿ. ಅಕ್ಕಿಯಿಂದ ಹಿಡಿದು 6 ತಿಂಗಳವರೆಗೂ ಆಗುವ ಧವಸಗಳನ್ನು ನೀಡಿರುವುದನ್ನು ಸ್ಮರಿಸಿಕೊಂಡರು.ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ಸಂಗೀತ ನಿರ್ದೇಶಕ ಇಸ್ಮಾಯೀಲ್ ಗೋನಾಳ್, ದೊರೈರಾಜ್, ಗೋವಿಂದಯ್ಯ, ಚಾನ್, ಗೌಸ್, ಮುನಿಯಪ್ಪ, ಡಿ.ಆರ್.ರಾಜಪ್ಪ, ಅಂಜಲಿ, ತೂರಂಡಹಳ್ಳಿ ಶ್ರೀನಿವಾಸ್, ಮಾರುತಿ ಪ್ರಸಾದ್, ಕಲಾದರ್ ಮೊದಲಾದ ನೂರಾರು ಆದಿಮ ಬಳಗದ ಸದಸ್ಯರು ಶ್ರಮವಹಿಸಿ ಅರ್ಥಪೂರ್ಣ ಚುಕ್ಕಿಮೇಳ-2011ಕ್ಕೆ ಸಾಕ್ಷಿಯಾದರು.

 

‍ಲೇಖಕರು G

30 May, 2011

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. Nammane Narayanaswamy

    Rammanna Relay great work

    nammane narayanaswamy
    9740460133

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading